"13 ವರ್ಷ ಟಾಪ್ ಅಲ್ಲಿ ಇರ್ತಾನೆ.. ಅವನಿಗೆ ಗಜಕೇಸರಿ ಯೋಗ ನಡೀತಿದೆ"; ರಿಷಬ್ ತಂದೆ ಮಾತು ವೈರಲ್
'ಕಾಂತಾರ- 1' ಸಿನಿಮಾ ಬಾಕ್ಸಾಫೀಸ್ ದೋಚುತ್ತಿದೆ. ರಿಷಬ್ ಶೆಟ್ಟಿ ಪ್ರತಿಭೆಗೆ ಸಿನಿರಸಿಕರು ಫಿದಾ ಆಗಿದ್ದಾರೆ. ನಿರ್ದೇಶಕನಾಗಿ ಮಾತ್ರವಲ್ಲದೇ ಹೀರೊ ಆಗಿಯೂ ಮೋಡಿ ಮಾಡಿದ್ದಾರೆ. ಬೆರ್ಮೆ ಆಗಿ ರಿಷಬ್ ನಟನೆ ನೋಡಿದವರು ಹುಬ್ಬೇರಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರ ಕ್ರೇಜ್ ಹೆಚ್ಚುತ್ತಲೇ ಇದೆ. 3 ವರ್ಷಗಳ ಹಿಂದೆ ಅವರ ತಂದೆ ಆಡಿದ್ದ ಮಾತು ವೈರಲ್ ಆಗ್ತಿದೆ.
ಮುಂದೆ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ದೊಡ್ಡ ದೊಡ್ಡ ಫಿಲ್ಮ್ ಮೇಕರ್ಸ್ ಅವರೊಟ್ಟಿಗೆ ಸಿನಿಮಾ ಮಾಡಲು ಕ್ಯೂ ನಿಂತಿದ್ದಾರೆ. 'ಕಾಂತಾರ' ಚಿತ್ರದಿಂದ ರಿಷಬ್ ಶೆಟ್ಟಿ ಅದೃಷ್ಟ ಬದಲಾಗಿಬಿಟ್ಟಿದೆ. ಇದೀಗ ಸೀಕ್ವೆಲ್ ಮೂಲಕ ಅದು ಮತ್ತೊಂದು ಹಂತಕ್ಕೆ ಹೋಗಿದೆ. ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುವ ಚರ್ಚೆ ನಡೀತಿದೆ.

ರಿಷಬ್ ಶೆಟ್ಟಿ ನಿಜವಾದ ಹೆಸರು ಪ್ರಶಾಂತ್ ಶೆಟ್ಟಿ. ಚಿತ್ರರಂಗದಲ್ಲಿ ಅವಕಾಶಗಳ ಹುಡುಕಾಟದಲ್ಲಿ ಇದ್ದಾಗ ಹೆಸರು ಬದಲಿಸಿಕೊಳ್ಳುವ ಮನಸ್ಸು ಮಾಡಿದ್ದರು. ತಂದೆ ಭಾಸ್ಕರ್ ಶೆಟ್ಟಿ ಖ್ಯಾತ ಜ್ಯೋತಿಷಿ ಹಾಗೂ ಸಂಖ್ಯಾಶಾಸ್ತ್ರಜ್ಞರಾಗಿದ್ದರು. ತಂದೆ ಬಳಿ ಕೇಳಿದಾಗ 'R' ಅಕ್ಷರದಿಂದ ಆರಂಭವಾಗುವ 6 ಅಕ್ಷರದ ಹೆಸರು ಇಟ್ಟುಕೊಳ್ಳಲು ಹೇಳಿದ್ದರು. ಅದರಂತೆ 'ರಿಷಬ್' ಎಂದು ಬದಲಿಸಿಕೊಂಡಿದ್ದರು. ಬಳಿಕ ಅವರಿಗೆ ಹಂತ ಹಂತವಾಗಿ ಯಶಸ್ಸು ಸಿಕ್ಕಿತ್ತು.
ಹೀರೊ ಆಗುವ ಕನಸು ಕಂಡಿದ್ದ ರಿಷಬ್ ಶೆಟ್ಟಿ ಮೊದಲಿಗೆ ಸಹ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಅವಕಾಶ ಪಡೆದಿದ್ದರು. ಕೆಲ ಸಿನಿಮಾಗಳಲ್ಲಿ ಕೆಲಸ ಮಾಡಿದ ಬಳಿಕ 'ರಿಕ್ಕಿ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. 'ಕಿರಿಕ್ ಪಾರ್ಟಿ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. 'ಬೆಲ್ಬಾಟಂ' ಚಿತ್ರದ ಮೂಲಕ ಹೀರೊ ಆಗಿದ್ದರು. 'ಕಾಂತಾರ' ಚಿತ್ರದಲ್ಲಿ ನಿರ್ದೇಶಕ, ಹೀರೊ ಎರಡೂ ಆಗಿ ಗೆದ್ದಿದ್ದರು. ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದಾಖಲೆ ಬರೆದಿತ್ತು.

ಕನ್ನಡದಲ್ಲಿ ಮಾತ್ರ ಮಾಡಿದ್ದ 'ಕಾಂತಾರ' ಸಿನಿಮಾ ಬೇಡಿಕೆಗೆ ತಕ್ಕಂತೆ ಬೇರೆ ಆ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಆಗ ರಿಷಬ್ ಶೆಟ್ಟಿ ತಂದೆ ಮಗನ ಯಶಸ್ಸಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ನ್ಯೂಸ್ ಫಸ್ಟ್ ಸುದ್ದಿ ವಾಹಿನಿ ಜೊತೆ ಮಾತನಾಡಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದರು. ಮಗನ ಗಜಕೇಸರಿ ಯೋಗದ ಬಗ್ಗೆಯೂ ಮಾತನಾಡಿದ್ದರು.
"ನನ್ನ ಪ್ರಕಾರ ರಿಷಬ್ ಶೆಟ್ಟಿಗೆ ಇನ್ನು 13 ವರ್ಷ ಹೈಕ್ ಇದೆ. 2021ರಿಂದ ಗಜಕೇಸರಿ ಯೋಗ ಆರಂಭವಾಗಿದೆ. ಇನ್ನು 13 ವರ್ಷ ಇವನಿಗೆ ಆನೆ ಕೊಂಡುಕೊಳ್ಳುವ ಸಾಮರ್ಥ್ಯ ಇರುತ್ತದೆ. ಮೊನ್ನೆ 1 ಕೋಟಿ 18 ಲಕ್ಷ ಕೊಟ್ಟು ಒಂದು ಆನೆ ತಂದಿದ್ದ. ಕಬ್ಬಿಣದ್ದು, ಅಂದ್ರೆ ಆಡಿ ಕಾರ್ ಖರೀದಿಸಿದ್ದ. ಮತ್ತೊಂದು ಸಣ್ಣ ಆನೆ(ಕಾರ್) ತಗೊಂಡಿದ್ದ" ಎಂದು ಭಾಸ್ಕರ್ ಶೆಟ್ಟಿ ಹೇಳಿದ್ದರು.
'ಕಾಂತಾರ- 1' ಬಳಿಕ ತೆಲುಗಿನ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಶಿವಾಜಿ ಬಯೋಪಿಕ್ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಿತಾರಾ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಮತ್ತೊಂದು ತೆಲುಗು ಚಿತ್ರಕ್ಕೆ ಸೈ ಅಂದಿದ್ದಾರೆ. ನಿರ್ದೇಶಕರು, ನಿರ್ಮಾಪಕರು ಬೇರೆ ಭಾಷೆಯವರಾಗಿದ್ದರೂ ಎಲ್ಲಾ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.
ಅಕ್ಟೋಬರ್ 2ರಂದು 'ಕಾಂತಾರ- 1' ಸಿನಿಮಾ ತೆರೆಗೆ ಬಂದಿತ್ತು. ಈಗಾಗಲೇ 509 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮಾಹಿತಿ ಕೊಟ್ಟಿದೆ. ರಿಷಬ್ ಶೆಟ್ಟಿ ಸಿನಿಮಾ ಈ ವರ್ಷದ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗುವ ಸಾಧ್ಯತೆಯಿದೆ.


Click it and Unblock the Notifications











