ಅಪ್ಪುಗೆ ಅಂದುಕೊಂಡಿದ್ದ 'ಕಾಂತಾರ' ಚಿತ್ರಕ್ಕೆ ರಿಷಬ್ ಹೀರೊ ಆಗಲು ಕಾರಣ ಯಾರು? ಪ್ರೀಕ್ವೆಲ್ ಎಲ್ಲಿಗೆ ಬಂತು?
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ 'ಕಾಂತಾರ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿ ದಾಖಲೆ ಬರೀತು. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ ಸದ್ದು ಮಾಡಿತ್ತು. ಸದ್ಯ ಚಿತ್ರದ ಪ್ರೀಕ್ವೆಲ್ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕಾಡುಬೆಟ್ಟು ಶಿವನ ಹಿಂದಿನ ತಲೆಮಾರಿನ ಕಥೆ ಹೇಳಲು ರಿಷಬ್ ಅಂಡ್ ಟೀಂ ಸಜ್ಜಾಗಿದೆ.
ಬೇರೆ ಸಿನಿಮಾಗಳನ್ನೆಲ್ಲಾ ಕೈಬಿಟ್ಟು ರಿಷಬ್ ಶೆಟ್ಟಿ ಮತ್ತೆ ಪಂಜುರ್ಲಿ, ಗುಳಿಗ ದೈವಗಳ ಧ್ಯಾನ ಮಾಡುತ್ತಿದ್ದಾರೆ. ಭಾರೀ ಸೆಟ್ ನಿರ್ಮಾಣ ಮಾಡಿ ಕುಂದಾಪುರದಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಬರೀ ಕಥೆ, ಚಿತ್ರಕಥೆ ಮಾಡಲು 1 ವರ್ಷ ವ್ಯಯಿಸಿದೆ ಚಿತ್ರತಂಡ. ಕನ್ನಡಕ್ಕೆ ಅಂತ ಮಾಡಿದ್ದ 'ಕಾಂತಾರ' ಸಿನಿಮಾ ನೋಡ ನೋಡುತ್ತಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ವಿದೇಶಗಳಲ್ಲಿ ಜನ ಕ್ಯೂ ನಿಂತು ಟಿಕೆಟ್ ಖರೀದಿಸಿ ಸಿನಿಮಾ ನೋಡಿದ್ದರು.

'ಕಾಂತಾರ' ಸೂಪರ್ ಹಿಟ್ ಹಿನ್ನೆಲೆಯಲ್ಲಿ ಪ್ರೀಕ್ವೆಲ್ ಬಗ್ಗೆ ಭಾರೀ ನಿರೀಕ್ಷೆಯಿದೆ. ಈಗಾಗಲೇ ಸಣ್ಣ ಟೀಸರ್ ಮೂಲಕ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ. ಮುಂದಿನ ವರ್ಷ ಸಿನಿಮಾ ತೆರೆಗಪ್ಪಳಿಸುವ ಸಾಧ್ಯತೆಯಿದೆ. ಈ ಬಾರಿ ಸಿನಿಮಾ ಬಜೆಟ್ 100 ಕೋಟಿ ರೂ. ದಾಟುವ ನಿರೀಕ್ಷೆಯಿದೆ. ಹೆಚ್ಚು ಕಮ್ಮಿ ಮೊದಲ ಚಿತ್ರಕ್ಕೆ ಕೆಲಸ ಮಾಡಿದ ತಂಡವೇ ಪ್ರೀಕ್ವೆಲ್ ಕಟ್ಟಿಕೊಡಲಿದೆ.
ಅಂದಹಾಗೆ 'ಕಾಂತಾರ' ಚಿತ್ರದಲ್ಲಿ ಮೊದಲಿಗೆ ಅಪ್ಪು ನಟಿಸಬೇಕು ಎಂದು ರಿಷಬ್ ಶೆಟ್ಟಿ ಅಂದುಕೊಂಡಿದ್ದರಂತೆ. ಕೊನೆಗೆ ತಾವೇ ಹೀರೊ ಆಗಿ ನಟಿಸುವಂತಾಯಿತು. ಈ ಬಗ್ಗೆ ಫಿಲ್ಮ್ ಕಂಪಾನಿಯನ್ ಸೌತ್ ಯೂಟ್ಯೂಬ್ ಸಂದರ್ಶನದಲ್ಲಿ ಮತ್ತೊಮ್ಮೆ ಮಾತನಾಡಿದ್ದಾರೆ. "ನನಗೆ ನನ್ನ ಪತ್ನಿ ಪ್ರಗತಿ ದೊಡ್ಡ ಬೆನ್ನೆಲುಬು. ಸಿನಿಮಾ, ವೈಯಕ್ತಿಕ ಜೀವನ ಎರಡರಲ್ಲೂ ಆಕೆಯ ಬೆಂಬಲವಿದೆ. ಮೊದಲಿಗೆ ಕಥೆ ಅಪ್ಪು ಸರ್ಗೆ ಎಂದುಕೊಂಡಿದ್ದೆ. ಆ ಸಮಯದಲ್ಲಿ ನೀನು ಮಾಡುತ್ತೀಯಾ, ಎಂದು ಧೈರ್ಯ ತುಂಬಿ. ನಟಿಸುವಂತೆ ಮಾಡಿದ್ದು ಪ್ರಗತಿ" ಎಂದು ರಿಷಬ್ ನೆನಪಿಸಿಕೊಂಡಿದ್ದಾರೆ.
'KGF'-2 ತೆರೆಗಪ್ಪಳಿಸಿದ ದಿನವೇ 'ಕಾಂತಾರ' ಟೀಸರ್ ರಿಲೀಸ್ ಆಗಿತ್ತು. ಟೀಸರ್ ನೋಡಿದಾಗಲೇ ಇದನ್ನು ಪ್ಯಾನ್ ಇಂಡಿಯಾ ಮಾಡಬಹುದು, ಮಾಡಿ ಎಂದು ಪ್ರಗತಿ ಸಲಹೆ ಕೊಟ್ಟಿದ್ದಳು. ಸಿನಿಮ ಬಿಡುಗಡೆ ಆಗಿ ಸಂಜೆ ವೇಳೆಗೆ ಇದು ಏನೋ ಮ್ಯಾಜಿಕ್ ಮಾಡುತ್ತದೆ ಎನ್ನುವುದು ಗೊತ್ತಾಗಿತ್ತು. ವಿಜಯ್ ಕಿರಂಗದೂರ್ ಸರ್ ಸಹ ಹೇಳಿದರು. 'ರಾಜಕುಮಾರ' ರೀತಿ ಬಿಡುಗಡೆ ಬಳಿಕ ಇದು ದೊಡ್ಡದಾಗುತ್ತದೆ ಎಂದಿದ್ದರು. ಹಾಗಾಗಿ ಪ್ಯಾನ್ ಇಂಡಿಯಾ ಮಾಡುವ ಮನಸ್ಸು ಮಾಡಿದೆವು" ಎಂದು ರಿಷಬ್ ಹೇಳಿದ್ದಾರೆ.

ಪ್ಯಾನ್ ಇಂಡಿಯಾ ಅಂದಾಗ ನನಗೆ ಇದ್ದಿದ್ದು ಒಂದೇ ಅಳುಕು. ಭಾಷೆಗಳು ಬರಲ್ಲ. ಬೇರೆ ಕಡೆ ಹೋಗಿ ಸಿನಿಮಾ ಬಗ್ಗೆ ಮಾತನಾಡುವುದು ಹೇಗೆ? ಅಂದುಕೊಂಡೆ. ಕನ್ನಡ ಬರುತ್ತೆ. ಇಂಗ್ಲೀಷ್ ಬರಲ್ಲ. ಹಿಂದೆ ಹೇಗೋ ಮ್ಯಾನೇಜ್ ಮಾಡ್ತಿದ್ದೆ. ಹಾಗಾಗಿ ಕೊಂಚ ಹಿಂಜರಿಕೆ ಇತ್ತು. ಆಗ ಕೂಡ ಧೈರ್ಯ ತುಂಬಿದ್ದು ಪ್ರಗತಿ, ಇಲ್ಲ ಆಗುತ್ತೆ, ನೀನು ಹೋಗು ಮಾತನಾಡು ಎಂದು ಹುರಿದುಂಬಿಸಿದಳು" ಎಂದಿದ್ದಾರೆ.
'ಕಾಂತಾರ ಚಾಪ್ಟರ್-1' ಸಿನಿಮಾ ಎಲ್ಲಿಗೆ ಬಂತು ಎನ್ನುವ ಪ್ರಶ್ನೆಗೆ "ಒಂದು ಶೆಡ್ಯೂಲ್ ಮುಗಿಸಿದ್ದೇವೆ. ಈಗ ಅಷ್ಟು ಮಾತ್ರ ಹೇಳಲು ಸಾಧ್ಯ" ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ. 'KGF' ಸರಣಿ ರೀತಿಯಲ್ಲಿ ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ 'ಕಾಂತಾರ' ಪ್ರೀಕ್ವೆಲ್ ಮೂಡಿ ಬರ್ತಿದೆ.


Click it and Unblock the Notifications










