ತಿರುಪತಿ ಮಾರ್ಗದಲ್ಲಿ ಹುಟ್ಟಿತ್ತು 'ವೀರಪ್ಪ ನಾಯ್ಕ' ಕಥೆ, ಆ ಪಾತ್ರ ದರ್ಶನ್ ಮಾಡಬೇಕಿತ್ತು; ಎಸ್. ನಾರಾಯಣ್
ಕನ್ನಡದಲ್ಲಿ ದೇಶಭಕ್ತಿ ಸಿನಿಮಾಗಳು ಸಂಖ್ಯೆ ಕಮ್ಮಿ ಎನ್ನಬಹುದು. ಆದರೆ ಕೆಲ ಸಿನಿಮಾಗಳನ್ನು ಸಿನಿರಸಿಕರು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ಅದರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ವೀರಪ್ಪ ನಾಯ್ಕ' ಎಂದಿಗೂ ಮರೆಯಲಾಗದ ಸಿನಿಮಾ.
ಸ್ವಾತಂತ್ರೋತ್ಸವ ಎಂದಾಕ್ಷಣ 'ವೀರಪ್ಪ ನಾಯ್ಕ' ನೆನಪಾಗುತ್ತದೆ. 25 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಸಿನಿಮಾ 50 ವಾರಗಳ ಯಶಸ್ವಿ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಇದು ವಿಷ್ಣುವರ್ಧನ್- ಎಸ್. ನಾರಾಯಣ್ ಜೋಡಿಯ ಮೊದಲ ಸಿನಿಮಾ. ಮುಂದೆ ಇವರಿಬ್ಬರು ಸೇರಿ ಕೆಲ ಹಿಟ್ ಚಿತ್ರಗಳನ್ನು ಪ್ರೇಕ್ಷಕರಿಗೆ ಕೊಟ್ಟರು. ಸ್ವತಃ ಎಸ್. ನಾರಾಯಣ್ 'ವೀರಪ್ಪ ನಾಯ್ಕ' ಚಿತ್ರವನ್ನು ನಿರ್ಮಾಣ ಸಹ ಮಾಡಿದ್ದರು.

ಭಾರತದ ತ್ರಿವರ್ಣ ಧ್ವಜ ಮುಗಿಲೆತ್ತರಕ್ಕೆ ಹಾರುವಾಗ ನಮ್ಮ ಧಾರವಾಡದ ಗರಗ ಹಾಗೂ ಉತ್ತರ ಕರ್ನಾಟಕ ನೆನಪಾಗಲೇ ಬೇಕು. ಯಾಕಂದರೆ ಭಾರತದ ರಾಷ್ಟ್ರ ದ್ವಜದ ಬಟ್ಟೆ ನಮ್ಮ ಕರ್ನಾಟಕ್ಕದ್ದು. ಖಾದಿಯ ತ್ರಿವರ್ಣ ಧ್ವಜದ ಬಟ್ಟೆ ತಯಾರಾಗುವುದು ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿನ ಖಾದಿ ಸಂಘದಲ್ಲಿ. ಇಂತಹ ಗರಗ ಎನ್ನುವ ಊರಿನ ನಾಯ್ಕರ ಕುಟುಂಬದ 'ವೀರಪ್ಪನ ನಾಯ್ಕ'ನ ಕಥೆಯನ್ನು ಎಸ್. ನಾರಾಯಣ್ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದರು.
ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಹುಟ್ಟಿದ 'ವೀರಪ್ಪ ನಾಯ್ಕ'. ದೇಶ ಸೇವೆಯೇ ಈಶ ಸೇವೆ ಎಂದು ಬದುಕುವ ಗಾಂಧಿವಾದಿ. ಆ ಊರಿಗೆ ಆತನೇ ನ್ಯಾಯಾಲಯ ಎನ್ನುವಂತೆ ಇರುತ್ತಾನೆ. ಆತನ ಜೀವನದ ಏಳುಬೀಳಿನ ಕಥೆ ಚಿತ್ರದಲ್ಲಿ. ಕೊನೆಗೆ ಆತನ ಮಗನೇ ನಕ್ಸಲೈಟ್ ಆಗಿ ದೇಶಕ್ಕೆ ಕಂಟಕವಾಗಿಬಿಡುತ್ತಾನೆ. ಅಂತಹ ಮಗನನ್ನು ಖುದ್ದು ವೀರಪ್ಪ ನಾಯ್ಕನ ಪತ್ನಿ ಪೊಲೀಸರಿಗೆ ಹಿಡಿದುಕೊಡುತ್ತಾಳೆ.
ಮಗ ಸುಭಾಷ್ ಜೈಲಿನಿಂದ ಹೊರಗೆ ಬಂದಮೇಲೂ ಅವನು ಬದಲಾಗದಿದ್ದಾಗ ವೀರಪ್ಪ ನಾಯ್ಕ ಮಗ ಎಂದೂ ನೋಡದೇ ಅವನ ತಲೆ ಕಡಿದು ಜೈಲು ಸೇರುತ್ತಾನೆ. ಹೀಗೆ ಭಾವನಾತ್ಮಕ ಅಂಶಗಳನ್ನು ಸೇರಿಸಿ ಎಸ್. ನಾರಾಯಣ್ 'ವೀರಪ್ಪ ನಾಯ್ಕ' ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದರು. ಸ್ವಾತಂತ್ರೋತ್ಸವ ಸುಸಂದರ್ಭದಲ್ಲಿ ನಿರ್ದೇಶಕರು ಆ ಚಿತ್ರವನ್ನುನ ಮೆಲುಕು ಹಾಕಿದ್ದಾರೆ. ಆ ಕಥೆ ಹುಟ್ಟಿದ್ದು ಹೇಗೆ? ಎಂದು ಫಿಲ್ಮಿಬೀಟ್ಗೆ ವಿವರಿಸಿದ್ದಾರೆ.

"ನನಗೆ ಹಳೆಯ ಪುಸ್ತಕ, ಪೇಪರ್ ಓದುವ ಹವ್ಯಾಸ ಇದೆ. ಒಮ್ಮೆ ತಿರುಪತಿಗೆ ಹೋಗುವಾಗ ಹಳೆ ಪೇಪರ್ಗಳ ಮೇಲೆ ಕಣ್ಣಾಡಿಸುತ್ತಿದ್ದೆ. ಆಗ ತಮಿಳು ದಿನಪತ್ರಿಕೆಯಲ್ಲಿ ನನ್ನ ಕರ್ನಾಟಕದ ಗರಗ ಊರಿನ ಬಗ್ಗೆ ಲೇಖನ ಬಂದಿತ್ತು. ಇಡೀ ಪ್ರಪಂಚಕ್ಕೆ ತ್ರಿವರ್ಣ ಧ್ವಜ ತಯಾರಿಸುವುದು ನಮ್ಮ ನಾಡಲ್ಲಿ ಎನ್ನುವುದು ಗೊತ್ತಾಗಿ ಅಚ್ಚರಿಯಾಯಿತು. ಆಗಲೇ ತಲೆಯಲ್ಲಿ ಒಂದು ಕಥೆ ಹೊಳೆಯಲು ಆರಂಭಿಸಿತು" ಎಂದು ನಿರ್ದೇಶಕರು ನೆನಪಿಸಿಕೊಂಡರು.
"ತಿರುಪತಿಗೆ ಹೋಗಿ ದೇವರ ದರ್ಶನ ಮಾಡಿ ಬಂದೆ. ಬಳಿಕ ಗರಗ ಊರಿಗೆ ಹೋದೆ. ಅಲ್ಲಿ ನೋಡಿದರೆ ಇಡೀ ಊರಿಗೆ ಊರೇ ಬಾವುಟ ನೇಯುತಿತ್ತು. ರಾಷ್ಟ್ರಧ್ವಜ ತಯಾರಿಕೆಗೆ ಸರ್ಕಾರ ಅದೊಂದು ಊರಿಗೆ ಅನುಮತಿ ಕೊಟ್ಟಿದೆ ಎಂದು ಗೊತ್ತಾದಾಗ ಹೆಮ್ಮೆ ಎನಿಸಿತು. ಹೀಗೆ ಬಾವುಟ ನೇಯುವ ಪರಂಪರೆಯಲ್ಲೇ 'ವೀರಪ್ಪ ನಾಯ್ಕ' ಎನ್ನುವ ಪಾತ್ರ ಸೃಷ್ಟಿಯಾಯಿತು. ಅಲ್ಲೇ ಸಣ್ಣ ಕಥೆ ಬರೆದುಕೊಂಡು ಬಂದೆ"
"ಬೆಂಗಳೂರಿಗೆ ಬಂದಮೇಲೆ ಕಥೆ, ಚಿತ್ರಕಥೆ ಸಂಪೂರ್ಣವಾಗಿ ಸಿದ್ಧಮಾಡಿದೆ. ಅಮಾಯಕರನ್ನು ತಲೆಕೆಡಿಸಿ ಅವರನ್ನು ದುಷ್ಕೃತ್ಯಗಳಿಗೆ ಬಳಸಿಕೊಳ್ಳುವ ಬಗ್ಗೆಯೂ ಎಲ್ಲೋ ಕೇಳಿದ್ದೆ. ಅದನ್ನು ವೀರಪ್ಪ ನಾಯ್ಕನ ಕಥೆಗೆ ಸೇರಿಸಿದೆ. ನಟಿ ಶ್ರುತಿ ಅವರಿಗೆ ಆಗಷ್ಟೆ ಮದುವೆ ಆಗಿತ್ತು. ಆದರೆ ಮದುವೆ ಆದ 15 ದಿನಕ್ಕೆ ಅವರು ಸಿನಿಮಾ ಚಿತ್ರೀಕರಣಕ್ಕಾಗಿ ಒಂದು ತಿಂಗಳ ಕಾಲ ಬೆಳಗಾವಿಯಲ್ಲಿ ಇರುವಂತಾಯಿತು"
"ಚಿತ್ರದಲ್ಲಿ ವೀರಪ್ಪ ನಾಯ್ಕನ ಮಗನ ಪಾತ್ರವನ್ನು ನಟ ದರ್ಶನ್ನ ಮನಸ್ಸಿನಲ್ಲಿಟ್ಟುಕೊಂಡು ಬರೆದಿದ್ದೆ. ಆಗ ದರ್ಶನ್ ನಮ್ಮ ಸಂಸ್ಥೆಯಲ್ಲಿ ಇದ್ದರು. ಆತನಿಗೆ ಒಳ್ಳೆ ಪಾತ್ರಗಳನ್ನು ಕೊಡಬೇಕು ಎಂದುಕೊಂಡಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಆ ಪಾತ್ರ ಸೌರವ್ ಮಾಡುವಂತಾಯಿತು" ಎಂದು ಎಸ್. ನಾರಾಯಣ್ ವಿವರಿಸಿದ್ದಾರೆ.


Click it and Unblock the Notifications











