ತಾತ ವಿಷ್ಣುವರ್ಧನ್ ಕೈ ಕಡಗ, ಉಂಗುರ, ಸ್ಮಾರಕದ ಬಗ್ಗೆ ಮೊಮ್ಮಗ ಜೇಷ್ಠವರ್ಧನ್ ಮಾತು
ಸಾಹಸಸಿಂಹ ವಿಷ್ಣುವರ್ಧನ್ ಮೊಮ್ಮಗ ಜೇಷ್ಠವರ್ಧನ್ ಚಿತ್ರರಂಗ ಪ್ರವೇಶಿಸುವ ತಯಾರಿಯಲ್ಲಿದ್ದಾರೆ. ನಟನೆ, ಡ್ಯಾನ್ಸ್ ಕಲಿಯುತ್ತಿದ್ದಾರೆ. ಫೋಟೊಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಇಂಗಿತವನ್ನು ಅನಿರುದ್ಧ್ ಜತ್ಕರ್ ವ್ಯಕ್ತಪಡಿಸಿದ್ದಾರೆ. ಪದವಿ ಮುಗಿದಿ ಸ್ನಾತಕೋತ್ತರ ಪದವಿ ಓದಲು ಜೇಷ್ಠ ಮುಂದಾಗಿದ್ದಾರೆ.
ಇತ್ತೀಚೆಗೆ ಹೊಸದಾಗಿ ಫೋಟೊಶೂಟ್ ಮಾಡಿಸಿರುವ ಜೇಷ್ಠವರ್ಧನ್ Memories Restored ಎಂಬ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಾತ ವಿಷ್ಣುವರ್ಧನ್ ಜೊತೆಗಿನ ನೆನಪು, ಮುಂದಿನ ಪ್ಲ್ಯಾನ್ಸ್ ಬಗ್ಗೆ ಮಾತನಾಡಿದ್ದಾರೆ.
ಕಾಲೇಜು ದಿನಗಳಲ್ಲೇ ವೇದಿಕೆಗಳಲ್ಲಿ ಬಣ್ಣ ಹಚ್ಚಿ ನಟಿಸಿರುವ ಜೇಷ್ಠ ಕಾಲೇಜಿನಲ್ಲಿದ್ದಾಗ ಶಾರ್ಟ್ ಫಿಲ್ಮ್ಸ್ನಲ್ಲಿ ನಟಿಸಿರುವುದು ಇದೆ.

ನಾನು ಹುಟ್ಟಿದ್ದು 2003ರಲ್ಲಿ. ತಾತ ನಿಧನಾರಾಗಿದ್ದು 2009ರಲ್ಲಿ. ಮೊದಲ ಮೂರ್ನಾಲ್ಕು ವರ್ಷದ ನೆನಪು ನನಗಿಲ್ಲ. ಬಳಿಕ ಕೆಲ ವರ್ಷ ಅವರ ಜೊತೆಗೆ ಕಳೆದ ಕ್ಷಣಗಳು ನೆನಪಿದೆ. ಒಮ್ಮೆ ಅವರ ಕೈಯಲ್ಲಿ ನೋಟುಗಳನ್ನು ಎಣಿಸುತ್ತಿದ್ದರು. ಸಾವಿರ ರೂಪಾಯಿ ನೋಟು ನೋಡಿ ಅದು ಬೇಕು ಎಂದು ಕೇಳಿದ್ದೆ. ಆಗ ಅದರಲ್ಲಿರುವ ಸೀರಿಯಲ್ ನಂಬರ್ ಓದಲು ಹೇಳಿದ್ದರು. ನಾನು ಓದಿ ಹೇಳಿದ ಬಳಿಕ ಆ ನೋಟು ನನಗೆ ಕೊಟ್ಟಿದ್ದರು. ಅದನ್ನು ಮರೆಯಲು ಸಾಧ್ಯವಿಲ್ಲ ಎಂದು ಜೇಷ್ಠವರ್ಧನ್ ಹೇಳಿದ್ದಾರೆ.
ತಾತನ ರೀತಿಯಲ್ಲೇ ಜೇಷ್ಠ ಕೈಯಲ್ಲಿ ಕಡಗ ಇದೆ. ಇದು ಯಾರದ್ದು ಎನ್ನುವ ಪ್ರಶ್ನೆಗೆ ನಮ್ಮ ತಂದೆ ಅವರದ್ದು. ತಾತನ ಕೈ ಕಡಗ ಅಪ್ಪನ ಬಳಿಯಿದೆ. ಅವರ ಧರಿಸುತ್ತಿದ್ದದ್ದು ಈಗ ನನ್ನ ಕೈಯಲ್ಲಿದೆ ಎಂದು ತಿಳಿಸಿದ್ದಾರೆ. ತಾತ ವಿಷ್ಣುವರ್ಧನ್ ಧರಿಸುತ್ತಿದ್ದ ಉಂಗುರವನ್ನು ಅವರ ನೆನಪಿಗಾಗಿ ಸದಾ ಇಟ್ಟುಕೊಂಡಿದ್ದೇನೆ. ಇದು ನನಗೆ ಅದೃಷ್ಠದ ಉಂಗುರು ಎಂದು ಜೇಷ್ಠವರ್ಧನ್ ತೋರಿಸಿದ್ದಾರೆ.

ಸಾಕಷ್ಟು ಜನಕ್ಕೆ ಗೊತ್ತಿಲ್ಲದ ಯಾವುದಾದರೂ ಒಂದು ಸಂಗತಿ ಹೇಳಿ ಎನ್ನುವ ಪ್ರಶ್ನೆಗೆ ದಾದಾ ಸಮಾಧಿ ವಿಚಾರವನ್ನು ಜೇಷ್ಠವರ್ಧನ್ ಬಿಚ್ಚಿಟ್ಟಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿ ದಾದಾ ಸ್ಮಾರಕ ನಿರ್ಮಾಣ ಆಗಬೇಕು ಎನ್ನುವುದು ನಮ್ಮ ಕನಸು ಆಗಿತ್ತು. ಅದಕ್ಕಾಗಿ ಸಾಕಷ್ಟು ಪ್ರಯತ್ನಿಸಿದ್ದೆವು. ಸಾಧ್ಯವಾಗದೇ ಇದ್ದಾಗ ಅಂತಿಮವಾಗಿ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಒಪ್ಪಿದ್ದು ಎಂದು ಜೇಷ್ಠ ಹೇಳಿದ್ದಾರೆ.
ಬಹಳ ಜನಕ್ಕೆ ಗೊತ್ತಿಲ್ಲ. ಬೆಂಗಳೂರಿನಲ್ಲೇ ಸ್ಮಾರಕ ನಿರ್ಮಾಣ ಆಗಬೇಕು ಎಂದು ನಮ್ಮ ಕುಟುಂಬ ಅಪ್ಪ, ಅಪ್ಪ ಹಾಗೂ ಭಾರತಿ ಅಮ್ಮ ಬಹಳ ಪ್ರಯತ್ನಪಟ್ಟಿದ್ರು. 10 ವರ್ಷ ಪ್ರಯತ್ನಿಸಿದ್ರು ಸಾಧ್ಯವಾಗದೇ ಇದ್ದಾಗ ಮೈಸೂರಿನಲ್ಲಿ ಒಪ್ಪಿದ್ದು. ತುಂಬಾ ಜನಕ್ಕೆ ನಾವೇನು ಪ್ರಯತ್ನ ಪಟ್ಟಿಲ್ಲ ಎಂದು ತುಂಬಾ ಜನಕ್ಕೆ ಅನ್ನಿಸಿದ್ದೆ. ಅದಕ್ಕೆ ಸ್ಪಷ್ಟನೆ ಕೊಡಲು ಇಷ್ಟಪಡುತ್ತೇನೆ. ಮೈಸೂರಿನಲ್ಲಿ ಸ್ಮಾರಕ ಚೆನ್ನಾಗಿದೆ. ಬನ್ನಿ ನೋಡಿ ಎಂದು ಜೇಷ್ಠ ವಿವರಿಸಿದ್ದಾರೆ.
ತಾತನ ಜೊತೆ ಮೈಸೂರಿಗೆ ಹೆಚ್ಚು ಹೋಗುತ್ತಿದ್ದೆ. ವೀಕೆಂಡ್ಗಳನ್ನು ಹೆಚ್ಚು ಅಲ್ಲೇ ಕಳೆಯುತ್ತಿದ್ದೆ. ದಾದಾ ಫುಡ್ಡಿ. ಸ್ವೀಟ್ಸ್ ಅಂದ್ರೆ ಬಹಳ ಇಷ್ಟಪಡುತ್ತಿದ್ದರು. ಕಾಫಿ, ಟೀ ಅಚ್ಚುಮೆಚ್ಚಾಗಿತ್ತು. ನನಗೆ ಶ್ಲೋಕ ಅಂತ ಒಬ್ಳು ತಂಗಿ ಇದ್ದಾಳೆ. ಸೆಕೆಂಡ್ ಇಯರ್ ಡಿಗ್ರಿ ಓದುತ್ತಿದ್ದಾಳೆ. ನನಗೆ ಸಾಕಷ್ಟು ಸ್ನೇಹಿತರು ಇದ್ದಾರೆ. ಪಾರ್ಟಿಗಳೆಲ್ಲಾ ಇಷ್ಟವಿಲ್ಲ. ಟ್ರೆಕ್ಕಿಂಗ್ ನನ್ನ ಹವ್ಯಾಸ. ಕ್ರಿಕೆಟ್, ಫುಟ್ಬಾಲ್ ಆಡುತ್ತೇನೆ ಎಂದು ಜೇಷ್ಠ ಹೇಳಿದ್ದಾರೆ.
ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಲು ಕಥೆಗಳನ್ನು ಕೇಳುತ್ತಿರುವುದಾಗಿ ಅನಿರುದ್ಧ್ ಈ ಹಿಂದೆ ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದರು. ಒಳ್ಳೆ ಸ್ಕ್ರಿಪ್ಟ್, ಬ್ಯಾನರ್ ಸಿಕ್ಕರೆ ಜೇಷ್ಠ ಸಿನಿಮಾದಲ್ಲಿ ನಟಿಸುತ್ತಾನೆ ಎಂದು ಹೇಳಿದ್ದರು. ದಾದಾ ಮೊಮ್ಮಗನ ಸಿನಿ ಎಂಟ್ರಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











