ರಾಧಿಕಾ ಇಲ್ದೆ 'ದೇವರು ಕೊಟ್ಟ ತಂಗಿ' ಚಿತ್ರ ಸೋತಿದ್ದೇಕೆ? ನಷ್ಟ ಆಗಿದ್ದೆಷ್ಟು?
ಶಿವರಾಜ್ಕುಮಾರ್ ಹಾಗೂ ರಾಧಿಕಾ ಕುಮಾರಸ್ವಾಮಿ ಅಣ್ಣ- ತಂಗಿ ಕಾಂಬಿನೇಷನ್ನಲ್ಲಿ ನಟಿಸಿದ ಸಿನಿಮಾಗಳು ಹಿಟ್ ಆಗಿತ್ತು. ಆದರೆ ಮೀರಾ ಜಾಸ್ಮಿನ್ ಹಾಗೂ ಶಿವಣ್ಣ ಅಣ್ಣ ತಂಗಿಯಾಗಿ ನಟಿಸಿದ ಸಿನಿಮಾ ಮಾತ್ರ ಗೆಲ್ಲಲೇ ಇಲ್ಲ. ನಿರ್ದೇಶಕ ಓಂ ಸಾಯಿ ಪ್ರಕಾಶ್ ಸಿನಿಮಾ ನಿರ್ಮಾಣ ಮಾಡಿ ಕೈಸುಟ್ಟುಕೊಂಡಿದ್ದರು.
'ತವರಿಗೆ ಬಾ ತಂಗಿ', 'ಅಣ್ಣ ತಂಗಿ' ಹಾಗೂ 'ತವರಿನ ಸಿರಿ' ರೀತಿಯ ಸಿನಿಮಾಗಳಲ್ಲಿ ಶಿವಣ್ಣ ಹಾಗೂ ಸಾಯಿ ಪ್ರಕಾಶ್ ಕೊಟ್ಟಿದ್ದರು. ಅದಕ್ಕೂ ಮುನ್ನ ಅದಕ್ಕೂ ಮುನ್ನ ಹ್ಯಾಟ್ರಿಕ್ ಹೀರೊ ನಟಿಸಿದ 'ಗಡಿಬಿಡಿ ಅಳಿಯ', 'ಗಡಿಬಿಡಿ ಕೃಷ್ಣ' ಚಿತ್ರಗಳನ್ನು ಅವರು ಕಟ್ಟಿಕೊಟ್ಟಿದ್ದರು. ರಾಧಿಕಾ ಕುಮಾರಸ್ವಾಮಿ ನಟನೆಯ 'ತಾಯಿ ಇಲ್ಲದ ತಬ್ಬಲಿ' ಹಾಗೂ 'ಮನೆಮಗಳು' ಚಿತ್ರಗಳಿಗೆ ಸಾಯಿ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದರು.

'ನವಶಕ್ತಿ ವೈಭವ' ಸಿನಿಮಾ ಬಳಿಕ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಿಂದ ಬಿಡುವು ಪಡೆದಿದ್ದರು. ಅದೇ ಸಮಯದಲ್ಲಿ ಸಾಯಿ ಪ್ರಕಾಶ್ 'ದೇವರ ಕೊಟ್ಟ ತಂಗಿ' ಸಿನಿಮಾ ಪ್ಲ್ಯಾನ್ ಮಾಡಿದ್ದರು. ತಾವೇ ಚಿತ್ರ ನಿರ್ಮಿಸುವ ಸಾಹಸ ಮಾಡಿದ್ದರು. ಆದರೆ ಆ ಪ್ರಯತ್ನ ವಿಫಲವಾಗಿತ್ತು. ರಾಧಿಕಾ ಇಲ್ಲದೇ ಶಿವರಾಜ್ಕುಮಾರ್ ನಟನೆಗೆ ಅಣ್ಣ- ತಂಗಿ ಸೆಂಟಿಮೆಂಟ್ ಕಥೆ ವರ್ಕ್ಔಟ್ ಆಗಲಿಲ್ಲ. ಸಿನಿಮಾ ಕೂಡ ನಿರೀಕ್ಷಿತ ಮಟ್ಟದಲ್ಲಿ ಮೂಡಿ ಬರಲಿಲ್ಲ.
'ದೇವರ ಕೊಟ್ಟ ತಂಗಿ' ಸಿನಿಮಾ ಸೋಲಿನ ಬಗ್ಗೆ 15 ವರ್ಷಗಳ ಬಳಿಕ ನಿರ್ದೇಶಕ ಸಾಯಿ ಪ್ರಕಾಶ್ ಮಾತನಾಡಿದ್ದಾರೆ. ಡೈಲಿ ಮಾಧ್ಯಮ ಯೂಟ್ಯೂಬ್ ಸಂದರ್ಶನದಲ್ಲಿ ಈ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.
"ತವರಿಗೆ ಬಾ ತಂಗಿ', 'ಅಣ್ಣ-ತಂಗಿ' ಹಾಗೂ 'ತವರಿನ ಸಿರಿ' ಚಿತ್ರಗಳಿಗೆ ಸಿಕ್ಕ ಯಶಸ್ಸು ದೇವರಕೊಟ್ಟ ತಂಗಿ ಚಿತ್ರಕ್ಕೆ ಸಿಗಲಿಲ್ಲ. ಅದೇ ಸಮಯದಲ್ಲಿ ಶಿವರಾಜ್ಕುಮಾರ್ ಅವರಿಗೆ ಶಿವಣ್ಣ ಎಂದು ಜನ ಕರೆಯಲು ಆರಂಭಿಸಿದ್ದರು. ಅಷ್ಟರಮಟ್ಟಿಗೆ ಹೆಸರು ತಂದು ಕೊಟ್ಟಿತ್ತು. ಶಿವಣ್ಣ-ರಾಧಿಕಾ ನೋಡಿ ನಿಜವಾದ ಅಣ್ಣ-ತಂಗಿ ಎಂದು ಜನ ಭಾವಿಸುವಂತಾಗಿತ್ತು. 'ದೇವರಕೊಟ್ಟ ತಂಗಿ' ಸಿನಿಮಾ ಶುರು ಮಾಡಿದ್ವಿ. ಇನ್ನೆರಡು ತಿಂಗಳಲ್ಲಿ ಚಿತ್ರೀಕರಣ ಅಂದಾಗ ರಾಧಿಕಾ ಚಿತ್ರರಂಗದಿಂದು ದೂರಾಗಿದ್ರು. ಅಲ್ಲಿಂದ ಕಷ್ಟ, ಕೇಡು ಶುರುವಾಯಿತು" ಎಂದು ಸಾಯಿ ಪ್ರಕಾಶ್ ಹೇಳಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಚಿತ್ರಗಳಲ್ಲಿ ನಟಿಸಲು ಎನ್ನುವುದು ಗೊತ್ತಾದಾಗ ಮೀರಾ ಜಾಸ್ಮಿನ್ ಆಯ್ಕೆ ಮಾಡುವಂತಾಯಿತು ಎಂದು ಸಾಯಿ ಪ್ರಕಾಶ್ ಮೆಲುಕು ಹಾಕಿದ್ದಾರೆ. "ಸಿನಿಮಾ ಆರಂಭಿಸಿ ನಿಲ್ಲಿಸುವುದು ಬೇಡ ಎಂದು ಅದೇ ಕಾಂಬಿನೇಷನ್ನಲ್ಲಿ ಸಿನಿಮಾ ಮಾಡಿದ್ವಿ, ಅಲ್ಲೇ ದೇವರ ಶಿಕ್ಷೆ ಆರಂಭವಾಯಿತು. ಫಸ್ಟ್ ಕಾಪಿ ನೋಡಿ ಹಂಸಲೇಖ ಬೇಸರಿಸಿಕೊಂಡಿದ್ದರು. ನನಗೂ ಅಲ್ಲೇ ಆಘಾತವಾಗಿತ್ತು. ಸಿನಿಮಾ ಬಿಡುಗಡೆಯಾಗಿ ಗೆಲ್ಲಲಿಲ್ಲ" ಎಂದಿದ್ದಾರೆ.
ರಾಧಿಕಾ ಇದ್ದಿದ್ದರೆ 'ದೇವರಕೊಟ್ಟ ತಂಗಿ' ಸಿನಿಮಾ ವರ್ಕ್ ಆಗ್ತಿತ್ತು ಅನ್ನಿಸುತ್ತದೆ ಎಂದು ಸಾಯಿ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಜೋಗಿ ಸಿನಿಮಾ ತೆರೆಕಂಡ 50 ದಿನಕ್ಕೆ 'ಅಣ್ಣ- ತಂಗಿ' ಸಿನಿಮಾ ಬಂದಿತ್ತು. ಎರಡೂ ಸಿನಿಮಾಗಳು ಹಿಟ್ ಆಗಿತ್ತು. ಸಿಟಿಯಲ್ಲಿ 'ಜೋಗಿ' ಬೇರೆ ಕಡೆಗಳಲ್ಲಿ 'ಅಣ್ಣ- ತಂಗಿ' ಸದ್ದು ಮಾಡಿತ್ತು. ಅವತ್ತಿನ ಕಾಲಕ್ಕೆ 5.20 ಕೋಟಿ ರೂ. ಬಜೆಟ್ ಹಾಕಿದ್ದೆವು. ಬ್ಯಾಂಕ್ನಿಂದ 2. 50 ಕೋಟಿ ರೂ. ಸಾಲ ಮಾಡಿದ್ದೆವು. ಎಲ್ಲಾ ತೀರಿಸಿದ್ದೇವೆ. ಆದರೂ ಸ್ವಂತ ನಿರ್ಮಾಣದ ಸಿನಿಮಾ ಸೋತಾಗ ಬೇಸರವಾಗುತ್ತದೆ" ಎಂದಿದ್ದಾರೆ.
2009ರಲ್ಲಿ 'ದೇವರು ಕೊಟ್ಟ ತಂಗಿ' ಸಿನಿಮಾ ತೆರೆಗೆ ಬಂದಿತ್ತು. ಹಂಸಲೇಖ ಸಂಗೀತ ಹಾಗೂ ಸಾಹಿತ್ಯ ಚಿತ್ರಕ್ಕಿತ್ತು. ಮೋನಿಕಾ, ಅವಿನಾಶ್, ಹೇಮಾ ಚೌಧರಿ, ಸುಮಿತ್ರಾ, ರಮೇಶ್ ಭಟ್ ಚಿತ್ರದ ತಾರಾಗಣದಲ್ಲಿದ್ದರು. ಆರ್. ಗಿರಿ ಛಾಯಾಗ್ರಹಣ ಚಿತ್ರಕ್ಕಿತ್ತು.


Click it and Unblock the Notifications











