ಸಲ್ಲು ಜೊತೆ ನಟಿಸಿದ್ದ ನಟಿ ಕ್ಷಯ ರೋಗಕ್ಕೆ ತುತ್ತಾಗಿ ಪರೋಟ ಮಾರುವ ಸ್ಥಿತಿ ಬಂತು!
ಬಣ್ಣದಲೋಕ ಹೊರಗಿನಿಂದ ನೋಡಿದ್ದಷ್ಟು ಸುಂದರವಾಗಿ ಇರಲ್ಲ. ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಬೇಕು, ಬೆಳ್ಳಿ ತೆರೆಮೇಲೆ ರಾರಾಜಿಸಬೇಕು ಎಂದು ಸಾಕಷ್ಟು ಜನ ಕನಸು ಕಾಣುತ್ತಾರೆ. ಕೆಲವರಿಗೆ ಅಂತಹ ಅವಕಾಶ ಕೂಡ ಸಿಗುತ್ತದೆ. ಆದರೆ ಚಿತ್ರರಂಗಕ್ಕೆ ಬಂದವರೆಲ್ಲಾ ನೆಮ್ಮದಿಯಾಗಿ ಐಷಾರಾಮಿ ಜೀವನ ಸಾಗಿಸುತ್ತಾರೆ ಎಂದುಕೊಂಡರೆ ತಪ್ಪಾಗುತ್ತದೆ.
ಚಿತ್ರರಂಗದಲ್ಲಿ ಅವಕಾಶಗಳು ಸಿಗುವ ತನಕ ಮಾತ್ರ ಎಲ್ಲವೂ ಚೆನ್ನಾಗಿರುತ್ತದೆ. ಒಮ್ಮೆ ಅದೃಷ್ಟ ಕೈಕೊಟ್ಟರೆ ಮುಗೀತು. ಆಮೇಲೆ ಸಂಪೂರ್ಣ ಚಿತ್ರಣವೇ ಬದಲಾಗಿಬಿಡುತ್ತದೆ. ಇದೇ ಕಾರಣಕ್ಕೆ ಇವತ್ತಿಗೂ ಚಿತ್ರರಂಗಕ್ಕೆ ಹೋಗಲು ಕೆಲವರು ಹಿಂದು ಮುಂದು ನೋಡುತ್ತಾರೆ. ಮಕ್ಕಳನ್ನು ಈ ತಳಕು ಬಳುಕಿನ ಪ್ರಪಂಚಕ್ಕೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಾರೆ. ಬರೀ ಪರಿಶ್ರಮ, ಅದೃಷ್ಟವನ್ನು ಮಾತ್ರ ನಂಬಿಕೊಂಡ ಕ್ಷೇತ್ರ ಇದು.

ಬಣ್ಣದಲೋಕದಲ್ಲಿ ಒಳ್ಳೆ ಆದಾಯ ಬರುತ್ತದೆ, ಸಾಕಷ್ಟು ಸಂಪಾದಿಸಬಹುದು ಎಂದುಕೊಂಡು ಬಂದರೆ ಕಷ್ಟ. ಚಿತ್ರರಂಗದಲ್ಲಿ ಒಳ್ಳೆ ಸಂಪಾದನೆ ಮಾಡಬಹುದು ನಿಜ. ಆದರೆ ಅದು ಎಲ್ಲರಿಗೂ ಸಾಧ್ಯವಿಲ್ಲ. ಗೆಲ್ಲುವವರಿಗೂ ಇಲ್ಲಿ ನಯಾಪೈಸೆ ಹುಟ್ಟಲ್ಲ. ಇದೇ ಕಾರಣಕ್ಕೆ ತೆರೆಮೇಲೆ ಮಿಂಚಿದ ಸಾಕಷ್ಟು ನಟ, ನಟಿಯರು ಬಳಿಕ ಜೀವನದಲ್ಲಿ ಕಷ್ಟದ ದಿನಗಳನ್ನು ಎದುರಿಸಿರುವ ಉದಾಹರಣೆಯಿದೆ. ಇದೇ ರೀತಿ ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ನಟಿ ಬಳಿಕ ಪರೋಟ ಮಾರುತ್ತಾ ಜೀವನ ಸಾಗಿಸುವಂತಹ ಪರಿಸ್ಥಿತಿ ಬಂದುಬಿಡ್ತು.
ಒಂದ್ಕಾಲದಲ್ಲಿ ಟಾಪ್ ನಟ-ನಟಿಯರಾಗಿ ಮೆರೆದವರು ಬಳಿಕ ವೈಯಕ್ತಿಕ ಜೀವನದಲ್ಲಿ ಸಂಕಷ್ಟ ಎದುರಿಸಿರುವುದನ್ನು ನೋಡಿದ್ದೇವೆ. ಆ ಸಾಲಿಗೆ ಸೇರುವ ಬಾಲಿವುಡ್ ನಟಿ ಪೂಜಾ ದದ್ವಾಲ್. 90ರ ದಶಕದಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ ಈಕೆ ಬಳಿಕ ಅನಾರೋಗ್ಯಕ್ಕೆ ತುತ್ತಾಗಿ ಸಾಕಷ್ಟು ಸಮಸ್ಯೆ ಎದುರಿಸುವಂತಾಯಿತು. ಆಕೆಯ ಅನಾರೋಗ್ಯದ ಬಗ್ಗೆ ತಿಳಿದು ಪತಿ ಕೂಡ ದೂರಾಗಿಬಿಟ್ಟ. ಕೊನೆಗೆ ಆಸ್ಪತ್ರೆ ಚಿಕಿತ್ಸೆಗೆ ಹಣವಿಲ್ಲದೇ ನಟ ಸಲ್ಮಾನ್ ಖಾನ್ ಬಳಿ ಸಹಾಯ ಕೇಳುವಂತಾಯಿತು. ಬಳಿಕ ಚೇತರಿಸಿಕೊಂಡ ನಟ ಹೊಟ್ಟೆಪಾಡಿಗಾಗಿ ಪುಟ್ಟ ಹೋಟೆಲ್ ನಡೆಸುವಂತಾಯಿತು.
1995ರಲ್ಲಿ ತೆರೆಕಂಡ 'ವೀರ್ಗತಿ' ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಲಿಲ್ಲ. ಚಿತ್ರದಲ್ಲಿ ಸಲ್ಮಾನ್ ಖಾನ್ ಹೀರೊ ಆಗಿ ನಟಿಸಿದ್ದರು. ಇನ್ನು ಅತುಲ್ ಅಗ್ನಿಹೋತ್ರಿ ಜೋಡಿಯಾಗಿ ನಟಿ ಪೂಜಾ ದದ್ವಾಲ್ ನಟಿಸಿದ್ದರು. ಮುಂಬೈನಲ್ಲಿ ಹುಟ್ಟಿ ಬೆಳೆಗೆ ಆಕೆಗೆ ನಟಿಯಾಗುವ ಆಸೆಯಿತ್ತು. ಅದಕ್ಕಾಗಿ ಆಕ್ಟಿಂಗ್ ಸ್ಕೂಲ್ ಸೇರಿದ್ದರು. 17ನೇ ವಯಸ್ಸಿನಲ್ಲೇ 'ವೀರ್ಗತಿ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಬಳಿಕ ಅಷ್ಟೇನು ಸಿನಿಮಾಗಳಲ್ಲಿ ಆಕೆಗೆ ಅವಕಾಶಗಳು ಸಿಗಲಿಲ್ಲ. ಬಳಿಕ ಆಕೆ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದರು.

ಬಳಿಕ ಪೂಜಾ ಮದುವೆ ಆಗಿ ಪತಿ ಜೊತೆ ಗೋವಾದಲ್ಲಿ ನೆಲೆಸಿದ್ದರು. 2018ರಲ್ಲಿ ಆಕೆ ಕ್ಷಯ ರೋಗಕ್ಕೆ ತುತ್ತಾಗಿದ್ದರು. ಈ ಬಗ್ಗೆ ಗೊತ್ತಾಗಿ ಪತಿ ಕೂಡ ಆಕೆಯನ್ನು ದೂರ ಮಾಡಿದ್ದರು. ಬಳಿಕ ಸ್ನೇಹಿತನ ಸಹಾಯದಿಂದ ಆಕೆ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವಂತಾಯಿತು. ಇದೇ ಸಮಯದಲ್ಲಿ ಮಾಧ್ಯಮಗಳ ಮೂಲಕ ಸಲ್ಮಾನ್ ಖಾನ್ ಬಳಿ ಸಹಾಯ ಕೇಳಿದ್ದರು. ಸಲ್ಲು ಆಕೆಯ ಚಿಕಿತ್ಸೆಗೆ ನೆರವಾಗಿದ್ದರು.
ಚಿಕಿತ್ಸೆ ಪಡೆದು ಚೇತರಿಸಿಕೊಂಡ ಪೂಜಾ ದದ್ವಾಲ್ ಬಳಿಕ ಒಬ್ಬೊಂಟಿಯಾಗಿಬಿಟ್ಟರು. ಒಂಟಿಯಾಗಿ ಮುಂಬೈನ ಸಣ್ಣ ಫ್ಲಾಟ್ನಲ್ಲಿ ನೆಲೆಸಿದರು. 4 ವರ್ಷಗಳ ಹಿಂದೆ 'ಶುಕ್ರನಾ; ಗುರುನಾನಕ್ ದೇವ್ಜಿ' ಎನ್ನುವ ಪಂಜಾಬಿ ಚಿತ್ರದಲ್ಲಿ ನಟಿಸಿದ್ದರು. ಬಳಿಕ ಒಂದಷ್ಟು ಶಾರ್ಟ್ ಫಿಲ್ಮ್ಗಳಲ್ಲಿ ನಟಿಸಿದರು. ಆದರೆ ಅದು ಕೈಹಿಡಿಯಲಿಲ್ಲ. ಸಿನಿಮಾ ಸಹವಾಸ ಸಾಕು ಎನಿಸಿದಾಗ ಸ್ನೇಹಿತ ಟಿಫಿನ್ ಸೆಂಟರ್ ನಡೆಸುವ ಸಲಹೆ ನೀಡಿದ್ದ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದ. ಹೀಗೆ ಜೀವನೋಪಾಯಕ್ಕಾಗಿ ಪೂಜಾ ಪರೋಟ ಮಾಡಿ ಮಾರಾಟ ಮಾಡುವಂತಾಯಿತು.


Click it and Unblock the Notifications











