ಈ ವಿಷಯದಲ್ಲಿ ಕನ್ನಡ ಚಿತ್ರರಂಗ ಬಹಳ 'ವೀಕ್' ಇದೆ
ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಹೊಸ ನಿರ್ದೇಶಕರು ಹೊಸ ವಿಷಯಗಳ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಎಷ್ಟೋ ಪ್ರಯೋಗಗಳು ಆಗುತ್ತಿವೆ. ಆದರೂ, ಇವುಗಳ ಮಧ್ಯೆ ಒಂದು ವಿಷಯದಲ್ಲಿ ಕನ್ನಡ ಚಿತ್ರರಂಗ ಹಿಂದೆ ಇದೆ.
ಕಮರ್ಷಿಯಲ್ ಸಿನಿಮಾ, ಹಾರರ್ ಸಿನಿಮಾ, ರೋಮ್ಯಾಂಟಿಕ್ ಸಿನಿಮಾ, ರೌಡಿಸಂ ಸಿನಿಮಾ, ಕಾಮಿಡಿ ಸಿನಿಮಾ, ಪ್ರಯೋಗಾತ್ಮಕ ಸಿನಿಮಾ, ಪೌರಾಣಿಕ ಸಿನಿಮಾ, ಐತಿಹಾಸಿಕ ಸಿನಿಮಾ ಹೀಗೆ ಎಲ್ಲ ಜಾನರ್ ಸಿನಿಮಾಗಳು ಕನ್ನಡದಲ್ಲಿ ಬರುತ್ತಿವೆ. ಆದರೆ, 'ಬಯೋಪಿಕ್' ವಿಚಾರದಲ್ಲಿ ಮಾತ್ರ ಕನ್ನಡ ಚಿತ್ರರಂಗ ಹಿಂದೆ ಇದೆ.
ಕಳೆದ 5 ವರ್ಷಗಳಲ್ಲಿ ಕನ್ನಡದಲ್ಲಿ ಬೇರೆ ಬೇರೆ ರೀತಿಯ ಸಿನಿಮಾಗಳು ಬರುತ್ತಿವೆ. ಈ ಸಿನಿಮಾಗಳು ಬೇರೆ ಭಾಷೆಗಳಿಗೂ ರಿಮೇಕ್ ಆಗಿವೆ. ದೊಡ್ಡ ಬಜೆಟ್ ಚಿತ್ರಗಳೂ ಬಂದಿವೆ. ಹೀಗೆಲ್ಲ ಆಗುತ್ತಿದ್ದರೂ, ಬಯೋಪಿಕ್ ಚಿತ್ರಗಳಿಗೆ ಮಾತ್ರ ಯಾರು ಕೈ ಹಾಕುತ್ತಿಲ್ಲ.

ಸ್ಯಾಂಡಲ್ ವುಡ್ ನಲ್ಲಿ ಬಯೋಪಿಕ್ ಗಳ ಸಂಖ್ಯೆ ಕಡಿಮೆ
ಕನ್ನಡದಲ್ಲಿ ಬಯೋಪಿಕ್ ಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಈಗಾಗಲೇ 163ಕ್ಕೂ ಹೆಚ್ಚು ಸಿನಿಮಾಗಳು ಈ ವರ್ಷ ನಿರ್ಮಾಣ ಆಗಿವೆ. ಆದರೆ, ಅದರಲ್ಲಿ ಯಾವುದೇ ಸಿನಿಮಾ ಬಯೋಪಿಕ್ ಜಾನರ್ ಗೆ ಸೇರುವುದಿಲ್ಲ. ಒಬ್ಬ ವ್ಯಕ್ತಿಯ ಜೀವನದ ಮೇಲೆ ಸಿನಿಮಾ ಮಾಡುವುದು, ಆ ಕಥೆಯನ್ನು ಜನರಿಗೆ ಇಷ್ಟ ಆಗುವಂತೆ ಹೇಳುವುದು ಬಹಳ ಕಷ್ಟ, ಅದೇ ಕಾರಣಕ್ಕೆ ಬಯೋಪಿಕ್ ಭಯ ಹುಟ್ಟಿಸಿರಬಹುದು.

ಐತಿಹಾಸಿಕ ಹಿನ್ನಲೆ ಬಯೋಪಿಕ್ ಗಳು ಮಾತ್ರ ಬರ್ತಿವೆ
ಕನ್ನಡದಲ್ಲಿ ಸಂಗೊಳ್ಳಿ ರಾಯಣ್ಣ, ಗಂಡುಗಲಿ ಮದಕರಿ ನಾಯಕ ಬಯೋಪಿಕ್ ಚಿತ್ರಗಳು ಬರುತ್ತಿವೆ. ಆದರೆ, ಅವು ಐತಿಹಾಸಿಕ ಹಿನ್ನಲೆಯ ಬಯೋಪಿಕ್ ಸಿನಿಮಾಗಳಾಗುತ್ತವೆ. ಈ ರೀತಿಯ ಸಿನಿಮಾಗಳಿಗೆ ಧೈರ್ಯ ಮಾಡಿ ಮುಂದೆ ಬರುವ ನಿರ್ದೇಶಕರು, ಈ ತಲೆಮಾರಿನ ಸಾಧಕರ ಜೀವನದ ಸಿನಿಮಾ ಮಾಡಲು ಮನಸ್ಸು ಮಾಡುತ್ತಿಲ್ಲ. ಆ ರೀತಿಯ ಸಿನಿಮಾಗಳು ಕನ್ನಡದಲ್ಲಿ ಬರುತ್ತಿಲ್ಲ.

ಬಯೋಪಿಕ್ ಮಾಡುವುದರಲ್ಲಿ ಬಾಲಿವುಡ್ ಎತ್ತಿದ ಕೈ
ಬಾಲಿವುಡ್ ನಲ್ಲಿ ಬಯೋಪಿಕ್ ಸಿನಿಮಾಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಒಂದು ವರ್ಷಕ್ಕೆ ಅತಿ ಹೆಚ್ಚು ಬಯೋಪಿಕ್ ಸಿನಿಮಾಗಳು ಅಲ್ಲಿಯೇ ನಿರ್ಮಾಣ ಆಗುತ್ತಿವೆ. ಎಂ ಎಸ್ ಧೋನಿ, ಮೇರಿ ಕೋಮ್, ದಂಗಲ್, ದರ್ಟಿ ಪಿಚ್ಚರ್, ಪ್ಯಾಡ್ ಮ್ಯಾನ್, ಸಂಜು, ನರೇಂದ್ರ ಮೋದಿ, ಸೂಪರ್ 30 ಹೀಗೆ ಸಾಕಷ್ಟು ಸಿನಿಮಾಗಳು ಮೂಡಿ ಬಂದಿವೆ. ಮುಂದೆ, ಕಪಿಲ್ ದೇವ್, ಸೈನಾ ನೆಹವಾಲ್ ಸೇರಿದಂತೆ ಅನೇಕ ಚಿತ್ರಗಳು ಶುರು ಆಗುತ್ತಿವೆ.

ತಮಿಳು, ತೆಲುಗಿನಲ್ಲಿಯೂ ಈ ಪ್ರಯೋಗ ಆಗಿವೆ
ಬಾಲಿವುಡ್ ಚಿತ್ರರಂಗ ಮಾತ್ರವಲ್ಲದೆ ತೆಲುಗು ಹಾಗೂ ತಮಿಳಿನಲ್ಲಿ ಈ ರೀತಿಯ ಪ್ರಯೋಗಗಳು ಆಗಿವೆ. ನಟಿ ಸಾವಿತ್ರಿ ಜೀವನಾಧರಿತ ಸಿನಿಮಾ 'ಮಹಾನಟಿ', ಎನ್ ಟಿ ರಾಮರಾಮ್ ಬಯೋಪಿಕ್, ರಾಜಶೇಖರ್ ರೆಡ್ಡಿ ಬಯೋಪಿಕ್ 'ಯಾತ್ರ' ಸಿನಿಮಾಗಳು ಬಂದಿವೆ. ತಮಿಳಿನಲ್ಲಿ ಜಯಲಲಿತಾ ಬಯೋಪಿಕ್ ಚಿತ್ರ ನಿರ್ಮಾಣ ಆಗುತ್ತಿವೆ.

ಯಾರ ಯಾರ ಬಯೋಪಿಕ್ ಮಾಡಬಹುದು
ನಟ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಅಂಬರೀಶ್, ಸರ್ ಎಂ ವಿಶ್ವೇಶ್ವರಯ್ಯ, ಕ್ರಿಕೆಟ್ ಆಟಗಾರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಇನ್ಫೋಸಿಸ್ ಸುಧಾಮೂರ್ತಿ, ನಾರಾಯಣ ಮೂರ್ತಿ, ನಿರ್ದೇಶಕ ಪುಟ್ಟಣ್ಣ ಕಣಗಾಲ್, ಸಾಲು ಮರದ ತಿಮ್ಮಕ್ಕ ಹೀಗೆ ಸಾಕಷ್ಟು ಸಾಧಕರ ಬದುಕು ತೆರೆ ಮೇಲೆ ಬರುವ ಸಾಮರ್ಥ್ಯ ಹೊಂದಿದೆ.

ಸ್ಟಾರ್ ನಟರಿಗೆ ಅವಕಾಶಗಳು ಬರುತ್ತಿಲ್ಲ
ಕನ್ನಡದಲ್ಲಿ ಆ ರೀತಿ ಸಿನಿಮಾಗಳ ನಿರ್ಮಾಣಕ್ಕೆ ಫಿಲ್ಮ್ ಮೇಕರ್ ಗಳು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಸ್ಟಾರ್ ಗಳಿಗೆ ಅವಕಾಶಗಳು ಸಿಗುತ್ತಿಲ್ಲ. ಒಳ್ಳೆಯ ಬಯೋಪಿಕ್ ಸಿನಿಮಾ ಬಂದರೆ, ಖಂಡಿತ ನಟಿಸುತ್ತೇನೆ ಎಂದು ಇತ್ತೀಚಿಗಷ್ಟೆ ನಟ ಸುದೀಪ್ ಹೇಳಿದ್ದರು. ಕನ್ನಡದಲ್ಲಿ ಆಗಾಗ ರಿಯಲ್ ಸ್ಟೋರಿಗಳ ಬಗ್ಗೆ ಸಿನಿಮಾಗಳು ಮಾಡುತ್ತಾರೆ. ಆದರೆ ಬಯೋಪಿಕ್ ನಿಂದ ದೂರವೇ ಉಳಿದಿದ್ದಾರೆ.


Click it and Unblock the Notifications











