ಸಪ್ತ ಸಾಗರದಾಚೆ ಎಲ್ಲೋ: ಯಾಕೆ ಈ ಚಿತ್ರ ನೋಡಲೇಬೇಕಾದ, ಕಾಡುವ ಚಿತ್ರ?
ಮಾಸ್ ಮತ್ತು ಕ್ಲಾಸ್ ಎನ್ನುವ ಎರಡು ಜಾನರ್ ಸಿನಿಮಾಗಳ ಮಧ್ಯೆ ವಿಭಿನ್ನವಾಗಿ ನಿಲ್ಲುವ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ'. ಮೊದಲ ಫ್ರೇಮ್ನಿಂದ ಹಿಡಿದು ಕ್ಲೈಮ್ಯಾಕ್ಸ್ವರೆಗೂ ಚಿತ್ರದುದ್ದಕ್ಕೂ ಭಾವನಾತ್ಮಕ ಟಚ್ ನೀಡಿರುವ ನಿರ್ದೇಶಕ ಹೇಮಂತ್ ಬಹುತೇಕವಾಗಿ ಒಂದೊಳ್ಳೆ ಸಿನಿಮಾ ನೀಡಿ ಗೆದ್ದಿದ್ದಾರೆ ಎಂದೇ ಹೇಳಬಹುದು.
ಸಿನಿಮಾದಲ್ಲಿ ಎಲ್ಲೂ ಫೈಟ್ ಇಲ್ಲ, ಅಲ್ಲಲ್ಲಿ ಸ್ವಲ್ಪ ಕಾಮಿಡಿ ಬಿಟ್ಟರೆ ಸಿನಿಮಾ ಸಾಗುವುದೇ ಎರಡು ಯುವ ಮನಸ್ಸುಗಳ ನಡುವೆ. ಪ್ರೇಮಿಗಳಿಬ್ಬರ ಕನಸು, ಮನಸು, ಭವಿಷ್ಯ, ಆಸೆ, ದುಗುಡ ದುಮ್ಮಾನವನ್ನು ಕಣ್ಣಿಗೆ ಕಟ್ಟುವಂತೆ ತೆರೆಯ ಮೇಲೆ ತಂದಿದ್ದಾರೆ. ಜೊತೆಗೆ, ಒಂದೊಳ್ಳೆ ಲೀಡ್ ಕೊಟ್ಟು ಪಾರ್ಟ್ - 2 ಸಿನಿಮಾ ಕುತೂಹಲದಿಂದ ಕಾಯುವಂತೆ ಮಾಡಿದ್ದಾರೆ.
ಚಿತ್ರದ ಬಗ್ಗೆ ಬರೆಯಲೇ ಬೇಕಾಗಿರುವುದು ಮೂರು ವಿಚಾರದ ಬಗ್ಗೆ. ಒಂದು ನಾಯಕಿ ರುಕ್ಮಿಣಿ ವಸಂತ್ ಅವರ ಪ್ರಬುದ್ದ ಅಭಿನಯ. ಗ್ಲ್ಯಾಮರ್ ಗೋಜಿಗೆ ಹೋಗದೇ ಮೊದಲೆರಡು ದೃಶ್ಯಗಳಿಂದಲೇ ಪ್ರೇಕಕ್ಷರಿಗೆ ಕನೆಕ್ಟ್ ಆಗುವ ರುಕ್ಮಿಣಿ ಅವರ ಇಂಟರ್ವಲ್ ನಂತರದ ನಟನೆ ಮನಸ್ಸಿಗೆ ಹತ್ತಿರವಾಗುತ್ತದೆ. ಇನ್ನೊಂದು, ಚಿತ್ರದ ಜೈಲು ಸನ್ನಿವೇಶಗಳಲ್ಲಿ ವಿಲನ್ ಪಾತ್ರಧಾರಿಯಾಗಿ ನಟಿಸಿದ ರಮೇಶ್ ಇಂದಿರಾ ಅವರ ಅಭಿನಯ ಮತ್ತು ಡೈಲಾಗ್ ಡೆಲಿವರಿ.

'ನಾವಿಲ್ಲಿ ಮನುಷ್ಯರಾಗಿ ಬಂದಿಲ್ಲಾ.. ಮನುಷ್ಯರಾಗೋಕೆ ಬಂದಿದ್ದೇವೆ', 'ಖೈದಿಗಳಿಂದ ಖದೀಮರಿಗೆ' ಮುಂತಾದ ಸಂಭಾಷಣೆಗಳು ಚಿತ್ರಕ್ಕೆ ಪೂರಕವಾಗಿದೆ. ಚಿತ್ರದ ಮೂರನೇ ಪ್ಲಸ್ ಪಾಯಿಂಟ್ ಅಂದರೆ ಜೈಲಿನ ಸನ್ನಿವೇಶಗಳು. ಜೈಲಿನಲ್ಲಿ ದುಡ್ಡು ಇದ್ದವರ ದರ್ಬಾರ್, ಇಲ್ಲದವರ ಯಮಯಾತನೆ, ದಂಧೆಗಳು, ಖೈದಿಗಳನ್ನು ನೋಡಲು ಬರುವ ಕುಟುಂಬದವರ ನೋವು, ಎಲ್ಲದಕ್ಕೂ ಹಣ ಕೈಕೈಬದಲಾಗುವುದು ಮುಂತಾದ ದೃಶ್ಯಗಳನ್ನು ನಿರ್ದೇಶಕರು ತುಂಬಾ ನಾಜೂಕಾಗಿ ತೆರೆಗೆ ತಂದಿದ್ದಾರೆ.
ಚಿತ್ರದಲ್ಲಿ ಹಲವು ಪಾತ್ರಗಳಿದ್ದರೂ ಯಾವುದನ್ನೂ ಅತಿರೇಕವಾಗಿ ತುರುಕಲಿಲ್ಲ. ಕಲಾವಿದರ ಓವರ್ ಆಕ್ಟಿಂಗ್ ಇಲ್ಲ, ಬಿಲ್ಡಪ್ ದೃಶ್ಯಗಳಿಲ್ಲ. ನಾಯಕ ಮತ್ತು ನಾಯಕಿಯ ಇಂಟ್ರಡಕ್ಷನ್ ಕೂಡಾ ತೀರಾ ಸಿಂಪಲ್ ಆಗಿದೆ. ನಾಯಕಿಯನ್ನು ಓಲೈಸಲು ಫೈಟು ಸೀನುಗಳು, ಉದ್ದುದ್ದ ಡೈಲಾಗ್, ಬಣ್ಣಬಣ್ಣದ ಮಾತಿನ ಸಹವಾಸಕ್ಕೆ ನಿರ್ದೇಶಕ ಹೇಮಂತ್ ಹೋಗದೇ ಇರುವುದೇ ಪ್ರೇಕ್ಷಕರಿಗೆ ಚಿತ್ರ ಹತ್ತಿರವಾಗಲು ಪ್ರಮುಖ ಅಂಶಗಳಲ್ಲೊಂದಾಗಬಹುದು.
ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ಚರಣ್ ರಾಜ್ ಅವರ ಹಿನ್ನಲೆ ಸಂಗೀತ, ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ, ಉಲ್ಲಾಸ್ ಹೈದೂರ್ ಅವರ ಕಲಾ ನಿರ್ದೇಶನ ಮತ್ತು ಸುನೀಲ್ ಭಾರದ್ವಾಜ್ ಮತ್ತು ಹೇಮಂತ್ ರಾವ್ ಅವರ ಸಂಕಲನ. ಮಾತಿಗಿಂತ ಜಾಸ್ತಿ ಕಣ್ಣಲ್ಲೇ, ಬಾಡಿ ಲಾಂಗ್ವೇಜ್ನಲ್ಲೇ ಮಾತನಾಡುವ ರಕ್ಷಿತ್ ಶೆಟ್ಟಿಯವರದ್ದು ಪ್ರಬುದ್ದ ಅಭಿನಯ. ಲವ್ ಬರ್ಡ್ಸ್ಗಳಿಗೆಂದೇ ಹೇಳಿ ಮಾಡಿಸಿದಂತಹ ಈ ಸಿನಿಮಾ, ಮೆಲೋಡಿಯಸ್ ಶೀರ್ಷಿಕೆ ಗೀತೆಯೊಂದಿಗೆ ಆರಂಭವಾಗುತ್ತಾ, ವೇಗ ಪಡೆದುಕೊಳ್ಳುತ್ತದೆ.

ಉದ್ಯಮಿಯೊಬ್ಬರ ಕಾರ್ ಡ್ರೈವರ್ ಆಗಿ ಮನು ಅಲಿಯಾಸ್ ರಕ್ಷಿತ್ ಶೆಟ್ಟಿ, ಸಂಗೀತದಲ್ಲಿ ಸಾಧನೆ ಮಾಡಬೇಕು ಎನ್ನುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ ಪ್ರಿಯಾ ಆಲಿಯಾಸ್ ರುಕ್ಮಿಣಿ ತಮ್ಮ ಮುಂದಿನ ಜೀವನದ ಬಗ್ಗೆ ಕಟ್ಟಿಕೊಂಡಿರುವ ಕನಸು, ಸನ್ನಿವೇಶಕ್ಕೆ ಸರಿಯಾಗಿ ಬರುವ ಸಂಭಾಷಣೆಗಳು ಪ್ರೇಕ್ಷಕರಿಗೆ ಮುದವನ್ನೂ ನೀಡುತ್ತದೆ, ಕಚಗುಳಿಯನ್ನೂ ನೀಡುತ್ತದೆ.
ಪ್ರೇಮ ಸ್ವಚ್ಛಂದವಾಗಿದ್ದರೆ ಎಲ್ಲವೂ ಸುಖ, ಜೀವನದಲ್ಲಿ ಒಮ್ಮೆಲೇ ಶ್ರೀಮಂತನಾಗಬೇಕೆಂದು ದುರಾಸೆಗೆ ಬಿದ್ದರೆ ವಿರಹ, ನೋವು.. ತನ್ನ ಪ್ರೀತಿಯನ್ನು ಪುಟ್ಟಿ ಎಂದು ಕರೆಯುವ ನಾಯಕ, ಕತ್ತೆ ಎಂದು ನಾಯಕನನ್ನು ಕರೆಯುವ ನಾಯಕಿ, ಇವರಿಬ್ಬರೂ ಯಾವ ರೀತಿ ಬದುಕಬೇಕೆಂದು ಬಯಸಿದ್ದರೋ ಅದು ಈಡೇರುತ್ತೋ, ಇಲ್ಲವೋ ಅದೇ ಚಿತ್ರದ ಒಟ್ಟಾರೆ ಸಾರಾಂಶ.
ಚಿತ್ರದ ಮುಂದಿನ ಭಾಗವನ್ನು ನೋಡಲೇಬೇಕಾದ ಅನಿವಾರ್ಯತೆಯನ್ನು ಹುಟ್ಟುಹಾಕಿ, ಚಿತ್ರ ಕೊನೆಗೊಳ್ಳುತ್ತದೆ. ಚಿತ್ರವನ್ನು ನೋಡಿಬಂದ ಪ್ರೇಕ್ಷಕ ಮುಂದಿನ ಭಾಗದಲ್ಲಿ ಏನಾಗಬಹುದು ಎಂದು ತಲೆಕೆಡಿಸಿಕೊಳ್ಲುವಂತೆ ಮಾಡಿದ್ದಾರೆ ನಿರ್ದೇಶಕರು ಮತ್ತು ಚಿತ್ರತಂಡ.


Click it and Unblock the Notifications











