Rajinikanth: "4 ವರ್ಷಕ್ಕೆ ಅಮ್ಮನ ಸಾವು.. ಅಪ್ಪ ಬೇರೆ ಮದ್ವೆ ಆಗಿ ಹೋದ್ರು.. ಶಿವಾಜಿ ಅನಾಥನಾದ": ತಲೈವಾ ಸಹೋದರ ಭಾವುಕ
ಸೂಪರ್ ಸ್ಟಾರ್ ರಜನಿಕಾಂತ್ 'ಜೈಲರ್' ಸಕ್ಸಸ್ ಸಂಭ್ರಮದಲ್ಲಿದ್ದಾರೆ. ತಮಿಳು ಚಿತ್ರರಂಗದ ಹಳೇ ದಾಖಲೆಗಳನ್ನೆಲ್ಲಾ ಮುರಿದು ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ರಜನಿಕಾಂತ್ ಸೇರಿದಂತೆ ಚಿತ್ರತಂಡಕ್ಕೆ ನಿರ್ಮಾಪಕರು ಉಡುಗೊರೆಗಳ ಸುರಿಮಳೆ ಸುರಿಸಿದ್ದಾರೆ. ಈ ಚಿತ್ರದಿಂದ ತಲೈವಾಗೆ ಬರೋಬ್ಬರಿ 200 ಕೋಟಿ ರೂ.ವರೆಗೂ ಸಂಭಾವನೆ ಸಿಕ್ಕಿದೆ ಎನ್ನಲಾಗ್ತಿದೆ.
ಇವತ್ತು ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟ ಎನ್ನುವ ಹೆಗ್ಗಳಿಕೆಗೆ ರಜನಿಕಾಂತ್ ಪಾತ್ರರಾಗಿದ್ದಾರೆ. ಅಸಂಖ್ಯಾತ ಅಭಿಮಾನಿಗಳನ್ನು ಸೂಪರ್ ಸ್ಟಾರ್ ಸಂಪಾದಿಸಿದ್ದಾರೆ. ತಲೈವಾ ಸಿನಿಮಾ ನೂರಾರು ಕೋಟಿ ಬ್ಯುಸಿನೆಸ್ ಮಾಡ್ತಿವೆ. ಆದರೆ 65 ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ತಂದೆ ತಾಯಿಯನ್ನು ಕಳೆದುಕೊಂಡು ಬಾಲಕ ಶಿವಾಜಿ ರಾವ್ ಗಾಯಕ್ವಾಡ್ ಅಲಿಯಾಸ್ ರಜನಿಕಾಂತ್ ಅನಾಥರಾಗಿದ್ದರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶಿವಾಜಿ ಮುಂದೆ ಸೂಪರ್ ಸ್ಟಾರ್ ಆಗಿ ಬೆಳೆದರು. ತಲೈವಾ ಬಾಲ್ಯದ ದಿನಗಳು ಹೇಗಿತ್ತು ಎನ್ನುವುದನ್ನು ಸಹೋದರ ಸತ್ಯನಾರಾಯಣ ಇತ್ತೀಚೆಗೆ ತಮಿಳು ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.

"ನಮ್ಮ ಅಪ್ಪ-ಅಮ್ಮನಿಗೆ ನಾವು 4 ಜನ ಮಕ್ಕಳು. ಮೊದಲನೆಯವರು ಅಕ್ಕ ಅಶ್ವಥ್ ಬಾಲುಬಾಯಿ. ಬಳಿಕ ನಾನು ಸತ್ಯನಾರಾಯಣ. ಬಳಿಕ ನಾಗೇಶ್. ಕೊನೆಯವರು ಶಿವಾಜಿರಾವ್ ಗಾಯಕ್ವಾಡ್. ಅವನು 4 ವರ್ಷ ಮಗುವಾಗಿದ್ದಾಗಲೇ ಅಮ್ಮ ತೀರಿಕೊಂಡರು. ಅಮ್ಮನ ಅಗಲಿಕೆ ಬಳಿಕ ಅಪ್ಪ ಮತ್ತೊಂದು ಮದುವೆ ಮಾಡಿಕೊಂಡು ಹೋಗಿಬಿಟ್ಟರು. ಪುಟ್ಟ ಕಂದ ಶಿವಾಜಿ ಅನಾಥನಾಗಿಬಿಟ್ಟ."
"ನಮ್ಮ ತಾತನ ತಮ್ಮ ರಾಮ್ಜೀ ರಾವ್ ಅಂತ ಇದ್ದರು. ಮದುವೆ ಆಗದೇ ಇದ್ದರು. ಅವರು ಈ ಮಗುವನ್ನು ನಾನು ಸಾಕುತ್ತೇನೆ ಎಂದರು. ವ್ಯವಸಾಯ ಮಾಡಿಕೊಂಡಿದ್ದರು. ಮಗುವನ್ನು ಚೆನ್ನಾಗಿ ಸಾಕಿದರು. ಬಳಿಕ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಸ್ಟೇಬಲ್ ಆಗಿ ಕೆಲಸ ಸಿಕ್ಕಿತ್ತು. ನನಗೆ ಕಲಾವತಿ ಎನ್ನುವ ತಯುವತಿ ಜೊತೆ ಮದುವೆ ಆಯಿತು. 5 ಜನ ಮಕ್ಕಳು ಹುಟ್ಟಿದರು. ಆದರೆ ಶಿವಾಜಿನೇ ನಮ್ಮ ದೊಡ್ಡ ಮಗ. ಅವರನ್ನು ಮಗನಂತೆ ಸಾಕಿದೆವು"

"ನ್ಯಾಯಕ್ಕಾಗಿ ಅನ್ಯಾಯದ ವಿರುದ್ಧ ಹುಡುಗರ ಜೊತೆ ಸೇರಿ ಗಲಾಟೆ ಮಾಡಿಕೊಂಡಿದ್ದ. ಕೆಟ್ಟವರ ಸಹವಾಸ ಮಾಡಿ ತಪ್ಪು ಮಾಡಿದಾಗ ಬೈದಿದ್ದೇನೆ, ಹೊಡೆದಿದ್ದೇನೆ. ನನಗೆ ಭಯವಾಗಿತ್ತು ಶಿವಾಜಿ ಇಂತಹವರ ಸಹವಾಸ ಮಾಡಿಬಿಟ್ಟನ್ನಲ್ಲ ಎಂದು. ನಂತರ ಅವನ್ನು ರಾಮಕೃಷ್ಣ ಆಶ್ರಮಕ್ಕೆ ಸೇರಿಸಿದೆ. ಶಾಲೆ ಮುಗಿದ ಮೇಲೆ ಆಶ್ರಮಕ್ಕೆ ಬರಬೇಕು ಪೂಜೆ, ಪ್ರಾರ್ಥನೆ, ಕಲಿಯಬೇಕಿತ್ತು."
"ಶಿವಾಜಿನ ಹೊಡೆದಾಗ ನನಗೂ ಬೇಸರವಾಗುತ್ತಿತ್ತು. ಆತ ಕೂಡ ಕೆಲವೇ ಕ್ಷಣಗಳಲ್ಲಿ ಅದನ್ನೆಲ್ಲಾ ಮರೆತುಬಿಡುತ್ತಿದ್ದ. ಆಗ ಅವನಿಗೆ ಬುದ್ದಿ ಹೇಳುತ್ತಿದ್ದೆ. ಕೆಟ್ಟವರ ಸಹವಾಸ ಬೇಡ ಎಂದು. ಹೇಳಿದ್ದಂತೆ ಕೇಳಿದ. ಆಮೇಲೆ ಬಿಟಿಎಸ್ ಬಸ್ ಕಂಡೆಕ್ಟರ್ ಕೆಲಸಕ್ಕೆ ಸೇರಿದ. ಎರಡು ವರ್ಷ ಮಾತ್ರ. 22, 23ನೇ ವಯಸ್ಸಿನಲ್ಲಿ ಮಾರ್ಕೆಟ್ನಿಂದ ಶ್ರೀನಗರಕ್ಕೆ ಓಡಾಡುತ್ತಿದ್ದ ಬಸ್ನಲ್ಲಿ ಕಂಡೆಕ್ಟರ್ ಕೆಲಸ ಮಾಡಿದ."
"ಆಗ ಬಸ್ ಡ್ರೈವರ್ ಆಗಿ ರಾಜ್ ಬಹದ್ದೂರ್ ಇದ್ದರು. ಇಬ್ಬರೂ ಸ್ನೇಹಿತರಾದರು. ಕೆಲಸ ಮುಗಿದ ಬಳಿಕ ಕೆಟ್ಟ ಚಟಗಳನ್ನು ರೂಢಿಸಿಕೊಂಡುಬಿಟ್ಟಿದ್ದರು. ಅದೆಲ್ಲಾ ತಪ್ಪು ಎಂದು ಹೇಳಿದರೂ ಕೇಳುತ್ತಿರಲಿಲ್ಲ. ಅದೇ ಸಮಯದಲ್ಲಿ ನಾಟಕಗಳ ಗೀಳು ಹತ್ತಿತ್ತು. ಒಮ್ಮೆ ಮಹಾಭಾರತದ ನಾಟಕದಲ್ಲಿ ದುರ್ಯೋಧನನ ಪಾತ್ರ ಮಾಡಿದ್ದರು. ಅದರಲ್ಲಿ ಶಿವಾಜಿಗೆ ಒಳ್ಳೆ ಹೆಸರು ಬಂತು. ಅದೇ ಸಮಯದಲ್ಲಿ ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್ನಲ್ಲಿ ಆಸಕ್ತರು ಸೇರಿಕೊಳ್ಳುವಂತೆ ಸುದ್ದಿ ಪ್ರಕಟವಾಗಿತ್ತು. ಅದನ್ನು ಓದಿದ ಮೇಲೆ ಸ್ನೇಹಿತ ರಾಜ್ ಬಹದ್ದೂರ್ ಹಾಗೂ ನಮ್ಮೆಲ್ಲರ ಆಸೆಯಂತೆ ಶಿವಾಜಿ ಅಲ್ಲಿಗೆ ಸೇರಿಕೊಂಡ. ಅಲ್ಲಿಂದ ಮುಂದೆ ಸಿನಿಜರ್ನಿ ಶುರುವಾಯಿತು" ಎಂದು ರಜನಿಕಾಂತ್ ಬಾಲ್ಯದ ಬಗ್ಗೆ ಸಹೋದರ ಸತ್ಯ ನಾರಾಯಣ ವಿವರಿಸಿದ್ದಾರೆ.


Click it and Unblock the Notifications











