'ಕಡ್ಡಿಪುಡಿ' ಚಿತ್ರದಲ್ಲಿ ಆ ಸೀನ್ ಡಿಲೀಟ್ ಮಾಡಿದ್ದೇಕೆ? ಛೇ.. ಫ್ಯಾನ್ಸ್ ಬೇಸರ
ಯಾವುದೇ ಸಿನಿಮಾಗಾಗಿ ಚಿತ್ರೀಕರಿಸಿದ ಅಷ್ಟು ಸನ್ನಿವೇಶಗಳನ್ನು ಅಂತಿಮವಾಗಿ ಬಳಸಿಕೊಳ್ಳುವುದಿಲ್ಲ. ಕೆಲ ಸೀನ್ಗಳನ್ನು ಕಾರಣಾಂತರಗಳಿಂದ ಎಡಿಟಿಂಗ್ ಸಮಯದಲ್ಲಿ ತೆಗೆದು ಹಾಕುತ್ತಾರೆ. ದುನಿಯಾ ಸೂರಿ ನಿರ್ದೇಶನದ 'ಕಡ್ಡಿಪುಡಿ' ಚಿತ್ರದಲ್ಲಿ ಒಂದು ದೃಶ್ಯಕ್ಕೆ ಕತ್ತರಿ ಬಿದ್ದಿತ್ತು. ಅದು ಯಾಕೆ ಎನ್ನುವುದು ಈಗ ರಿವೀಲ್ ಆಗಿದೆ.
ಕಾಲಾವಧಿ ಜಾಸ್ತಿ ಆಯ್ತು ಅಂತಾನೋ ಅಥವಾ ಕಥೆಗೆ ಸೂಕ್ತವಾಗಿಲ್ಲ ಅಂತಾನೋ ಕೆಲ ಸನ್ನಿವೇಶಗಳನ್ನು ಡಿಲೀಟ್ ಮಾಡುತ್ತಾರೆ. ಕೆಲವೊಮ್ಮೆ ಸೆನ್ಸಾರ್ ಮಂಡಳಿ ಸೂಚನೆಯಂತೆ ದೃಶ್ಯಗಳನ್ನು ಕತ್ತರಿಸಬೇಕಾಗುತ್ತದೆ. ನಿಮಗೆ ಗೊತ್ತಾ 'ಓಂ' ಸಿನಿಮಾ ಕಾರಣಕ್ಕೆ 'ಕಡ್ಡಿಪುಡಿ' ಚಿತ್ರದ ಅದೊಂದು ಸನ್ನಿವೇಶಗಳನ್ನು ತೆಗೆದು ಹಾಕಿದ್ದರು. ಈ ಇಂಟ್ರೆಸ್ಟಿಂಗ್ ಸಂಗತಿಯನ್ನು ಚಿತ್ರದ ಸಂಭಾಷಣೆಕಾರ ಮಾಸ್ತಿ ಉಪ್ಪಾರಳ್ಳಿ ಈಗ ರಿವೀಲ್ ಮಾಡಿದ್ದಾರೆ.

12 ವರ್ಷಗಳ ಹಿಂದೆ 'ಕಡ್ಡಿಪುಡಿ' ಸಿನಿಮಾ ತೆರೆಗೆ ಬಂದಿತ್ತು. ಎಂ. ಚಂದ್ರು ನಿರ್ಮಾಣದ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದರು. ಕೇವಲ 58 ದಿನಗಳಲ್ಲಿ ಚಿತ್ರೀಕರಣ ನಡೆದು ಬಹಳ ಬೇಗ ಸಿನಿಮಾ ತೆರೆಗೆ ಬಂದಿತ್ತು. ಅವತ್ತಿನ ಕಾಲಕ್ಕೆ 6.50 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗಿ ತಕ್ಕಮಟ್ಟಿಗೆ ಬ್ಯುಸಿನೆಸ್ ಮಾಡಿತ್ತು. 3 ಕೋಟಿ ರೂ.ಗೆ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದ್ದು ಅವತ್ತಿನ ಕಾಲಕ್ಕೆ ದಾಖಲೆ ಆಗಿತ್ತು.
ಸೂರಿ ಜೊತೆ ಸೇರಿ ಮಾಸ್ತಿ ಚಿತ್ರಕ್ಕೆ ಸಂಭಾಷಣೆ ಪಡೆದಿದ್ದರು. ಶಿವಣ್ಣನ ಜೊತೆ ರಾಧಿಕಾ ಪಂಡಿತ್ ನಾಯಕಿಯಾಗಿ ಮಿಂಚಿದ್ದರು. ಆನಂದ್ ಅಲಿಯಾಸ್ ಕಡ್ಡಿಪುಡಿ ಆಗಿ ಸೆಂಚುರಿ ಸ್ಟಾರ್ ಅಬ್ಬರಿಸಿದ್ದರು. ಮಡದಿಯ ಪಾತ್ರದಲ್ಲಿ ರಾಧಿಕಾ ಪಂಡಿತ್ ಕಾಣಿಸಿಕೊಂಡಿದ್ದರು. ಚಿತ್ರದ 3 ಹಾಡುಗಳಿಗೆ ಯೋಗರಾಜ್ ಭಟ್ ಹಾಗೂ ಒಂದು ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದರು.
ಇತ್ತೀಚೆಹೆ ಕೀರ್ತಿ ಇಎನ್ಟಿ ಕ್ಲಿನಿಕ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಂಭಾಷಣೆಕಾರ ಮಾಸ್ತಿ ಭಾಗಿ ಆಗಿದ್ದರು. ಈ ವೇಳೆ ತಮ್ಮ ಸಿನಿಜರ್ನಿಯ ಬಗ್ಗೆ ಮಾತನಾಡಿದ್ದರು. ನಡುವೆ 'ಕಡ್ಡಿಪುಡಿ' ಚಿತ್ರದ ವಿಚಾರ ಬಂದು ಸನ್ನಿವೇಶವೊಂದನ್ನು ಡಿಲೀಟ್ ಮಾಡಿದ್ದರ ಬಗ್ಗೆ ನೆನಪಿಸಿಕೊಂಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅರೇ ಒಳ್ಳೆ ಸನ್ನಿವೇಶ ನೋಡೋಕೆ ಮಿಸ್ ಆಯ್ತಲ್ಲ ಎನ್ನುತ್ತಿದ್ದಾರೆ. ಆ ಸನ್ನಿವೇಶ ಏನು ಎನ್ನುವುದನ್ನು ಖುದ್ದು ಮಾಸ್ತಿ ವಿವರಿಸಿದ್ದಾರೆ.

'ಕಡ್ಡಿಪುಡಿ' ಚಿತ್ರದಲ್ಲಿ ಡಿಲೀಟೆಡ್ ಸೀನ್ ಒಂದಿದೆ. ಶಿವಣ್ಣ ರೌಡಿಸಂ ಬಿಟ್ಟಿರುತ್ತಾರೆ. ಕೆಫೆಶ್ರೀ ಹೌಸ್ನಲ್ಲಿ ಚಿತ್ರೀಕರಣ ನಡೀತಿತ್ತು. ರಾಧಿಕಾ ಪಂಡಿತ್ ಮೇಡಂ ಸ್ನಾನ ಮಾಡಿ ಮುಡಿಗೆ ಟವೆಲ್ ಸುತ್ತಿಕೊಂಡು ಮನೆ ಮುಂದೆ ತುಳಸಿ ಕಟ್ಟೆಗೆ ಪೂಜೆ ಮಾಡುತ್ತಿರುತ್ತಾರೆ. ತುಳಸಿ ಕಟ್ಟೆಯ ಎಡಗಡೆಗೆ 'ಓಂ' ಹಾಗೂ ಬಲಗಡೆಗೆ 'ಸ್ವಸ್ತಿಕ್' ಚಿಹ್ನೆ ಬರೆದಿರುತ್ತಾರೆ. ಆಗ ಶಿವಣ್ಣ ಬಂದು ನೋಡಿ 'ಓಂ' ಎನ್ನುವುದನ್ನು ಅಳಿಸಿಬಿಡ್ತಾರೆ. ಯಾಕೆ ಎಂದಾಗ "ಇಲ್ಲ ಅದೆಲ್ಲಾ ಬಿಟ್ಟಿದ್ದೀನಲ್ಲ" ಅಂತಾರೆ.
ಎಡಿಟಿಂಗ್ ವೇಳೆ ಆ ಸನ್ನಿವೇಶ ತೆಗೆದುಬಿಟ್ಟೆವು. 'ಓಂ' ಎನ್ನುವುದು ಒಂದು ಅದ್ಭುತ ಸಿನಿಮಾ. ಅದನ್ನು ಅಳಿಸುವ ರೀತಿ ಸೋರಿಸೋದು ಬೇಡ, ಕಥೆಯಲ್ಲಿ ಇದ್ದರೂ ಬೇಡ ಎನಿಸಿ ಆ ಸೀನ್ ಡಿಲೀಟ್ ಮಾಡಬೇಕಾಯಿತು ಎಂದು ಮಾಸ್ತಿ ವಿವರಿಸಿದ್ದಾರೆ.
ಸೂರಿ ಹಾಗೂ ಶಿವಣ್ಣ ಜೋಡಿಯ ಮೊದಲ ಸಿನಿಮಾ 'ಕಡ್ಡಿಪುಡಿ'. ಮುಂದೆ ಇದೇ ಜೋಡಿ 'ಟಗರು' ರೀತಿಯ ಬ್ಲಾಕ್ಬಸ್ಟರ್ ಹಿಟ್ ಕೊಟ್ಟಿತ್ತು. 'ಟಗರು'-2 ಕೂಡ ಮಾಡುವುದಾಗಿ ಸುಳಿವು ಸಿಕ್ಕಿತ್ತು. ಆದರೆ ಯಾಕೋ ಅದಕ್ಕೆ ಇನ್ನು ಸಮಯ ಕೂಡಿ ಬರ್ತಿಲ್ಲ. ಅಭಿಮಾನಿಗಳಂತೂ ಸೀಕ್ವೆಲ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಯುವ ರಾಜ್ಕುಮಾರ್ ನಟನೆಯ ಚಿತ್ರಕ್ಕೆ ಸೂರಿ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.


Click it and Unblock the Notifications











