ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಅಪ್ಪು ಜೊತೆಗಿನ ಬಂಧದ ಮೆಲುಕು
ಇಂದು ಶಿವರಾಜ್ ಕುಮಾರ್ ಹುಟ್ಟುಹಬ್ಬ. ಶಿವಣ್ಣ ಅಭಿಮಾನಿಗಳಿಗಿಂದು ಹಬ್ಬದ ದಿನ. ಈ ಖುಷಿಯ ದಿನದಂದು ಅಪ್ಪು ಅವರನ್ನು ನೆನಯದಿದ್ದರೆ ದಿನ ಪೂರ್ಣವಾಗುವುದಿಲ್ಲ. ಅಪ್ಪು ನನೆಪು ಸಹ ಹಬ್ಬವೇ.
''ಅಪ್ಪುಗೆ ನನ್ನ ಕಣ್ಣ ದೃಷ್ಟಿಯೇ ಬಿದ್ದು ಬಿಟ್ಟಿತೋ ಏನೋ'' ಎಂದು ಹೇಳಿ ಶಿವಣ್ಣ ಕಣ್ಣೀರು ಹಾಕಿದ ದೃಶ್ಯ ಅಭಿಮಾನಿಗಳು ಮರೆತಿಲ್ಲ. ಶಿವಣ್ಣ, ಪುನೀತ್ ರಾಜ್ಕುಮಾರ್ ಅನ್ನು ಬಹುವಾಗಿ ಹಚ್ಚಿಕೊಂಡಿದ್ದರು, ಅಪ್ಪು ತಮ್ಮ ಸಹೋದರನಾಗಿರುವ ಬಗ್ಗೆ ಅವರಿಗೆ ಬಹಳ ಹೆಮ್ಮೆ. ಅಪ್ಪು ಹಾಗೆ ಡ್ಯಾನ್ಸ್ ಮಾಡುತ್ತಾನೆ, ಅಪ್ಪು ಅದ್ಭುತವಾಗಿ ಅಡುಗೆ ಮಾಡುತ್ತಾರೆ, ಅಪ್ಪು ಒಳ್ಳೆಯ ನಿರ್ಮಾಣ ಸಂಸ್ಥೆ ಕಟ್ಟಿದ್ದಾನೆ, ಅಪ್ಪು ಒಳ್ಳೆಯ ಫಿಸಿಕ್ ಮೇಂಟೇನ್ ಮಾಡಿದ್ದಾನೆ, ಅಪ್ಪು ಚೆನ್ನಾಗಿ ವ್ಯಾಯಾಮ ಮಾಡುತ್ತಾನೆ, ಅಪ್ಪು ಸೈಕ್ಲಿಂಗ್ ಮಾಡುತ್ತಾನೆ, ಅಪ್ಪು ಹೊಸ ಕಾರು ತಗೊಂಡಿದ್ದಾನೆ ಹೀಗೆ ಶಿವಣ್ಣ ಮಾತಾಡಿದರೆ ಅಪ್ಪು ಮಾತಿಲ್ಲದೆ ಮಾತು ಪೂರ್ಣಗೊಳಿಸುತ್ತಿರಲಿಲ್ಲ.
ಅಪ್ಪುವೇ ನನ್ನ ಸ್ಪೂರ್ತಿ ಎಂದು ಅಪ್ಪು ತೀರಿಕೊಳ್ಳುವ ಕೆಲವು ದಿನಗಳ ಹಿಂದಿನ ಸಂದರ್ಶನದಲ್ಲೂ ಶಿವಣ್ಣ ಹೇಳಿಕೊಂಡಿದ್ದರು. ಅದೇ ಕಾರಣಕ್ಕೇನೋ ಅಪ್ಪು ನಮನ ಕಾರ್ಯಕ್ರಮದಲ್ಲಿ ''ಅವನಿಗೆ ನನ್ನ ಕಣ್ಣೆ ಬಿತ್ತೇನೋ' ಎಂದು ಭಾವುಕರಾಗಿದ್ದು. ಶಿವಣ್ಣನಿಗೆ ಅಪ್ಪು ಹೇಗೋ ಅಪ್ಪುಗೆ ಶಿವಣ್ಣ ಸಹ ಹಾಗೆ. ಅವರಿಬ್ಬರ ಬಂಧ ಸಿನಿಮಾಗಳ ಅಣ್ಣ-ತಮ್ಮಂದಿರ ಬಂಧಕ್ಕಿಂತಲೂ ಹೆಚ್ಚು ಆಪ್ತ, ಮಧುರ, ಆದರ್ಶನೀಯ.
ಅಪ್ಪು, ಶಿವಣ್ಣನಿಗೆ ಸಹೋದರ ಮಾತ್ರವಲ್ಲ ತಂದೆಯಂತಿದ್ದವರು. ಇಬ್ಬರ ನಡುವೆ 13 ವರ್ಷಗಳ ಅಂತರ. ಪುನೀತ್ ಮಗುವಿದ್ದಾಗ ಚೆನ್ನೈನ ಬೀದಿಗಳಲ್ಲಿ ಶಿವಣ್ಣ, ಅಪ್ಪುವನ್ನು ಎತ್ತಿಕೊಂಡು ಓಡಾಡಿದ್ದರು. ಆಗೆಲ್ಲ ಮಗುವೊಂದು ಇನ್ನೊಂದು ಮಗುವನ್ನು ಎತ್ತಿಕೊಂಡಿದೆ ಎಂದು ತಮಾಷೆ ಮಾಡುತ್ತಿದ್ದರಂತೆ ಚೆನ್ನೈನಲ್ಲಿ ಅಣ್ಣಾವ್ರ ಮನೆಯ ನೆರೆ-ಹೊರೆಯವರು.

ಶಿವಣ್ಣನ ಅಭಿಮಾನಿಯೂ ಆಗಿದ್ದ ಅಪ್ಪು
ಪುನೀತ್ ರಾಜ್ಕುಮಾರ್ ಜೀವನದಲ್ಲಿ ಶಿವಣ್ಣ ಅವರದ್ದು ಮಹತ್ವದ ಪಾತ್ರ, ನಾಯಕ ನಟ ಆಗುವುದರಿಂದ ಹಿಡಿದು, ಪುನೀತ್ ವಿವಾಹದಲ್ಲೂ ಶಿವಣ್ಣನ ಪಾತ್ರವಹಿಸಿದ್ದಾರೆ. ಅದೇ ಕಾರಣಕ್ಕೆ ಅಪ್ಪು ಹಲವು ಬಾರಿ ಹೇಳಿಕೊಂಡಿದ್ದು, ಶಿವಣ್ಣ ನನಗೆ ತಂದೆ ಸಮಾನರೆಂದು. ಪುನೀತ್, ಶಿವಣ್ಣನವರ ಸಹೋದರನಾಗಿರುವ ಜೊತೆ ಅವರ ಅಪ್ಪಟ ಅಭಿಮಾನಿಯೂ ಆಗಿದ್ದರು. ಕಳೆದ ವರ್ಷ ಶಿವಣ್ಣನ ಹುಟ್ಟುಹಬ್ಬಕ್ಕೆ ಅಭಿಮಾನಿಯಂತೆ ಹೋಗಿ ಅವರ ಮುಂದೆ ಮೊಣಕಾಲು ಹಾಕಿ ಕೂತು ಚಿತ್ರತೆಗೆಸಿಕೊಂಡಿದ್ದರು. ಅಪ್ಪಟ ಅಭಿಮಾನಿಂತೆ ಶಿವಣ್ಣನಿಗೆ ಜೈಕಾರಗಳನ್ನು ಕೂಗಿದ್ದರು ಆದರೆ ಈ ವರ್ಷ ಹುಟ್ಟುಹಬ್ಬಕ್ಕೆ ಅವರಿಲ್ಲ!

ಪುನೀತ್ ಮೊದಲ ಸಿನಿಮಾಕ್ಕೆ ಕತೆ ಆಯ್ಕೆ ಶಿವಣ್ಣನದ್ದು
ಪುನೀತ್ ರಾಜ್ಕುಮಾರ್ ನಾಯಕ ನಟನಾಗುವಲ್ಲಿ ಶಿವಣ್ಣನ ಪಾತ್ರ ಪ್ರಮುಖವಾದುದು. ಶಿವಣ್ಣನಿಗಾಗಿ ತೆಲುಗಿನ ಪುರಿ ಜಗನ್ನಾಥ್ ಕೆಲವು ಕತೆಗಳನ್ನು ಹೇಳಿದ್ದರು. ಆ ಕತೆಗಳಲ್ಲಿ ಒಂದನ್ನು ತಮ್ಮ ಸಹೋದರ ಪುನೀತ್ ರಾಜ್ಕುಮಾರ್ಗೆ ಸೂಕ್ತ ಎಂದು ಆಯ್ಕೆ ಮಾಡಿದ್ದು, ಪುರಿ ಜಗನ್ನಾಥ್ ಅನ್ನು ಮನೆಗೆ ಕರೆದುಕೊಂಡು ಹೋಗಿ ಅಮ್ಮ ಪಾರ್ವತಮ್ಮನವರ ಬಳಿ ಮಾತನಾಡಿ ಪುನೀತ್ ರಾಜ್ಕುಮಾರ್ಗಾಗಿ ಇದೇ ಕತೆಯನ್ನು ಸಿನಿಮಾ ಮಾಡುವಂತೆ ಒಪ್ಪಿಸಿದ್ದು ಶಿವರಾಜ್ ಕುಮಾರ್. 'ಅಪ್ಪು' ಸಿನಿಮಾ ಆಗಿದ್ದು ಹೀಗೆ.

ಅಪ್ಪು-ಅಶ್ವಿನಿ ಮದುವೆಗೆ ಶಿವಣ್ಣನದ್ದೇ ಸಾರಥ್ಯ!
ಬಳಿಕ ಪುನೀತ್ ರಾಜ್ಕುಮಾರ್ ಮದುವೆ ವಿಷಯದಲ್ಲಿಯೂ ಶಿವಣ್ಣನದ್ದೇ ಪ್ರಮುಖ ಪಾತ್ರ. 1999 ರಲ್ಲಿ 'ಏಕೆ 47' ಸಿನಿಮಾ ಬಿಡುಗಡೆ ಆದ ದಿನ ಪುನೀತ್ ರಾಜ್ ಕುಮಾರ್, ಅಶ್ವಿನಿ ಅವರನ್ನು ಶಿವಣ್ಣನಿಗೆ ಪರಿಚಯ ಮಾಡಿಸಿದರಂತೆ. ಇಬ್ಬರೂ ಪ್ರೀತಿಸುತ್ತಿರುವ ವಿಷಯವನ್ನೂ ಹೇಳಿದರಂತೆ. ಅಂತೆಯೇ ಶಿವರಾಜ್ ಕುಮಾರ್ ಈ ವಿಷಯವನ್ನು ತಾಯಿ ಪಾರ್ವತಮ್ಮನ ಬಳಿ ಹೇಳಿದ್ದಾರೆ, ಅಪ್ಪನ ಬಳಿ ಹೇಳೆಂದು ಅಮ್ಮ ಹೇಳಿದಾಗ ಅಂತೆಯೇ ರಾಜ್ಕುಮಾರ್ ಅವರ ಬಳಿ ವಿಷಯ ಪ್ರಸ್ತಾಪಿಸಿ ಮದುವೆಗೆ ಒಪ್ಪಿಗೆ ಕೊಡಿಸಿದ್ದು ಶಿವಣ್ಣನವರೇ. ಹಾಗಾಗಿ ಪುನೀತ್ ಹಾಗೂ ಅಶ್ವಿನಿ ವಿವಾಹಕ್ಕೆ ಸಾರಥಿಯಾಗಿದ್ದು ಶಿವಣ್ಣ.

ಶಿವಣ್ಣಗೆ ಅಪ್ಪು ಎಂದರೆ ಬಹಳ ಅಚ್ಚು-ಮೆಚ್ಚು
ಹಲವು ವಿಷಯಗಳಲ್ಲಿ ಪುನೀತ್ ಅನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದರು ಶಿವಣ್ಣ, ಹಲವು ಬಾರಿ ಇಬ್ಬರೂ ಬಹಳ ಆತ್ಮೀಯವಾಗಿದ್ದರು ಸಹ. ಪರಸ್ಪರರ ಕುಟುಂಬಗಳು ಆಗಾಗ್ಗೆ ಗೆಟ್ ಟು ಗೆದರ್ ಸಹ ಮಾಡುತ್ತಿದ್ದವು. ಪುನಿತ್ ಅಂತೂ ಶಿವಣ್ಣನನ್ನು ಮನೆಗೆ ಕರೆಸಿ ತಾನೇ ಕೈಯಾರೆ ಶಿವಣ್ಣನಿಗೆ ಇಷ್ಟವಾಗುವ ಚಿಕನ್ ಸಾರು, ಮಟನ್ ತಿನಿಸುಗಳನ್ನು ಉಣಪಡಿಸುತ್ತಿದ್ದ ಎಂದು ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ, ಇಬ್ಬರ ಕುಟುಂಬಗಳು ಒಟ್ಟಾಗಿ ಪ್ರವಾಸಗಳನ್ನು ಸಹ ಹೋಗಿದ್ದಿದೆ. ಪುನೀತ್ ನಿಧನ ಹೊಂದುವ ಕೆಲವು ತಿಂಗಳ ಹಿಮದಷ್ಟೆ ಅಪ್ಪು ಹಾಗೂ ಶಿವರಾಜ್ ಕುಮಾರ್ ಕುಟುಂಬ ಅವರ ಹುಟ್ಟೂರು ಚಾಮರಾಜನಗರದ ಗಾಜನೂರಿಗೆ ಹೋಗಿದ್ದರು. ಕೆಲವೇ ದಿನಗಳಲ್ಲಿ ಮತ್ತೆ ಗಾಜನೂರಿಗೆ ಅಪ್ಪು ಹಾಗೂ ಶಿವಣ್ಣ ಹೋಗಬೇಕಿತ್ತು ಅಷ್ಟರಲ್ಲೇ ಪುನೀತ್ ವಿಧಿವಶರಾದರು.


Click it and Unblock the Notifications











