ಸಾಯಿಕುಮಾರ್ಗೆ ಶಿವಣ್ಣ ಡ್ಯೂಪ್ ಆಗಿದ್ದ ಚಿತ್ರ ಯಾವ್ದು? ಆ ಸನ್ನಿವೇಶಕ್ಕೆ ಶಿಳ್ಳೆ ಚಪ್ಪಾಳೆ
ಸಿನಿಮಾಗಳಲ್ಲಿ ನಟರಿಗೆ ಡ್ಯೂಪ್ ಹಾಕುವುದು ಸರ್ವೇ ಸಾಧಾರಣ. ರಿಸ್ಕಿ ಶಾಟ್ಗಳಲ್ಲಿ ಹೀರೊ ಬದಲು ಅವರಂತೆ ಕಾಣುವ ವ್ಯಕ್ತಿಯನ್ನು ಅದೇ ಕಾಸ್ಟ್ಯೂಮ್ನಲ್ಲಿ ಅವರಂತೆ ತೋರಿಸಲಾಗುತ್ತದೆ. ಲಾಂಗ್ ಶಾಟ್ಗಳಲ್ಲಿ ಇದನ್ನು ಬಳಸಿಕೊಳ್ಳುತ್ತಾರೆ. ಕನ್ನಡ ಸಿನಿಮಾಗಳಲ್ಲಿ ಕೂಡ ಇದು ಇದೆ.
ಈಗ ಡ್ಯೂಪ್ ಹಾಕುವವರಿಗೆ ಲಕ್ಷ ಲಕ್ಷ ಸಂಭಾವನೆ ಸಿಗುತ್ತದೆ. ತೆಲುಗು ನಟ ಸಾಯಿಕುಮಾರ್ಗೆ ಕನ್ನಡ ನಟ ಶಿವರಾಜ್ಕುಮಾರ್ ಒಂದು ಸಿನಿಮಾದಲ್ಲಿ ಡ್ಯೂಪ್ ಹಾಕಿದ್ದರು ಅಂದ್ರೇ? ನಂಬ್ತೀರಾ? ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಈ ವಿಚಾರವನ್ನು ಬಹಿರಂಗಪಡಿಸಿದ್ದರು. ಬಳಿಕ ಸಾಯಿಕುಮಾರ್ ಸಹ ಮಾಧ್ಯಮಗಳ ಜೊತೆ ಈ ಬಗ್ಗೆ ಮಾತನಾಡಿದ್ದರು.

ನಟ ಸಾಯಿಕುಮಾರ್ ಕನ್ನಡ ಸಿನಿರಸಿಕರಿಗೆ ಡೈಲಾಗ್ ಕಿಂಗ್ ಎಂದೇ ಚಿರಪರಿಚಿತ. ತೆಲುಗು ನಟನಾದರೂ ಕನ್ನಡ ನಟನೇ ಎನ್ನುವಷ್ಟು ಆಪ್ತರಾಗಿದ್ದಾರೆ. ಕನ್ನಡದ 'ಲಾಕಪ್ ಡೆತ್' ಸಿನಿಮಾ ಮೂಲಕ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿತ್ತು. 'ಪೊಲೀಸ್ ಸ್ಟೋರಿ' ಸಿನಿಮಾ ದಾಖಲೆ ಬರೆದಿತ್ತು. ಮುಂದೆ 'ಮುದ್ದಿನ ಕಣ್ಮಣಿ', 'ಅಗ್ನಿ ಐಪಿಎಸ್', 'ಪೊಲೀಸ್ ಸ್ಟೋರಿ-2', 'ಕಲ್ಪನಾ' ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದರು.
ಸದ್ಯ 'ಸತ್ಯ ಸನ್ ಆಫ್ ಹರಿಶ್ಚಂದ್ರ' ಎನ್ನುವ ಚಿತ್ರದಲ್ಲಿ ನಿರೂಪ್ ಭಂಡಾರಿ ಜೊತೆ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಓಂ ಪ್ರಕಾಶ್ ರಾವ್ ನಿರ್ದೇಶನದ 'AK-47' ಸಿನಿಮಾ ಹಿಟ್ ಆಗಿತ್ತು. ಶಿವರಾಜ್ಕುಮಾರ್ ಹೀರೊ ಆಗಿ ನಟಿಸಿದ್ದ ಚಿತ್ರಕ್ಕೆ ಕೋಟಿ ರಾಮು ಬಂಡವಾಳ ಹೂಡಿದ್ದರು. ವಿಶೇಷ ಅಂದ್ರೆ ಈ ಚಿತ್ರವನ್ನು ಏಕಕಾಲಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ತರಲಾಗಿತ್ತು.

'AK-47' ಕನ್ನಡ ಚಿತ್ರದಲ್ಲಿ ಶಿವಣ್ಣ ಹೀರೊ ಆಗಿ ನಟಿಸಿದರೆ ತೆಲುಗಿನಲ್ಲಿ ಸಾಯಿಕುಮಾರ್ ಮಿಂಚಿದ್ದರು. ಎರಡೂ ಸಿನಿಮಾಗಳ ಚಿತ್ರೀಕರಣ ಒಟ್ಟೊಟ್ಟಿಗೆ ನಡೆದಿತ್ತು. ಮೊದಲು ಶಿವಣ್ಣ ಮಾಡಿದ ಸನ್ನಿವೇಶದ ಚಿತ್ರೀಕರಣದಲ್ಲಿ ಬಳಿ ಡೈಲಾಗ್ ಕಿಂಗ್ ನಟಿಸುತ್ತಿದ್ದರು. ಇನ್ನುಳಿದಂತೆ ಬಹುತೇಕ ಕಲಾವಿದರು ಎರಡೂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.
ಒಮ್ಮೆ ಚಿತ್ರೀಕರಣದ ವೇಳೆ ಸಾಯಿಕುಮಾರ್ ಬಿದ್ದು ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚಿತ್ರೀಕರಣಕ್ಕೆ ವಾಪಸ್ ಆಗಿದ್ದರಂತೆ. ಸನ್ನಿವೇಶವೊಂದನ್ನು ಮಾಡಬೇಕು ಅಂದಾಗ ಸಾಯಿಕುಮಾರ್ ಆಗಲ್ಲ ಎಂದಂತೆ. ಹೆಚ್ಚು ಕಮ್ಮಿ ಒಂದೇ ತರಹದ ಕಾಸ್ಟ್ಯೂಮ್ ಧರಿಸಿ ಆ ಸನ್ನಿವೇಶಗಳನ್ನು ಚಿತ್ರೀಕರಿಸುತ್ತಿದ್ದರಿಂದ ಲಾಂಗ್ ಶಾಟ್ಗಳಲ್ಲಿ ಶಿವಣ್ಣ ನಟಿಸಿದ್ದನ್ನೇ ತೆಲುಗಿನಲ್ಲಿ ಬಳಸಿಕೊಳ್ಳಲಾಗಿತ್ತು.
ಇನ್ನು ಫೈಟ್ ಮಾಡುವಾಗ ಅಪ್ ಶಾಟ್ ಹೊಡೆಯಬೇಕಿತ್ತು. ಶಿವಣ್ಣ ತುಂಬಾ ಚೆನ್ನಾಗಿ ಮಾಡಿದರು. ನನಗೂ ಮಾಡೋಕೆ ಹೇಳ್ತಾರೆ ಅಂತ ನನಗೆ ಭಯವಾಗಿತ್ತು. ನನ್ನನ್ನು ಕರೆದು ಮಾಡಿ ಎಂದಾಗ ಆಗಲ್ಲ ಎಂದೆ. ಇಲ್ಲ ಮಾಡಲೇಬೇಕು ಎಂದ್ರು. ಶಿವಣ್ಣ ಬಂದ್ರು. ಸೇಮ್ ಡ್ರೆಸ್ನಲ್ಲಿ ಇದ್ರು. ಸ್ವಲ್ಪ ಆಂಗಲ್ ಚೇಂಜ್ ಮಾಡ್ಕೊಳ್ಳಿ ಸಾಯಿಗೆ ನಾನೇ ಡ್ಯೂಪ್ ಮಾಡ್ತೀನಿ ಅಂತ ಶಿವಣ್ಣ ಮಾಡಿಬಿಟ್ರು.
ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ನಾನು ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿದೆ. ಸಿನಿಮಾ ಎಲ್ಲಾ ಚೆನ್ನಾಗಿತ್ತು. ಆ ಶಾಟ್ಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದರು. ನಾನು ಆಗ ಅಂದುಕೊಂಡೆ ಇದೆಲ್ಲಾ ಶಿವಣ್ಣನಿಗೆ ಸೇರಬೇಕು, ನನಗಲ. ಜನ ನಾನೇ ಅಂದುಕೊಂಡ್ರು ಎಂದು ನ್ಯೂಸ್ಫಸ್ಟ್ ಸಂದರ್ಶನದಲ್ಲಿ ಸಾಯಿಕುಮಾರ್ ವಿವರಿಸಿದ್ದರು.


Click it and Unblock the Notifications











