'ಆನಂದ್' ಸಿನಿಮಾ ಬಜೆಟ್, ಕಲೆಕ್ಷನ್ ಎಷ್ಟಾಗಿತ್ತು? ಅಂದು ಒಂದು ಟಿಕೆಟ್ ಬೆಲೆ ಎಷ್ಟಿತ್ತು?
ಇವತ್ತು ಸಿನಿಮಾಗಳ ಕಲೆಕ್ಷನ್ 200 ಕೋಟಿ, 300 ಕೋಟಿ, 500 ಕೋಟಿ, 1000 ಕೋಟಿ ಅಂತೆಲ್ಲಾ ಚರ್ಚೆ ನಡೆಯುತ್ತದೆ. ಟಿಕೆಟ್ ದರ 150 ರಿಂದ 500 ರೂ. ದಾಟಿದೆ. ಆದರೆ 37 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸಿನಿಮಾ ಟಿಕೆಟ್ ದರ ಎಷ್ಟಿತ್ತು? ಆಗ ಸಿನಿಮಾಗಳ ಕಲೆಕ್ಷನ್ ಹೇಗಿರುತ್ತಿತ್ತು ಗೊತ್ತಾ?
ಶಿವರಾಜ್ಕುಮಾರ್ 'ಆನಂದ್' ಚಿತ್ರದ ಮೂಲಕ ಹೀರೊ ಆಗಿ ಚಿತ್ರರಂಗಕ್ಕೆ ಬಂದಿದ್ದರು. ಅದೇ ಚಿತ್ರದಲ್ಲಿ ಮೊದಲ ಬಾರಿ ಸುಧಾರಾಣಿ ನಾಯಕಿಯಾಗಿ ನಟಿಸಿದ್ದರು. ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಇವತ್ತಿಗೂ ಆ ಚಿತ್ರದ ಹಾಡುಗಳು ಎವರ್ಗ್ರೀನ್ ಎನಿಸಿಕೊಂಡಿದೆ. ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನದ ರೊಮ್ಯಾಂಟಿಕ್ ಎಂಟರ್ಟೈನರ್ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಶಂಕರ್ ಗಣೇಶ್ ಸಂಗೀತ ಹಾಗೂ ಚಿ. ಉದಯ್ ಶಂಕರ್ ಸಾಹಿತ್ಯ ಹಾಡುಗಳು ಹಿಟ್ ಆಗಿತ್ತು.

ಕಲಾ ತಪಸ್ವಿ ರಾಜೇಶ್, ಜಯಂತಿ, ಶುಭಾ, ತಾರಾ, ತೂಗುದೀಪ ಶ್ರೀನಿವಾಸ್, ಚಿ. ಗುರುದತ್, ಹೊನ್ನವಳ್ಳಿ ಕೃಷ್ಣ ಚಿತ್ರದ ತಾರಾಗಣದಲ್ಲಿದ್ದರು. ಜಯಶ್ರೀ ಬಾಲನಟಿಯಾಗಿ ಅದಾಗಲೇ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದರು. ಬಳಿಕ ಸುಧಾರಾಣಿ ಎಂದು ಹೆಸರು ಬದಲಿಸಿಕೊಂಡು ಶಿವಣ್ಣನಿಗೆ ಜೋಡಿಯಾಗಿದ್ದರು. ಇವರಿಬ್ಬರ ಜೋಡಿ ಸೂಪರ್ ಹಿಟ್ ಎನಿಸಿಕೊಂಡಿತ್ತು. ಬಳಿಕ ಬಂದ 'ಮನಮೆಚ್ಚಿದ ಹುಡುಗಿ', 'ರಣರಂಗ' ಚಿತ್ರಗಳಲ್ಲಿ ಕೂಡ ಒಟ್ಟಿಗೆ ನಟಿಸಿ ಗೆದ್ದಿದ್ದರು.
'ಆನಂದ್' ಸಿನಿಮಾ ಕಲೆಕ್ಷನ್ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ಶಿವರಾಜ್ಕುಮಾರ್ ಮಾತನಾಡಿದ್ದರು. ಅಂದಾಜು 16 ಲಕ್ಷ ರೂ. ಬಜೆಟ್ನಲ್ಲಿ 'ಆನಂದ್' ಸಿನಿಮಾ ನಿರ್ಮಾಣವಾಗಿತ್ತು. ಎರಡೂವರೆ ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅಂದರೆ ಎಷ್ಟು ಪಟ್ಟು ಹೆಚ್ಚಾಯಿತು ಎಂದು ನೀವೆ ಲೆಕ್ಕ ಹಾಕಿ ಎಂದು ಶಿವಣ್ಣ ಹೇಳಿದ್ದರು. ಅವತ್ತಿನ ಕಾಲಕ್ಕೆ 16 ಲಕ್ಷ ರೂ. ಕೂಡ ದೊಡ್ಡ ಮೊತ್ತವೇ ಆಗಿತ್ತು. ಇನ್ನು ಎರಡೂವರೆ ಕೋಟಿ ರೂ. ಕಲೆಕ್ಷನ್ ಅಂದರೆ 13 ಪಟ್ಟು ಹೆಚ್ಚು ಗಳಿಕೆ ಕಂಡಂತಾಗಿತ್ತು.
ಆಗಿನ ಕಾಲದಲ್ಲಿ ಓಟಿಟಿ, ಸ್ಯಾಟಲೈಟ್ ರೈಟ್ಸ್ ಮಾರಾಟದ ಲೆಕ್ಕಾಚಾರ ಇರಲಿಲ್ಲ. ಆಡಿಯೋ ರೈಟ್ಸ್ ಬಿಟ್ಟರೆ ಥ್ರಿಯೇಟ್ರಿಕಲ್ ರೈಟ್ಸ್ ಮಾತ್ರ ಆದಾಯ ತಂದುಕೊಡುತ್ತಿತ್ತು. ಹೋಂ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿದ್ದ ಸಿನಿಮಾಗಳನ್ನು ಸ್ವತಃ ಪಾರ್ವತಮ್ಮ ಬಿಡುಗಡೆ ಮಾಡುತ್ತಿದ್ದರು. ಗಾಂಧಿನಗರದ ಮೇನಕಾ ಸೇರಿ ರಾಜ್ಯಾದ್ಯಂತ 'ಆನಂದ್' ಸಿನಿಮಾ ಬಿಡುಗಡೆ ಆಗಿತ್ತು. ಅಂದು ಮೇನಕಾ ಚಿತ್ರಮಂದಿರದಲ್ಲಿ ಟಿಕೆಟ್ ದರ ಎಷ್ಟಿತ್ತು ಗೊತ್ತಾ? ಆಗ ಪ್ರೇಕ್ಷಕರೊಬ್ಬರು ಸಿನಿಮಾ ನೋಡಲು ಖರೀದಿಸಿದ್ದ ಟಿಕೆಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಿಮಗೆ ಗೊತ್ತಾ 'ಆನಂದ್' ಸಿನಿಮಾ ಬಿಡುಗಡೆಯಾದಾಗ ಟಿಕೆಟ್ ಬೆಲೆ ಗರಿಷ್ಠ 4.50 ರೂಪಾಯಿ ಇತ್ತು. ಇಷ್ಟು ಕಮ್ಮಿ ದರ ಇದ್ದಾಗಲೇ ಸಿನಿಮಾ 2.5 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಹೊಸ ಪ್ರತಿಭೆಗಳ ಚಿತ್ರಕ್ಕೆ ಈ ಪರಿ ಯಶಸ್ಸು ಸಿಕ್ಕಿದ್ದು ಅದೇ ಮೊದಲು ಎಂದು ಸುಧಾರಾಣಿ ಫ್ಯಾನ್ಸ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಶಿವಣ್ಣ ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್ನಲ್ಲಿ ಆಕ್ಟಿಂಗ್ ಕಲಿತು ಚಿತ್ರರಂಗಕ್ಕೆ ಬಂದಿದ್ದರು. ಕನ್ನಡ ಮಾತ್ರವಲ್ಲದೇ ತಮಿಳಿನಿಂದಲೂ ಆಗ ಅವಕಾಶಗಳು ಬರಲು ಆರಂಭಿಸಿತ್ತು. ಆದರೆ ಪಾರ್ವತಮ್ಮ ತಮ್ಮದೇ ಬ್ಯಾನರ್ ಅಡಿಯಲ್ಲಿ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಲು ಮನಸ್ಸು ಮಾಡಿದ್ದರು. ದಾಕ್ಷಾಯಿಣಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಬಿ. ಸಿ ಗೌರಿಶಂಕರ್ ಛಾಯಾಗ್ರಾಹಕರಾಗಿ ಚಿತ್ರವನ್ನು ಸೆರೆ ಹಿಡಿದಿದ್ದರು. ಸಿನಿಮಾ 38 ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡಿತ್ತು.


Click it and Unblock the Notifications











