ಶಿವಣ್ಣನ 'ಮನಮೋಹಕ' ನಿಲ್ಲೋಕೆ ಕಾರಣ ರಕ್ಷಿತ್ ಶೆಟ್ಟಿಯ 'ಉಳಿದವರು ಕಂಡಂತೆ': ಸುನಿ
ಸಿಂಪಲ್ ಸುನಿ ನಿರ್ದೇಶನದ 'ಒಂದು ಸರಳ ಪ್ರೇಮಕಥೆ' ಸಿನಿಮಾ ರಾಜ್ಯದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿನಯ್ ರಾಜ್ಕುಮಾರ್ ರೊಮ್ಯಾಂಟಿಕ್ ಕಾಮಿಡಿ ಎಂಟರ್ಟೈನರ್ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಎಂದಿನ ತಮ್ಮ ಲವಲವಿಕೆಯ ನಿರ್ದೇಶನದಿಂದ ಸುನಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
'ಒಂದು ಸರಳ ಪ್ರೇಮಕಥೆ' ಸಿನಿಮಾ ಪ್ರಚಾರದ ಭಾಗವಾಗಿ ಸಿಂಪಲ್ ಸುನಿ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸುನಿ ಮಾತನಾಡಿದ್ದಾರೆ. ತಮ್ಮ ಸಿನಿಕರಿಯರ್ನ ಏಳುಬೀಳಿನ ಬಗ್ಗೆ ಹಂಚಿಕೊಂಡಿದ್ದಾರೆ. ಈ ವೇಳೆ 'ಮನಮೋಹಕ' ಸಿನಿಮಾ ಟಾಪಿಕ್ ಕೂಡ ಬಂದಿದೆ.

10 ವರ್ಷಗಳ ಹಿಂದೆ ಶಿವಣ್ಣ ಹೀರೊ ಆಗಿ 'ಮನಮೋಹಕ' ಸಿನಿಮಾ ಘೋಷಣೆ ಆಗಿತ್ತು. ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಬೇಕಿತ್ತು. ಕಲರ್ಫುಲ್ ಫೋಟೊಶೂಟ್ ಕೂಡ ಮಾಡಲಾಗಿತ್ತು. ಶಿವಣ್ಣ ಸ್ಟೈಲಿಶ್ ಲುಕ್ನಲ್ಲಿ ಲವರ್ ಬಾಯ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರು. ಆ ಫೋಟೊಗಳು ವೈರಲ್ ಆಗಿ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿತ್ತು. ಆದರೆ ಫೋಟೊಶೂಟ್ ಬೆನ್ನಲ್ಲೇ ಸಿನಿಮಾ ನಿಂತು ಹೋಗಿತ್ತು.
ನಿರ್ದೇಶಕ ಸುನಿ ಹೋದಲ್ಲಿ ಬಂದಲ್ಲಿ 'ಮನಮೋಹಕ' ಸಿನಿಮಾ ಬಗ್ಗೆ ಪ್ರಶ್ನೆ ಕೇಳುವಂತಾಯಿತು. ಆ ಸಿನಿಮಾ ನಿಂತ ಬಳಿಕವೂ ಏಳೆಂಟು ಸಿನಿಮಾಗಳನ್ನು ಕಟ್ಟಿಕೊಟ್ಟರು. ಆದರೆ ಸೆಂಚುರಿ ಸ್ಟಾರ್ ಅಭಿಮಾನಿಗಳ ಆಸೆ ಮಾತ್ರ ಈಡೇರಲೇ ಇಲ್ಲ. 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಸಕ್ಸಸ್ ಬೆನ್ನಲ್ಲೇ 'ಮನಮೋಹಕ' ಘೋಷಣೆ ಆಗಿದ್ದರಿಂದ ಅಂತದ್ದೇ ಮತ್ತೊಂದು ಸಕ್ಸಸ್ ನಿರೀಕ್ಷೆ ಮಾಡಲಾಗಿತ್ತು.
ಇವತ್ತಿಗೂ 'ಮನಮೋಹಕ' ಸಿನಿಮಾ ನಿಂತಿಲ್ಲ. ಆ ಬಗ್ಗೆ ಮಾತುಕತೆ ನಡೆಯುತ್ತಲೇ ಇದೆ. ಶಿವಣ್ಣ ಸಹ ನಟಿಸೋಕೆ ಸಿದ್ಧರಾಗಿದ್ದಾರೆ. ನಿರ್ಮಾಪಕರು ಸಿಕ್ಕ ಕೂಡಲೇ ಸಿನಿಮಾ ಮಾಡೋದು ಪಕ್ಕಾ ಎಂದು ಸುನಿ ಹೇಳುತ್ತಾ ಬರ್ತಿದ್ದಾರೆ. ಆದರೆ ಅಂದು ಸಿನಿಮಾ ಯಾಕೆ ನಿಲ್ತು ಎನ್ನುವುದು ಬಹಳ ಜನಕ್ಕೆ ಗೊತ್ತಿಲ್ಲ. ಆ ಸೀಕ್ರೆಟ್ ಈಗ ರಿವೀಲ್ ಮಾಡಿದ್ದಾರೆ. 'ಉಳಿದವರು ಕಂಡಂತೆ' ಸಿನಿಮಾ ಸೋಲು 'ಮನಮೋಹಕ' ನಿಲ್ಲಲು ಕಾರಣ ಎಂದಿದ್ದಾರೆ.

ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಉಳಿದವರು ಕಂಡಂತೆ' ಚಿತ್ರಕ್ಕೂ ಸುನಿ- ಶಿವಣ್ಣ 'ಮನಮೋಹಕ' ಚಿತ್ರಕ್ಕೂ ಎತ್ತಣದಿಂದ ಎತ್ತಣ ಸಂಬಂಧ ಅಂತ ನಿಮಗೆ ಅನ್ನಿಸುವುದು ಸಹಜ. ಅದಕ್ಕೆ ಕಾರಣ ಕೂಡ ಇದೆ. ಅದೇನು ಅಂದ್ರೆ 'ಉಳಿದವರು ಕಂಡಂತೆ' ಚಿತ್ರಕ್ಕೆ ಸುನಿ ಕೂಡ ನಿರ್ಮಾಪಕರಾಗಿದ್ದರು.
"ನಿರ್ಮಾಪಕನಾಗಿ ನಾನು ಸಾಕಷ್ಟು ಹೊಡೆತ ತಿಂದಿದ್ದೇನೆ. ಮೊದಲ ಸಿನಿಮಾ(ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ) ಬಹಳ ಲಾಭ ತಂದು ಕೊಟ್ಟಿತ್ತು. ನಾವು ಹಾಕಿದ ಬಂಡವಾಳ ಬಹಳ ಕಮ್ಮಿ ಆದರೆ ಒಳ್ಳೆ ಗೆಲುವು ಸಿಕ್ಕಿತ್ತು. ಎರಡನೇ ಸಿನಿಮಾ 'ಬಹುಪರಾಕ್' ನನ್ನದೇ ಆಗಿದ್ದರೂ ಸ್ವಲ್ಪ ಹೊಡೆತ ಕೊಡ್ತು. 'ಉಳಿದವರು ಕಂಡಂತೆ' ನಾನು ಸಿನಿಮಾ ನಿರ್ಮಾಣ ಬಿಡಲು ಕಾರಣ. ಅಷ್ಟು ಒಳ್ಳೆಯ ಸಿನಿಮಾ ಮಾಡಿ ಲಾಭ ಬಂದಿಲ್ಲ ಅಂದ್ರೆ ನಿರ್ಮಾಪಕನಾಗಿ ಉಳಿಯುವುದು ಕಷ್ಟ ಎನಿಸಿತು" ಎಂದಿದ್ದಾರೆ.
ಮಾತು ಮುಂದುವರೆಸಿರುವ ನಿರ್ದೇಶಕ ಸುನಿ "ಉಳಿದವರು ಕಂಡಂತೆ ಬೆನ್ನಲ್ಲೇ ನಾವು ಮನಮೋಹಕ ಸಿನಿಮಾ ಮಾಡಬೇಕಿತ್ತು. ಫೈನಾನ್ಶಿಯರ್ ಇದ್ದರು. ಶಿವಣ್ಣ ಫ್ರೀ ಡೇಟ್ ಕೊಟ್ಟು ಫೋಟೊಶೂಟ್ ಆಗಿತ್ತು. ಅದು ನನ್ನ ನೆಚ್ಚಿನ ಸಬ್ಜೆಕ್ಟ್ ಆಗಿತ್ತು. ಆದರೂ ನಾನು ಹಿಂದಡಿ ಇಡಲು ಕಾರಣ ಉಳಿದವರು ಕಂಡಂತೆ ಒಳ್ಳೆ ಸಿನಿಮಾ ಅಂತ ಎಲ್ಲರಿಗೂ ಗೊತ್ತಿತ್ತು. ಬಹಳ ಭರವಸೆ ಇತ್ತು. ಆದರೂ ನಮಗೆ ಲಾಭ ಆಗಲಿಲ್ಲ. ಹಾಗಾಗಿ ನಮಗೆ ಅನಿಸಿತು. ನಮಗೆ ಜಡ್ಜ್ಮೆಂಟ್ ಇಲ್ಲ ಎನಿಸಿತು. ಹಾಗಾಗಿ ಮನಮೋಹಕ ಆಗಿ ಕೈಬಿಟ್ವಿ" ಎಂದು ಸುನಿ ವಿವರಿಸಿದ್ದಾರೆ.


Click it and Unblock the Notifications










