ತಿರುಪೆ ಶೋಕಿ ಮಾಡ್ತಿದ್ದ ರೀಲ್ಸ್ ರಾಜ ಅರೆಸ್ಟ್; ಯಾರೀ ಅರುಣ್ ಕಟಾರೆ?
ಸೋಶಿಯಲ್ ಮೀಡಿಯಾದಲ್ಲಿ ಕೆಲವರಿಗೆ ರಾತ್ರೋ ರಾತ್ರಿ ಅದೃಷ್ಟ ಖುಲಾಯಿಸಿಬಿಡುತ್ತೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದವನೇ ಅರುಣ್ ಕಟಾರೆ. "ಇರೋವರೆಗೂ ಜಾಲಿ.. ಹೋದ್ಮೇಲೆ ಖಾಲಿ.. ಮನೆಗೊಂದು ಫೋಟೊ.. ಊರಿಗೊಂದು ಊಟ" ಇದೇ ಡೈಲಾಗ್ ಬಿಟ್ಟು, ದುಬಾರಿ ಕಾರುಗಳು, ಫಾರಿನ್ ಹುಡುಗಿಯರು, ಮೈಮೇಲೆ ಗೋಲ್ಡ್ ಹಾಕೊಂಡು ರೀಲ್ಸ್ ಮಾಡುತ್ತಿದ್ದ.
ಈ ರೀಲ್ಸ್ ರಾಜನನ್ನು ನೆಟ್ಟಿಗರು ಪ್ರೀತಿಯಿಂದ ರಾಕಿ ಭಾಯ್ ಅಂತನೂ ಕರೆಯುತ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಸ್ ಆಗಿದ್ದ ಅರುಣ್ ಕಟಾರೆಯನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಅದಕ್ಕೆ ಕಾರಣನೂ ಈ ರೀಲ್ಸ್ ಅನ್ನೋದು ಗಮನಿಸಬೇಕಾದ ಸಂಗತಿ. ದುಬಾರಿ ಕಾರು, ಬಾಡಿ ಗಾರ್ಡ್ಗಳ ಜೊತೆ ಬೆಂಗಳೂರಿನ ರಸ್ತೆಗಳಲ್ಲಿ, ಬಸ್ ಸ್ಟಾಪ್ಗಳಲ್ಲಿ ಶೋಆಪ್ ಕೊಡುತ್ತಿದ್ದ. ಅದೇ ಈಗ ಸಂಕಷ್ಟಕ್ಕೆ ಸಿಲುಕಿದೆ.

ಎಕೆ 47 ಮಾದರಿಯ ನಕಲಿ ಗನ್ಗಳನ್ನು ಹಿಡಿದ ಬಾಡಿಗಾರ್ಡ್ಗಳ ಜೊತೆ ಅರುಣ್ ಕಟಾರೆ ರೀಲ್ಸ್ ಮಾಡುತ್ತಿದ್ದ. ಇದನ್ನು ನೋಡಿದ ಸಾರ್ವಜನಿಕರು ಗಾಬರಿ ಬಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಕೊತ್ತನೂರು ಪೊಲೀಸರು ಅರುಣ್ ಕಟಾರೆಯನ್ನು ಬಂಧಿಸಿದ್ದಾರೆ. ಅಸಲಿಗೆ ದಿಢೀರನೇ ಫೇಮಸ್ ಆದ ಈತ ಯಾರು? ಹಿನ್ನೆಲೆಯೇನು? ತಿಳಿಯಲು ಮುಂದೆ ಓದಿ.
ಅರುಣ್ ಕಟಾರೆ ಅಲಿಯಾಸ್ ರಾಕಿಭಾಯ್. ಈತನ ಕಾಸ್ಟ್ಲೀ ಬದುಕಿಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾನೇ ಸ್ಪೂರ್ತಿ. ಈ ಸಿನಿಮಾ ರಾಕಿ ಭಾಯ್ ತರಾನೇ ತನ್ನ ಜೀವನ ಅಂತ ಯೂಟ್ಯೂಬ್ ಚಾನೆಲ್ಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ಕೊಟ್ಟಿದ್ದಾನೆ. ಅಸಲಿಗೆ ಅರುಣ್ ಕಟಾರೆ ಹುಟ್ಟಿದ್ದೆಲ್ಲ ಹುಬ್ಬಳ್ಳಿಯಲ್ಲಿ. ಬೆಳೆದಿದ್ದೆಲ್ಲ ಚಿತ್ರದುರ್ಗದಲ್ಲಿ. ಸದ್ಯಕ್ಕೆ ಇರುವುದು ಬೆಂಗಳೂರಿನಲ್ಲಿ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುತ್ತಾ ಫೇಮಸ್ ಆಗಿದ್ದಾರೆ.

ಅರುಣ್ ಕಟಾರೆ ಬಂಧನಕ್ಕೂ ಮುನ್ನ ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದ. ಈ ವೇಳೆ ತನ್ನ ಬಯೋಡೇಟಾವನ್ನೇ ಬಿಚ್ಚಿಟ್ಟಿದ್ದ. ತಾನು ಹೀಗೆ ಶೋಕಿ ಮಾಡುತ್ತಾ ವಿಡಿಯೋ ಮಾಡುವುದು ಎಂಟರ್ಟೈನ್ಮೆಂಟ್ಗೋಸ್ಕರ್ ಎಂದು ಹೇಳಿದ್ದಾರೆ. ಕರ್ನಾಟಕದವರು ವಿಡಿಯೋ ನೋಡುತ್ತಾರೆ. ಹಾಗೇ ಬೇರೆ ಭಾಷೆಯವರೂ ತನ್ನ ವಿಡಿಯೋವನ್ನು ನೋಡಲಿ ಅಂತ ವಿಡಿಯೋ ಮಾಡುತ್ತಿದ್ದೇನೆ ಎಂದಿದ್ದಾರೆ.
ಅಷ್ಟಕ್ಕೂ ಅರುಣ್ ಕಟಾರೆ ಹಿನ್ನೆಲೆಯೇನು ಕಮ್ಮಿಯಿಲ್ಲ. ಅವರೇ ಯೂಟ್ಯೂಬ್ನಲ್ಲಿ ಹೇಳಿಕೊಂಡಂತೆ ಅಣ್ಣನದ್ದು ಗೋ ಗ್ರೀನ್ ಬಯೋ ಡಿಸಲ್ ಫ್ಯಾಕ್ಟರಿಯಿದೆ. ಜೊತೆಗೆ ವಾಟರ್ ಫ್ಯಾಕ್ಟರಿಯನ್ನು ಆರಂಭ ಮಾಡುವ ಆಲೋಚನೆಯಲ್ಲಿ ಇದ್ದೇನೆ ಎಂದಿದ್ದಾರೆ. ಅರುಣ್ ಕಟಾರೆ ಲೈಫ್ ರೀಲ್ಸ್ನಲ್ಲಿ ಎಷ್ಟು ಪಾಸಿಟಿವ್ ಆಗಿದೆಯೋ ಅಷ್ಟೇ ನೆಗೆಟಿವ್ಗಳಿಂದಲೂ ತುಂಬಿದೆ. ಈ ಸೋಶಿಯಲ್ ಮೀಡಿಯಾ ಸ್ಟಾರ್ ಜೈಲಿಗೆ ಹೋಗಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹೋಗಿದ್ದರು.
ಅರುಣ್ ಕಟಾರೆ ಪತ್ನಿ ತೀರಿಕೊಂಡಾಗ ಡಿಪ್ರೆಷನ್ಗೆ ಜಾರಿದ್ದರಂತೆ. ಅದರಿಂದ ಹೊರಬರುವುದಕ್ಕೆ ಹೀಗೆ ರೀಲ್ಸ್ ಮಾಡುವುದಕ್ಕೆ ಶುರು ಮಾಡಿದ್ದರು. "ನಾನು ಸಿಗರೇಟ್ ಸೇದಲ್ಲ. ಮದ್ಯಪಾನ, ಟೀ, ಕಾಫಿ ಏನನ್ನೂ ಕುಡಿಯಲ್ಲ. ಯೂಟ್ಯೂಬ್ ಅನ್ನು 2013ರಲ್ಲಿಯೇ ಶುರು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇವರ ಬಳಿ ಸ್ವಂತ ಅಂತ ಹುಂಡೈ ವರ್ನಾ, ಕಿಸ್ಟಾ ಹಾಗೂ ಬಿಎಂಡ್ಲ್ಯೂ ಕಾರುಗಳು ಇವೆ ಎಂದಿದ್ದಾರೆ. ಹಾಗೆ ಜೈಲಿಗೂ ಹೋಗಿ ಬಂದಿದ್ದೇನೆ ಎಂದಿದ್ದಾರೆ.
"ನನ್ನ ಜೀವನದಲ್ಲೂ ಕೆಟ್ಟದ್ದೆಲ್ಲ ಆಗಿದೆ. ಜೈಲಿಗೆಲ್ಲ ಹೋಗಿ ಬಂದಿದ್ದೇನೆ. ರಾಕಿ ಭಾಯ್ ಅಂತ ಹೆಸರು ಇಟ್ಟಿದ್ದೇ ಜೈಲಿನಲ್ಲಿ. ಅರುಣ್ ಕಟಾರೆ ಅಲಿಯಾಸ್ ರಾಕಿ ಭಾಯ್. ಇದೇ ಕೈಯಲ್ಲಿ ಬೇಡಿ ಹಾಕಿದ್ದರು. ಅದೇ ಕೈಗೆ ರಾಡೋ ವಾಚ್ ಕಟ್ಕೋತಿನಿ. ನನ್ನ ಹತ್ರಿರಾನೂ ಕೆಟ್ಟ ಹವ್ಯಾಸಗಳಿವೆ. ನಾನು ಕ್ಯಾಸಿನೋಗೆಲ್ಲ ಹೋಗುತ್ತೇನೆ. ಒಮ್ಮೆ ಪ್ಲಸ್ನಲ್ಲಿ ಇರುತ್ತೆ. ಇನ್ನೊಮ್ಮೆ ಮೈನಸ್ನಲ್ಲಿ ಇರುತ್ತೇನೆ. ಮದ್ಯಾಹ್ನ 2 ಗಂಟೆಗೆ ಎದ್ದೇಳುತ್ತೇನೆ" ಎಂದು ಬಿಲ್ಡಪ್ ಕೊಟ್ಟದ್ದ.
ಇದೇ ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನೆಲ್ನಲ್ಲಿ 64 ದಿನ ಜೈಲಿನಲ್ಲಿ ಇದ್ದೆ. ಅಲ್ಲೇ ಕನ್ನಡ ಕಲಿತೆ ಎಂದು ಹೇಳಿಕೊಂಡಿದ್ದ. ಪಬ್ಲಿಕ್ ಪ್ಲೇಸ್ನಲ್ಲಿ ನಕಲಿ ಗನ್ ಹಿಡಿದು ಆತಂಕ ಸೃಷ್ಟಿಸಿದಕ್ಕೆ ಕೊತ್ತನೂರು ಪೊಲೀಸರು, ಆರ್ಮ್ಸ್ ಆಕ್ಟ್, ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಸೋಶಿಯಲ್ ಮೀಡಿಯಾ ಸ್ಟಾರ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.


Click it and Unblock the Notifications











