ಹೀರೊ ಆಗಬೇಕಿದ್ದ ಪುತ್ರ ಆತ್ಮಹತ್ಯೆ, ಆರ್ಥಿಕ ಸಂಕಷ್ಟ; ಎಂ. ಪಿ ಶಂಕರ್ ದುರಂತ ಅಂತ್ಯ ಹೇಗಾಯ್ತು?
ಎಂ. ಪಿ ಶಂಕರ್. ಕನ್ನಡ ಚಿತ್ರರಂಗ ಕಂಡ ಅದ್ಭುತ ಸಿನಿಕರ್ಮಿ. ನಟನಾಗಿ ನಿರ್ದೇಶಕನಾಗಿ ನಿರ್ಮಾಪಕರನಾಗಿ ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. 1935, ಆಗಸ್ಟ್ 20ರಂದು ಮೈಸೂರಿನಲ್ಲಿ ಜನಿಸಿದ ಎಂ. ಪಿ ಶಂಕರ್ ತಮ್ಮ 72ನೇ ವಯಸ್ಸಿನಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು.
ಮಗನ ಆತ್ಮಹತ್ಯೆ, ನಿರ್ಮಿಸಿದ ಸಿನಿಮಾಗಳಿಂದ ಉಂಟಾದ ನಷ್ಟ ಕೊನೆಯ ದಿನಗಳಲ್ಲಿ ಎಂ. ಪಿ ಶಂಕರ್ ಅವರನ್ನು ಬಹಳವಾಗಿ ಕಾಡಿತ್ತು. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು 2008, ಜುಲೈ 17ಕ್ಕೆ ಬಾರದ ಲೋಕಕ್ಕೆ ಪಯಣ ಬೆಳೆಸುತ್ತಾರೆ. 'ಭೂತಯ್ಯನ ಮಗ ಅಯ್ಯು' ಚಿತ್ರದ ಭೂತಯ್ಯನ ಪಾತ್ರದಲ್ಲಿ ಅವರ ಅಭಿನಯವನ್ನು ಕನ್ನಡ ಸಿನಿರಸಿರಕು ಮರೆಯೋಕೆ ಸಾಧ್ಯವಿಲ್ಲ.

ಗರಡಿಯಲ್ಲಿ ತಾಲೀಮು ನಡೆಸಿ ಹುರಿಗಟ್ಟಿದ ದೇಹ ಎಂ. ಪಿ ಶಂಕರ್ಗೆ ವರವಾಗಿತ್ತು. 1962ರಲ್ಲಿ ಬಂದ 'ರತ್ನಮಂಜರಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಕೊನೆಗೆ 'ಕಾಡಿನ ರಹಸ್ಯ' ಚಿತ್ರದಿಂದ ನಿರ್ಮಾಪಕರು ಆದರು. ಪ್ರಾಣಿ-ಪಕ್ಷಿ, ವನ್ಯ ಸಂಪತ್ತಿನ ಬಗ್ಗೆ ಅಪಾರ ಕಾಳಜಿ, ಪ್ರೀತಿ ಹೊಂದಿದ್ದ ಎಂ. ಪಿ ಶಂಕರ್ ತಮ್ಮ ಸಿನಿಮಾಗಳಲ್ಲಿ ಅದರ ರಕ್ಷಣೆ ಬಗ್ಗೆ ಸಂದೇಶ ಸಾರುತ್ತಿದ್ದರು.
'ಗಂಧದಗುಡಿ', 'ಮೃಗಾಲಯ', 'ರಾಮ-ಲಕ್ಷ್ಮಣ', 'ಕಾಡಿನ ರಾಜ' ಹೀಗೆ ಹಲವು ಸಿನಿಮಾಗಳಲ್ಲಿ ವನ್ಯಜೀವಿ ಹಾಗೂ ಅರಣ್ಯ ಸಂಪತ್ತಿನ ಬಗ್ಗೆಯೇ ಕಥೆಗಳು ಇದ್ದವು. ಈ ಚಿತ್ರಗಳಿಗೆಲ್ಲಾ ಸ್ವತಃ ಎಂ. ಪಿ ಶಂಕರ್ ಕಥೆ ಒದಗಿಸಿದ್ದರು. ಇನ್ನು ನಟನೆಯ ವಿಚಾರಕ್ಕೆ ಬಂದರೆ 'ಸತ್ಯಹರಿಶ್ಚಂದ್ರ' ಚಿತ್ರದ ವೀರಬಾಹು, 'ನಾಗರಹಾವು' ಚಿತ್ರದ ಪೈಲ್ವಾನ್ ಬಸಣ್ಣ, 'ಹುಲಿಯ ಹಾಲಿನಮೇವು' ಚಿತ್ರದ ದೊಡ್ಡ ವೀರರಪ್ಪ ಪಾತ್ರಗಳನ್ನು ಪ್ರೇಕ್ಷಕರು ಮರೆಯೋದಿಲ್ಲ.

ಎಂ. ಪಿ ಶಂಕರ್ ಬದುಕಿನಲ್ಲಿ ಬಂದೂಕು ಹಾಗೂ ರಿವಾಲ್ವರ್ ಒಂದು ರೀತಿ ವಿಲನ್ಗಳಾಗಿಬಿಟ್ಟವು. 'ಗಂಧದಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಎಂ. ಪಿ ಶಂಕರ್ ಅವರ ಬಂದೂಕಿನಿಂದ ಸಿಡಿದ ಗುಂಡು ಭಾರೀ ವಿವಾದಕ್ಕೆ ಕಾರಣವಾಗಿಬಿಟ್ಟಿತು. ಇದು ಡಾ. ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ನಡುವೆ ಅಂತರ ಬೆಳೆಯಲು ಕಾರಣವಾಗಿಬಿಟ್ಟಿತು. ಇಬ್ಬರ ಅಭಿಮಾನಿಗಳ ನಡುವೆ ಸಂಘರ್ಷ ಏರ್ಪಡುವಂತೆ ಮಾಡಿಬಿಟ್ಟಿತು.
ಅಂದು ಚಿತ್ರೀಕರಣದ ವೇಳೆ ಬಂದೂಕಿನಿಂದ ಯಾಕೆ ಗುಂಡು ಹಾರಿತು? ಆಗ ಯಾರ ಕೈಯಲ್ಲಿ ಬಂದೂಕು ಇತ್ತು? ಅಪವಾದ ಯಾಕೆ ವಿಷ್ಣುವರ್ಧನ್ ಮೇಲೆ ಬಂತು? ಎನ್ನುವ ಬಗ್ಗೆ ಒಬ್ಬೊಬ್ಬರು ಒಂದು ಕಥೆ ಹೇಳುತ್ತಾರೆ. ಆದರೆ ವಿಷ್ಣು ತನ್ನದಲ್ಲದ ತಪ್ಪಿಗೆ ದಶಕಗಳ ಕಾಲ ಸಂಕಷ್ಟ ಎದುರಿಸುವಂತಾಯಿತು. ಇನ್ನು ಎಂ. ಪಿ ಶಂಕರ್ ರಿವಾಲ್ವರ್ನಿಂದಲೇ ಮಗ ವಿರೂಪಾಕ್ಷ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ನಿರ್ಮಾಪಕರಾದ ಎಂ. ಪಿ ಶಂಕರ್ ತಮ್ಮ ಮಗ ವಿರೂಪಾಕ್ಷನನ್ನು ಹೀರೊ ಮಾಡುವ ಕನಸು ಕಂಡಿದ್ದರು. ಅದಕ್ಕಾಗಿ 'ಹಳ್ಳಿ ರಂಭೆ ಬೆಳ್ಳಿ ಬೊಂಬೆ' ಚಿತ್ರಕ್ಕೆ ಕೈ ಹಾಕಿದ್ದರು. ಕಥೆ ಸಿದ್ಧಪಡಿಸಿ ಮಾಲಾಶ್ರೀ ನಾಯಕಿಯಾಗಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಚಿ. ಉದಯಶಂಕರ್ ತಮ್ಮ ಮಗ ಚಿ. ಗುರುದತ್ನನ್ನು ಈ ಚಿತ್ರದಲ್ಲಿ ಹೀರೊ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಅವರು ಒಪ್ಪಿಕೊಂಡಿದ್ದರು.
ವಿರೂಪಾಕ್ಷನಿಗಾಗಿ ಕಥೆ ಮಾಡಿದ್ದು ಎನ್ನುವುದು ಚಿ. ಉದಯಶಂಕರ್ ಅವರಿಗೂ ಗೊತ್ತಿರಲಿಲ್ಲ. ಆದರೆ ಮಗನನ್ನು ಹೀರೊ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ನೋವು ಎಂ. ಪಿ ಶಂಕರ್ ಅವರಿಗಿತ್ತು. ಹೀರೊ ಆಗಬೇಕು ಎನ್ನುವ ಕನಸು ನನಸಾಗದೇ ವಿರೂಪಾಕ್ಷ ಕೂಡ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗುತ್ತದೆ. ಅದೇ ಆಘಾತದಿಂದ ಆತ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ಕೊನೆಗೆ ಸಿನಿಮಾಗಳಿಂದ ನಷ್ಟ ಅನುಭವಿಸಿ ತಮ್ಮ ಮನೆಯನ್ನು ಮಾರಿಕೊಳ್ಳುವಂತಾಯಿತು.
ಪುತ್ರಶೋಕ ನಿರಂತರ ಎನ್ನುವಂತೆ ಮಗ ವಿರೂಪಾಕ್ಷನ ಅಗಲಿಕೆಯ ನೋವು ಎಂ. ಪಿ ಶಂಕರ್ ಅವರನ್ನು ಬಹಳವಾಗಿ ಕಾಡಿತು. ಆ ಬಳಿಕ ಕೂಡ ಅವರ ಮಡದಿಯನ್ನು ಆ ನೋವು ಭಾದಿಸಿತ್ತು. ಇನ್ನು ಅನಾರೋಗ್ಯಕ್ಕೆ ತುತ್ತಾದಾಗ ಹಣಕ್ಕಾಗಿ ತಮ್ಮ ಒಂದಷ್ಟು ಸಿನಿಮಾಗಳ ರೈಟ್ಸ್ ಅನ್ನು ಕಮ್ಮಿ ಬೆಲೆಗೆ ಮಾಡಿಬಿಟ್ಟರು. ಸಿನಿಮಾ ಚಿತ್ರೀಕರಣದ ಸಾಮಗ್ರಿಗಳನ್ನು ಮಾರುವಂತಾಯಿತು. ಕೊನೆಗೆ ಸಾಲ ತೀರಿಸಿ ಉಳಿದ ಹಣದಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡಿದ್ದರು.


Click it and Unblock the Notifications











