ಸೋನಲ್ಗೆ ತರುಣ್ ಇಷ್ಟವಾಗಿದ್ಯಾಕೆ? ಮುದ್ದಾಗಿ ಹೇಗೆ ಕರೆಯುತ್ತಾರೆ?
ಕನ್ನಡ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೊ ಮದುವೆಗೆ ದಿನಗಣನೆ ಶುರುವಾಗಿದೆ. ಇದೇ ಆಗಸ್ಟ್ 10 ಹಾಗೂ 11ರಂದು ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಪ್ಯಾಲೇಸ್ನಲ್ಲಿ ಅದ್ಧೂರಿಯಾಗಿ ಮದುವೆ ನೆರವೇರಲಿದೆ. ಎರಡು ಕುಟುಂಬ ಸದಸ್ಯರ ಜೊತೆಗೆ ಸ್ನೇಹಿತರು, ಚಿತ್ರರಂಗದ ಆಪ್ತರು ಈ ಸಮಾರಂಭಕ್ಕೆ ಸಾಕ್ಷಿ ಆಗಲಿದ್ದಾರೆ.
ಕೆಲ ದಿನಗಳ ಹಿಂದೆಯೇ ತರುಣ್- ಸೋನಲ್ ಮದುವೆ ವದಂತಿ ಶುರುವಾಗಿತ್ತು. ಬಳಿಕ ಇಬ್ಬರು ಅದನ್ನು ಒಪ್ಪಿಕೊಂಡಿದ್ದರು. ಇತ್ತೀಚೆಗೆ ಖಾಸಗಿ ಹೋಟೆಲ್ನಲ್ಲಿ ಜೋಡಿ ಸುದ್ದಿಗೋಷ್ಠಿ ನಡೆಸಿ ತಮ್ಮ ಲವ್, ಮದುವೆ ವಿಚಾರಗಳನ್ನು ಹಂಚಿಕೊಂಡಿದ್ದರು. ತರುನ್ ಸುಧೀರ್ ನಿರ್ದೇಶನದ 'ರಾಬರ್ಟ್' ಚಿತ್ರದ ಸಣ್ಣ ಪಾತ್ರದಲ್ಲಿ ಸೋನಲ್ ನಟಿಸಿದ್ದರು. ಆ ಸಮಯದಲ್ಲಿ ನಟ ದರ್ಶನ್ ರೇಗಿಸುತ್ತಿದ್ದರಂತೆ.

'ರಾಬರ್ಟ್' ಸಿನಿಮಾ ಸಮಯದಲ್ಲಿ ನಮ್ಮಿಬ್ಬರ ನಡುವೆ ಯಾವುದೇ ಲವ್ ಇರಲಿಲ್ಲ. ಅವರಿವರು ಮಾತಾಡಿಕೊಳ್ಳುತ್ತಿದ್ದರು ಅಷ್ಟೆ. ಇದೇ ವಿಚಾರ ಇಂಡಸ್ಟ್ರಿಯಲ್ಲಿ ವೈರಲ್ ಆ ಬಗ್ಗೆ ಸ್ವತಃ ಸೋನಲ್ ನನ್ನ ಬಳಿ ಫೋನ್ ಮಾಡಿ ಮಾತನಾಡಿದ್ದರು. ಆಗ ನಾನು 'ಕಾಟೇರ' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದೆ. ಅಲ್ಲಿಂದ ಮುಂದೆ ಸ್ನೇಹ ಶುರುವಾಯಿತು. ಪದೇ ಪದೆ ಮಾತಾಡಿ ಒಬ್ಬರನ್ನೊಬ್ಬರು ಹೆಚ್ಚು ಅರ್ಥ ಮಾಡಿಕೊಂಡೆವು. ಬಳಿಕ ಅದು ಮದುವೆವರೆಗೂ ಬಂತು ಎಂದು ತರುಣ್ ವಿವರಿಸಿದ್ದರು.
ಇಬ್ಬರ ನಡುವೆ ವಯಸ್ಸಿನ ಅಂತರ ಜಾಸ್ತಿ ಇದೆ, ಇಬ್ಬರ ಧರ್ಮಗಳು ಬೇರೆ ಬೇರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಆದರೆ ಅದರ ಬಗ್ಗೆ ತರುಣ್-ಸೋನಲ್ ತಲೆ ಕೆಡಿಸಿಕೊಂಡಿಲ್ಲ. ನಾವು ಎರಡೂ ಧರ್ಮಗಳನ್ನು ಗೌರವಿಸುತ್ತೇವೆ ಎಂದು ಇಬ್ಬರೂ ಹೇಳಿದ್ದಾರೆ. ಇನ್ನು ತರುಣ್ ಅವರನ್ನು ಇಷ್ಟಪಟ್ಟಿದ್ದರು ಯಾಕೆ ಎಂದು ಸೋನಲ್ ವಿವರಿಸಿದ್ದರು.
ನಮ್ಮಿಬ್ಬರ ನಡುವೆ ಟಿಪಿಕಲ್ ಸ್ಟೈಲ್ ಪ್ರಪೋಸ್ ಎನ್ನುವುದು ಆಗಲಿಲ್ಲ. ಪ್ರಪೋಸ್ ಎನ್ನುವುದಕ್ಕಿಂತ ಒಬ್ಬರನ್ನು ಒಬ್ಬರು ಹೆಚ್ಚು ಅರ್ಥ ಮಾಡಿಕೊಂಡಿದ್ದೇವೆ ಎಂದು ಇಬ್ಬರು ಹೇಳಿದ್ದಾರೆ. ಸೋನಲ್ ಮಾತನಾಡಿ "ತರುಣ್ ಜಂಟಲ್ಮನ್. ಒಂದು ಹುಡುಗಿಗೆ ತಾನು ಮದುವೆ ಆಗುವ ಹುಡುಗ ಹೇಗೆಲ್ಲಾ ಇರಬೇಕು ಎನ್ನುವ ಆಸೆ, ಕಲ್ಪನೆ ಇರುತ್ತದೆ. ತರುಣ್ಗೆ ಆ ಎಲ್ಲಾ ಗುಣಗಳು ಇವೆ" ಎಂದಿದ್ದಾರೆ.

"ತರುಣ್ಗೆ ಈಗೊ ಇಲ್ಲ. ಬಹಳ ಸಾಧು, ಹಂಬಲ್. ನಾನು ಸ್ವಲ್ಪ ಯೋಚಿಸುವುದು ಕಮ್ಮಿ. ನನಗೆ ಈ ರೀತಿ ಗೈಡ್ ಮಾಡುವವರೇ ಬೇಕು. ನಾನು ಪುರುಷ ಎನ್ನುವ ಅಹಂ ಇರುತ್ತಲ್ಲ. ಅದು ಕೂಡ ಇಲ್ಲ. ಹೀಗೆ ಹೇಳ್ತಾ ಹೋದ್ರೆ ಸಾಕಷ್ಟಿದೆ. ಒಟ್ಟಾರೆ ತರುಣ್ ಒಳ್ಳೆ ಜಂಟಲ್ಮನ್" ಎಂದು ಸೋನಲ್ ಹೇಳಿದ್ದರು.
ತರುಣ್ ಅವರನ್ನು ಮುದ್ದಾಗಿ ಏನಂದು ಕರೆಯುತ್ತೀರಾ? ಎನ್ನುವ ಪ್ರಶ್ನೆ ಕೂಡ ಸೋನಲ್ಗೆ ಎದುರಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ತರುಣ್, ಅದು ನಮ್ಮ ಪರ್ಸನಲ್. ಅದನ್ನೆಲ್ಲಾ ಹೇಳೋಕೆ ಆಗೊಲ್ಲ ಎಂದು ನಕ್ಕಿದ್ದಾರೆ. ಆದರೆ ನನ್ನನ್ನು ಬಹಳ ವಿಭಿನ್ನವಾಗಿ ಹಲೋ, ಹಲೋ ಕರೆಯುತ್ತಾರೆ ಎಂದು ಇಬ್ಬರು ನಕ್ಕಿದ್ದರು.
ತಮ್ಮ ಮದುವೆಗೆ ಪರಿಸರಸ್ನೇಹಿ ಆಮಂತ್ರಣ ಪತ್ರಿಕೆಯನ್ನು ತರುಣ್- ಸೋನಲ್ ಜೋಡಿ ಡಿಸೈನ್ ಮಾಡಿಸಿದೆ. ಅದರಲ್ಲಿ ಒಂದು ಖಾಲಿ ಪುಸ್ತಕ, ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಇದೆ. ಜೊತೆಗೆ ವಿವಿಧ ತರಕಾರಿ, ಹೂ ಗಿಡಗಳ ಬೀಜಗಳು ಇವೆ. ಅದನ್ನು ಮಣ್ಣಿಗೆ ಹಾಕಿದರೆ ಗಿಡಗಳು ಬೆಳೆಯುತ್ತವೆ. ಇದೇ ಆಮಂತ್ರಣ ಪತ್ರಿಕೆಯನ್ನು ಆಪ್ತರಿಗೆ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.


Click it and Unblock the Notifications











