"ಅದು ಹ್ಯಾಕರ್ ಮಾಡಿದ್ದು, ಆತ ಮಾಡಿದ್ದಲ್ಲ, ನನ್ನ ಡಿವೋರ್ಸ್ಗೆ ಕಾರಣ ಏನಂದ್ರೆ?"; ಸೋನು ಗೌಡ
'ಇಂತಿ ನಿನ್ನ ಪ್ರೀತಿಯ' ಖ್ಯಾತಿಯ ನಟಿ ಸೋನು ಗೌಡ ಮತ್ತೆ ತಮ್ಮ ಡಿವೋರ್ಸ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮೇಕಪ್ ಆರ್ಟಿಸ್ಟ್ ರಾಮಕೃಷ್ಣ ಪುತ್ರಿ ಸೋನು ಗೌಡ ಚಿತ್ರರಂಗಕ್ಕೆ ಬರೋದು ಕಷ್ಟವಾಗಲಿಲ್ಲ. ಆದರೆ ಬಣ್ಣದ ಲೋಕಕ್ಕೆ ಬಂದ ಎರಡು ವರ್ಷಕ್ಕೆ ಮದುವೆ ಆಗಿದ್ದರು.
2010ರಲ್ಲಿ ಮನೋಜ್ ಕುಮಾರ್ ಎಂಬುವವರ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದರು. ಸೋನು ಗೌಡ ಖಾಸಗಿ ಫೋಟೊಗಳು ಲೀಕ್ ಆಗಿ ಭಾರೀ ಸುದ್ದಿಯಾಗಿತ್ತು. ಹ್ಯಾಕರ್ಗಳು ಮಾಡಿದ ಎಡವಟ್ಟಿನಿಂದ ರಾದ್ಧಾಂತವಾಗಿತ್ತು. ಇದರ ಬೆನ್ನಲ್ಲೇ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಆ ಬಳಿಕ ಕೂಡ ಸೋನು ಚಿತ್ರರಂಗದಲ್ಲಿ ಮುಂದುವರೆದರು.

'ಪೊಲೀಸ್ ಕ್ವಾಟ್ರಸ್', 'ದ್ಯಾವ್ರೇ', 'ಹಾಫ್ ಮೆಂಟ್ಲು', 'ಗುಲ್ಟು', 'ಐ ಲವ್ ಯು' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಸದ್ಯ ಆಕೆಯ ಕೈಯಲ್ಲಿ ದೊಡ್ಡ ಅವಕಾಶಗಳು ಇಲ್ಲ. 'ಮರೀಚಿ' ಚಿತ್ರದಲ್ಲಿ ಇತ್ತೀಚೆಗೆ ನಟಿಸಿದ್ದರು. ಇನ್ನು ಸೋನು ಸಹೋದರಿ ನೇಹಾ ಕೂಡ ಬಣ್ಣದ ಲೋಕದಲ್ಲಿ ಗುರ್ತಿಸಿಕೊಂಡಿದ್ದಾರೆ. ಚಿತ್ತಾರ ಯೂಟ್ಯೂಬ್ ಚಾನಲ್ನಲ್ಲಿ ಸೋನು ಗೌಡ ತಮ್ಮ ಮದುವೆ ಹಾಗೂ ಡಿವೋರ್ಸ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಮದುವೆ ಜೀವನದಲ್ಲಿ ಎಡವಿದ್ರಾ? ಎನ್ನುವ ಪ್ರಶ್ನೆಗೆ ನಟಿ ಸೋನು ಗೌಡ ಉತ್ತರಿಸಿದ್ದಾರೆ. "ನನಗೆ ಆಗ ಬಹಳ ಚಿಕ್ಕ ವಯಸ್ಸು. ನನಗೆ ಮೆಚ್ಯುರಿಟಿ ಇರಲಿಲ್ಲ. ಒಬ್ಬರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಎಡವಿದ್ದು ನಿಜ. ಜೀವನದಲ್ಲಿ ಅಂತಹ ಪೆಟ್ಟು ಬೀಳದಿದ್ದರೆ ಇವತ್ತಿನ ಈ ಸೋನುನ ನೋಡೋಕೆ ಆಗುತ್ತಿರಲಿಲ್ಲ ಎನಿಸುತ್ತದೆ. ಆಗಿದ್ದೆಲ್ಲಾ ಒಳ್ಳೆದ್ದಕ್ಕೆ ಅಂತಹ ಕೆಲವೊಮ್ಮೆ ಅನಿಸುತ್ತದೆ" ಎಂದು 'ಇಂತಿ ನಿನ್ನ ಪ್ರೀತಿಯ' ಚೆಲುವೆ ವಿವರಿಸಿದ್ದಾರೆ.
"ಕೆಲವೊಮ್ಮೆ ಯಾಕೆ ಇಷ್ಟೆಲ್ಲಾ ಆಯ್ತು ಅನ್ನಿಸುತ್ತದೆ. ನನಗೆ ಯಾಕೆ ಅಂತಲೂ ಅಂದುಕೊಳ್ಳುತ್ತೇನೆ. ಆದರೂ ಎಲ್ಲವನ್ನು ಮರೆತು ಮುಂದೆ ಸಾಗಬೇಕು. ನನ್ನ ಪಾಸ್ಟ್ ಬದಲಿಸಲು ಸಾಧ್ಯವಿಲ್ಲ. ಅದರ ಬಗ್ಗೆ ಕೊರಗುತ್ತಾ ಕೂರಲು ಆಗಲ್ಲ. ಇವತ್ತಿಗೂ ಅದರ ಬಗ್ಗೆ ಕೆಲವರು ಪ್ರಶ್ನೆ ಕೇಳುತ್ತಿರುತ್ತಾರೆ. ಆದರೆ ಆ ಸಮಯದಲ್ಲಿ ನಾನು ಒಬ್ಬೊಂಟಿ ಎನಿಸಿತ್ತು. ಪೋಷಕರು ಬೆಂಬಲಕ್ಕೆ ನಿಂತರೂ ಅದರಿಂದ ಹೊರ ಬರಲು ಸಾಧ್ಯವಾಗಲಿಲ್ಲ. ನನಗೆ ಮಾತ್ರವಲ್ಲ, ನಾನು ಮದುವೆ ಆಗಿದ್ದ ವ್ಯಕ್ತಿ ಕೂಡ ಖಿನ್ನತೆಗೆ ಒಳಗಾಗಿದ್ದರು. ಇಬ್ಬರಿಗೂ ಅದನ್ನು ಹೇಗೆ ಬ್ಯಾಲೆನ್ಸ್ ಮಾಡಬೇಕು ಎಂದು ಗೊತ್ತಾಗಲಿಲ್ಲ"

"ಇವತ್ತಿಗೂ ನಾವಿಬ್ಬರು ಸ್ನೇಹಿತರ ರೀತಿ ಇದ್ದೀವಿ. ಆಗಾಗ್ಗೆ ಮಾತನಾಡುತ್ತಿರುತ್ತೀವಿ. ಜಗಳ ನಮ್ಮ ನಡುವೆ ನಡೆಯಲಿಲ್ಲ. ಅದು ನನಗೆ ಇಷ್ಟವೂ ಇಲ್ಲ. ಅವರಿಗೂ ಅದನ್ನೇ ಹೇಳಿದ್ದೆ. ತಮ್ಮ ಬಗ್ಗೆ ಅವ್ರು ಹೇಳಿದ್ರು. ಆ ವಯಸ್ಸಲ್ಲಿ ಏನು ತಪ್ಪು ಆಯ್ತೋ ಅದು ಆಯ್ತು. ನಾನು ಪ್ರೀತಿಸಿದ ವ್ಯಕ್ತಿ ಕೂಡ ಒಳ್ಳೆಯವರು. ಮಾಧ್ಯಮದಲ್ಲಿ ಏನೇನೋ ಬಂತು. ನಿಜ ಹೇಳಬೇಕು ಅಂದ್ರೆ, ಯಾರೋ ಹ್ಯಾಕರ್ ಅದನ್ನು ಮಾಡಿದ್ದು. ಆತ ಮಾಡಿದ್ದಲ್ಲ. ಅಂತಹ ಸಮಯದಲ್ಲಿ ಅವ್ರು ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ನಾನು ಕುಗ್ಗಿ ಹೋಗಿದ್ದೆ"
"ಎಲ್ಲರೂ ನನ್ನನ್ನು ದೂಷಿಸಲು ಆರಂಭಿಸಿದರು. ನಾನು ಹೊರಗಡೆ ಹೋದರೆ ಹುಡುಗರು ಬಗ್ಗೆಯೇ ಮಾತನಾಡುತ್ತಿದ್ದರು. ಆ ಸಮಯಲ್ಲಿ ನಾನು ಸತ್ತು ಹೋಗಬೇಕು ಎನ್ನುವಷ್ಟು ಹಿಂಸೆ ಆಗುತ್ತಿತ್ತು. ಅಷ್ಟು ಹೀನಾಯವಾಗಿ ಮಾತನಾಡುತ್ತಿದ್ದರು. ಅದು ನನ್ನ ಪತಿಗೆ ಅರ್ಥವಾಗುತ್ತಿಲ್ಲವಲ್ಲ ಎಂದು ನಾನು ತಪ್ಪು ತಿಳಿದುಕೊಳ್ಳುತ್ತಿದ್ದೆ. ಆದರೆ ಅವರು ಬೇರೆ ಸಮಸ್ಯೆಗಳಿಂದ ಬಳಲುತ್ತಿದ್ದರು. ಆದರೆ ಡಿವೋರ್ಸ್ ಬಳಿಕ ಅವರ ಜೊತೆ ಮಾತನಾಡಿದೆ. ಅವ್ರು ತಮ್ಮ ವರ್ಷನ್ ಹೇಳಿದರು. ಆಗ ನಾವಿಬ್ಬರು ತಪ್ಪು ಮಾಡಿದ್ದೀವಿ ಅನಿಸಿತು. ಇವತ್ತೂ ಇಬ್ಬರೂ ಆರಾಮಾಗಿ ಖುಷಿ ಖುಷಿಯಾಗಿ ಇದ್ದೀವಿ"
ಏನು ಮಾಡೋಕೆ ಆಗೊಲ್ಲ. ಜೀವನದಲ್ಲಿ ಆ ರೀತಿ ನಡೀತು. ಆದರೆ ನಾವಿಬ್ಬರು ಒಟ್ಟಿಗೆ ಇರಬೇಕಿತ್ತು. ಇಬ್ಬರಿಗೂ ಈ ಅನಿಸುತ್ತದೆ. ಸುಮ್ಮನೆ ಎಲ್ಲವನ್ನೂ ಕಾಂಪ್ಲಿಕೇಟ್ ಮಾಡಿಕೊಂಡ್ವಿ ಎಂದು. ವಿಧಿ ಏನು ಮಾಡೋಕೆ ಸಾಧ್ಯವಿಲ್ಲ. 2010ರಲ್ಲಿ ನಾನು ಮದುವೆ ಆಗಿದ್ದೆ. 2018ರಲ್ಲಿ ಡಿವೋರ್ಸ್ ಪಡೆದೆ"
"ದೂರಾಗುವುದಕ್ಕೆ ದೊಡ್ಡ ಕಾರಣ ಇರಲಿಲ್ಲ. ಆದರೆ ಪ್ರಬುದ್ಧತೆ ಇರಲಿಲ್ಲ. ಹೇಗೆ ನಿಭಾಯಿಸಬೇಕು ಎನ್ನುವುದು ಗೊತ್ತಾಗಲಿಲ್ಲ. ಅಂತಹ ಸನ್ನಿವೇಶ ಈಗ ಎದುರಾಗಿದ್ದರೆ ನಿಭಾಯಿಸುತ್ತದ್ದೆ. ಆಗ ಗೊತ್ತಗಲಿಲ್ಲ. ನನ್ನ ಮಾಜಿ ಪತಿಗೆ ನನ್ನ ಮೇಲೆ ಕೋಪ ಇತ್ತು. ನನ್ನ ಬಗ್ಗೆ ಕೆಟ್ಟಗಾಗಿ ಮಾತನಾಡಿದ್ದೀಯಾ ಎನ್ನುವ ಆರೋಪ ಇತ್ತು. ಆದರೆ ನಾನು ಎಂದೂ ಏನೂ ಕೆಟ್ಟದಾಗಿ ಮಾತನಾಡಲಿಲ್ಲ. ಇದರಿಂದ ವೈಮನಸ್ಸು ಬಂತು. ಕೋರ್ಟ್ನಲ್ಲಿ ಡಿವೋರ್ಸ್ ವೇಳೆ ಕೂಡ ಒಬ್ಬರ ಒಬ್ಬರು ಆರೋಪ ಮಾಡಲಿಲ್ಲ. ಹಾಗಿರುವುವಾಗ ಹೊರಗಡೆ ಹೇಗೆ ಮಾತನಾಡಲಿ."
"ನನ್ನ ಮಾಜಿ ಪತಿ ಒಳ್ಳೆಯವರೇ, ಕೆಟ್ಟವರಲ್ಲ. ಬಹಳ ಪ್ರೀತಿಸಿದ್ದೆ. ಅದಕ್ಕೆ ಮದುವೆ ಆಗಿದ್ದು ಕೂಡ. ಮಾಧ್ಯಮದಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೀಯಾ ಎಂದು ಆರೋಪಿದರು. ಆದರೆ ನಾನು ಮಾತನಾಡಿರಲಿಲ್ಲ. ಆ ಸಮಯದಲ್ಲಿ ನಮ್ಮ ವಕೀಲರು ಏನು ಮಾತನಾಡಬಾರದು ಎಂದಿದ್ದರು. ಹಾಗಾಗಿ ಮಾತನಾಡಲಿಲ್ಲ. ನಾನು ಮಾತನಾಡಿದತೆ ಜನಕ್ಕೆ ಏನು ಪ್ರಯೋಜನ. ಸಾಕಷ್ಟು ಮಾತನಾಡಿದ್ದೀನಿ, ಸಾಕಷ್ಟು ಕಷ್ಟ ಎದುಸಿರಿದ್ದೀನಿ. ಎಲ್ಲಾ ಮುಗಿದ ಅಧ್ಯಾಯ. ಇನ್ನಾದರೂ ಮರೆತು ಮುಂದುವರೆಯೋಣ" ಎಂದು ಸೋನು ಗೌಡ ಹೇಳಿದ್ದಾರೆ.


Click it and Unblock the Notifications











