'ಸೂರರೈ ಪೊಟ್ರು' ಸಿನಿಮಾ: ಸತ್ಯವೆಷ್ಟು? ಮುಚ್ಚಿಟ್ಟದ್ದೆಷ್ಟು?
ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿರುವ, ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧಾರಿತ 'ಸೂರರೈ ಪೊಟ್ರು' ತಮಿಳು ಸಿನಿಮಾ ಭಾರಿ ಸದ್ದು ಮಾಡುತ್ತಿದೆ.
ಸುಧಾ ಕೊಂಗರ ನಿರ್ದೇಶಿಸಿ, ಸೂರ್ಯಾ ನಟಿಸಿರುವ 'ಸೂರರೈ ಪೊಟ್ರು' ಸಿನಿಮಾವನ್ನು ಹಲವಾರು ಮಂದಿ ನೋಡಿ ಮೆಚ್ಚಿಕೊಂಡಿದ್ದಾರೆ. ಹಲವಾರು ಸಿನಿಮಾ ನಟರು ಸಹ 'ಸೂರರೈ ಪೊಟ್ರು' ನೋಡಿ ಶಹಭಾಸ್ ಎಂದಿದ್ದಾರೆ. ಹಲವಾರು ಒಳ್ಳೆಯ ವಿಮರ್ಶೆಗಳು ಸಿನಿಮಾಗೆ ಬಂದಿವೆ. ಇದರ ಜೊತೆಗೆ ಕೆಲವು ಟೀಕೆಗಳು ಸಹ ವ್ಯಕ್ತವಾಗಿವೆ.
ಸಾಧಕರೋರ್ವರ ಜೀವನ ಆಧರಿಸಿದ 'ಸೂರರೈ ಪೊಟ್ರು' ಸಿನಿಮಾದಲ್ಲಿ ಹಲವಾರು ವಿಷಯಗಳನ್ನು ಮುಚ್ಚಿಡಲಾಗಿದೆ ಹಾಗೂ ಹಲವಾರು ಸಂಗತಿಗಳನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಅಷ್ಟೇ ಅಲ್ಲದೆ, ಕ್ಯಾಪ್ಟನ್ ಗೋಪಿನಾಥ್ ಅವರ ಜೀವನದ ಒಂದು ಭಾಗವನ್ನಷ್ಟೇ ಸಿನಿಮಾದಲ್ಲಿ ತೋರಿಸಲಾಗಿದೆ, ಇದು ಸತ್ಯಕ್ಕೆ ಮಾಡಿದ ಅಪಚಾರ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ.
ಕ್ಯಾಪ್ಟನ್ ಗೋಪಿನಾಥ್ ಅವರು ಏರ್ ಡೆಕ್ಕನ್ ಸ್ಥಾಪಿಸಿದ ಕಥೆಯನ್ನು ಅತಿಯಾದ 'ಸಿನಿಮೀಯ', 'ನಾಟಕೀಯ' ರೀತಿಯಲ್ಲಿ 'ಸೂರರೈ ಪೊಟ್ರು' ನಲ್ಲಿ ಪ್ರೆಸೆಂಟ್ ಮಾಡಲಾಗಿದೆ. ಆದರೆ ಸಿನಿಮಾದ ಹಲವಾರು ದೃಶ್ಯಗಳಿಗೂ ನಿಜ ಜೀವನದಲ್ಲಿ ನಡೆದಿದ್ದ ಘಟನೆಗಳಿಗೂ ಮಂಗಳ-ಭೂಮಿಯಷ್ಟು ಅಂತರ ಇವೆ.

ಹೆಲಿಕಾಪ್ಟರ್ ಸೇವೆ ಪ್ರಾರಂಭಿಸಿದ್ದ ಗೋಪಿನಾಥ್ ಮತ್ತು ಗೆಳೆಯರು
ಕ್ಯಾಫ್ಟನ್ ಗೋಪಿನಾಥ್ ಏರ್ ಡೆಕ್ಕನ್ ಪ್ರಯಾಣಿಕರ ವಿಮಾನ ಸಂಸ್ಥೆ ಆರಂಭಿಸುವ ಮುನ್ನಾ ಹೆಲಿಕಾಪ್ಟರ್ ಸೇವೆ ಆರಂಭಿಸಿದ್ದರು. ಹಲವಾರು ರಾಜಕಾರಣಿಗಳು ಇವರ ಸೇವೆ ಬಳಸಿಕೊಳ್ಳುತ್ತಿದ್ದರು. ಶ್ರೀಲಂಕಾ, ನೇಪಾಳ, ಕಾಬುಲ್ ಹಾಗೂ ಇನ್ನಿತರ ಕಡೆ ಸುರಕ್ಷಣಾ ಕಾರ್ಯಗಳಿಗೂ ಕ್ಯಾಪ್ಟನ್ ಗೋಪಿನಾಥ್ ಅವರ ಹೆಲಿಕಾಪ್ಟರ್ಗಳನ್ನು ಹಣ ಪಾವತಿಸಿ ಬಳಸಲಾಗಿತ್ತು. ಇದರಿಂದ ಸಾಕಷ್ಟು ಹಣ ಸಂಪಾದಿಸಿದ್ದರು ಗೋಪಿನಾಥ್ ಹಾಗೂ ಗೆಳೆಯರು.

ಗೋಪಿನಾಥ್ ಅವರಿಗೆ ರಾಜಕಾರಣಿಗಳ ಸಹಾಯ ದೊರೆತಿತ್ತು
ಏರ್ ಡೆಕ್ಕನ್ ಪ್ರಯಾಣಿಕರ ವಿಮಾನ ಸೇವಾ ಸಂಸ್ಥೆ ಸ್ಥಾಪಿಸಲು ಗೋಪಿನಾಥ್ ಅವರು ಪ್ರಯತ್ನಿಸಿದಾಗ ರಾಜಕಾರಣಿಗಳು ಅವರಿಗೆ ಸಹಾಯ ಮಾಡಿದ್ದರು ಎನ್ನಲಾಗುತ್ತದೆ. ಎಸ್.ಎಂ.ಕೃಷ್ಣ, ಚಂದ್ರಬಾಬು ನಾಯ್ಡು, ವೆಂಕಯ್ಯ ನಾಯ್ಡು ಅವರುಗಳು ಗೋಪಿನಾಥ್ ಅವರಿಗೆ ಸಹಾಯ ಮಾಡಿದ್ದರು. ಆಗಿದ್ದ ವಾಜಪೇಯಿಯವರ ಕೇಂದ್ರ ಸರ್ಕಾರವೂ ಗೋಪಿನಾಥ್ ಗೆ ಬೆಂಬಲ ನೀಡಿತ್ತು ಎನ್ನಲಾಗುತ್ತದೆ.

ವಿಜಯ್ ಮಲ್ಯಗೆ ಪಾಲುದಾರಿಕೆ ಮಾರಲಾಯಿತು
ಸಿನಿಮಾದ ದೃಶ್ಯವೊಂದರಲ್ಲಿ ವಿಜಯ್ ಮಲ್ಯರನ್ನು ಹೋಲುವ ವ್ಯಕ್ತಿಯೊಬ್ಬ, ನಾಯಕನಿಗೆ ಏರ್ ಡೆಕ್ಕನ್ ಮಾರಲು ಕೇಳಿದಾಗ 'ನೀನು ಸೋಷಿಯಲೈಟ್, ನಾನು ಸೋಷಿಯಲಿಸ್ಟ್' ಎಂದು ಹೇಳಿ ಮಾರಲು ನಿರಕಾರಿಸುತ್ತಾನೆ. ಆದರೆ ನಿಜ ಜೀವನದಲ್ಲಿ ಏರ್ ಡೆಕ್ಕನ್ ನ ಪಾಲನ್ನು ವಿಜಯ್ ಮಲ್ಯಗೆ ಮಾರಲಾಗಿ ಅದರ ಹೆಸರನ್ನು ಡೆಕ್ಕನ್ ಚಾರ್ಟರ್ಸ್ ಎಂದು ಬದಲಾಯಿಸಲಾಯಿತು. ಅಷ್ಟೆ ಅಲ್ಲ, ಕ್ಯಾಪ್ಟನ್ ಗೋಪಿನಾಥ್ ಅವರು ಮಲ್ಯಗೆ ಒಳ್ಳೆಯ ಸ್ನೇಹಿತರಾಗಿದ್ದರು ಮತ್ತು ಕಿಂಗ್ಫಿಶರ್ ಏರ್ಲೈನ್ಸ್ನ ವೈಸ್ ಪ್ರೆಸಿಡೆಂಟ್ ಸಹ ಆಗಿದ್ದರು. ಕಿಂಗ್ ಫೀಶರ್ಸ್ ಬೀಳುವ ವೇಳೆಗೆ ಡೆಕ್ಕನ್ ಚಾರ್ಟರ್ಸ್ನ ಪಾಲನ್ನು ಖರೀದಿಸಿ ಮತ್ತೆ ಅದರ 100% ಮಾಲೀಕರಾದರು ಗೋಪಿನಾಥ್.

2003ರ ವರೆಗಿನ ಕಥೆ ಮಾತ್ರವೇ ತೋರಿಸಲಾಗಿದೆ
ಸಿನಿಮಾದಲ್ಲಿ 2003ರ ವರೆಗಿನ ಕಥೆಯನ್ನು ಮಾತ್ರವೇ ತೋರಿಸಲಾಗಿದೆ. 2003ರ ನಂತರ ಹೆಚ್ಚು ಕಾಲ ಲಾಭದಲ್ಲಿರಲಿಲ್ಲ ಏರ್ ಡೆಕ್ಕನ್. ಸತತ ನಷ್ಟದಲ್ಲಿದ್ದ ಸಂಸ್ಥೆಯನ್ನು ವಿಜಯ್ ಮಲ್ಯಗೆ ಮಾರಲಾಯಿತು. 2009 ರ ವೇಳೆಗೆ ಯುಬಿ ಗ್ರೂಫ್ಸ್ ಸಹಾಯದಿಂದ ಡೆಕ್ಕನ್ 360 ಹೆಸರಿನ ಕಾರ್ಗೊ ವಿಮಾನ ಯಾನ ಪ್ರಾರಂಭಿಸಿದರು ಗೋಪಿನಾಥ್. ಆದರೆ ಹಣಕಾಸು ಮುಗ್ಗಟ್ಟು ಹಾಗೂ ದುಬೈ ಸಂಸ್ಥೆಯೊಂದರ ತಕರಾರಿನಿಂದಾಗಿ ಅದರ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿತು.

ಪ್ರಸ್ತುತ ನಾಲ್ಕು ನಗರಗಳಲ್ಲಿ ಮಾತ್ರವೇ ಹಾರಾಟ
ಡೆಕ್ಕನ್ ಚಾರ್ಟರ್ಸ್ನ ಮಾಲೀಕರಾಗಿದ್ದ ಗೋಪಿನಾಥ್ ನಂತರ 2008 ರಲ್ಲಿ ಗುಜರಾತ್ನಲ್ಲಿ ಏರ್ ಡೆಕ್ಕನ್ ವಿಮಾನ ಯಾನ ಪ್ರಾರಂಭಿಸಿದರು. ಅವರ ವಿಮಾನಯಾನವು ಅಹ್ಮದಾಬಾದ್, ಜಾಮ್ನಗರ್, ಸೂರತ್, ಭಾವನಗರ್ ಮತ್ತು ಕಾಂಡ್ಲಾಗೆ ಮಾತ್ರ ಸೀಮಿತವಾಗಿತ್ತು. 2013 ರಲ್ಲಿ ಆ ಸೇವೆಯೂ ಸ್ಥಗಿತಗೊಂಡಿತು. ಮತ್ತೆ 2017 ರಲ್ಲಿ ಸರ್ಕಾರದ ಉಡಾನ್ ಯೋಜನೆಯಡಿ ಕೆಲವು ರೂಟ್ಗಳನ್ನು ಹರಾಜಿನಲ್ಲಿ ಖರೀದಿಸಿ ಪ್ರಸ್ತುತ ಗುಜರಾತ್ ನ ನಾಲ್ಕು ನಗರಗಳಲ್ಲಿ ಮಾತ್ರವೇ ಏರ್ ಡೆಕ್ಕನ್ ಹಾರಾಟ ನಡೆಸುತ್ತಿದೆ.

ನಾಯಕನ ಜಾತಿ ಬದಲು ಮಾಡಲಾಗಿದೆ?
ಸಿನಿಮಾದಲ್ಲಿನ ಇನ್ನು ಕೆಲವು ಸಣ್ಣ-ಪುಟ್ಟ ತಿರುಚುವಿಕೆಗಳೆಂದರೆ, ಗೋಪಿನಾಥ್ ಅವರಿಗೆ ತಂದೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ (ಖ್ಯಾತ ಸಾಹಿತಿ) ಅಪಾರ ಗೌರವ, ಆದರೆ ಸಿನಿಮಾದಲ್ಲಿ ಗೋಪಿನಾಥ್ಗೆ ತಂದೆಯೆಂದರೆ ಆಗದು ಎಂಬಂತೆ ಚಿತ್ರಿಸಲಾಗಿದೆ. ಗೋಪಿನಾಥ್ ಅವರ ಜಾತಿಯನ್ನು ಸಿನಿಮಾದಲ್ಲಿ ಬದಲು ಮಾಡಲಾಗಿದೆ. ಸಿನಿಮಾದಲ್ಲಿ ಊರಿನ ಜನ ನಾಯಕನಿಗೆ ಹಣ ನೀಡಿ ಸಹಾಯ ಮಾಡುವ ದೃಶ್ಯವಿದೆ, ಇದು ಕಥೆಗೆ ಸೆಂಟಿಮೆಂಟ್ ತುಂಬಲು ಮಾಡಲಾಗಿದೆ ಎನ್ನಲಾಗುತ್ತಿದೆ. ಏರ್ಫೋರ್ಸ್ ಸಿಬ್ಬಂದಿ ಕಾವಲಿಗೆ ನಿಲ್ಲುವುದು, ಜೆನ್ ಏರ್ವೇಸ್ ಮಾಲೀಕನ ಜೊತೆ ವಿಮಾನದಲ್ಲಿ ಮಾತನಾಡುವುದು ಇನ್ನೂ ಹಲವು ದೃಶ್ಯಗಳು ಸತ್ಯಕ್ಕೆ ಬಹಳ ದೂರವಾಗಿವೆ.


Click it and Unblock the Notifications











