'ಉಗ್ರಂ' ಮುನ್ನ 14 ಫ್ಲಾಪ್ಸ್, ನನ್ನನ್ನು ತೆಗೆದು ಬಿಸಾಕಿದ್ರು; ಶ್ರೀಮುರಳಿ ಮಾತಿಗೆ ನೀಲ್ ಭಾವುಕ
ಸತತ ಸೋಲುಗಳಿಂದ ಕಂಗೆಟ್ಟಿದ್ದ ಶ್ರೀಮುರಳಿ 'ಉಗ್ರಂ' ಸಿನಿಮಾ ಮಾಡಿ ಭರ್ಜರಿ ಕಂಬ್ಯಾಕ್ ಮಾಡಿದ್ದರು. ಆ ಸಿನಿಮಾ ನನಗೆ ಮರುಜನ್ಮ ಎಂದು ಸಾಕಷ್ಟು ಸಂದರ್ಭಗಳಲ್ಲಿ ರೋರಿಂಗ್ ಸ್ಟಾರ್ ಹೇಳಿದ್ದುಂಟು. ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಸಿನಿಮಾ ದಶಕದ ಹಿಂದೆ ದಾಖಲೆ ಬರೆದಿತ್ತು. ಹೊಸ ಸಂಚಲನ ಸೃಷ್ಟಿಸಿತ್ತು.
'ಉಗ್ರಂ' ಸಿನಿಮಾ ಸಕ್ಸಸ್ ಹಲವು ಪ್ರತಿಭೆಗಳ ಸಿನಿಬದುಕಿಗೆ ಭದ್ರ ಬುನಾದಿ ಆಯಿತು. ಸಿನಿಮಾ ತೆರೆಕಂಡ 20 ದಿನಗಳಲ್ಲಿ ಪೈರಸಿ ಆಗಿ ಪ್ರಶಾಂತ್ ನೀಲ್ಗೆ ಭಾರೀ ಪೆಟ್ಟು ಕೊಟ್ಟಿತ್ತು. ನಿರ್ದೇಶಕರಾಗಿ ಮಾತ್ರವಲ್ಲದೇ 'ಉಗ್ರಂ' ಚಿತ್ರಕ್ಕೆ ನಿರ್ಮಾಪಕರಾಗಿಯೂ ನೀಲ್ ಹಣ ಹೂಡಿದ್ದರು. ಮೊದಲ ಸಿನಿಮಾ ಸಕ್ಸಸ್ ಬಳಿಕ 'KGF' ಸರಣಿ ಕಟ್ಟಿಕೊಟ್ಟು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದರು.

ಮತ್ತೊಂದು ಕಡೆ ಶ್ರೀಮುರಳಿ ಕೂಡ ದೊಡ್ಡ ದೊಡ್ಡ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದ್ದಾರೆ. ಕತೆಗಳ ಆಯ್ಕೆ ವಿಚಾರದಲ್ಲಿ ಬಹಳ ಚೂಸಿಯಾಗಿದ್ದಾರೆ. 'ಉಗ್ರಂ' ಬಳಿಕ 'ರಥಾವರ' ಹಾಗೂ 'ಮಫ್ತಿ' ಸಿನಿಮಾಗಳಲ್ಲಿ ನಟಿಸಿ ಗೆಲುವಿನ ನಗೆ ಬೀರಿದರು. ಎರಡು ವರ್ಷಕ್ಕೆ ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದಾರೆ. 'ಮದಗಜ' ಬಳಿಕ ಪ್ರಶಾಂತ್ ನೀಲ್ ಕಥೆ ಬರೆದಿರುವ 'ಬಘೀರ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
'ಉಗ್ರಂ' ದಶಕದ ಸಂಭ್ರಮದಲ್ಲಿ ಅನುಶ್ರೀ ಯುಟ್ಯೂಬ್ ಚಾನಲ್ ಸಂದರ್ಶನದಲ್ಲಿ ಚಿತ್ರತಂಡ ಮಾತನಾಡಿದೆ. ನಟ ಶ್ರೀಮುರಳಿ ಪ್ರಶಾಂತ್ ನೀಲ್ ಬಗ್ಗೆ 'ಉಗ್ರಂ' ಸಿನಿಮಾ ಬಗ್ಗೆ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ. ಅಂದು ಆ ಸಿನಿಮಾ ಒಪ್ಪಿಕೊಳ್ಳುವ ಸಮಯದಲ್ಲಿ ತಮ್ಮ ಸ್ಥಿತಿ ಹೇಗಿತ್ತು ಎಂದು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಇದನ್ನು ನೋಡಿ ಪ್ರಶಾಂತ್ ನೀಲ್ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದಾರೆ.
ಸಂದರ್ಶನದ ವೇಳೆ 'ಉಗ್ರಂ' ಟ್ರೈಲರ್ ಪ್ರದರ್ಶನ ಮಾಡಲಾಯಿತು. ಟ್ರೈಲರ್ ನೋಡಿ ನಟ ಶ್ರೀಮುರಳಿ ಭಾವುಕರಾದರು. ಬಳಿದ ಸುಧಾರಿಸಿಕೊಂಡು ಮಾತನಾಡಿ "ಕೆಲ ಕಲ್ಲುಗಳು ಎಷ್ಟೇ ಕೆತ್ತನೆ ಆದರೂ ಬೆಲೆ ಕಳೆದುಕೊಂಡುಬಿಟ್ಟಿರುತ್ತವೆ. ಮತ್ತೆ ಅದೇ ಕಲ್ಲನ್ನು ಕೆತ್ತನೆ ಮಾಡಿ ಒಂದು ರೂಪ ಕೊಟ್ಟು ಅದಕ್ಕೆ ಭಕ್ತಿ, ರೂಪ ಸಿಕ್ಕಿ ಬದಲಾಗುತ್ತದೆ ಗೊತ್ತಾ? ಅದಕ್ಕೆ ಎಷ್ಟೆಲ್ಲಾ ಕೆಲಸ ಮಾಡಿರುತ್ತಾರೆ. ಇವರೆಲ್ಲರ ಆ ಶ್ರಮದಿಂದ ನಾನು ಉಗ್ರಂ ಮೂಲಕ ಮತ್ತೆ ಬಂದೆ" ಎಂದಿದ್ದಾರೆ.
"ಅಷ್ಟು ಸುಲಭ ಅಲ್ಲ. ಕಲಾವಿದರಿಗೆ ಮತ್ತೆ ಪುನರ್ಜನ್ಮ ಸಿಗುವುದು. 14 ಸಿನಿಮಾಗಳು ಫ್ಲಾಪ್ ಆಗಿತ್ತು. ಉಗ್ರಂಗೂ ಮುನ್ನ. ಚಂದ್ರ ಚಕೋರಿ ರೀತಿಯ 2 ವರ್ಷಗಳ ಹಿಟ್ ಕೊಟ್ಟಿದ್ದೆ. 'ಕಂಠಿ'ಗೆ ಪ್ರಶಸ್ತಿ ಬಂದಿತ್ತು. ಅಯ್ಯೋ ಯಾಕೆ ಹೀಗಾಯ್ತು ಎಂದುಕೊಂಡೆ. ಎಲ್ಲಾ ಚಿತ್ರಕ್ಕೂ 100 ರಷ್ಟು ಶ್ರಮ ಇರುತ್ತಿತ್ತು. ಆದರೂ ಯಾಕಿಂಗೆ ಆಗುತ್ತಿದೆ ಎನ್ನುವ ಬೇಸರ ಇತ್ತು"

"ಇವರೆಲ್ಲಾ ಸೇರಿ ಉಗ್ರಂ ಸಿನಿಮಾ ಮಾಡಿದ್ರು. ಮುಖ್ಯವಾಗಿ ನನ್ನ ನಿರ್ದೇಶಕರು ಪ್ರಶಾಂತ್ ನೀಲ್ ಉಗ್ರಂ ಎನ್ನುವ ಒಂದು ಅದ್ಭುತ ಸೃಷ್ಟಿಸಿದರು. ಇದು ಇನ್ನೊಂದು ಲೈಫ್ ನನಗೆ. ನಮ್ಮನ್ನ ತೆಗೆದು ಬಿಸಾಕಿದ್ರು. ಯಾವುದಕ್ಕೂ ನಮ್ಮನ್ನ ಸೇರಿಸಿಕೊಳ್ಳುತ್ತಿರಲಿಲ್ಲ" ಎಂದು ಶ್ರೀಮುರಳಿ ಭಾವುಕರಾಗಿದ್ದಾರೆ. ಈ ವೇಳೆ ಎದುರಿಗಿದ್ದ ಪ್ರಶಾಂತ್ ನೀಲ್ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದೆ.
"ಅದು ಹಾಗೆ. ಅದು ಕಾಮನ್. ಅದು ನನಗೆ ಮಾತ್ರ ಅಂತಲ್ಲ. ಎಲ್ಲೋ ಒಂದು ಕಡೆ ಸ್ಥಾನ ಎನ್ನುವುದು ಮಿಸ್ ಆದಾಗ ಮತ್ತೆ ಆ ಸ್ಥಾನ ಸಿಕ್ಕಿದಾಗ ಖುಷಿ ಆಗುತ್ತದೆ. ಅದನ್ನು ಮರಳಿ ವಾಪಸ್ ತಂದು ಕೊಟ್ಟಿದ್ದು 'ಉಗ್ರಂ' ಸಿನಿಮಾ. ಇದನ್ನು ಜೀವನದಲ್ಲಿ ಮರೆಯುವುದಿಲ್ಲ. ಈ ಸಿನಿಮಾ ಕೊಟ್ಟ ಪ್ರಶಾಂತ್ ನೀಲ್ ಅವರನ್ನು ಮರೆಯಲ್ಲ ಎಂದು ವೇದಿಕೆಯಲ್ಲೇ ಇಬ್ಬರೂ ಅಪ್ಪಿಕೊಂಡಿದ್ದಾರೆ.
ಬಳಿಕ ಮಾತನಾಡಿದ ಪ್ರಶಾಂತ್ ನೀಲ್, ವಿದ್ಯಾಳನ್ನು ಮದುವೆ ಮಾಡಿಕೊಟ್ಟಾಗ ವರದಕ್ಷಿಣೆ ಕೊಟ್ಟಿರಲಿಲ್ಲ, ಈ ಮೂಲಕ ಎನ್ನುವಂತೆ ಹೇಳಿದ್ದಾರೆ. ಶ್ರೀಮುರಳಿ ಮಾತನಾಡಿ ಪ್ರಶಾಂತ್ ನೀಲ್ ಕಾರಣದಿಂದ ನನ್ನ ಜೀವನದಲ್ಲಿ ಸಾಕಷ್ಟು ವಿಚಾರಗಳು ಬದಲಾಯಿತು. ಮುಖ್ಯವಾಗಿ ಕಥೆಗಳ ಆಯ್ಕೆ, ನಿರ್ದೇಶಕ, ಪ್ರೊಡಕ್ಷನ್ ಹೌಸ್ ಎಲ್ಲವೂ ಸರಿ ಇರಬೇಕು. ಸುಮ್ಮನೆ ಯಾರ್ಯಾರ ಮಾತು ಕೇಳಿ 14 ಸಿನಿಮಾ ಸೋತಿತ್ತು. ಮಾಡಿದರೆ ಸರಿಯಾಗಿ ಸಿನಿಮಾ ಮಾಡಬೇಕು. ಎಲ್ಲಾ ಹೇಳ್ತಾರೆ ಮೊದಲೆಲ್ಲಾ ವರ್ಷಕ್ಕೆ ಅಷ್ಟು ಸಿನಿಮಾ ಮಾಡ್ತಿದ್ರು, ಇಷ್ಟು ಸಿನಿಮಾ ಮಾಡ್ತಿದ್ರು ಅಂತ. ಈಗ ಆ ರೀತಿ ಇಲ್ಲ. ಮಾಡೋದನ್ನು ಸರಿಯಾಗಿ ಮಾಡಬೇಕು ಆಗ ಮಾತ್ರ ಗೆಲುವು ಎಂದಿದ್ದಾರೆ.


Click it and Unblock the Notifications











