Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾಮಾಜಿಕ ಕ್ರಾಂತಿ ಮಾಡಿದ ರಾಜ್ ಕುಮಾರ್ ಚಿತ್ರದ ಹಿಂದಿನ ಕಥೆ
ಡಾ. ವಿಷ್ಣುವರ್ಧನ್ ಅಭಿನಯದ 'ಸಿಂಹಾದ್ರಿಯ ಸಿಂಹ' ಚಿತ್ರ 2002ರಲ್ಲಿ ತೆರೆ ಕಂಡಿತ್ತು. ಎಸ್. ನಾರಾಯಣ್ ನಿರ್ದೇಶನದ ಈ ಚಿತ್ರ 1994ರಲ್ಲಿ ಬಿಡುಗಡೆಯಾಗಿದ್ದ ತಮಿಳು ಚಿತ್ರ 'ನಟ್ಟಮೈ' ರೀಮೇಕ್. ವಿಷ್ಣುವರ್ಧನ್ ತ್ರಿಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರ ಬಾಕ್ಸಾಫೀಸ್ನಲ್ಲಿ ಭರ್ಜರಿ ಗಳಿಕೆ ಕಂಡಿತ್ತು.
ಇದೇ ಶೀರ್ಷಿಕೆಯ ಹೆಸರನ್ನು ಡಾ. ರಾಜ್ ಕುಮಾರ್ 1992ರಲ್ಲಿಯೇ ಮಾಡಬೇಕಿತ್ತು. ಆದರೆ ಇದು ಅದೇ ಕಥೆಯಲ್ಲ. ರಾಜ್ ಕುಮಾರ್, ಮಾಧವಿ ಮುಂತಾದವರು ನಟಿಸಿದ್ದ, ದೊರೆ-ಭಗವಾನ್ ನಿರ್ದೇಶನದ 'ಜೀವನ ಚೈತ್ರ' ಕನ್ನಡ ಚಿತ್ರರಂಗ ಕಂಡ ಅಪೂರ್ವ ಸಿನಿಮಾಗಳಲ್ಲಿ ಒಂದು. ಈ ಚಿತ್ರಕ್ಕೆ ಮೊದಲು 'ಸಿಂಹಾದ್ರಿಯ ಸಿಂಹ' ಎಂಬ ಹೆಸರು ಇಡಲಾಗಿತ್ತು ಎನ್ನುವುದು ಅನೇಕರಿಗೆ ತಿಳಿದಿಲ್ಲ. ಹಾಗೆಯೇ ಈ ಶೀರ್ಷಿಕೆ ಬದಲಿಸಿ 'ಜೀವನ ಚೈತ್ರ' ಎಂದು ಬದಲಿಸಿದ್ದು ಏಕೆ? ಈ ಹೆಸರು ನೀಡಿದವರು ಯಾರು? ಎಂಬ ಕುತೂಹಲಗಳ ನಡುವೆ ಈ ಸಿನಿಮಾ ಸೃಷ್ಟಿಯ ಹಿಂದೆ ಮತ್ತಷ್ಟು ಕೌತುಕಮಯ ಕಥೆ ಇದೆ. ಅದನ್ನು 'ಫಿಲ್ಮಿ ಬೀಟ್' ನಿಮ್ಮ ಮುಂದೆ ಇರಿಸುತ್ತಿದೆ...
ಸಿಂಹಾದ್ರಿಯ ಸಿಂಹ ಶೀರ್ಷಿಕೆ
ರಾಜ್ ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಜೀವನ ಚೈತ್ರ'ಕ್ಕೆ ಮೊದಲು 'ಸಿಂಹಾದ್ರಿಯ ಸಿಂಹ' ಎಂದು ಹೆಸರು ಇಡಲಾಗಿತ್ತು. ಈ ಶೀರ್ಷಿಕೆಯಲ್ಲಿಯೇ ಮೊದಲು ಪ್ರಚಾರ ಮಾಡಲಾಗಿತ್ತು. ಸಿಂಹಾದ್ರಿಯ ಹಿನ್ನೆಲೆಯಲ್ಲಿ ಕಥೆ ನಡೆಯುವುದರಿಂದ ಅದಕ್ಕೆ ಪೂರಕವಾಗಿರಬೇಕೆಂದು ಈ ಶೀರ್ಷಿಕೆ ಇರಿಸಲಾಗಿತ್ತು.
ಅಣ್ಣಾವ್ರ ಸಿನಿಮಾ ನೋಡೋದೇ ಇಲ್ಲ ಎಂದ ತಮಿಳಿಗ, ಅವರ ಮುಂದಿನ ಸಿನಿಮಾಗೆ ಏನ್ ಮಾಡಿದ ಗೊತ್ತಾ!
ಕೆರಳಿದ ಸಿಂಹದ ಹೋಲಿಕೆ
ಆದರೆ ಸ್ವತಃ ರಾಜ್ ಕುಮಾರ್ ಅವರ ಮನಸಿಗೆ ಈ ಶೀರ್ಷಿಕೆ ಹಿಡಿಸಲಿಲ್ಲ. 1981ರಲ್ಲಿ ಅವರು ನಟಿಸಿದ್ದ 'ಕೆರಳಿದ ಸಿಂಹ' ಚಿತ್ರದಲ್ಲಿ ನಟಿಸಿದ್ದರು. ಈಗಾಗಲೇ ಸಿಂಹ ಶೀರ್ಷಿಕೆಯ ಚಿತ್ರದಲ್ಲಿ ನಟಿಸಿದ್ದಾಗ ಮತ್ತೊಮ್ಮೆ ಪುನರಾವರ್ತನೆ ಬೇಡ ಎಂಬ ಅನಿಸಿಕೆ ವ್ಯಕ್ತವಾಗಿತ್ತು ಎಂದು ನಿರ್ದೇಶಕ ಭಗವಾನ್ 'ಫಿಲ್ಮಿ ಬೀಟ್'ಗೆ ತಿಳಿಸಿದರು.
ಆಕ್ಷನ್ ಚಿತ್ರ ಎಂಬ ಭಾವನೆ ಮೂಡುತ್ತದೆ
ಅಲ್ಲದೆ ಜೀವನ ಚೈತ್ರ ಚಿತ್ರ ಸಾಮಾಜಿಕ ಕಥೆ ಹೊಂದಿತ್ತು. 'ಸಿಂಹಾದ್ರಿಯ ಸಿಂಹ' ಎಂಬ ಹೆಸರು ಕೇಳಿದರೆ ಆಕ್ಷನ್ ಚಿತ್ರ ಎಂದು ರಾಜ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆಕ್ಷನ್ ಚಿತ್ರ ಎಂಬ ಭಾವನೆಯೊಂದಿಗೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ನಿರಾಶೆಯಾಗುತ್ತದೆ. ಶೀರ್ಷಿಕೆಯಲ್ಲಿಯೇ ಇದು ಸಾಮಾಜಿಕ ಕಥಾಹಂದರ ಹೊಂದಿರುವ ಚಿತ್ರ ಎಂಬ ಭಾವನೆ ಮೂಡಬೇಕು ಎಂದು ರಾಜ್ ಕುಮಾರ್ ಹೇಳಿದ್ದರು.
ಸಿನಿಮಾಕ್ಕೆ 'ಓಂ' ಎಂದು ಹೆಸರಿಟ್ಟಿದ್ದರ ಹಿಂದಿದೆ ಸ್ವಾರಸ್ಯಕರ ಕತೆ
ಹೆಸರಿಡುವ ಗೊಂದಲ
'ಜೀವನ ಚೈತ್ರ' ಸಾಹಿತಿ ವಿಶಾಲಾಕ್ಷಿ ದಕ್ಷಿಣಮೂರ್ತಿ ಅವರ 'ವ್ಯಾಪ್ತಿ ಪ್ರಾಪ್ತಿ' ಕಾದಂಬರಿಯನ್ನು ಆಧರಿಸಿದ ಚಿತ್ರ. ಕೊನೆಗೆ ಕಾದಂಬರಿಯ ಶೀರ್ಷಿಕೆಯನ್ನೇ ಇಡುವ ಬಗ್ಗೆ ಚರ್ಚೆ ನಡೆಯಿತು. 'ವ್ಯಾಪ್ತಿ ಪ್ರಾಪ್ತಿ' ಎನ್ನುವುದು ಸಾಹಿತ್ಯಿಕ ಪದ. ಅದನ್ನು ಉಚ್ಚರಿಸುವುದು ಬಹಳ ಕಷ್ಟ. ಹಾಗೆಯೇ ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರಿಗೆ ಅರ್ಥ ಆಗೊಲ್ಲ. ಸಾಹಿತ್ಯದ ಬಗ್ಗೆ ಗೊತ್ತಿರುವವರಿಗೆ ಮಾತ್ರ ಅರ್ಥವಾಗುತ್ತದೆ. ಹೀಗಾಗಿ ಈ ಶೀರ್ಷಿಕೆಯೂ ಬೇಡ ಎಂದು ಪಾರ್ವತಮ್ಮ ರಾಜ್ ಕುಮಾರ್ ಅಭಿಪ್ರಾಯಪಟ್ಟರು.
ಚಿ. ಉದಯಶಂಕರ್ ನೀಡಿದ ಶೀರ್ಷಿಕೆ
ಕೊನೆಗೆ ಸಿನಿಮಾದ ಕಥೆ ಮತ್ತು ಎಲ್ಲರಿಗೂ ಇಷ್ಟವಾಗುವ ಹೆಸರಾದ 'ಜೀವನ ಚೈತ್ರ' ಶೀರ್ಷಿಕೆಯನ್ನು ಸೂಚಿಸಿದ್ದು ಚಿ. ಉದಯಶಂಕರ್. ಆ ಶೀರ್ಷಿಕೆ ಪಾರ್ವತಮ್ಮ, ರಾಜ್ ಕುಮಾರ್ ಸೇರಿದಂತೆ ಎಲ್ಲರಿಗೂ ಒಪ್ಪಿತವಾಯಿತು ಎಂದು ಭಗವಾನ್ ಮಾಹಿತಿ ನೀಡಿದರು.
ಅಣ್ಣಾವ್ರ ಮೊದಲ ಭೇಟಿ ಹೇಗಿತ್ತು?: ಜಗ್ಗೇಶ್ ಹಂಚಿಕೊಂಡ ಸವಿ ನೆನಪು
ಕಾದಂಬರಿ ಹಕ್ಕು ಮಾರಾಟವಾಗಿತ್ತು
ವಾಸ್ತವವಾಗಿ ಈ ಚಿತ್ರದ ನಿರ್ಮಾಣ ಸುಲಭವಾಗಿರಲಿಲ್ಲ. ಏಕೆಂದರೆ ಸಾಹಿತಿ ವಿಶಾಲಾಕ್ಷಿ ಅವರ ಬಳಿ ಕಾದಂಬರಿಯನ್ನು ಸಿನಿಮಾ ಮಾಡಲು ಹಕ್ಕು ಪಡೆಯಲು ಹೋದಾಗ ಅದು ಆಗಲೇ ಮಾರಾಟವಾಗಿದ್ದನ್ನು ತಿಳಿಸಿದ್ದರು. ಖ್ಯಾತ ನಿರ್ದೇಶಕ ಕೆ.ವಿ. ಜಯರಾಂ ಅವರು ಆಗಿನ ಕಾಲದಲ್ಲಿ 5,000 ರೂ ನೀಡಿ ಕಾದಂಬರಿಯ ಹಕ್ಕು ಪಡೆದುಕೊಂಡಿದ್ದರು.
ಹಕ್ಕು ಪಡೆಯುವ ಪ್ರಯತ್ನ
ಕಾದಂಬರಿಯನ್ನು ಸಿನಿಮಾ ಮಾಡಲೇಬೇಕು ಎನ್ನುವುದು ಪಾರ್ವತಮ್ಮ ಅವರ ಆಶಯವಾಗಿತ್ತು. ಹೀಗಾಗಿ ಸಿನಿಮಾ ಹಕ್ಕುಗಳನ್ನು ಪಡೆದುಕೊಳ್ಳಲು ಕೆ.ವಿ. ಜಯರಾಂ ಅವರನ್ನು ಸಂಪರ್ಕಿಸಲಾಯಿತು. ರಾಜ್ ಕುಮಾರ್ ಅವರ ಅಳಿಯ (ತಂಗಿಯ ಮಗ) ಗೋವಿಂದರಾಜ್ ಅವರು ಜಯರಾಂ ಅವರನ್ನು ಸಂಪರ್ಕಿಸಿದರು.
ರಾಜ್ ಕುಮಾರ್ ಮಾಡುತ್ತಾರೆಂದರೆ...
ಹಕ್ಕುಗಳನ್ನೇನೋ ಪಡೆದುಕೊಂಡಿದ್ದೇನೆ. ಆದರೆ ಸದ್ಯಕ್ಕೆ ಸಿನಿಮಾ ಮಾಡುವ ಯೋಜನೆಯಿಲ್ಲ. ಆ ಕಥೆಗೆ ಸೂಕ್ತವಾದ ಕಲಾವಿದರು ಸಿಗುತ್ತಿಲ್ಲ ಎಂದ ಕೆವಿ ಜಯರಾಂ, ರಾಜ್ ಕುಮಾರ್ ನಟಿಸುತ್ತಾರೆ ಎಂದಾದ ಮೇಲೆ ಸಂತೋಷದಿಂದಲೇ ಹಕ್ಕುಗಳನ್ನು ನೀಡುತ್ತೇನೆ ಎಂದರಂತೆ.
ಹಣ ಪಡೆಯದೆ ಹಕ್ಕು ಕೊಟ್ಟ ಜಯರಾಂ
ವಿಶೇಷವೆಂದರೆ ಜಯರಾಂ ಚಿತ್ರದ ಹಕ್ಕುಗಳನ್ನು ಪಾರ್ವತಮ್ಮ ಅವರಿಗೆ ನೀಡಿದರೂ, ತಾವು ಮೂಲ ಸಾಹಿತಿ ವಿಶಾಲಾಕ್ಷಿ ಅವರಿಗೆ ನೀಡಿದ್ದ ಐದು ಸಾವಿರ ರೂ. ಪಡೆದುಕೊಳ್ಳಲಿಲ್ಲ. ಹಣ ಕೊಡುವುದು ಬೇಡ ಎಂದು ನಯವಾಗಿಯೇ ತಿರಸ್ಕರಿಸಿ ಹಕ್ಕುಗಳನ್ನು ನೀಡಿದರು. ಆಗ ಕಾಲದಲ್ಲಿ ಐದು ಸಾವಿರ ಸಣ್ಣ ಮೊತ್ತವಾಗಿರಲಿಲ್ಲ. ಈಗಿನ ಕಾಲದಲ್ಲಿ ಶೀರ್ಷಿಕೆ ಹಕ್ಕು ನೀಡಲೂ ದೊಡ್ಡ ಮೊತ್ತದ ಪಡೆದುಕೊಳ್ಳುತ್ತಾರೆ. ಆದರೆ ಆಗಿನ ನಿರ್ದೇಶಕರು ಹೀಗಿದ್ದರು ಎಂದು ನಗುತ್ತಾ ಹೇಳಿದರು ಭಗವಾನ್.
ಜೀವನ ಚೈತ್ರ ಮಾಡಿದ ಕ್ರಾಂತಿ
'ಜೀವನ ಚೈತ್ರ' ಬಳಿಕ ಸಿನಿಮಾವಾಗಿ ಗೆದ್ದಿದ್ದು ಒಂದೆಡೆಯಾದರೆ, ಅದು ಮೂಡಿಸಿದ ಸಾಮಾಜಿಕ ಪರಿಣಾಮ ಬಹುದೊಡ್ಡದು. ಸಿನಿಮಾದಿಂದ ಪ್ರಭಾವಿತರಾಗಿ ಅನೇಕರು ಕುಡಿತ ತ್ಯಜಿಸಿದರು. ಸುಮಾರು 30 ಹಳ್ಳಿಗಳಲ್ಲಿ ಮಹಿಳೆಯರು ಒಂದಾಗಿ ಅಲ್ಲಿನ ಸಾರಾಯಿ ಅಂಗಡಿಗಳನ್ನು ಪುಡಿ ಮಾಡಿದ್ದರು. ರಾಜ್ ಕುಮಾರ್ ಅವರ ಸಿನಿಮಾಗಳಿಗಿದ್ದ ಶಕ್ತಿಯೇ ಅಂತಹದ್ದು ಎನ್ನುತ್ತಾರೆ ಭಗವಾನ್.