ಅದೇ ನಾವು ಮಾಡಿದ ಎಡವಟ್ಟು; 'ವಿಕ್ರಾಂತ್ ರೋಣ' ಹಿನ್ನಡೆಗೆ ಕಾರಣ ಹುಡುಕಿದ ಸುದೀಪ್
3 ವರ್ಷಗಳ ಹಿಂದೆ ಅನೂಪ್ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡ ಸದ್ದು ಮಾಡಿತ್ತು. ಕಿಚ್ಚ ಸುದೀಪ್ ನಟನೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಬಹಳ ಅದ್ಧೂರಿಯಾಗಿ ಮೂಡಿ ಬಂದಿದ್ದ ಸಿನಿಮಾ '3D'ಯಲ್ಲಿ ಕೂಡ ಕಿಕ್ ಕೊಟ್ಟಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ.
ಕಿಚ್ಚ ಕ್ರಿಯೇಷನ್ಸ್, ಶಾಲಿನಿ ಆರ್ಟ್ಸ್ ಹಾಗೂ ಇನ್ವೆನಿಯೊ ಆರಿಜಿನ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದವು. ದುಬೈ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಕೂಡ 'ವಿಕ್ರಾಂತ್ ರೋಣ' ಚಿತ್ರದ ಪ್ರಚಾರ ಮಾಡಲಾಗಿತ್ತು. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಆಲ್ಬಮ್ ಹಿಟ್ ಆಗಿತ್ತು. ಅದರಲ್ಲೂ ರಾ ರಾ ರಕ್ಕಮ್ಮ ಸಾಂಗ್ ದೇಶ್ಯಾದ್ಯಂತ ಸಂಗೀತ ಪ್ರೇಮಿಗಳನ್ನು ಕುಣಿಸಿತ್ತು.

'ವಿಕ್ರಾಂತ್ ರೋಣ' ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲದೇ ಇರಲು ಕಾರಣ ಏನು ಎನ್ನುವುದನ್ನು ಕಿಚ್ಚ ಸುದೀಪ್ ಬಿಚ್ಚಿಟ್ಟಿದ್ದಾರೆ. ಸಿನಿಮಾ ಚೆನ್ನಾಗಿ ಇದ್ದರೂ ದೊಡ್ಡಮಟ್ಟದಲ್ಲಿ ಗೆಲ್ಲದೇ ಇರಲು ನಾವು ಮಾಡಿದ ಪ್ರಚಾರವೇ ಒಂದರ್ಥದಲ್ಲಿ ಕಾರಣ ಎಂದು ಮಾತನಾಡಿದ್ದಾರೆ. 'ಮಾರ್ಕ್' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ತಮಿಳು ಮಾಧ್ಯಮಗಳಿಗೆ ಸುದೀಪ್ ಸಂದರ್ಶನ ನೀಡುತ್ತಿದ್ದಾರೆ. ಗಲಾಟ ಪ್ಲಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಟ ಕಿಚ್ಚ ಸುದೀಪ್ ಮಾತನಾಡಿ "ವಿಕ್ರಾಂತ್ ರೋಣ ನನಗೆ ಬಹಳ ಇಷ್ಟವಾದ ಸಿನಿಮಾ. ನಾವು ಅಂದುಕೊಂಡಂತೆ ಸಿನಿಮಾ ಮಾಡಿದ್ದೆವು. ಯಾವುದಕ್ಕೂ ರಾಜಿ ಆಗಿರಲಿಲ್ಲ. ಕೆಲ ಕಾರಣಗಳಿಂದ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ ಎಂದು ತಪ್ಪು ಹುಡುಕುತ್ತಾ ಕೂರಲು ಸಾಧ್ಯವಿಲ್ಲ. ಕಾರಣ ಬಹಳ ಪ್ರೀತಿಸಿದ ಸಿನಿಮಾ ಅದು. ಹೌದು, ನಾವು ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ, ಪರವಾಗಿಲ್ಲ. ನಾವು ಇನ್ನೊಂದು ಚಿತ್ರ ಮಾಡುತ್ತೇವೆ. 'ಮ್ಯಾಕ್ಸ್' ಮತ್ತು 'ಮಾರ್ಕ್' ಆ ಚಿತ್ರಕ್ಕೆ ಉತ್ತರ ಎನ್ನುವುದಿಲ್ಲ. ಇದನ್ನು ಚೆನ್ನಾಗಿ ಮಾಡಿದ್ದೇವೆ. 'ವಿಕ್ರಾಂತ್ ರೋಣ' ಸಮಯದಲ್ಲಿ ನನ್ನ ಮುಂದಿನ ಚಿತ್ರವು ಅಭಿಮಾನಿಗಳಿಗೆ ಮಾತ್ರ ಎಂದು ನಾನು ಹೇಳುತ್ತಿದ್ದೆ. ಹಾಗಾಗಿ ಬಹಳ ಬೇಗ ಸಿನಿಮಾಗಳನ್ನು ಮಾಡ್ತಿದ್ದೇವೆ" ಎಂದಿದ್ದಾರೆ.
ದೊಡ್ಡ ಸಿನಿಮಾ ಮಾಡುವಾಗ ಹೆಚ್ಚು ಸಮಯ ಬೇಕಾಗುತ್ತದೆ. ಹಾಗಾಗಿ ರಿಲೀಸ್, ಮಾರ್ಕೆಟ್ ಎಲ್ಲದರಿಂದ ಬಹಳ ಅಂತರ ಕಾಯ್ದುಕೊಳ್ಳುವಂತಾಗುತ್ತದೆ. ಹಾಗಾಗಿ ಸಿಂಪಲ್ ಸಿನಿಮಾಗಳು ಹೆಚ್ಚು ಮಾಡುತ್ತೇನೆ. ಅದೇ ಸಮಯದಲ್ಲಿ ದೊಡ್ಡ ಸಿನಿಮಾಗಳು ಬಂದಾಗ ಕೂಡ ಒಪ್ಪಿಕೊಳ್ಳುತ್ತೇನೆ ಎಂದು ಸುದೀಪ್ ಹೇಳಿದ್ದಾರೆ.
'ವಿಕ್ರಾಂತ್ ರೋಣ' ಚಿತ್ರದ ಹಿನ್ನಡೆಗೆ ಸಾಕಷ್ಟು ಸಣ್ಣಪುಟ್ಟ ಕಾರಣಗಳು ಇರಬಹುದು. ನಮಗೆ ಗೊತ್ತಾಗಿದ್ದು ಒಂದು ವಿಷಯ ಏನಂದ್ರೆ ಪ್ರಮೋಷನ್ ಎಂದು ಸುದೀಪ್ ಹೇಳಿದ್ದಾರೆ. "ಪ್ರಚಾರದ ವೇಳೆ ವಿಕ್ರಾಂತ್ ರೋಣ ಸೂಪರ್ ಹೀರೊದ ತರಹದ ಸಿನಿಮಾ, ಸ್ಪೈಡರ್ಮ್ಯಾನ್, ಅದು ಇದು ಎನ್ನುವಂತೆ ಇರುತ್ತೆ. ಇದು ಕಥೆ ಬಿಟ್ಟು ಬೇರೆ ಕಡೆ ಹೋಯಿತು ಅನಿಸುತ್ತೆ. ನನ್ನ ಪ್ರಕಾರ ಪ್ರಮೋಷನ್, ಟ್ರೈಲರ್ ಏನೇ ಇರಲಿ ಕಥೆ ಬಿಟ್ಟು ಹೋಗಬಾರದು. ಕಥೆ ಸಣ್ಣ ಸುಳಿವು ಬಿಟ್ಟುಕೊಡಿ. ಆ ಬಳಿಕ ಕೂಡ ಜನ ನೋಡಬೇಕು ಅಂದ್ರೆ ಸಿನಿಮಾ ನೋಡ್ತಾರೆ. ಆದರೆ ಏನೋ ಭರವಸೆ ಕೊಟ್ಟು ತೆರೆಮೇಲೆ ಏನೋ ನೋಡಿದಾಗ ಶಾಕ್ ಆಗುತ್ತದೆ. ಇನ್ನುಳಿದಂತೆ 'ವಿಕ್ರಾಂತ್ ರೋಣ' ತುಂಬಾ ಒಳ್ಳೆ ಸಿನಿಮಾ" ಎಂದಿದ್ದಾರೆ.
ಸಾಕಷ್ಟು ಜನ ಸುದೀಪ್ ಮಾತನ್ನು ಒಪ್ಪಿಕೊಳ್ಳುತ್ತಿದ್ದಾರೆ. ನೀವು ಹೇಳಿದಂತೆ ಣಾವು ಪ್ರಮೋಷನ್ ನೋಡಿ ಏನೋ ಎಂದುಕೊಂಡು ಹೋದೆವು. ಸಿನಿಮಾ ನೋಡಿ ಬೇಸರವಾಯಿತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮಿಲನಾ ನಾಗರಾಜ್, ನಿರೂಪ್ ಬಂಡಾರಿ ಸೇರಿದಂತೆ ಒಳ್ಳೆ ತಾರಾಗಣ 'ವಿಕ್ರಾಂತ್ ರೋಣ' ಚಿತ್ರದಲ್ಲಿತ್ತು. ಜಾಕ್ವೆಲಿನ್ ಫರ್ನಾಂಡಿಸ್ ಸಣ್ಣ ಅತಿಥಿ ಪಾತ್ರದಲ್ಲಿ ನಟಿಸಿದ್ದರು. 'ರಾ ರಾ ರಕ್ಕಮ್ಮ' ಹಾಡಿಗೆ ಬಿಂದಾಸ್ ಆಗಿ ಕುಣಿದಿದ್ದರು.


Click it and Unblock the Notifications











