Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಯೋಗಗಳು ಮತ್ತು ಸುದೀಪ್: ಪ್ರೇಕ್ಷಕರ ಆದರದ ನಿರೀಕ್ಷೆಯಲ್ಲಿ
ಭಾರತ ಸಿನಿಮಾರಂಗದಲ್ಲಿ ಹಲವು ಸ್ಟಾರ್ ನಟರಿದ್ದಾರೆ. ಅದರಲ್ಲಿ ಕೆಲವರಷ್ಟೆ ಎಂಥಹಾ ಪಾತ್ರಗಳಲ್ಲಿಯೂ ಉತ್ತಮವಾಗಿ ನಟಿಸಬಲ್ಲರು. ಅಂಥಹವರಲ್ಲಿ ಒಬ್ಬರು ಕನ್ನಡಿಗ ನಟ ಸುದೀಪ್.
ದಕ್ಷಿಣ ಭಾರತದ ನಾಯಕ ನಟರು ತೆರೆಯ ಮೇಲೆ ಅಬ್ಬರಿಸುತ್ತಾರೆ ಎಂಬುದೇನೋ ನಿಜ ಆದರೆ ನಟರಾಗಿ ಅವರಿಗೆ ಹಲವು ಮಿತಿ ಹಾಗೂ ಒತ್ತಡಗಳಿವೆ. ಅಭಿಮಾನಿಗಳಿಗಾಗಿ ಸಿನಿಮಾ ಮಾಡುವ ಒತ್ತಡದಲ್ಲಿ ಹಲವು ಉತ್ತಮ ನಟರು ಸಹ ಒಂದೇ ಮಾದರಿಯ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಅದೇ ಆಕ್ಷನ್, ಡ್ಯಾನ್ಸ್, ಫೈಟ್, ಅನವಶ್ಯಕ ಉದ್ದುದ್ದ ಡೈಲಾಗ್ಗಳಲ್ಲಿ ಮುಳುಗಿ ಹೋಗಿದ್ದಾರೆ.
ತೀರ ಬೆರಳೆಣಿಕೆಯ ಸ್ಟಾರ್ ನಟರಷ್ಟೆ 'ಅಭಿಮಾನಿಗಳನ್ನು ಪ್ಲೀಜ್' ಮಾಡುವ ದರ್ದಿನಿಂದ ಹೊರಬಂದು ಆಗೊಮ್ಮೆ-ಈಗೊಮ್ಮೆಯಾದರು ಒಳ್ಳೆಯ ಸಿನಿಮಾಗಳನ್ನು ಅಥವಾ ತಥಾಕತಿತ ಮಾಸ್ ಹೀರೋ ಪಾತ್ರಗಳ ಹೊರತಾದ ಪಾತ್ರಗಳಲ್ಲಿ ನಟಿಸುತ್ತಾರೆ. ತಮಿಳಿನ ಸೂರ್ಯ, ಧನುಶ್, ಕಮಲ್ ಹಾಸನ್, ಅಲ್ಲು ಅರ್ಜುನ್, ಮೋಹನ್ಲಾಲ್, ಮಮ್ಮುಟಿ, ಫಹಾದ್ ಫಾಸಿಲ್ ಅಂಥಹವರಲ್ಲಿ ಕೆಲವರು. ಇದೇ ಸಾಲಿಗೆ ಸೇರುತ್ತಾರೆ ನಟ ಸುದೀಪ್.
'ಬಿಗ್ ಬಾಸ್'ನಲ್ಲಿ ಸುದೀಪ್ ಹಾಕುವ ಬಟ್ಟೆಗಳ ಸೀಕ್ರೇಟ್ ರಿವೀಲ್!
ಬಿಲ್ಡಪ್ ತುಂಬಿದ ನಾಯಕ ಪಾತ್ರಗಳನ್ನು ಸುದೀಪ್ ಹಲವು ಮಾಡಿದ್ದಾರೆ. ದೊಡ್ಡ ಸಂಖ್ಯೆಯ ಅಭಿಮಾನಿಗಳ ಸಂಪಾದನೆಗೆ, ನಟನೊಬ್ಬ ಹೆಚ್ಚು ಕಾಲ ಚಿತ್ರರಂಗದಲ್ಲಿ ಉಳಿಯಲು ಆ ರೀತಿಯ ಪಾತ್ರಗಳ ಅವಶ್ಯಕತೆ ಇದೆ ಎನ್ನುವುದು ಒಂದು ಹಂತಕ್ಕೆ ಒಪ್ಪಬಹುದಾದ ವಾದವೇ. ಆದರೆ ಸುದೀಪ್ ಕೇವಲ ಅದೊಂದೇ ಮಾದರಿಯ ಪಾತ್ರಗಳಿಗೆ ಗಂಟು ಬಿದ್ದವರಲ್ಲ. ಆ ರೀತಿಯ ಪಾತ್ರಗಳನ್ನು ಅವರೇ ಅರಸಿ ಹೋದವರೂ ಅಲ್ಲ. ಬದಲಿಗೆ ಮಾಸ್ ಇಮೇಜಿನ ಪಾತ್ರಗಳ ನಡುವೆ ಒಳ್ಳೆಯ ಪಾತ್ರಗಳನ್ನು ಅರಸಿದ್ದಿದೆ, ಹಠಕ್ಕೆ ಬಿದ್ದು ನಟಿಸಿದ್ದಿದೆ. ನಟನೆಗೆ ಅವಕಾಶವಿರುವ, ತಮ್ಮ ಪ್ರತಿಭೆಯ ಅನಾವರಣಕ್ಕೆ ಅವಕಾಶ ನೀಡುವ ಸಿನಿಮಾಗಳನ್ನು ತಾವೇ ನಿರ್ದೇಶಿಸಿ, ನಿರ್ಮಾಣ ಮಾಡಿ ನಟನೆಯ ಹಸಿವನ್ನು ತೀರಿಸಿಕೊಂಡಿದ್ದೂ ಇದೆ. ಆದರೆ ಈ ಎಲ್ಲ ಪ್ರಯೋಗಗಳೂ ಅವರಿಗೆ ಯಶಸ್ಸು ಮಾತ್ರವನ್ನೇ ತಂದುಕೊಟ್ಟಿಲ್ಲ.
ಆರಂಭದಲ್ಲಿಯೇ ಸಿದ್ಧ ಸೂತ್ರ ಮುರಿದಿದ್ದ ಸುದೀಪ್
ಸುದೀಪ್ ವೃತ್ತಿ ಜೀವನದ ಆರಂಭದಲ್ಲಿಯೇ 'ಮಾಸ್ ಹೀರೋ' ಇಮೇಜಿಗೆ ವಿರುದ್ಧವಾದ ಸಿನಿಮಾಗಳಲ್ಲಿ ನಟಿಸಿದವರು! ಸಿನಿಮಾದ ನಾಯಕ ಕೊನೆಯಲ್ಲಿ ವಿಲನ್ನುಗಳನ್ನು ಕೊಂದು ಗೆಲ್ಲಬೇಕು, ನಾಯಕಿಯನ್ನು ಬಿಗಿದು ತಬ್ಬಿಕೊಳ್ಳಬೇಕು ಎಂಬುದು ಇಂದಿಗೂ 'ಸಿದ್ಧ ಸೂತ್ರ' ಆದರೆ ಕಿಚ್ಚನಿಗೆ ಹೆಸರು ತಂದುಕೊಟ್ಟ ಹುಚ್ಚ ಸಿನಿಮಾದಲ್ಲಿ ನಾಯಕ ಹುಚ್ಚನಾಗಿ ಹೋಗುತ್ತಾನೆ ಎಂಬುದು ಮಾಸ್ ಪ್ರೇಕ್ಷಕರಿಗೆ ಜೀರ್ಣವಾಗುವ ವಿಷಯವಲ್ಲ. ಆದರೆ ಆ ಸಿನಿಮಾದಲ್ಲಿ ಹುಚ್ಚನಾಗಿ ಸುದೀಪ್ ನಟನೆ ಇಂದಿಗೂ ಪ್ರೇಕ್ಷಕರ ಕಣ್ಣಿಗೆ ಕಟ್ಟಿದೆ.
ರಕ್ಷಿತ್ ಶೆಟ್ಟಿ ಹಾಗೂ ನನ್ನ ನಡುವೆ ಸಣ್ಣ ಭಿನ್ನಾಭಿಪ್ರಾಯಗಳಿವೆ: ನಟ ಸುದೀಪ್
ಅತ್ಯುತ್ತಮ ಫರ್ಫಾರ್ಮೆನ್ಸ್ 'ವಾಲಿ'
ಅದರ ನಂತರವೇ ಬಂದ 'ವಾಲಿ' ಸಿನಿಮಾದಲ್ಲಿ ಸುದೀಪ್ ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ಆ ಸಿನಿಮಾದಲ್ಲಿ ಸುದೀಪ್ ಅಪ್ಪಟ ವಿಲನ್. ಒಡಹುಟ್ಟಿದವನ ಪತ್ನಿಯನ್ನೇ ಮೋಹಿಸುವ, ಕಾಮಿಸಲು ಹಾತೊರೆಯುವ ವ್ಯಕ್ತಿಯ ಪಾತ್ರದಲ್ಲಿ ಸುದೀಪ್ ನಟಿಸಿದ್ದರು. ಈಗಿನ ಯಾವೊಬ್ಬ ನಾಯಕ ನಟನೂ ಒಪ್ಪದ ಮಾದರಿಯ ಪಾತ್ರವದು. ಆದರೆ ಸುದೀಪ್ ಆ ಸಿನಿಮಾ ಒಪ್ಪಿಕೊಂಡರು, ವಿಲನ್ ಪಾತ್ರದಲ್ಲಿನ ಅವರ ನಟನೆ, ಅವರೆಷ್ಟು ಅದ್ಭುತವಾದ ನಟ ಎಂಬುದನ್ನು ಸಾರಿ ಹೇಳಿತು. ಸುದೀಪ್ರ ಈವರೆಗಿನ ಅತ್ಯುತ್ತಮ ಫರ್ಮಾಮೆನ್ಸ್ಗಳಲ್ಲಿ 'ವಾಲಿ' ನಂಬರ್ ಒನ್ ಎನ್ನಬಹುದೇನೋ.
ಕರ್ನಾಟಕ ಕಮಲ್ ಎನಿಸಿಕೊಂಡ ಸುದೀಪ್
ಈ ಎರಡೂ ಸಿನಿಮಾಗಳ ಬಳಿಕ ಕೆಲ ಮಾಸ್-ಲವ್ ಸ್ಟೋರಿಗಳಲ್ಲಿ ನಟಿಸಿದ ಸುದೀಪ್ ತಮ್ಮೊಳಗಿನ ನಟನ ಹಸಿವು ತಣಿಸಲು ಆಯ್ದುಕೊಂಡ ಸಿನಿಮಾ 'ಸ್ವಾತಿ ಮುತ್ತು'. ರೌಡಿಸಂ ಕತೆಗಳೇ ರಾರಾಜಿಸುತ್ತಿದ್ದ ಕಾಲದಲ್ಲಿ ಸುದೀಪ್ ಅರೆಬುದ್ಧಿಮಾಂದ್ಯನ ಪಾತ್ರದಲ್ಲಿ ನಟಿಸಿದರು. ಆ ಮೂಲಕ, ಎಲ್ಲರು ನಡೆಯುವ ಹಾದಿ ತನ್ನದಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಈ ಸಿನಿಮಾ ಆರ್ಥಿಕವಾಗಿ ದೊಡ್ಡದಾಗಿ ಕೈ ಹಿಡಿಯದಿದ್ದರೂ ಸುದೀಪ್ ಎಂಥಹಾ ವರ್ಸಟೈಲ್ ನಟ ಎಂಬುದನ್ನು ಸಾಬೀತುಪಡಿಸಿತು. ಈ ಸಿನಿಮಾ ಮೂಲಕ ಕನ್ನಡದ ಕಮಲ್ ಹಾಸನ್ ಎನಿಸಿಕೊಂಡರು ಸುದೀಪ್.
ಮಾಸ್ ಎಲಿಮೆಂಟ್ ಇಲ್ಲದ 'ಮೈ ಆಟೊಗ್ರಾಫ್'
ಬಳಿಕ ಕೆಲ ಕಾಲ ಮತ್ತೆ ಸಿದ್ಧ ಮಾದರಿ ಸಿನಿಮಾಗಳಲ್ಲಿ ನಟಿಸಿದ ಸುದೀಪ್ ಮತ್ತೊಮ್ಮೆ ತಮ್ಮೊಳಗಿನ ನಟನನ್ನು ಹೊರ ಹಾಕಲು ಬಯಸಿದ್ದು 'ಮೈ ಆಟೊಗ್ರಾಫ್' ಸಿನಿಮಾದ ಮೂಲಕ. ಮಾಸ್ ಸಿನಿಮಾಗಳ ಎಲಿಮೆಂಟ್ ಎನಿಸಿಕೊಳ್ಳುವ ಫೈಟ್, ರಗಡ್ ಡೈಲಾಗ್, ನಾಯಕಿಯೊಟ್ಟಿಗಿನ ಇಂಟೆನ್ಸ್ ರೊಮ್ಯಾನ್ಸ್ ಯಾವುದೂ ಇಲ್ಲದ 'ಮೈ ಆಟೊಗ್ರಾಫ್' ಸಿನಿಮಾದಲ್ಲಿ ಸುದೀಪ್ ನಟಿಸಿದರು. ಸಿನಿಮಾ ಸೂಪರ್ ಹಿಟ್ ಆಯಿತು. ಒಳ್ಳೆಯ ಸಿನಿಮಾದಲ್ಲಿ ನಟಿಸಬೇಕೆನ್ನುವ ಅದಮ್ಯ ಬಯಕೆಯಿಂದ ಆ ಸಿನಿಮಾವನ್ನು ಅವರೇ ನಿರ್ಮಾಣ ಮಾಡಿ ಮೊದಲ ಬಾರಿಗೆ ನಿರ್ದೇಶನ ಸಹ ಮಾಡಿದರು.
ಸುದೀಪ್ರ ಧೈರ್ಯಶಾಲಿ ಪ್ರಯೋಗ 'ಶಾಂತಿ ನಿವಾಸ 73'
ಬಳಿಕ ಸುದೀಪ್ರ ಧೈರ್ಯಶಾಲಿ ಪ್ರಯೋಗ 'ಶಾಂತಿ ನಿವಾಸ 73'. ಭಿನ್ನ ಮಾದರಿಯ ಕತಾವಸ್ತು ಆಯ್ದುಕೊಂಡು ಅದನ್ನು ಭಿನ್ನವಾಗಿ ಕಟ್ಟಿಕೊಟ್ಟರು ಸುದೀಪ್. ಉತ್ತಮವಾದ, ಭಿನ್ನವಾದ ಸಿದ್ಧ ಸೂತ್ರವನ್ನು ಮುರಿವ ಸಿನಿಮಾ ನೀಡಬೇಕೆಂಬ ಹಪಹಪಿಯಿಂದಲೇ ಸುದೀಪ್ ಈ ಸಿನಿಮಾ ಮಾಡಿದ್ದರು ಎಂಬುದ ಸ್ಪಷ್ಟ. ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆಗಳೇನೋ ವ್ಯಕ್ತವಾದವಾದರೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗೆಲ್ಲಲಿಲ್ಲ. ಸಿನಿಮಾಕ್ಕೆ ಬಂಡವಾಳವನ್ನೂ ಹೂಡಿದ್ದ ಸುದೀಪ್ ಇದರಿಂದ ನಷ್ಟ ಅನುಭವಿಸುವಂತಾಯಿತು.
ಸೋತ 'ಜಸ್ಟ್ ಮಾತ್ ಮಾತಲ್ಲಿ'
ಆದರೆ ಇದರಿಂದ ಹಿಂಜರಿಯದ ಸುದೀಪ್ ನಂತರ ಎರಡೇ ವರ್ಷದಲ್ಲಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದರು ಅದುವೇ 'ಜಸ್ಟ್ ಮಾತ್ ಮಾತಲ್ಲಿ'. ಆ ವರೆಗೆ ರೀಮೇಕ್ ಸಿನಿಮಾಗಳನ್ನು ಮಾತ್ರವೇ ನಿರ್ದೇಶಿಸಿದ್ದ, ಪ್ರಯೋಗಕ್ಕೆ ಆರಿಸಿಕೊಂಡಿದ್ದ ನಟ ಸುದೀಪ್ ಮೊದಲ ಬಾರಿಗೆ ಸ್ವತಂತ್ರ್ಯ ಸಿನಿಮಾ ಮಾಡಿದರು. ಸರಳ ಪ್ರೇಮಕತೆಯನ್ನು ಸುಂದರವಾಗಿ ಕಟ್ಟಿಕೊಡುವ ಯತ್ನವನ್ನು ಸುದೀಪ್ 'ಜಸ್ಟ್ ಮಾತ್ ಮಾತಲ್ಲಿ' ಸಿನಿಮಾ ಮೂಲಕ ಮಾಡಿದರು. ಸಿನಿಮಾದಲ್ಲಿ ಕೆಲವು ಉತ್ತಮ ಡೈರೆಕ್ಟಿಂಗ್ ತಂತ್ರಗಳನ್ನು ಸಹ ಬಳಸಿದ್ದರು. ಆದರೆ ಆ ಸಿನಿಮಾ ಸಹ ನಿರೀಕ್ಷಿಸಿದಷ್ಟು ಯಶಸ್ಸು ಗಳಿಸಿಕೊಡಲಿಲ್ಲ.
ಚಿಪ್ಪಿನಿಂದ ಹೊರ ಬರುವ ಸೂಚನೆ
'ಜಸ್ಟ್ ಮಾತ್ ಮಾತಲ್ಲಿ' ಸಿನಿಮಾದ ಬಳಿಕ ಸುದೀಪ್ ಹಾದಿ ಬದಲಿಸಿಕೊಂಡರು. ಆ ಬಳಿಕ ತಮಿಳಿನ 'ಸಿಂಘಂ' ಸಿನಿಮಾದ ರೀಮೇಕ್ 'ಕೆಂಪೇಗೌಡ' ನಿರ್ದೇಶಿಸಿದರು ಹಿಟ್ ಆಯಿತು. ಬಳಿಕ ತೆಲುಗಿನ 'ಮಿರ್ಚಿ' ಸಿನಿಮಾವನ್ನು 'ಮಾಣಿಕ್ಯ' ಹೆಸರಲ್ಲಿ ರೀಮೇಕ್ ಮಾಡಿದರು ಹಿಟ್ ಆಯಿತು. 'ಸದಭಿರುಚಿಯ, ಭಿನ್ನ ಮಾದರಿಯ ಸಿನಿಮಾಗಳು ಸೋತು, ರೀಮೇಕ್ ಸಿನಿಮಾಗಳೇ ಹಿಟ್ ಆದ ಕಾರಣಕ್ಕೋ ಏನೋ ಸುದೀಪ್ ನಿಧಾನಕ್ಕೆ ಪ್ರಯೋಗಗಳಿಂದ ವಿಮುಖರಾಗಿ ಅದೇ ಮಾಸ್ ಇಮೇಜಿನ ನಟನಾಗಿಯೇ ಉಳಿದುಬಿಟ್ಟಿದ್ದರು. ಆದರೆ ಇದೀಗ ಬಿಡುಗಡೆ ಆಗಿರುವ 'ವಿಕ್ರಾಂತ್ ರೋಣ' ಸಿನಿಮಾ ಮೂಲಕ ಆ ಚಿಪ್ಪಿನಿಂದ ಹೊರಬರುವ ಪ್ರಯತ್ನದ ಸಣ್ಣ ಸುಳಿವೊಂದನ್ನು ಸುದೀಪ್ ನೀಡಿದ್ದಾರೆ.
ಸುದೀಪ್ ಮತ್ತೆ ಪ್ರಯೋಗಗಳಿಗೆ ಒಡ್ಡಿಕೊಳ್ಳಲಿ
'ವಿಕ್ರಾಂತ್ ರೋಣ' ಸಿನಿಮಾ ಔಟ್ ಆಂಡ್ ಔಟ್ ಕಮರ್ಶಿಯಲ್ ಮಸಾಲಾ ಸಿನಿಮಾ ಅಲ್ಲ. ಕತೆಯನ್ನು ನೆಚ್ಚಿಕೊಂಡ ಸಿನಿಮಾ ಇದು. ಇಲ್ಲಿ ನಾಯಕನ ವೈಭವೀಕರಣ ಇಲ್ಲ ಎಂದೇನೂ ಇಲ್ಲ. ಆದರೂ ಸಿನಿಮಾದಲ್ಲಿ ಬಿಲ್ಡಪ್ಗಿಂತಲೂ ಕತೆಗೆ ಹೆಚ್ಚು ಪ್ರಾಧಾನ್ಯತೆ ಇದೆ. ಈ ಸಿನಿಮಾ ಉತ್ತಮವೊ, ಸಾಧಾರಣವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಲೇ ಇದೆಯಾದರೂ ಸುದೀಪ್ ಇಂಥಹದ್ದೊಂದು ಕತೆ ಆಧರಿತ ಸಿನಿಮಾವನ್ನು ಒಪ್ಪಿಕೊಂಡಿರುವುದು ಸ್ಯಾಂಡಲ್ವುಡ್ನ ಹಿತದೃಷ್ಟಿಯಿಂದ ಒಳ್ಳೆಯದೇ. ಸುದೀಪ್ ಮತ್ತೆ ಪ್ರಯೋಗಗಳಿಗೆ ಒಡ್ಡಿಕೊಳ್ಳಬೇಕು ಆ ಪ್ರಯೋಗಗಳಿಗೆ ಪ್ರೇಕ್ಷಕರ ಬೆಂಬಲವೂ ಸಿಗಬೇಕು ಎಂಬುದಷ್ಟೆ ಸಿನಿಪ್ರಿಯರ ಬಯಕೆ.