"ನಾನು, ಶಿವಣ್ಣ ಕೆಲ ದಿನ ಮಾತು ಬಿಟ್ಟಿದ್ವಿ, ಗೀತಕ್ಕ ಇಲ್ದೆ ಇದ್ದಿದ್ರೆ ಕಥೆ ಬೇರೆ ತರ ಇರ್ತಿತ್ತು: ಕಿಚ್ಚ
ಚಿತ್ರರಂಗದಲ್ಲಿ ಸ್ಟಾರ್ ನಟರ ನಡುವೆ ಕಾರಣಾಂತರಗಳಿಂದ ವೈಮನಸ್ಸು ಮೂಡುವುದು ಹೊಸದೇನು ಅಲ್ಲ. ಎಷ್ಟೇ ಆದರೂ ಎಲ್ಲರೂ ಮನುಷ್ಯರೇ ಅಲ್ಲವೇ. ಸಮಯ, ಸಂದರ್ಭ ಆ ರೀತಿ ಇರುತ್ತದೆ. ಕೋಪ, ಈಗೋ, ಕೆಲ ಮಾತುಗಳು ಕೆಲವೊಮ್ಮೆ ಏನೇನೋ ಮಾಡಿಸಿಬಿಡುತ್ತದೆ. ಇಂತಹ ಕಾರಣಕ್ಕೆ ಆತ್ಮೀಯ ಸ್ನೇಹಿತರು ದೂರಾಗಿರುವ ಘಟನೆಗಳನು ಕನ್ನಡ ಚಿತ್ರರಂಗದಲ್ಲಿ ನಡೆದಿದೆ.
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹಾಗೂ ನಟ ಕಿಚ್ಚ ಸುದೀಪ್ ನಡುವೆ ಆತ್ಮೀಯ ಒಡನಾಟವಿದೆ. ಸುದೀಪ್ ಚಿತ್ರರಂಗಕ್ಕೆ ಬಂದ ಆರಂಭದಿಂದಲೂ ದೊಡ್ಮನೆ ಜೊತೆ ಉತ್ತಮ ಒಡನಾಟವಿದೆ. ಆದರೆ ನಡುವೆ ಒಂದಷ್ಟು ದಿನ ಶಿವಣ್ಣ ಹಾಗು ಸುದೀಪ್ ನಡುವೆ ವೈಮನಸ್ಸು ಮೂಡಿತ್ತು. ಕೆಲ ದಿನಗಳ ಕಾಲ ಇಬ್ಬರೂ ಮಾತು ಬಿಟ್ಟಿದ್ದು ಇದೆ. ಇದನ್ನು ಸುದೀಪ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಕೂಡ.

ಸದ್ಯ ಶಿವರಾಜ್ಕುಮಾರ್ ಹಾಗೂ ಪ್ರಭುದೇವ ನಟನೆಯ 'ಕರಟಕ ದಮನಕ' ಸಿನಿಮಾ ಟೀಸರ್ ಸುದೀಪ್ ಬಿಡುಗಡೆ ಮಾಡಿದ್ದಾರೆ. ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಶಿವಣ್ಣ ಹಾಗೂ ಪ್ರಭುದೇವ ಇಬ್ಬರ ಜೊತೆಗೂ ಕಿಚ್ಚ ಕೆಲಸ ಮಾಡಿದ್ದಾರೆ. ಇದೇ ಕಾರಣಕ್ಕೆ ಇಬ್ಬರ ಬಗ್ಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ಟೀಸರ್ ರಿಲೀಸ್ ವೇಳೆ ನಿರ್ದೇಶಕ ಯೋಗರಾಜ್ ಭಟ್ ಜೊತೆ ನಟ ಕಿಚ್ಚ ಸುದೀಪ್ ಚರ್ಚಿಸಿದ್ದಾರೆ. ಈ ವೇಳೆ ಶಿವಣ್ಣ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.
"ಶಿವಣ್ಣ ಸ್ಪರ್ಶ ಸಿನಿಮಾ ಆಡಿಯೋ ಲಾಂಚ್ ಮಾಡಿಕೊಡ್ತಾರೆ. ಬಳಿಕ ನಮ್ಮಿಬ್ಬರ ನಡುವೆ ಉತ್ತಮ ಒಡನಾಟ ಶುರುವಾಗುತ್ತದೆ. ಶಾಂತಿ ನಿವಾಸ ಸಿನಿಮಾದಲ್ಲಿ ಅವರನ್ನು ನಿರ್ದೇಶಿಸುತ್ತೀನಿ. ಅವರಿಗೆ ಮೇಕಪ್ ಮಾಡ್ತೀನಿ. ಕಾಸ್ಟ್ಯೂಮ್ಸ್ ಡಿಸೈನ್ ಮಾಡ್ತಿನಿ. ಅಲ್ಲಿಂದ ಒಡನಾಟ ಇನ್ನು ಚೆನ್ನಾಗಿರುತ್ತದೆ."
"ನಡುವೆ ನಮ್ಮಿಬ್ಬರ ರಿಲೇಷನ್ಶಿಪ್ನಲ್ಲಿ ಸಣ್ಣ ಇಂಟರ್ವಲ್ ಬರುತ್ತದೆ. ಕೊಂಚ ದಿನ ಮಾತಾಡಲ್ಲ. ಆಮೇಲೆ ಸರಿ ಹೋಗುತ್ತದೆ. ಬಳಿಕ ಮತ್ತಷ್ಟು ಹತ್ತಿರವಾಗುತ್ತೇವೆ. 'ವಿಲನ್' ಚಿತ್ರದಲ್ಲಿ ಶಿವಣ್ಣನ ಜೊತೆ ನಟಿಸೋಕೆ ಅವಕಾಶ ಸಿಕ್ಕಿದ್ದು ಖುಷಿ ಕೊಡ್ತು. ಆದರೆ ನಮ್ಮಿಬ್ಬರ ಪಾತ್ರಗಳಲ್ಲಿ ಇನ್ನಷ್ಟು ಬ್ಯಾಲೆನ್ಸ್ ಮಾಡಬಹುದಿತ್ತು. ಆ ಕೊರತೆ ನನಗೆ ಕಾಣಿಸಿತು. ಯಾಕಂದರೆ ಅದರು ರೇರ್ ಕಾಂಬಿನೇಷನ್. ಆದರೂ ಆ ಸಿನಿಮಾ ಬಗ್ಗೆ ಖುಷಿಯಿದೆ" ಎಂದಿದ್ದಾರೆ.

"ಶಿವಣ್ಣನ ಜೊತೆ ಸಾಷ್ಟು ಒಳ್ಳೆ ನೆನಪುಗಳಿವೆ. ನಮ್ಮಿಬ್ಬರ ನಡುವೆ ಗೀತಕ್ಕ ಇದ್ದಾರೆ. ನಾನು ಯಾಕೆ ಅವರ ಬಗ್ಗೆ ಮಾತನಾಡುತ್ತೀನಿ ಅಂದ್ರೆ, ಗೀತಕ್ಕ ಇಲ್ಲದಿದ್ದರೆ ನನ್ನ- ಶಿವಣ್ಣನ ನಡುವಿನ ಹೊಂದಾಣಿಕೆ ಬೇರೆ ತರ ಇರುತ್ತಿತ್ತೇನೋ. ಅದಕ್ಕೆ ಗೀತಕ್ಕ ಅಂದ್ರೆ ನನಗೆ ಬಹಳ ಗೌರವ. ಇಂಡಸ್ಟ್ರಿಯಲ್ಲಿ ನಾವೆಲ್ಲಾ ಇದ್ದೀವಿ. ಆದರೆ ಒಬ್ಬರಿಗೊಬ್ಬರು ಅಷ್ಟಾಗಿ ಮಾತಾಡಿಕೊಳ್ಳಲ್ಲ. ಹಾಗಾಗಿ ಅವ್ರು ಹೀಗಂದ್ರು, ಇವ್ರು ಹೀಗಂದ್ರು ಅಂದುಕೊಂಡೆ ಇರುತ್ತೇವೆ. ಒಟ್ಟಿಗೆ ಪಳಗಿದಾಗಲೇ ಗೊತ್ತಾಗುವುದು" ಎಂದಿದ್ದಾರೆ.
ಅಂದಹಾಗೆ ಸುದೀಪ್ ಹಾಗೂ ಶಿವಣ್ಣನ ನಡುವೆ ವೈಮನಸ್ಸು ಮೂಡಲು ಕಾರಣವಾಗಿದ್ದು ರಾಜ್ ಕಪ್ ಕ್ರಿಕೆಟ್ ಟೂರ್ನಿ. ಅಂದು ಕ್ರಿಕೆಟ್ ಮೈದಾನದಲ್ಲಿ ಆದ ಸಣ್ಣ ಘರ್ಷಣೆ ಮುಂದೆ ನಾನಾ ರೂಪ ಪಡೆದುಕೊಂಡುಬಿಟ್ಟಿತ್ತು. ಹುಬ್ಬಳ್ಳಿ ನಡೆದ ರಾಜ್ ಕಪ್ ಟೂರ್ನಿಯಲ್ಲಿ ಕನ್ನಡ ಚಿತ್ರರಂಗದ ಕಲಾವಿದರು ತಂತ್ರಜ್ಞರು ಬೇರೆ ಬೇರೆ ತಂಡಗಳಾಗಿ ಆಟ ಆಡಿದ್ದರು.
'ಶಿವ ರೈಡರ್ಸ್' ಹಾಗೂ 'ಕಿಚ್ಚ ಇಲೆವೆನ್' ತಂಡದ ನಡುವಿನ ಪಂದ್ಯದ ವೇಳೆ ಸುದೀಪ್ ದಿಢೀರ್ ಗರಂ ಆಗಿದ್ದರು. ಯಾರೋ ಸಹನಟ ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ಇಡೀ ತಂಡದ ಮೇಲೆ ಸುದೀಪ್ ರೇಗಾಡಿದ್ದರು. ಆ ಸಮಯದಲ್ಲಿ ನಟ ಶಿವಣ್ಣ ಕೂಡ ಮೈದಾನದಲ್ಲಿ ಇರಲಿಲ್ಲ. ಆದರೆ ರಾಘಣ್ಣ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು. ಆದರೆ ಮೈದಾನದಲ್ಲಿ ಕೆಲವೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿದ್ದು ಸುಳ್ಳಲ್ಲ.
'ವರದನಾಯಕ' ಸಿನಿಮಾ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸುದೀಪ್ ಮಾತನಾಡಿದ್ದರು. "ಹುಬ್ಬಳ್ಳಿಯಲ್ಲಿ ನಡೆದ ಪ್ರಸಂಗ ಕೆಲವು ಶಕ್ತಿಗಳ ಷಡ್ಯಂತ್ರ. ನನ್ನ ಮತ್ತು ಶಿವಣ್ಣ ನಡುವೆ ಭಿನ್ನಮತ ಸೃಷ್ಟಿಸುವ ಯತ್ನ. ನಾನು ಹಾಗೂ ಶಿವಣ್ಣ ಹತ್ತಿರವಾಗುವುದು ಕೆಲವರಿಗೆ ಇಷ್ಟವಿಲ್ಲ. ನಮ್ಮ ನಡುವೆ ತಂದಿಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಅದರಲ್ಲಿ ಸಕ್ಸಸ್ ಆಗಲಿಲ್ಲ. ರಾಘಣ್ಣ ಬಂದು ಅಂತಹವರಿಗೆ ಎಚ್ಚರಿಕೆ ಕೊಟ್ಟಿದ್ದು ಸಮಾಧಾನ ತಂದಿದೆ" ಎಂದಿದ್ದರು.


Click it and Unblock the Notifications











