ಆ ಹಾಡಿಗೆ ಫಿದಾ ಆಗಿ ಗೀತರಚನೆಕಾರನ ಜೇಬಿಗೆ ಹಣದ ಚೆಕ್ ಇಟ್ಟಿದ್ದ ಕಿಚ್ಚ ಸುದೀಪ್!
ಪ್ರತಿಭೆಗಳನ್ನು ಗುರ್ತಿಸುವುದರಲ್ಲಿ ಕಿಚ್ಚ ಸುದೀಪ್ ಸದಾ ಮುಂದೆ ನಿಲ್ಲುತ್ತಾರೆ. ಯಾರಾದರೂ ಒಳ್ಳೆ ಕೆಲಸ ಮಾಡಿದಾಗ ಮೆಚ್ಚಿಕೊಂಡಾಡುವುದು ಮಾತ್ರವಲ್ಲ, ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಬಿಗ್ಬಾಸ್ ವೇದಿಕೆಯಲ್ಲಿ ಸಾಕಷ್ಟು ಜನ ಕಿಚ್ಚನ ಔದಾರ್ಯದ ಬಗ್ಗೆ ಮಾತನಾಡಿರುವುದು ಕೇಳಿದ್ದೇವೆ. ನಿನ್ನೆ ಮೊನ್ನೆ ಅಲ್ಲ, ಮೊದಲಿನಿಂದಲೂ ಇದೇ ಕಾರಣಕ್ಕೆ ಸುದೀಪ್ ಚಿತ್ರರಂಗದಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತಾರೆ.
ಯಾವುದೇ ಒಂದು ಸಿನಿಮಾ ಹಾಡು ಬರೆಯಲು ನಿರ್ಮಾಪಕರು ಗೀತ ಸಾಹಿತಿಗೆ ಸಂಭಾವನೆ ನೀಡುತ್ತಾರೆ. ಹಾಡು ಹಿಟ್ ಆದರೆ ಎಲ್ಲರೂ ಕೊಂಡಾಡುತ್ತಾರೆ. ಸಂಗೀತ ನಿರ್ದೇಶಕ ಹಾಕಿದ ಟ್ಯೂನ್, ಕತೆಯ ಸಂದರ್ಭಕ್ಕೆ ತಕ್ಕಂತೆ ಹಾಡು ಬರೆಯುವುದು ಅಷ್ಟು ಸುಲಭವಲ್ಲ. ಅದೇ ರೀತಿ ಹಾಡು ಹಿಟ್ ಆಗುವುದು ಕೂಡ ಬಹಳ ಮುಖ್ಯ. ಇದೇ ರೀತಿ ಒಮ್ಮೆ ತಮ್ಮ ಚಿತ್ರಕ್ಕಾಗಿ ಹಾಡು ಬರೆದ ಸಾಹಿತಿಯನ್ನು ಮನೆಗೆ ಆಹ್ವಾನಿಸಿ, ತಮ್ಮ ಕೈಯಾರೆ ಅಡುಗೆ ಮಾಡಿ ಬಡಿಸಿ ಪ್ರೀತಿಯಿಂದ ಹಣ ಕೊಟ್ಟು ಕಳುಹಿಸಿದ್ದರು ಕಿಚ್ಚ ಸುದೀಪ್.

ಸುದೀಪ್ ಈಗಾಗಲೇ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಸಿನಿಮಾ ನೂರಾರು ಗೀತೆಗಳು ಸದ್ದು ಮಾಡಿವೆ. ಆದರೆ ಕೆಲವು ಮಾತ್ರ ಎಲ್ಲ ಕಾಲಕ್ಕೂ ಎವರ್ಗ್ರೀನ್ ಎನಿಸಿಕೊಂಡುಬಿಟ್ಟಿವೆ. 'ಹುಚ್ಚ' ಚಿತ್ರದ 'ಉಸಿರೇ ಉಸಿರೇ', 'ಮುಸ್ಸಂಜೆ ಮಾತು' ಚಿತ್ರದ 'ಏನಾಗಲಿ ಮುಂದೆ ಸಾಗು ನೀ', 'ಮುಕುಂದ ಮುರಾರಿ' ಚಿತ್ರದ 'ನೀನೆ ರಾಮ ನೀನೆ ಶ್ಯಾಮ', ಅದೇ ರೀತಿ 'ಚಂದು' ಚಿತ್ರದ 'ಸೊಂಟದ ವಿಷ್ಯ', 'ಮೈ ಆಟೋಗ್ರಾಫ್' ಚಿತ್ರದ 'ಸವಿಸವಿ ನೆನಪು', 'ಹೆಬ್ಬುಲಿ' ಚಿತ್ರದ ಟೈಟಲ್ ಸಾಂಗ್ ಹೀಗೆ ಲಿಸ್ಟ್ ಬೆಳೆಯುತ್ತಾ ಹೋಗುತ್ತದೆ.
ಯಾರೇ ಸಂಗೀತ ಸಂಯೋಜಿಸಿ, ಯಾರೋ ಸಾಹಿತ್ಯ ಬರೆದು, ಯಾರೇ ಹಾಡಿದರೂ ಹಾಡು ಹಿಟ್ ಆಗಿಬಿಟ್ಟರೆ ಚಿತ್ರಕ್ಕೆ ಆನೆಬಲ ಬರುತ್ತದೆ. ಕೆಲವೊಮ್ಮೆ ನಟ, ನಟಿಯರಿಗೂ ಇದು ಪ್ಲಸ್ ಆಗುತ್ತದೆ. ಹಾಗಂತ ನಟರು ಹಾಡು ಬರೆದವರನ್ನು ಕರೆದು ಮೆಚ್ಚುಗೆ ಸೂಚಿಸಿ ಧನ್ಯವಾದ ತಿಳಸಬಹುದು. ಆದರೆ 'ನೀನೆ ರಾಮ ನೀನೆ ಶ್ಯಾಮ' ಹಾಡು ಕೇಳಿ ಥ್ರಿಲ್ಲಾಗಿದ್ದ ಸುದೀಪ್ ಕೂಡಲೇ ವಿ. ನಾಗೇಂದ್ರ ಪ್ರಸಾದ್ ಅವರನ್ನು ಮನೆಗೆ ಕರೆಸಿದ್ದರು. ಈ ವಿಚಾರವನ್ನು ಕೀರ್ತಿ ಇಎನ್ಟಿ ಕ್ಲಿನಿಕ್ ಯೂಟ್ಯೂಬ್ ಸಂದರ್ಶನದಲ್ಲಿ ನಾಗೇಂದ್ರ ಪ್ರಸಾದ್ ಬಹಿರಂಗಪಡಿಸಿದ್ದಾರೆ.

ಸುದೀಪ್ ನಟನೆಯ ಹಲವು ಸಿನಿಮಾ ಹಾಡುಗಳಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಎಲ್ಲವೂ ಹಿಟ್ ಆಗಿದೆ. ಆದರೆ 'ನೀನೆ ರಾಮ ನೀನೆ ಶ್ಯಾಮ' ಹಾಡು ವಿಶೇಷ ಸ್ಥಾನ ಪಡೆದುಕೊಂಡಿದೆ. "ಅಂದು ಹಾಡು ಕೇಳಿ ಸುದೀಪ್ ಸರ್ ನನ್ನ ಮನೆಗೆ ಕರೆದ್ರು. ಯಾಕೆ ಎನ್ನುವುದು ಗೊತ್ತಾಗಲಿಲ್ಲ. ಮನೆಗೆ ಹೋದಾಗ ಅವರ ಅಮ್ಮ, ಅಮ್ಮ, ಇಡೀ ಫ್ಯಾಮಿಲಿ ಸದಸ್ಯರನ್ನೆಲ್ಲಾ ಕೂರಿಸಿಕೊಂಡು ಈ ಹಾಡು ಹಾಕಿ ಕೇಳಿಸಿದರು. ಈ ಹಾಡು ಅದ್ಭುತವಾಗಿದೆ. ಇದಕ್ಕೆ ಹೇಗೆ ಪ್ರೀತಿ ತೋರಿಸಬೇಕೋ ಗೊತ್ತಿಲ್ಲ ಎಂದು ಒಂದು ಚೆಕ್ ನನ್ನ ಜೇಬಿಗಿಟ್ಟರು. ಬಳಿಕ ನಾನು ಕಾರಿನಲ್ಲಿ ಬಂದು ಕೂತು ನೋಡಿದಾಗ ಅದು 2 ಲಕ್ಷ ರೂ. ಚೆಕ್" ಎಂದು ವಿ. ನಾಗೇಂದ್ರ ಪ್ರಸಾದ್ ನೆನಪಿಸಿಕೊಂಡಿದ್ದಾರೆ.
ಪಿಆರ್ಕೆ ಆಡಿಯೋ ಮೂಲದ 'ಟಗರು' ಚಿತ್ರದ ಆಲ್ಬಮ್ ರಿಲೀಸ್ ಆಗಿ ಹಿಟ್ ಆಗಿತ್ತು. ಎಲ್ಲಾ ಸಾಂಗ್ ಹಿಟ್ ಆಗಿದ್ದಕ್ಕೆ "ಅಪ್ಪು ಸರ್, ಬ್ಲ್ಯೂಟುತ್ ಸ್ಪೀಕರ್ ಗಿಫ್ಟ್ ಕೊಟ್ಟಿದ್ರು" ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ. ನಿರ್ಮಾಪಕರು ಕೊಟ್ಟ ಸಂಭಾವನೆ ಬಿಟ್ಟು ಹೀಗೆ ಬೇರೊಬ್ಬರು ನನ್ನ ಕೆಲಸ ಮೆಚ್ಚಿ ಪ್ರೀತಿ ವ್ಯಕ್ತಪಡಿಸಿದ್ದು ಈ ಸಂದರ್ಭಗಳು ಎಂದು ವಿವರಿಸಿದ್ದಾರೆ.


Click it and Unblock the Notifications











