ದರ್ಶನ್ ಜೊತೆ ಮಲ್ಟಿಸ್ಟಾರರ್ ಚಿತ್ರಕ್ಕೆ ಸುದೀಪ್ ಏನಂದಿದ್ರು? ವೀಡಿಯೋ ವೈರಲ್
ಸಾಮಾನ್ಯವಾಗಿ ಇಬ್ಬರೂ ಸ್ಟಾರ್ ನಟರು ಸ್ನೇಹಿತರಾಗಿದ್ದರೆ ಅವರಿಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಬಯಸುತ್ತಾರೆ. ಸುದೀಪ್ ಹಾಗೂ ದರ್ಶನ್ ಒಂದ್ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು. ಬಳಿಕ ಕಾರಣಾಂತರಗಳಿಂದ ದೂರಾಗಿದ್ದರು.
ನಾವಿಬ್ಬರು ಇನ್ನು ಮುಂದೆ ಸ್ನೇಹಿತರಲ್ಲ ಎಂದು ನಟ ದರ್ಶನ್ ಘಂಟಾಗೋಷವಾಗಿ ಹೇಳಿದ್ದರು. ಆದರೆ ಹೆಚ್ಚು ಕಡಿಮೆ ಒಟ್ಟೊಟ್ಟಿಗೆ ಚಿತ್ರರಂಗದಲ್ಲಿ ಇಬ್ಬರು ಬೆಳೆದು ಬಂದಿದ್ದರು. ದಿಢೀರನೆ ಒಬ್ಬರಿಗೊಬ್ಬರು ಹತ್ತಿರವಾಗಿದ್ದರು. ಆತ್ಮೀಯ ಸ್ನೇಹಿತರಾಗಿಬಿಟ್ಟಿದ್ದರು. ಸ್ನೇಹಿತರ ಜೊತೆ ಒಟ್ಟಿಗೆ ಸುತ್ತಾಡುವುದು, ಸಭೆ ಸಮಾರಂಭದಲ್ಲಿ ಹೆಗಲ ಮೇಲೆ ಕೈಹಾಕಿಕೊಂಡು ಕಾಣಿಸಿಕೊಳ್ಳುತ್ತಿದ್ದರು.

ವಿಷ್ಣು ಹಾಗೂ ಅಂಬಿ ರೀತಿ ಕನ್ನಡ ಚಿತ್ರರಂಗದಲ್ಲಿ ದರ್ಶನ್- ಸುದೀಪ್ ಕುಚಿಕುಗಳು ಎಂದು ಅಭಿಮಾನಿಗಳು ಕರೆಯುತ್ತಿದ್ದರು. ದರ್ಶನ್ ನಟನೆಯ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಕಿಚ್ಚ ಹಿನ್ನೆಲೆ ಧ್ವನಿ ನೀಡಿದ್ದರು. ಅದು ಹಿಟ್ ಆಗಿತ್ತು. ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಬೇಕು ಎಂದು ಅಭಿಮಾನಿಗಳು ಕನಸು ಕಂಡಿದ್ದರು. ಈ ಬಗ್ಗೆ ಸಂದರ್ಶನಗಳಲ್ಲಿ ಇಬ್ಬರಿಗೂ ಪ್ರಶ್ನೆಗಳು ಎದುರಾಗುತ್ತಿತ್ತು. ಆಗ ಖಂಡಿತ ಮಾಡ್ತೀವಿ ಎಂದೇ ಹೇಳುತ್ತಿದ್ದರು.
ಕೆಲ ಭಿನ್ನಾಭಿಪ್ರಾಯಗಳಿಂದ ಸ್ನೇಹಿತರಾಗಿದ್ದ ಇಬ್ಬರೂ ನಾನೊಂದು ತೀರ ನೀನೊಂದು ತೀರ ಎನ್ನುವಂತಾಗಿಬಿಟ್ಟರು. ಬಳಿಕ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. 8 ವರ್ಷಗಳ ಹಿಂದೆ ದರ್ಶನ್ ಟ್ವೀಟ್ ಮಾಡಿ ಇಬ್ಬರ ಸ್ನೇಹಕ್ಕೆ ತಿಲಾಂಜಲಿ ಇಟ್ಟುಬಿಟ್ಟಿದ್ದರು. ಆ ಬಳಿಕ ಕೆಲ ವರ್ಷ ಸುದೀಪ್ ಸ್ನೇಹದ ಹಸ್ತ ಚಾಚುತ್ತಲೇ ಇದ್ದರು. ಆದರೆ ಎಂದಿಗೂ ಇಬ್ಬರೂ ಹತ್ತಿರವಾಗಲಿಲ್ಲ. ಅವರಿಬ್ಬರು ಮತ್ತೆ ಜೊತೆಯಾಗಬೇಕು ಎಂದು ಅಭಿಮಾನಿಗಳು ಬಯಸುತ್ತಲೇ ಇದ್ದಾರೆ.
ಸುದೀಪ್ ತನ್ನ 40ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರಾಜ್ ಮ್ಯೂಸಿಕ್ ವಾಹಿನಿಗೆ ಸಂದರ್ಶನ ನೀಡಿದ್ದರು. ಆಗ ದರ್ಶನ್ ಹಾಗೂ ಕಿಚ್ಚ ಆತ್ಮೀಯ ಸ್ನೇಹಿತರಾಗಿದ್ದರು. ಸ್ನೇಹಿತನ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಇಬ್ಬರೂ ಸೇರಿ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೂ ಕಿಚ್ಚ ಪ್ರತಿಕ್ರಿಯಿಸಿದ್ದರು.
"ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುವುದಕ್ಕೆ ಎಲ್ಲವೂ ಕೂಡಿಬರಬೇಕು. ಒಂದು ಮದುವೆಗೆ ಕಂಕಣಬಲ ಕೂಡಿ ಬಂದಂತೆ ಅದು. ನೋಡೋಣ ಎಲ್ಲರ ಜಾತಕ ಯಾವಾಗ ಸೇರುತ್ತದೆ. ಯಾವಾಗ ಆಗುತ್ತದೆ ಅಂತ. ಕಂಡಿತ ಅವನೊಟ್ಟಿಗೆ ಸಿನಿಮಾ ಮಾಡಲು ನನಗೆ ಬಹಳ ಸಂತೋಷ ಆಗುತ್ತದೆ. ಮತ್ತೊಬ್ಬ ಸ್ಟಾರ್ ಜೊತೆ ನಟಿಸುವುದು ನನಗೆ ಗೌರವ. ನಾವಿಬ್ಬರೂ ಒಳ್ಳೆ ಫ್ರೆಂಡ್ಸ್. ಸಿನಿಮಾ ಚೆನ್ನಾಗಿಯೇ ಬರುತ್ತದೆ. ಕಂಡಿತ ಒಳ್ಳೆ ಕಥೆ ಸಿಕ್ಕರೆ ಮಾಡ್ತೀವಿ, ಇಬ್ಬರ ಅಭಿಮಾನಿಗಳಿಗೆ ನಿರಾಸೆ ಆಗಬಾರದು. ಅಂತಹ ಕಥೆ ಬೇಕು" ಎಂದು ಸುದೀಪ್ ಹೇಳಿದ್ದರು.
ಅಂದು ಸುದೀಪ್ ಸಂದರ್ಶನದಲ್ಲಿ ಮಾತನಾಡಿದ್ದ ವೀಡಿಯೋ ಈಗ ವೈರಲ್ ಆಗುತ್ತಿದೆ. ಅಭಿಮಾನಿಗಳು ಇವತ್ತಿಗೂ ದರ್ಶನ್ ಹಾಗೂ ಸುದೀಪ್ ಒಂದಾಗಬೇಕು ಎಂದು ಬಯಸುತ್ತಲೇ ಇದ್ದಾರೆ. ಆದರೆ ಸದ್ಯಕ್ಕೆ ಅಂತಹ ಲಕ್ಷಣಗಳು ಕಾಣುತ್ತಿಲ್ಲ. ಇಬ್ಬರ ನಡುವೆ ಅಂತರ ಹೆಚ್ಚಾಗಿಬಿಟ್ಟಿದೆ. ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.
ನಾವಿಬ್ಬರು ಇನ್ನು ಮುಂದೆ ಸ್ನೇಹಿತರಲ್ಲ ಎಂದು ದರ್ಶನ್ ಅಂದು ಟ್ವೀಟ್ ಮಾಡಿದ್ದರು. ಅದಕ್ಕೆ ಕಾರಣ ಕೂಡ ಮುಂದಿಟ್ಟಿದ್ದರು. ಆದರೆ ಇಬ್ಬರೂ ದೂರಾಗಲು ಅಸಲಿ ಕಾರಣ ಏನು? ಎನ್ನುವುದು ಇನ್ನು ಗುಟ್ಟಾಗಿಯೇ ಉಳಿದಿದೆ. ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಇಬ್ಬರೂ ನಟಿಸುತ್ತಿರುವ ಸಿನಿಮಾಗಳ ಚಿತ್ರೀಕರಣ ನಡೆದಿತ್ತು.
ಸದ್ಯ ಸುದೀಪ್ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅನೂಪ್ ಭಂಡಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಮತ್ತೊಂದು ಕಡೆ ನಟ ದರ್ಶನ್ 'ಡೆವಿಲ್' ಆಗಿ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ಅವರು ವಿದೇಶಕ್ಕೆ ತೆರಳಲಿದ್ದಾರೆ.


Click it and Unblock the Notifications











