ಮಹಿಳೆ ಎಂಬ ಕಾರಣಕ್ಕೆ ಸುಮನಾ ಕಿತ್ತೂರುಗೆ ಅಗೌರವ ತೋರಿದ 'ಆ' ನಟ ಯಾರು.?
Recommended Video
ಕನ್ನಡ ಚಿತ್ರರಂಗದಲ್ಲಿ ಇರುವ ಕೆಲವೇ ಕೆಲವು ಮಹಿಳಾ ನಿರ್ದೇಶಕರ ಪೈಕಿ ಸುಮನಾ ಕಿತ್ತೂರು ಕೂಡ ಒಬ್ಬರು. 'ಸ್ಲಂ ಬಾಲ', 'ಕಳ್ಳರ ಸಂತೆ', 'ಎದೆಗಾರಿಕೆ', 'ಕಿರಗೂರಿನ ಗಯ್ಯಾಳಿಗಳು' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದವರು ಈ ಸುಮನಾ ಕಿತ್ತೂರು.
ಅಸಲಿಗೆ, ಸ್ಯಾಂಡಲ್ ವುಡ್ ನಲ್ಲಿ 'ನಿರ್ದೇಶಕಿ'ಯರ ಸಂಖ್ಯೆ ತೀರಾ ಕಮ್ಮಿ. ಹೀಗ್ಯಾಕೆ ಅಂದ್ರೆ, ಚಂದನವನದಲ್ಲಿ ಮಹಿಳಾ ತಂತ್ರಜ್ಞರಿಗೆ ಉತ್ತಮ ಸಪೋರ್ಟ್ ಸಿಗುತ್ತಿಲ್ಲ. ನಿರ್ದೇಶಕಿಯರಿಗೆ ಪ್ರೋತ್ಸಾಹ ಕೊಡುವವರಿಲ್ಲ. ಅದಕ್ಕೆ ಸಾಕ್ಷಿ ಸುಮನಾ ಕಿತ್ತೂರು.!
ತೆರೆಮೇಲೆ ಸಮಾನತೆ, ಮಹಿಳೆಯರ ಸಬಲೀಕರಣದ ಬಗ್ಗೆ ಉದ್ದುದ್ದ ಡೈಲಾಗ್ ಹೊಡೆಯುವ ಹೀರೋಗಳು ನಿಜ ಜೀವನದಲ್ಲಿ ಮಹಿಳೆಯರಿಗೆ ಸೂಕ್ತ ಅವಕಾಶ ನೀಡುತ್ತಿಲ್ಲ. ಅದರಲ್ಲೂ, ಸ್ಯಾಂಡಲ್ ವುಡ್ ನಲ್ಲಿ 'ನಿರ್ದೇಶಕಿ'ಯರಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಸ್ವತಃ ಸುಮನಾ ಕಿತ್ತೂರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಮಹಿಳೆ ಎಂಬ ಕಾರಣಕ್ಕೆ 'ಆ ದಿನಗಳು' ಚಿತ್ರವನ್ನು ನಿರ್ದೇಶಿಸುವ ಅವಕಾಶದಿಂದ ವಂಚಿತರಾದ ಸುಮನಾ ಕಿತ್ತೂರುಗೆ ಕನ್ನಡದ ಜನಪ್ರಿಯರ ನಟರೊಬ್ಬರು ಅವಮಾನ ಮಾಡಿದ್ದರಂತೆ.
'ಎದೆಗಾರಿಕೆ' ಕಥೆ ಕೇಳಿ, ಸ್ಕ್ರಿಪ್ಟ್ ಚೆನ್ನಾಗಿದ್ದರೂ.. 'ಮಹಿಳೆ' ಎಂಬ ಒಂದೇ ಕಾರಣಕ್ಕೆ ''ಸ್ಕ್ರಿಪ್ಟ್ ಕೊಡಿ, ಮೇಲ್ (ಪುರುಷ) ಡೈರೆಕ್ಟರ್ ಜೊತೆಗೆ ಸಿನಿಮಾ ಮಾಡುವೆ'' ಅಂತ ಹೇಳಿ ಸುಮನಾ ಕಿತ್ತೂರುಗೆ ಅಗೌರವ ತೋರಿದ್ದರಂತೆ 'ಆ' ಜನಪ್ರಿಯ ನಟ.! ಮುಂದೆ ಓದಿರಿ...

ಬೇಸರ ಹೊರಹಾಕಿದ ಸುಮನಾ ಕಿತ್ತೂರು
ನಟ ಆದಿತ್ಯ ಅಭಿನಯದ 'ಮುಂದುವರೆದ ಅಧ್ಯಾಯ' ಚಿತ್ರದ ಟ್ರೈಲರ್ ಲಾಂಚ್ ಸಮಾರಂಭ ನಿನ್ನೆಯಷ್ಟೇ ನಡೆಯಿತು. ಈ ಕಾರ್ಯಕ್ರಮದಲ್ಲಿ ನಿರ್ದೇಶಕಿ ಸುಮನಾ ಕಿತ್ತೂರು ಕೂಡ ಭಾಗವಹಿಸಿದ್ದರು. ಇದೇ ವೇದಿಕೆ ಮೇಲೆ ಕನ್ನಡ ಚಿತ್ರರಂಗದಲ್ಲಿ ಇರುವ ಲಿಂಗ ತಾರತಮ್ಯದ ಬಗ್ಗೆ ಸುಮನಾ ಕಿತ್ತೂರು ಬೇಸರ ಹೊರ ಹಾಕಿದರು.

ಹೆಸರು ತಂದುಕೊಟ್ಟ 'ಎದೆಗಾರಿಕೆ'
''ಎದೆಗಾರಿಕೆ' ಚಿತ್ರ ನನಗೆ ತುಂಬಾ ಹೆಸರು ತಂದುಕೊಟ್ಟಿತು. ಇತ್ತೀಚೆಗೆ ನಾನು ತಮಿಳು ಸಿನಿಮಾವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ನಾನು 'ಎದೆಗಾರಿಕೆ' ಡೈರೆಕ್ಟರ್ ಅಂತ ಗೊತ್ತಾದ ಮೇಲೆ ಅಲ್ಲಿನ ದೊಡ್ಡ ದೊಡ್ಡ ಡೈರೆಕ್ಟರ್ ಗಳೆಲ್ಲ ನನ್ನನ್ನ ಮಾತನಾಡಿಸಲು ಶುರು ಮಾಡಿದರು. ನನಗೆ ಬಹಳ ಸಂತೋಷ ಆಯ್ತು'' ಎಂದು ಹೇಳುವ ಮೂಲಕ ಸುಮನಾ ಕಿತ್ತೂರು ಮಾತು ಆರಂಭಿಸಿದರು.

ಕನ್ನಡ ಚಿತ್ರರಂಗದಲ್ಲಿ ಲಿಂಗ ತಾರತಮ್ಯ
''ನಮ್ಮಲ್ಲಿ (ಕನ್ನಡ ಚಿತ್ರರಂಗ) ಹೆಣ್ಣು ಮಕ್ಕಳು ತಂತ್ರಜ್ಞರಾಗಿ ಕೆಲಸ ಮಾಡಲು ಮುಂದೆ ಬಂದಾಗ, ಸಪೋರ್ಟ್ ಮಾಡುವವರು ತುಂಬಾ ಕಮ್ಮಿ. ನಾನು ಕೂಡ ತುಂಬಾ ಕಷ್ಟ ಪಟ್ಟಿದ್ದೇನೆ. ಬೇರೆ ಭಾಷೆಗಳಲ್ಲಿ ಮಹಿಳೆಯರಿಗೆ ತುಂಬಾ ಸಪೋರ್ಟ್ ಸಿಗುತ್ತದೆ. ಆದ್ರೆ, ಇಲ್ಲಿ ಯಾಕೆ ಹಾಗೆ ಆಗಲ್ಲ ಅನ್ನೋದು ನನಗೂ ಗೊತ್ತಿಲ್ಲ'' ಎನ್ನುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಇರುವ ಲಿಂಗ ತಾರತಮ್ಯ ಬಗ್ಗೆ ಸುಮನಾ ಕಿತ್ತೂರು ಬೇಜಾರು ಮಾಡಿಕೊಂಡರು.

'ಜನಪ್ರಿಯ ನಟ'ನಿಂದ ಸುಮನಾ ಕಿತ್ತೂರುಗೆ ಅವಮಾನ.!
''ಎದೆಗಾರಿಕೆ' ಚಿತ್ರಕಥೆಯನ್ನು ಜನಪ್ರಿಯ ನಾಯಕ ನಟರೊಬ್ಬರಿಗೆ ಹೇಳಲು ಹೋದೆ. ಕಥೆ ಕೇಳಿಸಿಕೊಂಡ ಮೇಲೆ, ''ಸ್ಕ್ರಿಪ್ಟ್ ತುಂಬಾ ಚೆನ್ನಾಗಿದೆ. ನನಗೆ ಸ್ಕ್ರಿಪ್ಟ್ ಕೊಡಿ, ಒಬ್ಬ ಮೇಲ್ (ಪುರುಷ) ಡೈರೆಕ್ಟರ್ ಇಟ್ಟುಕೊಂಡು ಸಿನಿಮಾ ಮಾಡ್ತೀನಿ'' ಅಂತ ಅವರು ನನಗೆ ಹೇಳಿದರು'' ಎಂದರು ಸುಮನಾ ಕಿತ್ತೂರು. ಆದ್ರೆ, ಕನ್ನಡದ 'ಆ' ಜನಪ್ರಿಯ ನಟ ಯಾರು ಎಂಬ ಗುಟ್ಟನ್ನು ಮಾತ್ರ ಸುಮನಾ ಕಿತ್ತೂರು ಬಿಟ್ಟುಕೊಡಲಿಲ್ಲ.

ಅವಕಾಶ ವಂಚಿತೆ.!
''ಆ ದಿನಗಳು' ಚಿತ್ರಕ್ಕೂ ನನಗೆ ಹೀಗೆ ಆಗಿತ್ತು. 'ಆ ದಿನಗಳು' ಚಿತ್ರವನ್ನು ನಾನೇ ನಿರ್ದೇಶನ ಮಾಡಬೇಕಿತ್ತು. ಆದ್ರೆ ನಮ್ಮಲ್ಲಿ ಗಂಡು ಮತ್ತು ಹೆಣ್ಣು ಅಂತ ವ್ಯತ್ಯಾಸ ಇದ್ದಿದ್ರಿಂದ ಕೊನೆಗೆ ನಾನೇ ಪುರುಷ ಡೈರೆಕ್ಟರ್ ನ ಕರ್ಕೊಂಡು ಬರಬೇಕಿತ್ತು'' - ಸುಮನಾ ಕಿತ್ತೂರು, ನಿರ್ದೇಶಕಿ

ಮನಸ್ಸು ಮಾಡಿ ಮುಂದೆ ಹೋದ ಸುಮನಾ
''ನಾನು 'ಎದೆಗಾರಿಕೆ' ಚಿತ್ರವನ್ನ ಬಿಡೋಕೆ ಚಾನ್ಸೇ ಇರಲಿಲ್ಲ. ಚಿತ್ರವನ್ನ ಮಾಡಲೇಬೇಕು ಅಂತ ಮುಂದೆ ಹೋದಾಗ ಆದಿತ್ಯ ನೆನಪಾದರು. ಫೋನ್ ಮಾಡಿದ ತಕ್ಷಣ ''ನಿಮ್ಮ ಫೋನ್ ಯಾವಾಗ ಬರುತ್ತೆ ಅಂತ ಕಾಯುತ್ತಿದ್ದೆ'' ಎಂದು ಆದಿತ್ಯ ಹೇಳಿದರು. ಅಷ್ಟು ಸಾಕಾಗಿತ್ತು ನನಗೆ. ಆದಿತ್ಯ ನನ್ನನ್ನ ನಂಬಿದರು. ನಾನು ಆದಿತ್ಯನ ನಂಬಿದೆ. 'ಎದೆಗಾರಿಕೆ' ಆಯ್ತು'' ಎಂದು ತಮ್ಮ ಕಷ್ಟದ ದಿನಗಳನ್ನು ಸುಮನಾ ಕಿತ್ತೂರು ನೆನೆದರು.

ಬರಲಿದೆ ಮತ್ತೊಂದು 'ಎದೆಗಾರಿಕೆ'
ಸುಮನಾ ಕಿತ್ತೂರು ಮತ್ತು ಆದಿತ್ಯ ಕಾಂಬಿನೇಶನ್ ನಲ್ಲಿ ಮೂಡಿ ಬಂದ 'ಎದೆಗಾರಿಕೆ' ಸಿನಿಮಾ ಹಿಟ್ ಆಯ್ತು. 'ಎದೆಗಾರಿಕೆ' ಮೂಲಕ ನಿರ್ದೇಶಕಿ ಸುಮನಾ ಕಿತ್ತೂರು ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದರು. ಮುಂದೆ ಇದೇ ಹಿಟ್ ಜೋಡಿ ಮತ್ತೊಂದು 'ಎದೆಗಾರಿಕೆ'ಯ ಮೂಲಕ ಒಂದಾಗುತ್ತಾರಂತೆ.


Click it and Unblock the Notifications











