ಕನ್ನಡ ಕಥೆ ಕದ್ದು ಸಿನಿಮಾ ಮಾಡಿದ್ರಾ ಶಾರುಖ್ ಖಾನ್? ನಾಗಾಭರಣ ಹೇಳಿಕೆ ವೈರಲ್
ಈಗ ರೀಮೆಕ್ ಸಿನಿಮಾಗಳಿಗೆ ಬಹುತೇಕ ಬ್ರೇಕ್ ಬಿದ್ದಿದೆ. ಒಂದ್ಕಾಲದಲ್ಲಿ ರೀಮೆಕ್ ಸಿನಿಮಾಗಳ ಹಾವಳಿ ಜೋರಾಗಿತ್ತು. ಇವತ್ತಿಗೂ ಬೇರೆ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡುವವರ ಸಂಖ್ಯೆ ದೊಡ್ಡದಿದೆ. ಕೆಲವೊಮ್ಮೆ ಒಂದು ಸಿನಿಮಾ ನೋಡಿ ಪ್ರೇರಣೆಗೊಂಡು ಸಿನಿಮಾ ಮಾಡಿದ್ರೆ, ಮತ್ತೆ ಕೆಲವು ಬಾರಿ ಸೇಮ್ ಟು ಸೇಮ್ ಕಾಪಿ ಪೇಸ್ಟ್ ಮಾಡುತ್ತಾರೆ.
ದಶಕಗಳ ಹಿಂದೆ ಕನ್ನಡದ 'ಚಿಗುರಿದ ಕನಸು' ಚಿತ್ರದಿಂದ ಸ್ಫೂರ್ತಿ ಪಡೆದು ಹಿಂದಿಯಲ್ಲಿ 'ಸ್ವದೇಶ್' ಸಿನಿಮಾ ಮಾಡಿದ್ದರು. ಅಶುತೋಷ್ ಗೋವಾರಿಕರ್ ನಿರ್ದೇಶನದಲ್ಲಿ ಶಾರುಖ್ ಖಾನ್ ನಟಿಸಿದ್ದರು. ಶಿವರಾಮ ಕಾರಂತ್ ಬರೆದ ಕಾದಂಬರಿ ಆಧರಿಸಿ ಟಿ.ಎಸ್ ನಾಗಾಭರಣ ಸಿನಿಮಾ ನಿರ್ದೇಶನ ಮಾಡಿದ್ದರು. ಶಿವರಾಜ್ಕುಮಾರ್ ಹೀರೊ ಆಗಿ ನಟಿಸಿ ಗೆದ್ದಿದ್ದರು. ಬಾಕ್ಸಾಫೀಸ್ನಲ್ಲಿ ಸಿನಿಮಾ ಗೆಲ್ಲದೇ ಇದ್ದರೂ ಕಲ್ಟ್ ಹಿಟ್ ಎನಿಸಿಕೊಂಡಿದೆ. ಇವತ್ತಿಗೂ ಶಿವಣ್ಣ ನಟಿಸಿರುವ ಸಿನಿಮಾಗಳಲ್ಲಿ ಇದು ಒಂದು ಅದ್ಭುತ ಸಿನಿಮಾ ಎನಿಸಿಕೊಂಡಿದೆ.

'ಚಿಗುರಿದ ಕನಸು' ಸಿನಿಮಾ ತೆರೆಕಂಡ ಒಂದು ವರ್ಷದ ಬಳಿಕ 'ಸ್ವದೇಶ್' ಸಿನಿಮಾ ಬಂದಿತ್ತು. ನಮ್ಮ ಸಿನಿಮಾ ನೋಡಿ ಕಾಪಿ ಮಾಡಿದ್ದಾರೆ ಎಂದು ನಿರ್ದೇಶಕ ಟಿ. ಎಸ್ ನಾಗಾಭರಣ ಆರೋಪಿಸಿದ್ದರು. ಈ ಸಂಬಂಧ ಅಶುತೋಷ್ ಗೋವಾರಿಕರ್ ಅವರನ್ನು ಸಂಪರ್ಕಿಸುವ ಪ್ರಯತ್ನ ಕೂಡ ಮಾಡಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಈ ವಿಚಾರವನ್ನು ನಾಗಾಭರಣ ಬಹಿರಂಗವಾಗಿ ಹೇಳಿದ್ದಾರೆ.
ಪಾರ್ವತಮ್ಮ ರಾಜ್ಕುಮಾರ್ 'ಚಿಗುರಿದ ಕನಸು' ಚಿತ್ರ ನಿರ್ಮಿಸಿದ್ದರು. 'ಸ್ವದೇಶ್' ಚಿತ್ರತಂಡದ ವಿರುದ್ಧ ಕಾನೂನು ಹೋರಾಟ ಮಾಡೋಣ ಎಂದಾಗ ಪಾರ್ವತಮ್ಮ "ಅದು ಕೂಡ ನಮ್ಮದೇ ರೀತಿಯಲ್ಲಿ ಒಂದು ಸಿನಿಮಾ, ಕಾನೂನು ಹೋರಾಟ ಬೇಡ" ಎಂದು ಹೇಳಿದ್ದಾಗಿ ನಾಗಾಭರಣ ತಿಳಿಸಿದ್ದರು. ಸದ್ಯ 'ಸ್ವದೇಶ್' ಚಿತ್ರದ ರೈಟ್ಸ್ ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಸಂಸ್ಥೆ ಬಳಿಯಿದೆ.
ಕಳೆದೊಂದು ವಾರದಿಂದ 'ಸ್ವದೇಶ್' ಚಿತ್ರದ ಸಣ್ಣ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕೆಲವರು ಇದು ಕನ್ನಡದ 'ಚಿಗುರಿದ ಕನಸು' ಸ್ಫೂರ್ತಿಯಿಂದ ಮಾಡಿದ ಸಿನಿಮಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ರೆಡ್ ಚಿಲ್ಲೀಸ್ ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಆ ತುಣುಕನ್ನು ಹಂಚಿಕೊಂಡಿದೆ. ಅದಕ್ಕೆ ನಾಗಾಭರಣ ಹೇಳಿಕೆಯನ್ನು ಟ್ಯಾಗ್ ಮಾಡಿ ಈ ಸಿನಿಮಾ ಕನ್ನಡದ 'ಚಿಗುರಿದ ಕನಸು' ಕಾಪಿ ಎಂದು ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ. ಆ ಮೂಲಕ ಈ ವಿಚಾರವನ್ನು ಮತ್ತೆ ಕಿಂಗ್ ಖಾನ್ಗೆ ತಲುಪಿಸುವ ಕೆಲಸ ನೆಟ್ಟಿಗರು ಮಾಡುತ್ತಿದ್ದಾರೆ.
ಜೀ ಟಿವಿಯ ಯೂಲ್ ಲವ್ ಸ್ಟೋರೀಸ್ (1994-95)ನಲ್ಲಿದ್ದ 2 ಎಪಿಸೋಡ್ ಆಧರಿಸಿ 'ಸ್ವದೇಶ್' ಸಿನಿಮಾ ಮಾಡಿದ್ದಾರೆ ಎನ್ನುವ ವಾದ ಕೂಡ ಇದೆ. ಅಂದಹಾಗೆ 'ಸ್ವದೇಶ್' ಸಿನಿಮಾ ಕೂಡ ಬಾಕ್ಸಾಫೀಸ್ನಲ್ಲಿ ಸೋತಿತ್ತು. ಆದರೂ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಎ. ಆರ್ ರೆಹಮಾನ್ ಸಂಗೀತ ಮರೆಯೋಕೆ ಸಾಧ್ಯವಿಲ್ಲ.
'ಚಿಗುರಿದ ಕನಸು' ಕಾದಂಬರಿ ರೈಟ್ಸ್ ಪಡೆದು ಜಯಂತ್ ಕಾಯ್ಕಿಣಿ ಜೊತೆ ಸೇರಿ ನಾಗಾಭರಣ ಚಿತ್ರಕಥೆ, ಸಂಭಾಷಣೆ ಬರೆದಿದ್ದರು. ಗೌರಿಶಂಕರ್ ಛಾಯಾಗ್ರಹಣ, ವಿ. ಮನೋಹರ್ ಸಂಗೀತ ಚಿತ್ರದ ಜೀವಾಳವಾಗಿತ್ತು. 2003-2004ನೇ ಸಾಲಿನಲ್ಲಿ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ, ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ಸಂಗೀತ ಹೀಗೆ 5 ರಾಜ್ಯ ಚಲನಚಿತ್ರ ಪ್ರಶಸ್ತಿ 'ಚಿಗುರಿದ ಕನಸು' ಚಿತ್ರಕ್ಕೆ ಲಭಿಸಿತ್ತು. ಚಿತ್ರದ 'ಓ ಬಂಧುವೆ' ಹಾಡನ್ನು ಅಣ್ಣಾವ್ರು ಹಾಡಿದ್ದರು. ಈ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದರು. ಮುಂದೆ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಗೀತಸಾಹಿತಿಯಾಗಿ ಅವರು ಗುರ್ತಿಸಿಕೊಂಡರು.


Click it and Unblock the Notifications











