ತಮಿಳುನಾಡಿನಲ್ಲಿ ಅಣ್ಣಾವ್ರ ಮಹಿಳಾ ಅಭಿಮಾನಿ; ಆಕೆಯ ಕನ್ನಡ ಹಾಡು ಕೇಳಿ
ಅಸಂಖ್ಯಾತ ಅಭಿಮಾನಿಗಳ ಆರಾಧ್ಯದೈವ ನಟಸಾರ್ವಭೌಮ ವರನಟ ಡಾ. ರಾಜ್ಕುಮಾರ್. ತಮ್ಮ ಸಿನಿಮಾಗಳು ಹಾಗೂ ಆದರ್ಶಗಳಿಂದ ಅಣ್ಣಾವ್ರ ಕನ್ನಡ ಸಿನಿರಸಿಕ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ದೇಶ ವಿದೇಶಗಳಲ್ಲಿ ಕೂಡ ಮುತ್ತುರಾಜನಿಗೆ ಅಭಿಮಾನಿಗಳಿದ್ದಾರೆ. ತಮಿಳುನಾಡಿನ ಈ ಮಹಿಳೆಗೆ ಅಣ್ಣಾವ್ರ ಅಂದ್ರೆ ಅಚ್ಚುಮೆಚ್ಚು.
ಸಿಡಿ ತಂದು ಡಾ. ರಾಜ್ಕುಮಾರ್ ಸಿನಿಮಾಗಳನ್ನು ನೋಡಿ ಅವರ ಅಭಿಮಾನಿಯಾಗಿದ್ದಾರೆ. ಅಣ್ಣಾವ್ರ ಸೂಪರ್ ಹಿಟ್ ಗೀತೆಯನ್ನು ಹಾಡುತ್ತಾರೆ. ರಿಪಬ್ಲಿಕ್ ಕನ್ನಡ ಸುದ್ದಿವಾಹಿನಿ ನಿರೂಪಕ ರಂಜಿತ್ ಶಿರಿಯಾರ ಇತ್ತೀಚೆಗೆ ತಮಿಳುನಾಡಿಗೆ ಹೋಗಿದ್ದರು. ಅಲ್ಲಿ ದೈವಾನಿ ಎಂಬ ಪೌರಕಾರ್ಮಿಕ ಮಹಿಳೆಯನ್ನು ಮಾತನಾಡಿಸಿದ್ದಾರೆ. ಅಣ್ಣಾವ್ರ ಬಗೆಗಿನ ಆಕೆಯ ಅಭಿಮಾನದ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡಿಗರಿಗೆಲ್ಲಾ ನನ್ನ ನಮಸ್ಕಾರ ಎಂದು ದೈವಾನಿ ಮಾತು ಆರಂಭಿಸಿದ್ದಾರೆ. ಅಣ್ಣಾವ್ರ ಯಾವೆಲ್ಲಾ ಸಿನಿಮಾಗಳನ್ನು ನೋಡಿದ್ದೀರಾ ಎನ್ನುವ ಪ್ರಶ್ನೆಗೆ 'ಗಿರಿಕನ್ಯೆ', 'ಸಂಪತ್ತಿಗೆ ಸವಾಲ್', 'ಕಸ್ತೂರಿ ನಿವಾಸ', 'ಬೀದಿ ಬಸವಣ್ಣ' ಹೀಗೆ ಹಲವು ಸಿನಿಮಾಗಳನ್ನು ನೋಡಿರುವುದಾಗಿ ದೈವಾನಿ ಹೇಳಿದ್ದಾರೆ. 'ಗಿರಿಕನ್ಯೆ' ಚಿತ್ರದ 'ನಗು ನಗುವ ನೀ ಬರುವೆ' ಹಾಡನ್ನು ಹಾಡಿದ್ದಾರೆ. ಕನ್ನಡ ಅಂದ್ರೆ ಡಾ. ರಾಜ್ಕುಮಾರ್ ಅಂದರೆ ಬಹಳ ಇಷ್ಟ ಎಂದು ಆಕೆ ಹೇಳಿರುವುದು ಸಖತ್ ವೈರಲ್ ಆಗುತ್ತಿದೆ.
ಸಾಕಷ್ಟು ಜನ ನೆಟ್ಟಿಗರು ಈ ವೀಡಿಯೋ ನೋಡಿ ಮೆಚ್ಚಿ ಲೈಕ್, ಶೇರ್ ಮಾಡಿದ್ದಾರೆ. ಹಲವು ಕಾಮೆಂಟ್ ಮಾಡಿ ಮೆಚ್ಚಿಕೊಂಡಿದ್ದಾರೆ. "ಕನ್ನಡದ ಗತ್ತು ಕನ್ನಡದ ಹಾಡು ತಮಿಳುನಾಡಿದವರಿಗೆ ಗೊತ್ತು" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ನಿನ್ನಂತ ಅಭಿಮಾನಿಯನ್ನ ಪಡೆದ ನಮ್ಮ ಅಣ್ಣಾವ್ರು ಗ್ರೇಟ್. ಅವರ ವೆಕ್ತಿತ್ವ ಅವ್ರ ಅಭಿನಯವೇ ಸಾಕು ಎಲ್ಲಾರ ಮನ ಗೆದ್ದು ನಟಸಾರ್ವಭೌಮ ಆಗಿದ್ದು" ಎಂದು ಬರೆದುಕೊಂಡಿದ್ದಾರೆ.
"ಅಣ್ಣಾವ್ರನ್ನು ಕಂಡ್ರೆ ಯಾರಿಗ್ ಇಷ್ಟ ಇಲ್ಲ ಹೇಳಿ ಮನೆ ಮನೆಯ ಅಣ್ಣ, ಅಪ್ಪಾಜಿ, ತಮ್ಮ, ಚಿಕ್ಕಪ್ಪ, ದೊಡ್ಡಪ್ಪ, ರಾಜಕುಮಾರ ಎಲ್ಲಾ....ಅವರೇ....ಜೈ ಕನ್ನಡ " ಎಂದು ಮಗದೊಬ್ಬರು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಕನ್ನಡದವರೇ ಕನ್ನಡ ಮಾತನಾಡಲು ಹಿಂದು ಮುಂದು ನೀಡ್ತಾರೆ ಈ ಮಹಾತಾಯಿ ಎಷ್ಟು ಚೆನ್ನಾಗಿ ಕನ್ನಡ ಹಾಡು ಹಾಡಿದ್ದಾರೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಅಣ್ಣಾವ್ರ ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರ ಮಾಡದ ಪಾತ್ರಗಳಿಲ್ಲ. ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಬಾಂಡ್, ಭಕ್ತಿ ಪ್ರಧಾನ ಹೀಗೆ ಭಿನ್ನ ವಿಭಿನ್ನ ಜಾನರ್ ಸಿನಿಮಾಗಳಲ್ಲಿ ನಟಿಸಿ ಡಾ. ರಾಜ್ ಗೆದ್ದಿದ್ದರು. ಅವರು ನಟಿಸಿದ ಬಹುತೇಕ ಸಿನಿಮಾಗಳು ಯಶಸ್ಸು ಕಂಡಿದ್ದವು.
ಬರೀ ಸಿನಿಮಾ ಮಾತ್ರವಲ್ಲ ಕನ್ನಡ ನಾಡು ನೆಲ, ಜಲ, ಭಾಷೆ ವಿಚಾರ ಬಂದಾಗ ಅಣ್ಣಾವ್ರು ಸದಾ ಮುಂದೆ ನಿಲ್ಲುತ್ತಿದ್ದರು. ಗೋಕಾಕ್ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. 3ನೇ ತರಗತಿ ಓದಿದ ಅಣ್ಣಾವ್ರು ಮುಂದೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ಬೆಳೆದರು. ರಂಗಭೂಮಿಯಲ್ಲಿ ಅಭಿನಯದ ಪಟ್ಟುಗಳನ್ನು ಕಲಿತು ಬಂದ ಮುತ್ತುರಾಜ್ 'ಬೇಡರ ಕಣ್ಣಪ್ಪ' ಚಿತ್ರದಲ್ಲಿ ನಟಿಸಿ ಗೆದ್ದರು. ಮತ್ತೆ ಹಿಂತಿರುಗಿ ನೋಡುವ ಪ್ರಮೇಯ ಬರಲಿಲ್ಲ.


Click it and Unblock the Notifications











