"KGF-2 ಚಿತ್ರಕ್ಕೆ ಸಂಭಾವನೆ ಬೇಡ ಎಂದಿದ್ದ ಯಶ್ ನಿಜಕ್ಕೂ ಗ್ರೇಟ್.. ನಾನು ಆತನ ಕಾಲಿಗೆ ಬೀಳ್ತೀನಿ" ಎಂದ ತಮಿಳು ನಿರ್ಮಾಪಕ
KGF ಸರಣಿಯಿಂದ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಯಶ್ ಮುಂದಿನ ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗ ಕಾಯುತ್ತಿದೆ. ನಟನೆ ಅಷ್ಟೇ ಅಲ್ಲ ಅದ್ಭುತ ಸಿನಿಮಾ ಮಾಡ್ಬೇಕು, ನಮ್ಮ ಚಿತ್ರರಂಗವನ್ನು ಪರಭಾಷಿಕರು ತಿರುಗಿ ನೋಡಬೇಕು ಎನ್ನುವ ಯಶ್ ಸಂಕಲ್ಪ, ಪರಿಶ್ರಮದ ಫಲವಾಗಿ 'KGF' ಸಿನಿಮಾ ಅಷ್ಟು ದೊಡ್ಡಮಟ್ಟದಲ್ಲಿ ಹಿಟ್ ಆಗಿತ್ತು.
ಅಕ್ಕಪಕ್ಕದ ರಾಜ್ಯಗಳಲ್ಲೂ ಯಶ್ ಅಭಿಮಾನಿ ಸಂಘಗಳು ಹುಟ್ಟಿಕೊಂಡಿದೆ. ಬಾಲಿವುಡ್ ಸ್ಟಾರ್ ನಟರು ಕೂಡ ರಾಕಿಭಾಯ್ ಆರ್ಭಟ ನೋಡಿ ಫಿದಾ ಆಗಿದ್ದರು. ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಯಶ್ ಜೊತೆ ಸಿನಿಮಾ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು 'KGF' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಮುಖ್ಯ ಕಾರಣ ಯಶ್. ಅಷ್ಟು ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡೋಣ ಎಂದು ಪಟ್ಟು ಹಿಡಿದವರು, ಅದಕ್ಕಾಗಿ ಓಡಾಡಿದ್ದು ಕೂಡ ರಾಕಿಂಗ್ ಸ್ಟಾರ್. ಇದಕ್ಕಾಗಿ ಸಾಕಷ್ಟು ವಿಚಾರಗಳಲ್ಲಿ ಯಶ್ ರಾಜಿ ಮಾಡಿಕೊಂಡಿದ್ದರು. ಈ ಬಗ್ಗೆ ತಮಿಳಿನ ಹಿರಿಯ ನಿರ್ಮಾಪಕರೊಬ್ಬರ ಹೇಳಿಕೆಯ ಹಳೇ ವಿಡಿಯೋ ವೈರಲ್ ಆಗ್ತಿದೆ.

ನಾಯಕ ನಟರ ಸಂಭಾವನೆ ವಿಚಾರದಿಂದಲೇ ತೆಲುಗು, ತಮಿಳು ಚಿತ್ರರಂಗ ಹಿನ್ನಡೆ ಅನುಭವಿಸುತ್ತಿದೆ. 100 ಕೋಟಿ ಬಜೆಟ್ ಚಿತ್ರದಲ್ಲಿ 60ರಿಂದ 70 ಕೋಟಿ ರೂಪಾಯಿಯನ್ನು ನಾಯಕ ನಟರ ಸಂಭಾವನೆ ರೂಪದಲ್ಲಿ ಕೊಡಬೇಕು. ಇನ್ನುಳಿದ 30 ಕೋಟಿ ರೂಪಾಯಿಯಲ್ಲಿ ಸಿನಿಮಾ ಮಾಡೋಕೆ ಹೇಗೆ ಸಾಧ್ಯ? ಎಂದು ಈ ಹಿಂದೆ ತಮಿಳು ನಿರ್ಮಾಪಕ, ನಿರ್ದೇಶಕ ಕೆ. ರಾಜನ್ ಕೇಳಿದ್ದರು. ತನ್ನ ಸಂಭಾವನೆಗಿಂತ ಸಿನಿಮಾ ಚೆನ್ನಾಗಿ ಬರಬೇಕು ಎಂದು ಚಿಂತಿಸುವ ಯಶ್ ರೀತಿಯ ನಟರು ನಮ್ಮ ಇಂಡಸ್ಟ್ರಿಗೆ ಬೇಕು ಎಂದಿದ್ದರು. ಯಶ್ ವಯಸ್ಸಿನಲ್ಲಿ ಚಿಕ್ಕವರಾದರು ಅವರ ಕಾಲಿಗೆ ಬೀಳಬೇಕು ಎನಿಸುತ್ತದೆ ಎಂದು ಅವರು ಹೇಳಿದ್ದರು.
"ತಮಿಳು ಚಿತ್ರರಂಗದಲ್ಲಿ ಸಿನಿಮಾ ಬಜೆಟ್ಟಿನ ಶೇ. 60 ರಿಂದ 70ರಷ್ಟು ಭಾಗ ನಾಯಕ ನಟರ ಸಂಭಾವನೆಯಾಗಿ ಹೋಗುತ್ತದೆ. ಶೇ.30 ರಿಂದ 40ರಷ್ಟು ಹಣದಲ್ಲಿ ಸಿನಿಮಾ ನಿರ್ಮಾಣ ಮಾಡಿದರೆ ಅದು ಎಷ್ಟು ಕೆಟ್ಟದಾಗಿ ಇರುತ್ತದೆ ಅಲ್ವಾ. ಅಂತಹ ಸಿನಿಮಾ ಹೇಗೆ ಗೆಲ್ಲುತ್ತದೆ? ಹೇಳಿ. ಕನ್ನಡದಲ್ಲಿ ಯಶ್ ಎನ್ನುವ ಒಬ್ಬ ಹೀರೊ ಇದ್ದಾರೆ. KGF-2 ಸಿನಿಮಾ ಮಾಡುವಾಗ ನಿರ್ಮಾಪಕರು ಸಂಭಾವನೆ ಎಷ್ಟು ಎಂದು ಕೇಳಿದರಂತೆ. ಅದಕ್ಕೆ ಯಶ್ ಬೇಡ ಎಂದರಂತೆ"
"KGF ಸಿನಿಮಾ ಹಿಟ್ ಆಗಿದೆ. ಈಗ ನನಗೆ ಸಂಭಾವನೆ ಬೇಡ, ನನ್ನ ಸಂಭಾವನೆಯ ಹಣವನ್ನು ಹಾಕಿ ಸಿನಿಮಾ ಮಾಡಿ. ಬಹಳ ಚೆನ್ನಾಗಿ ಸಿನಿಮಾ ನಿರ್ಮಾಣ ಮಾಡಿ. ಸಿನಿಮಾ ಗೆದ್ದಮೇಲೆ ನನಗೆ ಪಾಲು ಕೊಡಿ ಎಂದಿದ್ದರಂತೆ. ಎಂತಹ ಇಂಡಸ್ಟ್ರಿ ಅದು, ಎಂತಹ ಹೀರೊ ಕಣ್ರೀ ಅವ್ರು. ಆ ಹುಡುಗ ವಯಸ್ಸಿನಲ್ಲಿ ಚಿಕ್ಕವನು. ಆದರೂ ಆತನ ಕಾಲಿಗೆ ಬೀಳಬೇಕು ಅಂತ ಅನಿಸುತ್ತದೆ. ಯಾಕಂದರೆ ಯಶ್, ಒಬ್ಬ ನಿರ್ಮಾಪಕರು ಉಳಿಯಬೇಕು ಎಂದು ಬಯಸಿದ್ದಾರೆ"

"ಯಾಕಂದರೆ ಒಬ್ಬ ನಟನಿಗೆ ಸಂಭಾವನೆ ಕೊಡಬೇಕು ಅಂದರೆ ನಿರ್ಮಾಪಕ ಸಾಲ ತಂದು ಕೊಡಬೇಕು. ಯಾರು ಸ್ವಂತ ಹಣ ಹಾಕಿ ಸಿನಿಮಾ ಮಾಡಲ್ಲ. ಹೀಗೆ ಹೀರೊಗೆ ಕೋಟಿ ಕೋಟಿ ಸಾಲ ತಂದು ಕೊಟ್ಟರೆ, ಆ ಸಿನಿಮಾ ಮುಗಿಯುವಷ್ಟರಲ್ಲಿ ಒಂದರೆಡು ವರ್ಷ ಆಗಿರುತ್ತದೆ. ನೀವು ಹಣ ಪಡೆದು ಕಾಲ್ಶೀಟ್ ಕೊಡೋದು ತಡವಾಗುತ್ತದೆ. ಬಡ್ಡಿ ಏರುತ್ತಾ ಹೋಗುತ್ತದೆ. ಸಿನಿಮಾ ರಿಲೀಸ್ ಆಗಿರಲ್ಲ. ನಿರ್ಮಾಪಕರ ಬಳಿ ಹಣ ಇರಲ್ಲ. ಆದರೆ ನೀವು ಡಬ್ಬಿಂಗ್ ಮಾಡಬೇಕು ಅಂದ್ರೆ ಕಂಪ್ಲೀಟ್ ಸೆಟ್ಲ್ಮೆಂಟ್ ಮಾಡಿ ಅಂತೀರಾ? ನಿರ್ಮಾಪಕರು ಎಲ್ಲಿಂದ ತರೋದು" ಎಂದು ಕೆ. ರಾಜನ್ ಹೇಳಿದ್ದರು. ದಳಪತಿ ವಿಜಯ್ ಬಗ್ಗೆ ಕೆ. ರಾಜನ್ ಹೀಗೆ ಪರೋಕ್ಷವಾಗಿ ಹೇಳುತ್ತಿದ್ದಾರೆ ಎನ್ನುವ ಗುಸು ಗುಸು ಕೇಳಿಬಂದಿತ್ತು.


Click it and Unblock the Notifications











