"ದೊಡ್ಡಣ್ಣ ಹಾಗೂ ನನ್ನ ಮಧ್ಯೆ ಕುತಂತ್ರ ಮಾಡಿದ್ದು ಸಾಧುಕೋಕಿಲ": ಟೆನ್ನಿಸ್ ಕೃಷ್ಣ
ಗಾಳಿ ಬಂದಾಗ ತೂರಿಕೊಳ್ಳಬೇಕು ಎನ್ನುವ ಮಾತಿದೆ. ಅವಕಾಶಗಳು ಸಿಕ್ಕಾಗ ಬಳಸಿಕೊಳ್ಳಬೇಕು. ನಾಲ್ಕು ಕಾಸು ಮಾಡಿಕೊಳ್ಳಬೇಕು. ಸ್ವಲ್ಪ ಯಾಮಾರಿದ್ರೂ ಎಲ್ಲಾ ಉಲ್ಟಾ ಪಲ್ಟಾ ಆಗಿಬಿಡುತ್ತದೆ. ನಮ್ಮ ಅವಕಾಶಗಳು ಮತ್ತೊಬ್ಬರ ಪಾಲಾಗಿಬಿಡುತ್ತದೆ. ಇನ್ನು ನಾವು ಚೆನ್ನಾಗಿದ್ದೀವಿ ಅಂದ್ರೆ ನಮ್ಮನ್ನು ಕುತಂತ್ರದಿಂದ ಬೀಳಿಸಲು ಕೆಲವರು ಹವಣಿಸುತ್ತಿರುತ್ತಾರೆ.
ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣಗೆ ಒಂದ್ಕಾಲದಲ್ಲಿ ಬಹಳ ಬೇಡಿಕೆ ಇತ್ತು. ಡಾ. ರಾಜ್ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್ರಂತಹ ದಿಗ್ಗಜರ ಸಿನಿಮಾಗಳಲ್ಲಿ ನಟಿಸಿದವರು. ನೂರಾರು ಪಾತ್ರಗಳಿಗೆ ಬಣ್ಣ ಹಚ್ಚಿದವರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವಕಾಶಗಳು ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ನಮಗೆ ಚಿತ್ರರಂಗದಲ್ಲಿ ಸಿಗಬೇಕಾದ ಸ್ಥಾನಮಾನ, ಗೌರವ ಕೂಡ ಸಿಗುತ್ತಿಲ್ಲ ಎಂದಿದ್ದಾರೆ.

ಸಾಕಷ್ಟು ಜನ ಚಿತ್ರರಂಗದಲ್ಲಿ ಸಹಾಯ ಮಾಡಿದ್ದಾರೆ. ಮತ್ತಷ್ಟು ಅವಕಾಶ ಕೊಟ್ಟರೆ ನಾನು ಸಿನಿಮಾಗಳಲ್ಲಿ ನಟಿಸಲು ಸಿದ್ಧ ಎಂದು ಟೆನ್ನಿಸ್ ಕೃಷ್ಣ ಹೇಳುತ್ತಾ ಬರ್ತಿದ್ದಾರೆ. ಇನ್ನು ಒಂದ್ಕಾಲದಲ್ಲಿ ದೊಡ್ಡಣ್ಣ ಹಾಗೂ ಟೆನ್ನಿಸ್ ಕೃಷ್ಟ ಕಾಂಬಿನೇಷನ್ ಹಿಟ್ ಆಗಿತ್ತು. ಕೆಲ ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿ ಪ್ರೇಕ್ಷಕರನ್ನು ನಗಿಸಿದ್ದರು. ಇಬ್ಬರೂ ದೂರಾಗಿದ್ದು ಯಾಕೆ ಎಂದು ಸುದ್ದಿಮನೆ ಯೂಟ್ಯೂಬ್ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
"ನಾನು ಹಾಗೂ ದೊಡ್ಡಣ್ಣ ಒಟ್ಟಿಗೆ ನಟಿಸುತ್ತಿಲ್ಲ. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವಿಬ್ಬರು ಚೆನ್ನಾಗಿದ್ದೇವೆ. ಆದರೆ ಕುತಂತ್ರದಿಂದ ನಾವಿಬ್ಬರು ಆ ಬಳಿಕ ಒಟ್ಟಿಗೆ ನಟಿಸಲು ಸಾಧ್ಯವಾಗಲಿಲ್ಲ. ಯಾರು ಕುತಂತ್ರ ಮಾಡಿದರು. ಅವರು ದೊಡ್ಡಣ್ಣ ಜೊತೆ ನಟಿಸಿದವರು. ಕುತಂತ್ರ ಮಾಡಿ ದೊಡ್ಡಣ್ಣ ಜೊತೆ ಅವಕಾಶ ಗಿಟ್ಟಿಸಿಕೊಂಡಿದ್ದು ಸಾಧುಕೋಕಿಲ" ಎಂದು ಟೆನ್ನಿಸ್ ಕೃಷ್ಣ ಆರೋಪಿಸಿದ್ದಾರೆ.

"ತಿಮ್ಮರಾಯ ಚಿತ್ರದಲ್ಲಿ ಸಾಧುಕೋಕಿಲ ಹೀರೊ ಆಗಿ ನಟಿಸಿದ್ದರು. ನಿಜ ಹೇಳಬೇಕು ಅಂದರೆ ಆ ಚಿತ್ರದಲ್ಲಿ ನಾನೇ ಹೀರೊ ಆಗಿ ನಟಿಸಬೇಕಿತ್ತು. ಕೊನೆಗೆ ಸಾಧು ಕೋಕಿಲ ಆ ಚಿತ್ರದಲ್ಲಿ ಹೀರೊ ಆಗಿ ನಟಿಸಿದರು. ಸಣ್ಣ ಪಾತ್ರ ಮಾಡುವಂತೆ ಕೇಳಿದರು. ಡೇಟ್ಸ್ ಇಲ್ಲದಿದ್ದರೂ ಹೊಂದಿಸಿಕೊಂಡು ನಟಿಸಿದೆ. ಆದರೆ ಆ ಸಿನಿಮಾ ಬಳಿಕ ನಾನು ಬೇಡವೇ. ನನ್ನನ್ನೇ ದೂರ ಮಾಡಿಬಿಟ್ಟರು" ಎಂದಿದ್ದಾರೆ.
ಸಾಧುಕೋಕಿಲ ಎರಡು ಕಾರ್ಯಕ್ರಮಕ್ಕೆ ನನ್ನನ್ನು ಅತಿಥಿಯಾಗಿ ಬರುವಂತೆ ಕೇಳಿದ್ದರು. ನಾನು ಹೋಗಿದ್ದೆ. ಆದರೆ ಬಳಿಕ ನಾನು ಒಂದು ಕಾರ್ಯಕ್ರಮಕ್ಕೆ ಸಾಧು ಕೋಕಿಲನ ಅತಿಥಿಯಾಗು ಕರೆಯಲು ಹುಡುಕಿಕೊಂಡು ಹೋಗಿದ್ದೆ. ಬರ್ತೀನಿ ಎಂದು ಹೇಳಿದವರು ಬಳಿಕ ಫೋನ್ ಮಾಡಿದರೆ ಕರೆ ಸ್ವೀಕರಿಸಲಿಲ್ಲ. ಇದೇ ರೀತಿ ಕಾರ್ಯಕ್ರಮವೊಂದಕ್ಕೆ ಬುಲೆಟ್ ಪ್ರಕಾಶ್ ಅವರನ್ನ ಕರೆದಿದ್ದೆ. ಬರ್ತೀನಿ ಎಂದವರು ಬರಲಿಲ್ಲ" ಎಂದು ಟೆನ್ನಿಸ್ ಕೃಷ್ಣ ನೆನಪಿಸಿಕೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ ನಟನೆಯ 'ಪವರ್' ಚಿತ್ರದಲ್ಲಿ ನಾನು ಮಾಡಬೇಕಿದ್ದ ಪಾತ್ರವನ್ನು ಸಾಧುಕೋಕಿಲ ಬದಲಿಸಿದ್ದರು. ಆ ಪಾತ್ರ ತೆಲುಗಿನಲ್ಲಿ ಬ್ರಹ್ಮಾನಂದಂ ಮಾಡಿದ್ದರು. ಅದನ್ನು ಬಳಿಕ ರಂಗಾಯಣ ರಘುಗೆ ಕೊಡಿಸಿದ್ದರು. ನನಗೆ ಮೂರ್ನಾಲ್ಕು ಸನ್ನಿವೇಶಗಳ ಸಣ್ಣ ಪಾತ್ರ ಕೊಟ್ಟರು, ಬೇಡ ಅಂದೆ. ಬಳಿಕ ನಿರ್ದೇಶಕರು ನಟಿಸುವಂತೆ ಮನವಿ ಮಾಡಿದರು. ಅದಕ್ಕೆ ನಟಿಸಿದೆ. ಅವರು ನಟಿಸಲಿ ಬೇಡ ಅನ್ನಲಿಲ್ಲ, ನನ್ನ ಪಾತ್ರ ಯಾಕೆ ಬದಲಾಯಿಸಬೇಕು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











