ಅಣ್ಣಾವ್ರ 'ಲವ-ಕುಶ' ಸಿನಿಮಾ ನಿಂತಿದ್ದೇಕೆ? ಈ ಚಿತ್ರದಲ್ಲಿ ಅಪ್ಪು ಯಾವ ಪಾತ್ರ ಮಾಡಬೇಕಿತ್ತು ಗೊತ್ತಾ?
"ಒಂದು ಸಿನಿಮಾ ಉತ್ತಮವಾಗಿ ಮೂಡಿ ಬರಲು ಎಲ್ಲಾ ಕೂಡಿಬರಬೇಕು. ಸಿನಿಮಾ ತಾನಾಗಿಯೇ ತನಗೆ ಏನು ಬೇಕೋ ಅದನ್ನು ಧಕ್ಕಿಸಿಕೊಳ್ಳುತ್ತದೆ. ಯಾವುದೇ ಪಾತ್ರ ಮಾಡಲು ಯೋಗ ಇರಬೇಕು" ಇದು ಡಾ. ರಾಜ್ಕುಮಾರ್ ಪದೇ ಪದೆ ಹೇಳುತ್ತಿದ್ದ ಮಾತು. 'ಭಕ್ತ ಅಂಬರೀಶ' ಚಿತ್ರ ನಿಂತಾಗಲೂ ಆಪ್ತರ ಬಳಿ ಇದೇ ರೀತಿ ಹೇಳಿಕೊಂಡಿದ್ದರು. ಅಂದಹಾಗೆ ಡಾ. ರಾಜ್ಕುಮಾರ್ ನಟಿಸಬೇಕಿದ್ದ ಸಾಕಷ್ಟು ಸಿನಿಮಾಗಳು ನಿಂತು ಹೋಗಿವೆ.
ಚಿತ್ರರಂಗದಲ್ಲಿ ಒಂದು ಸಿನಿಮಾ ಪ್ರಾರಂಭ ಆಗುವುದು. ಚಿತ್ರೀಕರಣಗೊಂಡು ಬಿಡುಗಡೆ ಆಗುವುದು ಅಷ್ಟು ಸುಲಭದ ಮಾತಲ್ಲ. ಎಷ್ಟೋ ಸಿನಿಮಾಗಳು ಮಾತುಕತೆ ಹಂತದಲ್ಲೇ ನಿಂತುಬಿಡುತ್ತವೆ. ಕೆಲ ಚಿತ್ರಗಳು ಮುಹೂರ್ತದ ಬಳಿಕ, ಕೆಲವೊಮ್ಮೆ ಅರ್ಧ ಚಿತ್ರೀಕರಣದ ನಂತರ ನಿಂತಿರುವುದು ಇದೆ. ಅಷ್ಟೆಲ್ಲಾ ಯಾಕೆ ಚಿತ್ರೀಕರಣ ಪೂರೈಸಿ ಬಿಡುಗಡೆಯಾಗದೇ ಡಬ್ಬಾದಲ್ಲೇ ಕುಳಿತ ಸಿನಿಮಾಗಳು ಇವೆ. ಡಾ. ರಾಜ್ಕುಮಾರ್ ನಟಿಸಬೇಕಿದ್ದ 'ಲವ-ಕುಶ' ಚಿತ್ರ ಕೂಡ ಆರಂಭದಲ್ಲೇ ನಿಂತಿತ್ತು.

ತೆಲುಗಿನ ಸೂಪರ್ ಸ್ಟಾರ್ ಘಟ್ಟಮನೇನಿ ಕೃಷ್ಣ ನಿರ್ಮಾಣದಲ್ಲಿ 'ಲವ-ಕುಶ' ಸಿನಿಮಾ ಶುರುವಾಗಿತ್ತು. ಒಂದೆರಡು ದಿನ ಚಿತ್ರೀಕರಣದ ಬಳಿಕ ಕಾರಣಾಂತರಗಳಿಂದ ಮುಂದುವರೆಯಲಿಲ್ಲ. ಬಹಳ ವರ್ಷಗಳ ಬಳಿಕ ಅಣ್ಣಾವ್ರು ಪೌರಾಣಿಕ ಪಾತ್ರದಲ್ಲಿ ನಟಿಸಬೇಕಿದ್ದ ಚಿತ್ರ ಅದು. ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ 'ಲವ-ಕುಶ' ಕನ್ನಡದಲ್ಲಿ ಕಟ್ಟಿಕೊಡುವ ಪ್ರಯತ್ನ ನಡೆದಿತ್ತು. ಶ್ರೀರಾಮನಾಗಿ ಡಾ. ರಾಜ್ಕುಮಾರ್ ಹಾಗೂ ಸೀತಾಮಾತೆಯಾಗಿ ಜಯಪ್ರದ ಬಣ್ಣ ಹಚ್ಚಿದ್ದರು.
ಮುಹೂರ್ತ ನಡೆದು, ಚಿತ್ರೀಕರಣ ಆರಂಭವಾದ ಬಳಿಕ ಯಾಕೆ ಕನ್ನಡದ 'ಲವ-ಕುಶ' ಸಿನಿಮಾ ನಿಂತುಹೋಯಿತು ಎನ್ನುವ ಪ್ರಶ್ನೆ ಹಲವರನ್ನು ಕಾಡಿತ್ತು. ಪದ್ಮಾಲಯ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತೆಲುಗು ನಟ ಕೃಷ್ಣ ಕನ್ನಡದಲ್ಲಿ ಸಿನಿಮಾ ಆರಂಭಿಸಿದ್ದರು. ಲಕ್ಷ್ಮಣನ ಪಾತ್ರದಲ್ಲಿ ರಾಮಕೃಷ್ಣ, ಕೌಸಲ್ಯಯಾಗಿ ಪಂಡರೀಬಾಯಿ ನಟಿಸಬೇಕಿತ್ತು. ಸಿಂಗೀತಂ ಶ್ರೀನಿವಾಸ್ ನಿರ್ದೇಶನದಲ್ಲಿ ಎಂ. ರಂಗರಾವ್ ಸಂಗೀತ ನಿರ್ದೇಶನ ಮಾಡುತ್ತಿದ್ದರು. 4 ಸಾಂಗ್ ರೆಕಾರ್ಡಿಂಗ್ ಸಹ ಆಗಿತ್ತು.
7 ದಿನಗಳ ಕಾಲ 'ಲವ-ಕುಶ' ಸಿನಿಮಾ ಚಿತ್ರಕರಣ ನಡೆದಿತ್ತು. ಆ ಚಿತ್ರ ನಿಲ್ಲಲು 3 ಕಾರಣಗಳನ್ನು ಅಣ್ಣಾವ್ರ ಅಭಿಮಾನಿ, ಆಪ್ತರು ಆಗಿದ್ದ ಹಾಲು- ಜೇನು ರಾಮ್ಕುಮಾರ್ ಟೋಟಲ್ ಕನ್ನಡ ಯೂಟ್ಯೂಬ್ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದರು. ಅಣ್ಣಾವ್ರ ರಂಗಭೂಮಿಯಲ್ಲಿ ಇದ್ದಾಗಲೇ ರಾಮನ ಪಾತ್ರ ಮಾಡುತ್ತಿದ್ದರು. ಆದರೆ ಈ ಚಿತ್ರಕ್ಕಾಗಿ ಮಾಡಿದ್ದ ಚಿತ್ರಕಥೆಯಲ್ಲಿ ಕೊಂಚ ಬದಲಿಸಿಕೊಳ್ಳಲಾಗಿತ್ತು. ಅದು ಅಣ್ಣಾವ್ರಿಗೆ ಇಷ್ಟವಾಗಿರಲಿಲ್ಲವಂತೆ.
ಜಯಮಾಲಿನಿ ಹಾಗೂ ಜ್ಯೋತಿ ಲಕ್ಷ್ಮಿ ಹೆಜ್ಜೆ ಹಾಕುವ ಒಂದು ಹಾಡನ್ನು ಚಿತ್ರಕ್ಕಾಗಿ ಪ್ಲ್ಯಾನ್ ಮಾಡಲಾಗಿತ್ತಂತೆ. ಪೌರಾಣಿಕ ಚಿತ್ರದಲ್ಲಿ ಇಂತಹ ಹಾಡು ಯಾಕೆ ಎಂದು ಡಾ. ರಾಜ್ಕುಮಾರ್ ಕೇಳಿದ್ದರಂತೆ. ಆದರೆ ತೆಲುಗಿನಲ್ಲಿ ಕೂಡ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡಲು ಯತ್ನಿಸಿದ್ದರು. ಹಾಗಾಗಿ ಅಲ್ಲಿನ ಪ್ರೇಕ್ಷಕರಿಗೆ ಅದು ಬೇಕು ಎಂದು ಬೇಡಿಕೆ ಇಟ್ಟಿದ್ದಂತೆ. ಇನ್ನು ಚಿತ್ರದ ಚಿತ್ರೀಕರಣಕ್ಕಾಗಿ ಸೀತಾಮಾತೆಯ ವಿಗ್ರಹ ಸಿದ್ಧಮಾಡಲಾಗಿತ್ತು. ಅದು ಸೀತಾ ಪಾತ್ರಧಾರಿ ಜಯಪ್ರದ ಅವರನ್ನು ಹೋಲುತ್ತಿರಲಿಲ್ಲ. ಬೇರೆ ಪ್ರತಿಮೆ ಮಾಡಿಸಿ ಎಂದು ಅಣ್ಣಾವ್ರ ಮನವಿ ಮಾಡಿದ್ದರಂತೆ ಇದಕ್ಕೆಲ್ಲಾ ನಿರ್ಮಾಪಕರು ಆಸಕ್ತಿ ತೋರಿಸಿರಲಿಲ್ಲ.

ಅಂತಿಮವಾಗಿ 'ಲವ-ಕುಶ' ಚಿತ್ರದ ಕರ್ನಾಟಕ ವಿತರಣೆ ಹಕ್ಕನ್ನು ಕೆಸಿಎನ್ ಗೌಡರಿಗೆ ಕೊಡಲು ನಿರ್ಮಾಪಕ ಕೃಷ್ಣ ಒಪ್ಪಂದ ಮಾಡಿಕೊಂಡಿದ್ದರು. ಆದರೆ ತಮಗೆ ಕೊಡುವಂತೆ ಪಾರ್ವತಮ್ಮ ರಾಜ್ಕುಮಾರ್ ಕೇಳಿದ್ದರಂತೆ. ಹೀಗೆ ಸಾಕಷ್ಟು ಕಾರಣಗಳಿಂದ 'ಲವ-ಕುಶ' ಸಿನಿಮಾ ನಿಂತ ಹೋಯಿತು ಎಂದು ರಾಮ್ಕುಮಾರ್ ನೆನಪಿಸಿಕೊಂಡಿದ್ದರು.
ಅಂದು ಪಾರ್ವತಮ್ಮ ಹಾಗೂ ಕೃಷ್ಣ ಇಬ್ಬರಲ್ಲಿ ಒಬ್ಬರು ಬಿಟ್ಟುಕೊಡುವ ಮನಸ್ಸು ಮಾಡಿದ್ದರೆ 'ಲವ-ಕುಶ' ಸಿನಿಮಾ ಬರ್ತಿತ್ತ. ಅಣ್ಣಾವ್ರ ಜೊತೆ ಲಕ್ಷ್ಮಣನಾಗಿ ನಟಿಸೋ ಅವಕಾಶ ಕೈತಪ್ಪಿದ್ದಂತೆ ನಟ ರಾಮಕೃಷ್ಣ ಬಹಳ ಬೇಸರಗೊಂಡಿದ್ದರು. ಬಹಳ ಹಿಂದೆಯೇ ಅಣ್ಣಾವ್ರ 'ಲವ-ಕುಶ' ಚಿತ್ರದಲ್ಲಿ ನಟಿಸೋಕೆ ಪ್ರಯತ್ನಿಸಿದ್ದರು. ಆದರೆ ಕೊನೆಗೂ ಆ ಸಿನಿಮಾ ಬರದಂತೆ ಆಯಿತು.
ಇಂಟ್ರೆಸ್ಟಿಂಗ್ ಅಂದರೆ ಈ ಚಿತ್ರದಲ್ಲಿ 'ಲವ-ಕುಶ' ಪಾತ್ರಗಳಿಗೆ ಮಾಸ್ಟರ್ ಲೋಹಿತ್(ಪುನೀತ್ ರಾಜ್ಕುಮಾರ್) ಹಾಗೂ ಶ್ರೀನಾಥ್ ಪುತ್ರ ರೋಹಿತ್ ಆಯ್ಕೆ ಆಗಿದ್ದರಂತೆ. ಅವತ್ತಿನ ಕಾಲಕ್ಕೆ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಿಸಲು ಕೃಷ್ಣ ಮುಂದಾಗಿದ್ದಾರೆ. ಡಾ. ರಾಜ್ಗೆ ಭಾರೀ ಮೊತ್ತದ ಸಂಭಾವನೆಯನ್ನು ಕೊಡಲು ಮಾತುಕತೆ ಆಗಿತ್ತು. ಭಾರೀ ಸೆಟ್ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಬೇಕಿತ್ತು.
ತೆಲಗಿನಲ್ಲಿ ಕೃಷ್ಣ 'ಸಿಂಹಾಸನಂ' ಎಂಬ ಸಿನಿಮಾ ನಿರ್ಮಾಣ ಮಾಡಿ ಕೈ ಸುಟ್ಟುಕೊಂಡಿದ್ದರು. ಆ ನಷ್ಟದಿಂದ ಆಗ ನಿರ್ಮಿಸುತ್ತಿದ್ದ ಬೇರೆ ಸಿನಿಮಾಗಳನ್ನು ಕೈಬಿಟ್ಟರು ಎನ್ನುವ ವದಂತಿ ಹರಿದಾಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ 7 ದಿನಗಳ ಕಾಲ ಚಿತ್ರೀಕರಣ ಮಾಡಿದ್ದ ದೃಶ್ಯಗಳ ರೀಲ್ಗಳನ್ನು ಕೃಷ್ಣ ಸುಟ್ಟು ಹಾಕಿದ್ದರು ಎನ್ನುವ ಊಹಾಪೋಹ ಕೂಡ ಇದೆ.
'ಲವ-ಕುಶ' ಚಿತ್ರದ ಮುಹೂರ್ತ ಸಮಾರಂಭದಲ್ಲಿ ಅಣ್ಣಾವ್ರ ತಾಯಿ ಲಕ್ಷ್ಮಮ್ಮ ಕೂಡ ಭಾಗಿ ಆಗಿದ್ದರು. ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರ ರಾವ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಕೋರಿದ್ದರು. ಇವತ್ತಿಗೂ ಆ ಚಿತ್ರದ ಮುಹೂರ್ತ ಸಮಾರಂಭದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
'ರಾಮಾಂಜನೇಯ ಯುದ್ಧ' ಚಿತ್ರದಲ್ಲಿ ಡಾ. ರಾಜ್ಕುಮಾರ್ ಮೊದಲ ಬಾರಿ ಶ್ರೀರಾಮನ ಪಾತ್ರದಲ್ಲಿ ನಟಿಸಿದ್ದರು. ಆ ಬಳಿಕ 'ಲವ-ಕುಶ' ಚಿತ್ರದಲ್ಲಿ ಮತ್ತೆ ಆ ಪಾತ್ರಕ್ಕೆ ಬಣ್ ಹಚ್ಚಿದ್ದರು. ಆದರೆ ಸಿನಿಮಾ ಮಾತ್ರ ತೆರೆಗೆ ಬರಲಿಲ್ಲ. ಅಂದು ಸಿನಿಮಾ ಆರಂಭ ಆಗಿದ್ದ ವಿಚಾರವನ್ನು ಪತ್ರಿಕೆಗಳಲ್ಲಿ ಓದಿ ಅಭಿಮಾನಿಗಳು ಬಹಳ ಖುಷಿಪಟ್ಟಿದ್ದರು. ಯಾರದ್ದೋ ಈಗೋ ಕಾರಣಕ್ಕೆ ಒಂದೊಳ್ಳೆ ಸಿನಿಮಾ ನಿಂತು ಹೋಗುವಂತಾಯಿತು.
ತೆಲುಗಿನಲ್ಲಿ ಎನ್ಟಿಆರ್(ರಾಮ), ಅಂಜಲಿ ದೇವಿ(ಸೀತೆ), ಕಾಂತಾರಾವ್(ಲಕ್ಷ್ಮಣ) ನಟಿಸಿದ್ದ 'ಲವ-ಕುಶ' ಸಿನಿಮಾ ಸೂಪರ್ ಹಿಟ್ ಆಗಿತ್ತು. 1963ರಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಸಿ. ಪುಲ್ಲಯ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಎನ್ಟಿಆರ್ ಸಿನಿಕರಿಯರ್ನಲ್ಲೇ ಬಹಳ ಜನಪ್ರಿಯ ಸಿನಿಮಾ ಆಗಿತ್ತು. ಸತತ 75 ವಾರ ಪ್ರದರ್ಶನ ಕಂಡು ಅವತ್ತಿನ ಕಾಲಕ್ಕೆ ಭಾರೀ ಕಲೆಕ್ಷನ್ ಮಾಡಿ ಗೆದ್ದಿತ್ತು. ಘಂಟಸಾಲ ಸಂಗೀತದಲ್ಲಿ ಸಣ್ಣ ಬಿಟ್ಗಳು ಸೇರಿ ಒಟ್ಟು 37 ಹಾಡುಗಳು ಚಿತ್ರದಲ್ಲಿದ್ದವು.
ಕನ್ನಡ, ತಮಿಳು, ಹಿಂದಿಗೆ ಕೂಡ 'ಲವ-ಕುಶ' ಸಿನಿಮಾ ಡಬ್ ಆಗಿ ಬಿಡುಗಡೆ ಆಗಿತ್ತು. ಡಾ. ರಾಜ್ಕುಮಾರ್ ಈ ಚಿತ್ರದಲ್ಲಿ ನಟಿಸಲು ಬಹಳ ಆಸೆ ಪಟ್ಟಿದ್ದರು. ಆದರೆ ಯಾಕೋ ಅದು ಸಾಧ್ಯವಾಗಲೇ ಇಲ್ಲ. ಬರೋಬ್ಬರಿ 3 ಗಂಟೆ 38 ನಿಮಿಷಗಳ ಸುದೀರ್ಘ ಕಾಲಾವಧಿಯ ಸಿನಿಮಾ ಇದಾಗಿತ್ತು.
ರಾಮಾಯಣ ಉತ್ತರಕಾಂಡವನ್ನು ಆಧರಿಸಿ ಮಾಡಿದ್ದ ಸಿನಿಮಾ ಇದು. ರಾವಣ ಸಂಹಾರದ ನಂತರ ಶ್ರೀರಾಮಚಂದ್ರನ ಪಟ್ಟಾಭಿಷೇಕ ನಡೆಯುತ್ತದೆ. ಆ ಬಳಿಕ ಅಗಸ ಮಾತಿನಿಂದ ಬೇಸತ್ತು ಪತ್ನಿ ಸೀತೆಯನ್ನು ಶ್ರೀರಾಮ ಕಾಡಿಗೆ ಕಳುಹಿಸುವ ಕಥೆ ಚಿತ್ರದಲ್ಲಿತ್ತು. ಅವರ ಮಕ್ಕಳಾದ ಲವ-ಕುಶರ ಪಾತ್ರಗಳೇ ಹೈಲೆಟ್ ಆಗಿತ್ತು. ಬಹಳ ತಡವಾಗಿ ಕನ್ನಡದಲ್ಲಿ ಸಿನಿಮಾ ನಿರ್ಮಾಣದ ಪ್ರಯತ್ನ ನಡೆದಿತ್ತು. ಅಷ್ಟರಲ್ಲಾಗಲೇ ಅಣ್ಣಾವ್ರು ಸಾಮಾಜಿಕ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದರು. ಆದರೂ ಬಹಳ ಇಷ್ಟಪಟ್ಟು ಮತ್ತೆ ಪೌರಾಣಿಕ ಚಿತ್ರಕ್ಕೆ ಒಪ್ಪಿದ್ದರ. ಇವತ್ತಿಗೂ ಈ ಸಿನಿಮಾ ಬರಲಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿದೆ.


Click it and Unblock the Notifications











