ರಾಜ್ಕುಮಾರ್ ಎಂದು ಮರುನಾಮಕರಣ ಮಾಡಿದ್ದಾಗ ಅಣ್ಣಾವ್ರಿಗೆ ಗಾಬರಿ, ನಾಚಿಕೆ ಆಗಿದ್ದೇಕೆ? ಅವ್ರ ಮಾತಲ್ಲೇ ಕೇಳಿ
ನಟಸಾರ್ವಭೌಮ ಡಾ. ರಾಜ್ಕುಮಾರ್ ಅಸಂಖ್ಯಾತ ಅಭಿಮಾನಿಗಳ ಆರಾಧ್ಯದೈವ. ಕನ್ನಡ ಕಣ್ಮಣಿ. ಕನ್ನಡದ ಅಸ್ಮಿತೆ. ನಾಡಿನ ಸಾಂಸ್ಕೃತಿಕ ರಾಯಭಾರಿ. ಕನ್ನಡಿಗರು ಡಾ. ರಾಜ್ ಅವರನ್ನು ಮರೆಯೋಕೆ ಸಾಧ್ಯವಿಲ್ಲ. 3ನೇ ತರಗತಿ ಓದಿದ್ದ ಮುತ್ತುರಾಜ್ ಮುಂದೆ ಕರ್ನಾಟಕದ ಶಕ್ತಿಯಾಗಿ ಬೆಳೆದಿದ್ದು ಗೊತ್ತೇಯಿದೆ.
ಅಣ್ಣಾವ್ರಿಗೆ ಮನೆಯಲ್ಲಿ ಇಟ್ಟು ಹೆಸರು ಮುತ್ತುರಾಜ್. ಚಿತ್ರರಂಗಕ್ಕೆ ಬಂದ ಬಳಿಕ ರಾಜ್ಕುಮಾರ್ ಎಂದು ಬದಲಿಸಿಕೊಂಡಿದ್ದರು. ನಿಮಗೆ ಗೊತ್ತಾ ಖುದ್ದು ಅವರೊಟ್ಟಿಗ ಚರ್ಚಿಸದೇ 'ಬೇಡರ ಕಣ್ಣಪ್ಪ' ಚಿತ್ರ ನಿರ್ಮಾಪಕರು ಈ ನಿರ್ಧಾರಕ್ಕೆ ಬಂದಿದ್ದರು. ಆದರೆ ವಿಷಯ ಗೊತ್ತಾಗಿ ಅಣ್ಣಾವ್ರು ಗಾಬರಿಗೊಂಡಿದ್ದರು. ಇದು ಅಂತೆ ಕಂತೆ ವಿಷಯ ಅಲ್ಲವೇ ಅಲ್ಲ. 1977ರಲ್ಲಿ ಧಾರವಾಡ ಆಲ್ ಇಂಡಿಯಾ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ರಾಜ್ಕುಮಾರ್ ಈ ಬಗ್ಗೆ ಮಾತನಾಡಿದ್ದರು.

"ಬೇಡರ ಕಣ್ಣಪ್ಪ ಸಿನಿಮಾ ಮಾಡುವಾಗಲೇ ನನ್ನ ಹೆಸರು ಬದಲಿಸಿದ್ದು. ಒಂದು ತಿಂಗಳ ಕಾಲ ಸಿನಿಮಾ ಚಿತ್ರೀಕರಣ ನಡೆದಿತ್ತು. ಇದ್ದಕ್ಕಿದಂತೆ ಪೇಪರ್ನಲ್ಲಿ ನಾನು ರಾಜಕುಮಾರನ ಹೆಸರನ್ನು ನೋಡಿದ್ದೆ. ತಕ್ಷಣ ನನಗೆ ಗಾಬರಿ ಆಗಿತ್ತು. ಅರೇ, ನನ್ನ ಹೆಸರು ಮುತ್ತುರಾಜ್. ನನಗೆ ಬೇಡರ ಕಣ್ಣಪ್ಪ ಪಾತ್ರ ಕೊಟ್ಟಿದ್ದಾರೆ. ಒಳಗೊಳಗೆ ರಾಜಕುಮಾರ ಅಂತ ಯಾರೋ ಬೇರೆಯವರನ್ನು ಸೇರಿಕೊಂಡುಬಿಟ್ಟಿದ್ದಾರೆ ಅನ್ಸುತ್ತಲ್ಲ, ಎಲ್ಲೋ ನನ್ನ ನಟನೆ ಚೆನ್ನಾಗಿಲ್ಲ ಅಂತ ಕೈ ಕೊಟ್ರಲ್ಲಪ್ಪ ಎಂದು ನನಗೆ ಗಾಬರಿ ಆಗಿತ್ತು" ಎಂದು ಅಣ್ಣಾವ್ರು ನಕ್ಕಿದ್ದರು.
ಹೆಚ್. ಎಲ್. ಎನ್ ಸಿಂಹ 'ಬೇಡರ ಕಣ್ಣಪ್ಪ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಹೀಗೆ ಪೇಪರ್ನಲ್ಲಿ ಚಿತ್ರಕ್ಕೆ ರಾಜ್ಕುಮಾರ್ ನಾಯಕ ಎಂದು ಬಂದಿರುವ ಬಗ್ಗೆ ಹೋಗಿ ನಿರ್ದೇಶಕರನ್ನೇ ಅಣ್ಣಾವ್ರು ಹೇಳಿದ್ದರಂತೆ. "ಏನ್ ಸ್ವಾಮಿ ಇದು ರಾಜ್ಕುಮಾರ್ ಅಂತ ಇದೆ, ಯಾರು ರಾಜ್ಕುಮಾರ್? ಯಾಕೆ ಹೀಗೆ ಮಾಡಿದ್ದೀರಾ? ನನಗೆ ಅರ್ಥವಾಗಲಿಲ್ಲ ಎಂದು ಕೇಳಿದ್ದೆ. ಅದಕ್ಕವರು ಇಲ್ಲಯ್ಯಾ, ಏನೋ ದೇವರ ಪ್ರೇರಣೆಯಾಯಿತು. ಮುತ್ತುರಾಜ್ ಎನ್ನುವ ಹೆಸರು ತೆಗೆದು ರಾಜ್ಕುಮಾರ್ ಎಂದು ನಿನಗೆ ಹೆಸರಿಟ್ಟಿದ್ದೀನಪ್ಪಾ. ನಾವೇ ಆ ಹೆಸರು ಆಯ್ಕೆ ಮಾಡಿದ್ದು" ಎಂದರು.
"ಸಿಂಹ ಅವ್ರ ಮಾತು ಕೇಳಿ ನನಗೆ ಕೊಂಚ ನಾಚಿಕೆ ಸಹ ಆಗಿತ್ತು. ಕಥಾನಾಯಕನಾಗಿ ಮಾಡುತ್ತಿರುವ ಮೊದಲನೇ ಚಿತ್ರ. ನಾಳೆ ಒಳ್ಳೆ ಹೆಸರು ಬಂದ್ರೆ, ರಾಜ್ಕುಮಾರ್ ಎಂದು ಹೆಸರಿಟ್ಟಿದ್ದಕ್ಕೂ ಸಾರ್ಥಕ. ಬರದೇ ಹೋದರೆ ಓಹೋ, ಈ ಸೌಭಾಗ್ಯಕ್ಕೆ ಇನ್ನು ರಾಜ್ಕುಮಾರ ಎಂದು ಹೆಸರಿಟ್ಟುಕೊಳ್ಳೋಕೆ ಹೋದ್ನೋ, ಎನ್ನುವ ಅಭಿಪ್ರಾಯ ಬರಬಹುದು. ದಯವಿಟ್ಟು ಬೇಡ ಸ್ವಾಮಿ. ನಮ್ಮ ಅಪ್ಪಾಜಿಗೆ ಆಂಜನೇಯಸ್ವಾಮಿ ಎಂದರೆ ಅಪಾರ ಪ್ರೀತಿ. ತುಂಬಾ ಭಕ್ತಿ. ಅದಕ್ಕೆ ಆ ಹೆಸರು ಇಟ್ಟಿದ್ದಾರೆ. ಹಾಗಾಗಿ ಹೆಸರು ಬದಲಿಸುವುದು ಬೇಡ ಎಂದೆ. ಆದರೆ ಇಲ್ಲಯ್ಯಾ ಚೆನ್ನಾಗಿರುತ್ತದೆ ಎಂದರು. ದೊಡ್ಡವರೆಲ್ಲಾ ಸೇರಿ ಬಲವಂತ ಮಾಡಿ ಇಟ್ಟಾಗ ಎದುರು ಮಾತನಾಡುವುದು ಬೇಡ ಎಂದು ಒಪ್ಪಿಕೊಂಡೆ. ಆ ಹೆಸರು 24 ವರ್ಷಗಳ ಕಾಲ ಶಾಶ್ವತವಾಗಿ ನಡೆದುಕೊಂಡು ಬಂದಿದೆ" ಎಂದು ಅಣ್ಣಾವ್ರು ಹೇಳಿಕೊಂಡಿದ್ದರು.
ಇದೇ ಸಂದರ್ಶನದಲ್ಲಿ ಮುತ್ತತ್ತಿರಾಯ ಸ್ವಾಮಿ ಬಗ್ಗೆ ತಂದೆ ಹೇಳುತ್ತಿದ್ದ ದಂತಕಥೆಯನ್ನು ಕೂಡ ಡಾ. ರಾಜ್ಕುಮಾರ್ ನೆನೆಪಿಸಿಕೊಂಡಿದ್ದರು. ಕಾವೇರಿ ನದಿ ದಂಡೆಯಲ್ಲಿ ಕಾನಕಾನಹಳ್ಳಿ ಬಳಿ ಮುತ್ತತ್ತಿರಾಯ ಸ್ವಾಮಿ ದೇವಸ್ಥಾನ ಇದೆ. "ರಾಮಾಯಣ ಕಾಲದಲ್ಲಿ ಸೀತಾದೇವಿ ಅಲ್ಲಿ ಸ್ಥಾನ ಮಾಡುತ್ತಿದ್ದರಂತೆ. ಆಕೆಯ ಮೂಗುತಿ ನೀರಿನಲ್ಲಿ ಬಿದ್ದು ಹೋಗಿತ್ತಂತೆ. ಮೂಗುತಿ ಕಳೆದುಕೊಂಡ ಬಗ್ಗೆ ಬಹಳ ಅವರಿಗೆ ಬಹಳ ಯೋಚನೆ ಬಂತಂತೆ. ಅಳಲು ಶುರುಮಾಡಿದ್ದರಂತೆ. ಆಗ ಪಕ್ಕದಲ್ಲೇ ಇದ್ದ ಆಂಜನೇಯ ಬಂದು ಏನಾಯಿತು ಎಂದು ಕೇಳಿದ್ದನಂತೆ. ಅಯ್ಯೋ ಅಷ್ಟೇನಾ ಎಂದು ಬಾಲವನ್ನು ಬೆಳೆಸಿ ನೀರಿನಲ್ಲಿ ಕಲಕಿ ಎಲ್ಲಾವನ್ನು ಮೇಲೆ ಎತ್ತಾಕಿ ಮೂಗುತಿ ಹುಡುಕಿ ತಂದು ಇದೇನಾ ನೋಡಿ ತೋರಿಸಿದ್ದನಂತೆ. ಈ ಕಥೆಯನ್ನು ನಮ್ಮ ಅಪ್ಪಾಜಿ ಹೇಳುತ್ತಿದ್ರು. ಆಗ ಆಂಜನೇಯನಿಗೆ ಸೀತೆ ಆಶೀರ್ವದಿಸಿದ್ದರಂತೆ. ನನ್ನ ಅಭೀಷ್ಟ ನೆರವೇರಿಸುವುದು ದೊಡ್ಡದ್ದಲ್ಲಪ್ಪ, ಇಲ್ಲಿಗೆ ಬರುವ ಭಕ್ತರ ಅಭೀಷ್ಟ ನೆರವೇರಿಸಬೇಕು. ನನ್ನ ಮುಗೂತಿ ಮತ್ತು ಹುಡುಕಿಕೊಟ್ಟಿದ್ದಕ್ಕೆ ಮುತ್ತತ್ತಿರಾಯ ಎಂದು ಇಲ್ಲಿ ನೆಲೆಸಬೇಕು ಎಂದು ಸೀತಾದೇವಿ ಹರಸಿದ್ದರಂತೆ"
ಹೀಗೆ ಅಣ್ಣಾವ್ರು ತಮಗೆ ತಂದೆ ಯಾಕೆ ಮುತ್ತುರಾಜ್ ಎಂದು ನಾಮಕರಣ ಮಾಡಿದ್ದರು. ಬಹಳ ರಸವತ್ತಾಗಿ ತಂದೆ ಹೇಳುತ್ತಿದ್ದ ಕಥೆ ಏನು? ಎನ್ನುವುದನ್ನು ಅಮರಧ್ವನಿ ರೇಡಿಯೋ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅವರಿಗೆ ಆಪ್ತರಾಗಿದ್ದ ಎನ್. ಎಸ್ ವಾಮನ ಅವರು ಈ ಸಂದರ್ಶನ ನಡೆಸಿದ್ದರು. AKASHVANI MADIKERI ಯೂಟ್ಯೂಬ್ ಚಾನಲ್ನಲ್ಲಿ ಅದನ್ನು ನೀವು ಕೇಳಬಹುದು.


Click it and Unblock the Notifications











