ಅಣ್ಣಾವ್ರ ಜೊತೆ ರಜನಿಕಾಂತ್ ಮಾಡಬೇಕಿದ್ದ ಪಾತ್ರ ತೂಗುದೀಪ ಶ್ರೀನಿವಾಸ್ ಪಾಲಾಗಿತ್ತು; ರಾಮ್ಕುಮಾರ್
ಸೂಪರ್ ಸ್ಟಾರ್ ರಜನಿಕಾಂತ್ ಸಿನಿ ಬದುಕಿಗೆ 50 ವರ್ಷ. ಬೆಂಗಳೂರಿನಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕ್ವಾಡ್ ಮುಂದೆ ತಮಿಳು ಚಿತ್ರರಂಗದಲ್ಲಿ ಸ್ಟಾರ್ ಪಟ್ಟಕ್ಕೇರಿದ್ದರು. ವಯಸ್ಸು 70 ದಾಟಿದ್ರು ಇವತ್ತಿಗೂ ತಲೈವಾ ಹವಾ ಕಮ್ಮಿ ಆಗಿಲ್ಲ. ಈ ವಾರ ಬಿಡುಗಡೆ ಆಗುತ್ತಿರುವ 'ಕೂಲಿ' ಸಿನಿಮಾ ಟಿಕೆಟ್ ದರ ಬೆಂಗಳೂರಿನಲ್ಲಿ 2000 ರೂ. ತಲುಪಿದೆ. ಅವ್ರ ಕ್ರೇಜ್ ಎಂಥಾದ್ದು ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ.
ಬಡಕುಟುಂಬದಲ್ಲಿ ಹುಟ್ಟಿ ಬೆಳೆದ ರಜನಿಕಾಂತ್ ಈ ಮಟ್ಟಕ್ಕೆ ಸಾಧನೆ ಮಾಡುತ್ತಾರೆ ಎಂದು ಯಾರಿಗೂ ಗೊತ್ತಿರಲಿಲ್ಲ. ಕಪ್ಪು ಮೈಬಣ್ಣ, ಸಣಕಲು ದೇಹ, ಚಿತ್ರರಂಗದ ಹಿನ್ನೆಲೆ ಇಲ್ಲ. ಹಾಗಾಗಿ ಖುದ್ದು ರಜನಿಕಾಂತ್ ಅವರಿಗೂ ತಮ್ಮ ಭವಿಷ್ಯ ಏನಾಗುತ್ತದೆ ಎನ್ನುವ ಅಂದಾಜು ಇರಲಿಲ್ಲ. ಚಿತ್ರರಂಗದಲ್ಲಿ ಲೈಟ್ಮ್ಯಾನ್ ಆಗಿ ಕೆಲಸ ಮಾಡಿದ್ರೆ ಸಾಕು ಎಂದು ಅಂದುಕೊಂಡಿದ್ದವರು ಶಿವಾಜಿ. ಕಠಿಣ ಪರಿಶ್ರಮ ಹಾಗೂ ಅದೃಷ್ಟ ಕೈ ಹಿಡಿದು ಸಣ್ಣಪುಟ್ಟ ಪಾತ್ರಗಳ ಮೂಲಕ ಮುಂದೆ ಹೀರೊ ಆಗಿಬಿಟ್ಟರು.

ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದಾಗ ನಾಟಕಗಳಲ್ಲಿ ರಜನಿಕಾಂತ್ ಬಣ್ಣ ಹಚ್ಚುತ್ತಿದ್ದರು. ದುರ್ಯೋಧನ ಪಾತ್ರವನ್ನು ಬಹಳ ಚೆನ್ನಾಗಿ ಮಾಡುತ್ತಿದ್ದರು. ಇದನ್ನು ನೋಡಿ ಸ್ನೇಹಿತ ರಾಜ್ ಬಹದ್ದೂರ್ ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್ಗೆ ಹೋಗಿ ಕಲಿಯಲು ಹೇಳಿದ್ದರು. ಸಹಾಯ ಮಾಡಿದ್ದರು. ರಜನಿಕಾಂತ್ ಇಷ್ಟಪಟ್ಟಿದ್ದ ಹುಡುಗಿ ನಿರ್ಮಲಾ ಕೂಡ ಇದನ್ನೇ ಹೇಳಿ ಸಹಾಯ ಮಾಡಿದ್ದರು. ಹಾಗಾಗಿ ಅವರು ಚೆನ್ನೈನಲ್ಲಿ 2 ವರ್ಷಗಳ ಕಾಲ ಅಭಿನಯದ ಪಟ್ಟುಗಳನ್ನು ಕಲಿತರು. ಬಳಿಕ ಕೆ. ಬಾಲಚಂದರ್ ಕಣ್ಣಿಗೆ ಬಿದ್ದು 'ಅಪೂರ್ವ ರಾಗಂಗಳ್' ಚಿತ್ರದ ಅವಕಾಶ ಪಡೆದಿದ್ದರು. ಬಳಿಕ ಹಿಂತಿರುಗಿ ನೋಡಲಿಲ್ಲ. ಖಳನಾಯಕನಾಗಿ ಆರಂಭದಲ್ಲಿ ನಟಿಸಿದ ರಜನಿಕಾಂತ್ ಮುಂದೆ ಹೀರೊ ಆಗುವ ಅವಕಾಶ ಪಡೆದಿದ್ದರು. ಬಳಿಕ ಪ್ರೇಕ್ಷಕರ ಮನಗೆದ್ದು ಸೂಪರ್ ಸ್ಟಾರ್ ಪಟ್ಟ ಅಲಂಕರಿಸಿದರು.
ಚಿಕ್ಕಂದಿನಿಂದ ಡಾ. ರಾಜ್ಕುಮಾರ್ ಅಭಿಮಾನಿ ರಜನಿಕಾಂತ್. ಈ ಬಗ್ಗೆ ಕೆಲ ಸಂದರ್ಭಗಳಲ್ಲಿ ಖುದ್ದು ಮಾತನಾಡಿದ್ದಾರೆ. ಶಾಲಾ ದಿನಗಳಲ್ಲೇ ಒಮ್ಮೆ ಅಣ್ಣಾವ್ರನ್ನು ನೋಡುವ ಅವಕಾಶ ಶಿವಾಜಿಗೆ ಸಿಕ್ಕಿತ್ತು. ಇನ್ನು 'ಗಿರಿಕನ್ಯೆ' ಚಿತ್ರದಲ್ಲಿ ನಟಿಸುವ ಅವಕಾಶ ಕೂಡ ಹುಡುಕಿ ಬಂದಿತ್ತು. ಕೊನೆ ಕ್ಷಣದಲ್ಲಿ ಅದು ತೂಗುದೀಪ ಶ್ರೀನಿವಾಸ್ ಪಾಲಾಗಿತ್ತು ಎಂದು ಹಾಲುಜೇನು ರಾಮ್ಕುಮಾರ್ ನೆನಪು ಮಾಡಿಕೊಂಡಿದ್ದಾರೆ. ಅಣ್ಣಾವ್ರ ಅಭಿಮಾನಿಯಾಗಿರುವ ರಾಮ್ಕುಮಾರ್ ಸಿನಿಮಾ ಪತ್ರಕರ್ತರಾಗಿಯೂ ಗುರ್ತಿಸಿಕೊಂಡಿದ್ದರು. ಮಾರ್ಕೆಟ್ನಿಂದ ಶ್ರೀನಗರದ ನಡುವೆ ಓಡಾಡುತ್ತಿದ್ದ 10A ಸಂಖ್ಯೆಯ ಬಸ್ನಲ್ಲಿ ರಜನಿಕಾಂತ್ ಕಂಡೆಕ್ಟರ್ ಆಗಿದ್ದರು. ಆಗ ಹನುಮಂತನಗರದಲ್ಲೇ ವಾಸವಿದ್ದ ರಾಮ್ಕುಮಾರ್ ಅವರು ಕೂಡ ಆ ಬಸ್ನಲ್ಲಿ ಓಡಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ರಜನಿಕಾಂತ್ ನಟಿಸಿದ 'ಅಪೂರ್ವ ರಾಗಗಂಳ್' ಸಿನಿಮಾ 50 ವರ್ಷ ಪೂರೈಸುತ್ತಿದೆ. ಅಂದರೆ ಅವರು ಚಿತ್ರರಂಗದಲ್ಲಿ ಬಣ್ಣ ಹಚ್ಚಿ 5 ದಶಕಗಳು ಕಳೆಯುತ್ತಿದೆ. ಆರಂಭದ ದಿನಗಳಲ್ಲಿ ಕನ್ನಡ ಸಿನಿಮಾಗಳಲ್ಲಿ ನಟಿಸುವ ಪ್ರಯತ್ನ ಮಾಡಿದ್ದರು ರಜನಿಕಾಂತ್. ಬೆರಳೆಣಿಯಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿತ್ತು. ಆದರೆ ತಮಿಳು ಚಿತ್ರರಂಗದಲ್ಲೇ ಖಾಯಂ ಆಗಿ ಉಳಿದುಕೊಂಡರು. 'ಗಿರಿಕನ್ಯೆ' ಚಿತ್ರದ ಪಾತ್ರವೊಂದಕ್ಕೆ ರಜನಿಕಾಂತ್ ಆಯ್ಕೆ ಆಗಿದ್ದರಂತೆ. ಆದರೆ ಬಳಿಕ ಆ ಅವಕಾಶ ತೂಗುದೀಪ ಶ್ರೀನಿವಾಸ್ ಪಾಲಾಗಿತ್ತು ಎನ್ನುತ್ತಾರೆ ರಾಮ್ಕುಮಾರ್.
ರಾಘವೇಂದ್ರ ಸ್ವಾಮಿಯ ಭಕ್ತರಾಗಿರುವ ರಜನಿಕಾಂತ್ ತಮ್ಮ ಯಶಸ್ಸಿಗೆ ರಾಯರ ಆಶೀರ್ವಾದವೇ ಕಾರಣ ಎನ್ನುತ್ತಾರೆ. ಚಾಮರಾಜಪೇಟೆಯ ರಾಯರ ಮಠಕ್ಕೆ ಚಿಕ್ಕಂದಿನಲ್ಲೇ ಭೇಟಿ ನೀಡುತ್ತಿದ್ದರು. ಇತ್ತೀಚೆಗೆ ಒಮ್ಮೆ ಅವರು ಅಲ್ಲಿಗೆ ಬಂದು ಹೋಗಿದ್ದು ಬಹಳ ಸುದ್ದಿ ಆಗಿತ್ತು. ಅಷ್ಟೇ ಅಲ್ಲ ಜಯನಗರದ ಬಸ್ ಡಿಪೋಗೆ ದಿಢೀರ್ ಭೇಟಿ ನೀಡಿ ತಲೈವಾ ಅಲ್ಲಿನ ಸಿಬ್ಬಂದಿಗೆ ಅಚ್ಚರಿ ಮೂಡಿಸಿದ್ದರು. ಇನ್ನು ರಜನಿಕಾಂತ್ ಜೀವನದಲ್ಲಿ ಡಾ. ರಾಜ್ಕುಮಾರ್ ಬಳಿ ಮಾತ್ರ ಆಟೋಗ್ರಾಫ್ ಪಡೆದುಕೊಂಡಿದ್ದರು. ಆ ಬಳಿಕ ಮತ್ಯಾರ ಬಳಿ ಕೂಡ ಆಟೋಗ್ರಾಫ್ ಪಡೆದಿಲ್ಲ ಎಂದು ಹೇಳಿಕೊಂಡಿರುವುದು ಗೊತ್ತೇಯಿದೆ.

ಚಿಕ್ಕಂದಿನಲ್ಲೇ ಒಮ್ಮೆ ಅಣ್ಣಾವ್ರನ್ನು ಭೇಟಿ ಮಾಡುವ ಅವಕಾಶ ಶಿವಾಜಿ ಸಿಕ್ಕಿತ್ತು ಎಂದು ರಾಮ್ಕುಮಾರ್ ಹೇಳುತ್ತಾರೆ. "ಬಸವನಗುಡಿಯಲ್ಲಿ ಅಣ್ಣಾವ್ರ ನಟನೆಯ ಯಾವುದೋ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆಗ ರಜನಿಕಾಂತ್ ಅಲ್ಲೇ ಶಾಲೆಯಲ್ಲಿ ಓದುತ್ತಿದ್ದರು. ಹೀಗೆ ಅಣ್ಣಾವ್ರು ಶಾಲಾ ಮಕ್ಕಳನ್ನು ನೋಡಿ ಮಾತನಾಡಿಸುತ್ತಾ ರಜನಿಕಾಂತ್ಗೆ ಶೇಕ್ಹ್ಯಾಂಡ್ ಕೊಟ್ಟಿದ್ದಾರೆ. ಬಳಿಕ 3 ದಿನ ಆ ಕೈ ಯಾರು ಮಟ್ಟಬಾರದು ಎಂದು ರಜನಿಕಾಂತ್ ಹೇಳುತ್ತಿದ್ದರಂತೆ. ಅದು ಅಣ್ಣಾವ್ರು ಮಟ್ಟಿದ ಕೈ ಎನ್ನುತ್ತಿದ್ದರಂತೆ. 3 ದಿನ ಸ್ನಾನ ಕೂಡ ಮಾಡಲಿಲ್ಲವಂತೆ. ಅಷ್ಟು ಅಭಿಮಾನ ಅಣ್ಣಾವ್ರು ಅಂದ್ರೆ" ಎಂದು ರಾಮ್ಕುಮಾರ್ ವಿವರಿಸಿದ್ದಾರೆ.
ಬಳಿಕ ರಜನಿಕಾಂತ್ ಬಸ್ ಕಂಡೆಕ್ಟರ್ ಆಗಿದ್ದಾಗ ತಾವೇ ಹತ್ತಿರದಿಂದ ನೋಡಿರುವುದಾಗಿ ರಾಮ್ಕುಮಾರ್ ಮೆಲುಕು ಹಾಕಿದ್ದಾರೆ. "ನಾವು ಹನುಮಂತನಗರದಲ್ಲಿ ಇದ್ದೆವು. ಆಗ ರೂಟ್ ನಂಬರ್ 11 ಬಸ್ನಲ್ಲಿ ರಜನಿಕಾಂತ್ ಕಂಡೆಕ್ಟರ್. ನಾವು ಅದೇ ಬಸ್ನಲ್ಲಿ ಓಡಾಡುತ್ತಿದ್ದೆವು. ಆಗ ಅವ್ರು ಹೀರೊ ಆಗುತ್ತಾರೆ ಎಂದು ನಮಗೇನು ಗೊತ್ತಿತ್ತು. ಬಸ್ನಲ್ಲಿ ಎಲ್ಲರಿಗೂ ಟಿಕೆಟ್ ಕೊಟ್ಟ ಮೇಲೆ ರೈಟ್ ರೈಟ್ ಎಂದುಬಿಡುತ್ತಿದ್ದರು. ಬಳಿಕ ಮುಂದೆ ಹೋಗುತ್ತಿದ್ದ ಬಸ್ಗೆ ಹಿಂದಿನಿಂದ ಸ್ಟೈಲ್ ಆಗಿ ಬಂದು ಹತ್ತಿಕೊಳ್ಳುತ್ತಿದ್ದರು. ಟಿಕೆಟ್ ಹರಿಯುವಾಗ, ಚಿಲ್ಲರೆ ವಾಪಸ್ ಕೊಡುವಾಗ ಸ್ಟೈಲ್ ಮಾಡುತ್ತಿದ್ದರು. ನಾನು ಬಸ್ನಲ್ಲಿ ಓಡಾಡುವಾಗ ಅದನ್ನೆಲ್ಲಾ ನೋಡಿದ್ದೇನೆ" ಎಂದಿದ್ದಾರೆ.
ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್ನಲ್ಲಿ ಕಲಿಯುತ್ತಿದ್ದಾಗಲೇ ರಜನಿಕಾಂತ್ ಕನ್ನಡ ಸಿನಿಮಾಗಳಲ್ಲಿ ಅವಕಾಶಗಳ ಹುಡುಕಾಟ ಆರಂಭಿಸಿದ್ದರು. ಅದೇ ಸಮಯದಲ್ಲಿ 'ಗಿರಿಕನ್ಯೆ' ಚಿತ್ರದ ಪಾತ್ರವೊಂದಕ್ಕೆ ಆಯ್ಕೆ ಆಗಿದ್ದರು. "ಗಿರಿಕನ್ಯೆ ಚಿತ್ರದಲ್ಲಿ ರಜನಿಕಾಂತ್ಗೆ ನಟಿಸೋ ಅವಕಾಶ ಸಿಕ್ಕಿತ್ತು. ಬಹಳಷ್ಟು ಜನ ರಜನಿಕಾಂತ್ ಮಾಡಬೇಕಿದ್ದ ಪಾತ್ರ ವಜ್ರಮುನಿ ಮಾಡಿದ್ರು ಅಂದುಕೊಂಡಿದ್ದಾರೆ. ಆದರೆ ತೂಗುದೀಪ ಶ್ರೀನಿವಾಸ್ ಮಾಡಿದ್ದ ಜೋಮನ ಪಾತ್ರ ಅದು. ಪಾರ್ವತಮ್ಮ ಆ ಸಿನಿಮಾ ನಿರ್ಮಿಸಬೇಕಿತ್ತು. ಕಾರಣಾಂತರಗಳಿಂದ ದ್ವಾರಕಾನಾಥ್ ನಿರ್ಮಾಣ ಮಾಡುವಂತಾಯಿತು. ಆಗ ರಜನಿಕಾಂತ್ ಮಾಡಬೇಕಿದ್ದ ಪಾತ್ರ ತೂಗುದೀಪ ಶ್ರೀನಿವಾಸ್ ಪಾಲಾಗಿತ್ತು" ಎಂದಿದ್ದಾರೆ.
"ರಜನಿಕಾಂತ್ ಚಿತ್ರಕ್ಕೆ ಆಯ್ಕೆ ಆಗಿ ಬಳಿಕ ತೂಗುದೀಪ ಶ್ರೀನಿವಾಸ್ ನಟಿಸುವಂತಾಗಿದ್ದ ವಿಷಯ ಗೊತ್ತಾಗಿ ಅಣ್ಣಾವ್ರಿಗೆ ಬೇಸರವಾಗಿತ್ತು. 'ಪ್ರೇಮದ ಕಾಣಿಕೆ' ಚಿತ್ರದ ಸನ್ನಿವೇಶವೊಂದರಲ್ಲಿ ರಜನಿಕಾಂತ್ ಫೋಟೊವನ್ನು ಬಳಸಿಕೊಳ್ಳಲಾಗಿದೆ. ಆಗ ಅವಕಾಶಗಳ ಹುಡುಕಾಟದಲ್ಲಿದ್ದ ರಜನಿಕಾಂತ್ ಸಿನಿಮಾ ನಿರ್ದೇಶಕರಿಗೆ ಫೋಟೊಗಳನ್ನು ಕೊಡುತ್ತಿದ್ದರು. ಹೀಗೆ ನಿರ್ದೇಶಕ ಸೋಮಶೇಖರ್ ಅವರಿಗೂ ಕೊಟ್ಟಿದ್ದರು. ಅದೇ ಫೋಟೊವನ್ನು ಆ ಚಿತ್ರದಲ್ಲಿ ತೂಗುದೀಪ ಶ್ರೀನಿವಾಸ್ ಅವರು ಆರತಿ ಅವರಿಗೆ ಒಂದಷ್ಟು ತೋರಿಸುವ ಸನ್ನಿವೇಶದಲ್ಲಿ ನೋಡಬಹುದು" ಎಂದು ರಾಮ್ಕುಮಾರ್ ವಿವರಿಸಿದ್ದಾರೆ.
ಒಮ್ಮೆ ಅಣ್ಣಾವ್ರನ್ನು ಭೇಟಿ ಮಾಡಲು ರಜನಿಕಾಂತ್ ಮಾರುವೇಷದಲ್ಲಿ ಮನೆಗೆ ಬಂದಿದ್ದರಂತೆ. ಆರಂಭದಲ್ಲಿ ಅವ್ರು ಯಾರು ಎಂದು ಮನೆಯವರಿಗೆ ಗೊತ್ತಾಗಿರಲಿಲ್ಲ, ಬಳಿಕ ರಜನಿಕಾಂತ್ ಎಂದು ಗೊತ್ತಾಗಿ ಅಚ್ಚರಿಗೊಂಡಿದ್ದರಂತೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಕಥಾ ಸಂಗಮ' ಚಿತ್ರದಲ್ಲಿ ಕೂಡ ನಟಿಸಿದ್ದರು. ಪುಟ್ಟಣ್ಣ ಮನಸ್ಸು ಮಾಡಿದ್ದರೆ ರಜನಿಕಾಂತ್ಗೆ ಮತ್ತಷ್ಟು ಅವಕಾಶಗಳನ್ನು ಕೊಡಬಹುದಿತ್ತು. ಕನ್ನಡದಲ್ಲೇ ಅವರು ಉಳಿದುಕೊಳ್ಳುತ್ತಿದ್ದರೋ ಏನೋ ಗೊತ್ತಿಲ್ಲ ಎಂದು ರಾಮ್ಕುಮಾರ್ ಹೇಳಿದ್ದಾರೆ.


Click it and Unblock the Notifications











