7 Years For Baahubali 2: ಬಲ್ಲಾಳದೇವ, ಶಿವಗಾಮಿ, ಕಟ್ಟಪ್ಪ ಆಗಿ ಯಾರ್ಯಾರು ನಟಿಸಬೇಕಿತ್ತು ಗೊತ್ತಾ?
ರಾಜಮೌಳಿ ನಿರ್ದೇಶನದ 'ಬಾಹುಬಲಿ' ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಇದೇ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಶುರುವಾಗಿದ್ದು. ಎರಡು ಭಾಗಗಳಾಗಿ 'ಬಾಹುಬಲಿ' ಸಿನಿಮಾ ತೆರೆಗಪ್ಪಳಿಸಿ ಧೂಳೆಬ್ಬಿಸಿಯತ್ತು. ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ, ಸತ್ಯರಾಜ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು.
ತೆಲುಗು ಮಾತ್ರವಲ್ಲದೇ ಹಿಂದಿ, ಕನ್ನಡ, ತಮಿಳು, ಮಲಯಾಳಂ ಭಾಷೆಗಳಿಗೂ ಸಿನಿಮಾ ಡಬ್ ಆಗಿ ಏಕಕಾಲಕ್ಕೆ ತೆರೆಗಪ್ಪಳಿಸಿತ್ತು. ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ಯಾಕೆ? ಎನ್ನುವ ಪ್ರಶ್ನೆಯೊಂದಿಗೆ ಸೀಕ್ವೆಲ್ ಬಂದು ಧೂಳೆಬ್ಬಿಸಿತ್ತು. ಬಹುಕೋಟಿ ವೆಚ್ಚದ ಈ ಎಪಿಕ್ ಫ್ಯಾಂಟಸಿ ಆಕ್ಷನ್ ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಿತ್ತು. ರಾಜಮೌಳಿ ನಿರ್ದೇಶನ, ಕಲಾವಿದರ ಅಭಿನಯ, ಎಂ. ಎಂ ಕೀರವಾಣಿ ಸಂಗೀತ ಹಾಗೂ ಗ್ರಾಫಿಕ್ಸ್ ಎಲ್ಲಾ ಸೇರಿ ಸಿನಿಮಾ ತೆರೆಮೇಲೆ ಮ್ಯಾಜಿಕ್ ಮಾಡಿತ್ತು.

'ಬಾಹುಬಲಿ-2' ಸಿನಿಮಾ ಬಿಡುಗಡೆಯಾಗಿ 7 ವರ್ಷಗಳಾಗಿದೆ. ಆ ದಿನ ಈ ಸಿನಿಮಾ ಮಾಡಿದ ಆರ್ಭಟ ಅಷ್ಟಿಷ್ಟಲ್ಲ. ಒಟ್ಟಾರೆ ಸಿನಿಮಾ 1000 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೀತು. ಪ್ರಭಾಸ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಗೆದ್ದರು. ಅಂದಹಾಗೆ ರಾಜಮೌಳಿ ಕಥೆ ಮಾಡಿಕೊಂಡಾದ ಮುಖ್ಯವಾದ ಪಾತ್ರಗಳಿಗೆ ಬೇರೆ ಬೇರೆ ಕಲಾವಿದರನ್ನು ಕೇಳಿದ್ದರು. ರಾಜಮಾತೆ ಶಿವಗಾಮಿ ಪಾತ್ರದಲ್ಲಿ ಶ್ರೀದೇವಿ ನಟಿಸಬೇಕಿತ್ತು. ಆಕೆ ಒಲ್ಲೆ ಎಂದ ಬಳಿಕ ರಮ್ಯಾಕೃಷ್ಣ ನಟಿಸಿ ಗೆದ್ದರು.
ಶ್ರೀದೇವಿಯವರನ್ನು ಕೈಬಿಟ್ಟು ರಮ್ಯಾಕೃಷ್ಣ ಅವರನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಏನು ಎನ್ನುವುದನ್ನು ಸಂದರ್ಶನವೊಂದರಲ್ಲಿ ರಾಜಮೌಳಿ ವಿವರಿಸಿದ್ದರು. ಶಿವಗಾಮಿ ಪಾತ್ರ ರಮ್ಯಾಕೃಷ್ಣ ಅವರಿಗಂತ್ಲೇ ಡಿಸೈನ್ ಮಾಡಿದ್ದು. ಆದರೆ ನಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎಂದು ಬಾಲಿವುಡ್ ನಟಿ ಇದ್ದರೆ ಹಿಂದಿ ಬೆಲ್ಟ್ನಲ್ಲಿ ಒಳ್ಳೆ ಬ್ಯುಸಿನೆಸ್ ಆಗುತ್ತದೆ ಎಂದುಕೊಂಡೆವು. ಹಾಗಾಗಿ ಆ ಪಾತ್ರಕ್ಕೆ ಶ್ರೀದೇವಿ ಅವರನ್ನು ಸಂಪರ್ಕಿಸಿದೆವು. ಆದರೆ ಆಕೆಯ ಷರತ್ತುಗಳನ್ನು ಕೇಳಿ ಶಾಕ್ ಆಗಿತ್ತು ಎಂದಿದ್ದಾರೆ.
ಅವತ್ತಿನ ಕಾಲಕ್ಕೆ ಶಿವಗಾಮಿ ಪಾತ್ರಕ್ಕಾಗಿ ಶ್ರೀದೇವಿ 7 ಕೋಟಿ ರೂ. ಸಂಭಾವನೆ ಕೇಳಿದರು. ನಾವು ಅದಕ್ಕೂ ಒಪ್ಪಿಕೊಂಡೆವು. ಆದರೆ ಅದು ಬಿಟ್ಟು ಆಕೆ ಮತ್ತಷ್ಟು ಷರತ್ತುಗಳನ್ನು ಹಾಕಿದರು. ಆಕೆ ಚಿತ್ರೀಕರಣಕ್ಕಾಗಿ ಹೈದರಾಬಾದ್ಗೆ ಬಂದಾಗ ಪ್ರತಿಷ್ಠಿತ ಹೋಟೆಲ್ನಲ್ಲೇ ಐದಾದು ಜನಕ್ಕೆ ರೂಮ್ಗಳನ್ನು ಬುಕ್ ಮಾಡಬೇಕು ಎಂದರು. ಆ ಬಗ್ಗೆ ಕೂಡ ಮಾತುಕತೆ ನಡೆಸಿ, ಹೇಗೋ ಒಪ್ಪಿಸೋಣ ಎಂದುಕೊಂಡೆವು.

ಶ್ರೀದೇವಿ ಕೊನೆಯದಾಗಿ ಹಿಂದಿ ವರ್ಷನ್ ಕಲೆಕ್ಷನ್ನಲ್ಲಿ 10%ರಷ್ಟು ಶೇರ್ ಕೇಳಿದರು. 7 ಕೋಟಿ ರೂ. ಸಂಭಾವನೆ ಕೊಟ್ಟು, ಆಕೆ ಕೇಳಿದ ಸವಲತ್ತುಗಳನ್ನು ಕೊಟ್ಟು ಮತ್ತೆ ಯಾಕೆ ಶೇರ್ ಕೊಡಬೇಕು ಎಂದು ಆಕೆಯನ್ನು ಕೈಬಿಟ್ಟೆವು. ಆದಕೆ ಒಪ್ಪಿಕೊಳ್ಳದೇ ಇದ್ದಿದೇ ಒಳ್ಳೆಯದಾಯಿತು ಎಂದು ಬಳಿಕ ನಮಗೆ ಅನ್ನಿಸಿತು ಎಂದು ರಾಜಮೌಳಿ ವಿವರಿಸಿದ್ದಾರೆ.
ರಾಜಮಾತೆ ಶಿವಗಾಮಿ ರೀತಿಯ ಪವರ್ಫುಲ್ ಪಾತ್ರದಲ್ಲಿ ರಮ್ಯಾಕೃಷ್ಣ ನಟಿಸಿ ಮೋಡಿ ಮಾಡಿದರು. ಆ ಪಾತ್ರವನ್ನು ಬೇರೆ ಯಾರೂ ಕೂಡ ತನ್ನಂತೆ ಮಾಡೋಕೆ ಸಾಧ್ಯವಿಲ್ಲ ಎಂದು ಸಾಬೀತು ಮಾಡಿ ತೋರಿಸಿದ್ದರು. ಕಟ್ಟಪ್ಪ ಪಾತ್ರದಲ್ಲಿ ತಮಿಳು ನಟ ಸತ್ಯರಾಜ್ ನಟಿಸಿ ಒಳ್ಳೆ ಅಂಕ ಗಿಟ್ಟಿಸಿದ್ದರು. ಆದರೆ ಆ ಪಾತ್ರವನ್ನು ಮೋಹನ್ ಲಾಲ್ ಅಥವಾ ಸಂಜಯ್ ದತ್ ಮಾಡಬೇಕು ಎಂದು ಚಿತ್ರತಂಡ ಅಂದುಕೊಂಡಿತ್ತಂತೆ.
ಬಲ್ಲಾಳದೇವ ಪಾತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸಿ ಅಬ್ಬರಿಸಿದ್ದರು. ಆದರೆ ನಿರ್ಮಾಪಕರು ಹಾಲಿವುಡ್ ನಟ ಜೇಸನ್ ಮೊಮೊವಾರನ್ನು ಆ ಪಾತ್ರಕ್ಕಾಗಿ ಕರೆತರಲು ಯೋಚಿಸಿದ್ದರಂತೆ. ಕೊನೆಗೆ ಆ ಅವಕಾಶ ನನ್ನ ಪಾಲಾಯಿತು ಎಂದು ರಾಣಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.


Click it and Unblock the Notifications











