'ಹಣ'ದಾಸೆಗೆ ಅಪರಿಚತ ವ್ಯಕ್ತಿಯ 'ಹೆಣ'ದ ಮುಂದೆ ಗೊಳೋ ಎಂದು ಕಣ್ಣೀರು ಹಾಕಿದ್ದರು ಈ ಸ್ಟಾರ್..!
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು. ಇದಕ್ಕೆ ಕೈಗನ್ನಡಿ ಎಂಬಂತೆ ಅನೇಕರು ಸಾಮಾಜಿಕ ಪ್ರಜ್ಞೆ.. ಮನುಜ ಸೂಕ್ಷ್ಮತೆ..ಮತ್ತು ಸಂವೇದನೆ ಮರೆತು ಕಾಸು ಸಿಗುತ್ತೆ ಅನ್ನುವ ಕಾರಣಕ್ಕೆ ಸಮಾಜಕ್ಕೆ ಅಪಾಯಕಾರಿಯಾದ ಉತ್ಪನ್ನಗಳ ಜಾಹೀರಾತುಗಳನ್ನ ಮಾಡ್ತಾರೆ.
ಇನ್ನೂ ಕೆಲವರು ದುಡ್ಡು ಸಿಗುತ್ತೆ ಎಂದು ಯಾರದ್ದೋ ಮದುವೆಗೆ ಅತಿಥಿಗಳಾಗಿ ಹೋಗುತ್ತಾರೆ. ಇನ್ನೂ ಕೆಲವರು ಮದುವೆ ಮನೆಯಲ್ಲಿ -ಸಭೆ ಸಮಾರಂಭಗಳಲ್ಲಿ ಹಣದಾಸೆಗೆ ಅಪರಿಚಿತರ ಮುಂದೆ ಕುಣಿಯುತ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಬಾಲಿವುಡ್ನ ಹಿರಿಯ ನಟ ಚಂಕಿ ಪಾಂಡೆ ಮತ್ತೊಂದು ಆಸಕ್ತಿಕರ ವಿಚಾರ ಹಂಚಿಕೊಂಡಿದ್ದಾರೆ. ಸಾವಿನ ಮನೆಗೆ ಹೋದರೆ ಅಳೋದಕ್ಕೂ ನಮಗೆ ದುಡ್ಡು ಸಿಕ್ತಿತ್ತು ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಹೌದು, ಅಸಲಿಗೆ ಅನನ್ಯ ಪಾಂಡೆಯ ತಂದೆ ಚಂಕಿ ಪಾಂಡೆ, ಶ್ರದ್ಧಾ ಕಪೂರ್ ತಂದೆ ಶಕ್ತಿ ಕಪೂರ್ ಮತ್ತು ಆ ಕಾಲದ ಬಾಲಿವುಡ್ನ ಹೀರೋ ನಂಬರ್ 1 ಗೋವಿಂದ, ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋಗೆ ಅತಿಥಿಗಳಾಗಿ ಬಂದಿದ್ದರು. ಇದೇ ಸಮಯದಲ್ಲಿ ಹಳೆಯ ತಮ್ಮ ಗತಕಾಲದ ದಿನಗಳನ್ನು ಮೆಲುಕು ಹಾಕುತ್ತಿದ್ದ ಸಮಯದಲ್ಲಿ ಚಂಕಿ ಪಾಂಡೆ ನಾನು ಆಗಷ್ಟೇ ಚಿತ್ರರಂಗಕ್ಕೆ ಬಂದಿದ್ದೆ. ಆ ಸಮಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ನಮಗೆ ದುಡ್ಡು ಸಿಗುತ್ತಿತ್ತು. ಹೆಚ್ಚುವರಿ ಆದಾಯದ ಮೂಲವಾದ ಕಾರಣ ನಾನು ಸದಾ ಒಂದು ಬ್ಯಾಗ್ ಸಮೇತ ಸಿದ್ಧವಾಗಿಯೇ ಇರುತ್ತಿದ್ದೆ ಎಂದಿರುವ ಚಂಕಿ, ಅದೊಂದು ದಿನ ನನಗೆ ಆಯೋಜಕರು ಒಬ್ಬರು ಕರೆ ಮಾಡಿದರು, ಇವತ್ತಿನ ನಿಮ್ಮ ದಿನಚರಿ ಏನು ಎಂದು ಕೇಳಿದರು.
ಅದಕ್ಕೆ ನಾನು ಫಿಲ್ಮ್ ಸಿಟಿಯಲ್ಲಿ ನನ್ನ ಚಿತ್ರದ ಚಿತ್ರೀಕರಣ ನಡೆಯುತ್ತಿದೆ ಈ ಕಾರಣಕ್ಕೆ ಅಲ್ಲಿಗೆ ಈಗ ಹೊರಡಲು ಸಿದ್ಧವಾಗುತ್ತಿದ್ದೇನೆ ಎಂದೆ. ಅದಕ್ಕೆ ಅವರು ಅಣ್ಣ ನೀವು ಹೋಗುವ ದಾರಿಯಲ್ಲಿಯೇ ಒಂದು ಚಿಕ್ಕ ಕಾರ್ಯಕ್ರಮ ಇದೆ. ಹತ್ತು ನಿಮಿಷ ಬಂದು ಹೋದರೆ ಒಳ್ಳೆ ದುಡ್ಡು ಸಿಗುತ್ತೆ ಎಂದು ಹೇಳಿದರು. ಆದರೆ ಬರುವಾಗ ಬಿಳಿ ಬಟ್ಟೆಯನ್ನೇ ಹಾಕಿಕೊಂಡು ಬನ್ನಿ ಎಂದು ಷರತ್ತು ಹಾಕಿದರು. ಅದಕ್ಕೆ ನಾನು ಸರಿ ಹೇಗೋ ದಾರಿಯಲ್ಲಿ ತಾನೇ ಎಂದು ರೆಡಿಯಾಗಿ ಅಲ್ಲಿಗೆ ಹೋದೆ. ಆದರೆ ಅಲ್ಲಿ ಹೋದ ನಂತರ ಎಲ್ಲರೂ ಬಿಳಿ ಬಟ್ಟೆಯನ್ನು ಧರಿಸಿ ನಿಂತಿದ್ದರು. ನಾನು ಬಂದಿರುವುದನ್ನು ಕಂಡು ಚಂಕಿ ಪಾಂಡೆ ಬಂದಿದ್ದಾರೆ ಎಂದು ಮಾತನಾಡಿಕೊಳ್ಳಲು ಶುರು ಮಾಡಿದರು. ಸ್ವಲ್ಪ ದೂರ ಹೋದ ನಂತರ ಅಲ್ಲಿ ನನ್ನೆದುರು ಮೃತದೇಹ ಇತ್ತು. ಸಾವಿನ ಮನೆಗೆ ನಾನು ಬಂದಿದ್ದೇನೆ ಎನ್ನುವ ಅರಿವು ಆಗಿದ್ದು ಆಗಲೇ ಎಂದಿದ್ದಾರೆ.
ಮುಂದುವರೆದು ನಾನು ಮೃತದೇಹದ ಮುಂದೆ ದಿಕ್ಕು ತೋಚದೆ ನಿಂತಾಗ ನನ್ನ ಬಳಿ ಬಂದ ಆಯೋಜಕರು ಅಣ್ಣ ಚಿಂತೆ ಮಾಡಬೇಡಿ ನಿಮ್ಮ ದುಡ್ಡಿನ ಪ್ಯಾಕೆಟ್ ನನ್ನ ಬಳಿ ಇದೆ, ನೀವು ಕಣ್ಣೀರು ಹಾಕಿದರೆ ಇನ್ನೂ ಹೆಚ್ಚಿನ ಹಣ ಕೊಡುತ್ತೇವೆ ಎಂದು ಅವರ ಮನೆಯವರು ನನಗೆ ಹೇಳಿದ್ದಾರೆ ಎಂದು ಅವರು ನನಗೆ ಹೇಳಿದರು ಎಂದು ಆ ದಿನವನ್ನು ಚಂಕಿ ಪಾಂಡೆ ನೆನಪಿಸಿಕೊಂಡಿದ್ದಾರೆ. ಚಂಕಿ ಪಾಂಡೆಯ ಈ ಮಾತುಗಳಿಗೆ ಕಪಿಲ್ ಶರ್ಮಾ, ಶಕ್ತಿ ಕಪೂರ್ ಮತ್ತು ಗೋವಿಂದ ಬಿದ್ದು ಬಿದ್ದು ನಕ್ಕಿದ್ದಾರೆ.


Click it and Unblock the Notifications











