ಕೇವಲ 18 ಗಂಟೆಗಳಲ್ಲಿ ಚಿತ್ರೀಕರಣಗೊಂಡು ದಾಖಲೆ ಬರೆದಿದ್ದ ಶಿವಣ್ಣನ ಸಿನಿಮಾ ಯಾವ್ದು? ವಿಶೇಷತೆಗಳೇನು?
ಸಿನಿಮಾ ಸೃಜನಾತ್ಮಕ ಕ್ಷೇತ್ರ. ಇಲ್ಲಿ ಪ್ರಯೋಗಗಳಿಗೆ ಅವಕಾಶವಿದೆ. ನಟನೆ, ಮೇಕಿಂಗ್, ಪ್ರಮೋಷನ್ ಎಲ್ಲದರಲ್ಲೂ ಹೊಸತನ ಹುಡುಕಬಹುದು. ಸಿನಿಮಾ ಚಿತ್ರೀಕರಣಕ್ಕೆ ವರ್ಷಗಳಗಟ್ಟಲೆ ವ್ಯಯಿಸುವ ಕಾಲ ಇದು. ಆದರೆ ಈ ಹಿಂದೆ ಸಿನಿಮಾ ಮೇಕಿಂಗ್ ವಿಚಾರದಲ್ಲಿ ಸಾಕಷ್ಟು ಪ್ರಯೋಗಗಳು ನಡೆದಿತ್ತು. ಕೇವಲ 18 ಗಂಟೆಗಳಲ್ಲಿ ಕನ್ನಡ ಸಿನಿಮಾವೊಂದು ನಿರ್ಮಾಣವಾಗಿತ್ತು. ಆ ಚಿತ್ರದಲ್ಲಿ ಶಿವರಾಜ್ಕುಮಾರ್ ಹೀರೊ ಆಗಿ ನಟಿಸಿದ್ದರು ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿಲ್ಲ.
ಅಣಜಿ ಫಿಲಂ ಬ್ಯಾನರ್ ಅಡಿಯಲ್ಲಿ ಎಂ. ರುದ್ರೇಶ್ ಅರ್ಪಿಸಿ, ನಿರ್ಮಾಪಕ ಅಣಜಿ ನಾಗರಾಜ್ ನಿರ್ಮಾಣದ ಸಿನಿಮಾ 'ಸುಗ್ರೀವ'. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದ ಸಿನಿಮಾ ಇದಾಗಿತ್ತು. 18 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಸಿನಿಮಾ ನಿರ್ಮಾಣವಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಲಾಗಿತ್ತು. ಬೆಳಗ್ಗೆ 6 ಗಂಟೆಗೆ ಚಿತ್ರೀಕರಣ ಆರಂಭವಾಗಿ ರಾತ್ರಿ 12 ಗಂಟೆಗೆ ಮುಕ್ತಾಯವಾಗಿತ್ತು.

ನಿರ್ದೇಶಕ ಪ್ರಶಾಂತ್ ಮಂಪುಲ್ಲಿ ಸಾರಥ್ಯದಲ್ಲಿ 10 ಜನ ನಿರ್ದೇಶಕರು ಕೆಲಸ ಮಾಡಿದ್ದರು. 10 ಜನ ಕಾಸ್ಟ್ಯೂಮ್ ಡಿಸೈನರ್ಗಳು, 30 ಮಂದಿ ಸಹಾಯಕ ನಿರ್ದೇಶಕರು, 10 ಪ್ರೊಡಕ್ಷನ್ ಮ್ಯಾನೇಜರ್ಗಳು, 6 ಸ್ಟಿಲ್ ಛಾಯಾಗ್ರಾಹಕರು, 40 ಕ್ಯಾಮೆರಾ ಸಹಾಯಕರು, 60 ಪ್ರೊಡಕ್ಷನ್ ಬಾಯ್ಸ್, 120 ಲೈಟ್ ಬಾಯ್ಸ್, ಒಬ್ಬ ಸ್ಟಂಟ್ ಮಾಸ್ಟರ್, 80 ಸ್ಟಂಟ್ಮೆನ್, ಒಬ್ಬ ಡ್ಯಾನ್ಸ್ ಕೊರಿಯೋಗ್ರಫರ್, 10 ಜನ ಮೇಕಪ್ಮ್ಯಾನ್ಗಳು, 600 ಕಿರಿಯ ಕಲಾವಿದರು ಹೀಗೆ ನೂರಾರು ಜನ 'ಸುಗ್ರೀವ' ಚಿತ್ರಕ್ಕಾಗಿ ಕೆಲಸ ಮಾಡಿದ್ದರು. ಎರಡೂವರೆ ಗಂಟೆಗಳ ಕಮರ್ಷಿಯಲ್ ಸಿನಿಮಾ ಇದಾಗಿತ್ತು.
ಅಂದಹಾಗೆ ಮಲಯಾಳಂನಲ್ಲಿ 'ಭಗವಾನ್' ಎಂಬ ಚಿತ್ರವನ್ನು 19 ಗಂಟೆಗಳಲ್ಲಿ ಪ್ರಶಾಂತ್ ಕಟ್ಟಿಕೊಟ್ಟಿದ್ದರು. ಕನ್ನಡದಲ್ಲಿ ಒಂದು ಗಂಟೆ ಕಡಿಮೆ ಅವಧಿಯಲ್ಲಿ 'ಸುಗ್ರೀವ' ಚಿತ್ರ ನಿರ್ದೇಶಿಸಿದ್ದರು. 3 ಫೈಟ್ಸ್ ಹಾಗೂ 3 ಹಾಡುಗಳು ಚಿತ್ರದಲ್ಲಿತ್ತು. ಶಿವರಾಜ್ಕುಮಾರ್ ಜೊತೆ ಯಜ್ಞಾ ಶೆಟ್ಟಿ ನಟಿಸಿದ್ದರು. ಇನ್ನುಳಿದಂತೆ ದಿಲೀಪ್ ರಾಜ್, ಸಂಗೀತಾ, ರಾಜು ತಾಳಿಕೋಟೆ, ಹರ್ಷಿಕಾ ಪೂಣಚ್ಚ, ಅಚ್ಯುತ್ ಕುಮಾರ್ ಹಾಗೂ ಹರೀಶ್ ರಾಜ್ ಕೂಡ ತಾರಾಗಣದಲ್ಲಿದ್ದರು. 'ಜಾನ್ ಕ್ಯೂ.' ಎಂಬ ಹಾಲಿವುಡ್ ಸಿನಿಮಾದಿಂದ ಪ್ರೇರಣೆಗೊಂಡು ಈ ಸಿನಿಮಾ ಮಾಡಲಾಗಿತ್ತು.

ಓಂ ಪ್ರಕಾಶ್ ರಾವ್, ಪಿ.ಎನ್. ಸತ್ಯ, ನಾಗಶೇಖರ್, ನಾಗೇಂದ್ರ ಮಾಗಡಿ, ರಾಘವ ಲೋಕಿ, ಆರ್.ಅನಂತರಾಜು, ವಿಜಯ್, ಪ್ರಮೋದ್ ಚಕ್ರವರ್ತಿ, ತುಷಾರ್ ರಂಗನಾಥ್ ಹಾಗೂ ಎ.ಪಿ.ಅರ್ಜುನ್ ಹೀಗೆ 10 ಮಂದಿ ನಿರ್ದೇಶಕರು ಸಣ್ಣ ಸಣ್ಣ ಎಪಿಸೋಡ್ಗಳ ರೀತಿ ಸಿನಿಮಾ ನಿರ್ದೇಶನ ಮಾಡಿದ್ದರು. 10 ಜನ ನಿರ್ದೇಶಕರಿಗೆ 10 ಮಂದಿ ಛಾಯಾಗ್ರಹಕರು ಕೆಲಸ ಮಾಡಿದ್ದರು. ಒಟ್ಟಾರೆ 'ಸುಗ್ರೀವ' ಕನ್ನಡ ಚಿತ್ರರಂಗದಲ್ಲಿ ಅಪರೂಪದ ಪ್ರಯತ್ನ. ಮೈಸೂರು ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿತ್ತು.
ಗುರುಕಿರಣ್ ಸಂಗೀತ 'ಸುಗ್ರೀವ' ಚಿತ್ರಕ್ಕಿತ್ತು. ಮೆಕ್ಯಾನಿಕ್ ಒಬ್ಬ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿರುವ ತನ್ನ ಮಗನನ್ನು ರಕ್ಷಿಸಲು ಒಂದು ಆಸ್ಪತ್ರೆಯನ್ನು ಹೈಜಾಕ್ ಮಾಡುವ ಕಥೆ ಚಿತ್ರದಲ್ಲಿತ್ತು. ಸದಾ ಪಾದರಸದಂತೆ ಕೆಲಸ ಮಾಡುವ ಶಿವಣ್ಣ ಅಂದು ಅಣಜಿ ನಾಗರಾಜ್ ಪ್ರಯತ್ನಕ್ಕೆ ಸಾಥ್ ನೀಡಿದ್ದರು. ಇಡೀ ದಿನ ಬಿಡುವಿಲ್ಲದೇ ಚಿತ್ರೀಕರಣ ಭಾಗಿ ಆಗಿದ್ದರು. ಇವತ್ತಿಗೂ ಸೆಂಚುರಿ ಸ್ಟಾರ್ ಅಷ್ಟೇ ಹುರುಪಿನಿಂದ ಸಿನಿಮಾಗಳಲ್ಲಿ ನಟಿಸುತ್ತಾರೆ. ವಯಸ್ಸು 60 ದಾಟಿದ್ರು, ಸದಾ ನಾಲ್ಕೈದು ಸಿನಿಮಾಗಳು ಅವರ ಕೈಯಲ್ಲಿರುತ್ತದೆ. ಭಾರೀ ನಿರೀಕ್ಷೆ ಮೂಡಿಸಿದ್ದ 'ಸುಗ್ರೀವ' ಸಿನಿಮಾ ಬಾಕ್ಸಾಫೀಸ್ನಲ್ಲಿ ಗೆಲ್ಲಲಿಲ್ಲ.


Click it and Unblock the Notifications