Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ ಕುಮಾರ್ ಅಪಹರಣವಾದ ಸಮಯದಲ್ಲಿ ವಿಷ್ಣುದಾದ ಹೇಳಿದ್ದ ಮಾತುಗಳಿವು...
ಕನ್ನಡ ಚಿತ್ರರಂಗ ಅಕ್ಷರಶಃ ನಲುಗಿಹೋಗಿದ್ದ ಸಂದರ್ಭವೆಂದರೆ ವರನಟ ಡಾ. ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ ಸಮಯ. ರಾಜ್ ಕುಮಾರ್ ಅವರ ನಿಧನ, ವಿಷ್ಣುವರ್ಧನ್ ಅವರ ಅಗಲುವಿಕೆ ಮತ್ತು ಅಂಬರೀಶ್ ನಿಧನದ ಸಂದರ್ಭಗಳಲ್ಲಿ ಕೂಡ ಇಡೀ ಕನ್ನಡ ನಾಡು ದುಃಖಿಸಿತ್ತು. ಚಿತ್ರರಂಗ ಆಘಾತದಿಂದ ಸ್ತಬ್ಧವಾಗಿತ್ತು. ಆದರೆ ರಾಜ್ಯ ಅನೇಕ ರೀತಿ ತತ್ತರಿಸಿದ್ದ ಸಂದರ್ಭವೆಂದರೆ ಅದು ಅಣ್ಣಾವ್ರ ಅಪಹರಣ.
Recommended Video
ಡಾ. ರಾಜ್ ಕುಮಾರ್ ಅವರ ಅಪಹರಣವಾದ ದಿನದಿಂದ ಬಿಡುಗಡೆಯಾಗಿ ಸುರಕ್ಷಿತವಾಗಿ ಮನೆಗೆ ಬರುವ ಸುಮಾರು 108 ದಿನ ಚಿತ್ರರಂಗ ಕಂಗಾಲಾಗಿತ್ತು. ಚಿತ್ರಪ್ರದರ್ಶನಗಳು ಸ್ಥಗಿತಗೊಂಡಿದ್ದವು. ಚಿತ್ರೀಕರಣ ಚಟುವಟಿಕೆಗಳನ್ನು ನಡೆಸುವ ಮಾನಸಿಕ ಶಕ್ತಿಯನ್ನು ಎಲ್ಲರೂ ಕಳೆದುಕೊಂಡಿದ್ದರು. ರಾಜ್ ಕುಮಾರ್ ಮರಳಿ ಬರುವವರೆಗೂ ಸಿನಿಮಾ ಕೆಲಸಗಳು ಬೇಡ ಎಂದು ನಿರ್ಧರಿಸಲಾಗಿತ್ತು. ಈಗಿನ ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಚಿತ್ರೀಕರಣ, ಪ್ರದರ್ಶನ, ಕೆಲಸಗಳು ನಿಂತು ಹೋದಂತೆ ಆಗಲೂ ಆಗಿತ್ತು. ಆ ಸಮಯದಲ್ಲಿಯೂ ಚಿತ್ರರಂಗದ ದಿನಗೂಲಿ ಕಾರ್ಮಿಕರು, ಸಣ್ಣಪುಟ್ಟ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಮುಂದೆ ಓದಿ...
ಸಂಕಷ್ಟದಲ್ಲಿದ್ದ ಉದ್ಯಮ
ರಾಜ್ ಕುಮಾರ್ ಅವರ ಅಪಹರಣದ ಸಮಯದಲ್ಲಿ ಮುಂಚೂಣಿ ನಾಯಕ ನಟರು ಕೂಡ ಸಂಯಮ ವಹಿಸಿದ್ದರು. ಅಣ್ಣಾವ್ರಿಗಾಗಿ ಕಾದಿದ್ದರು. ಅದೇ ವೇಳೆ ಚಿತ್ರರಂಗದಲ್ಲಿ ಸಂಕಷ್ಟದಲ್ಲಿರುವ ಕಾರ್ಮಿಕರ ಕುರಿತೂ ಅನುಕಂಪ ತೋರಿದ್ದರು. ಈ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರು ರಾಜ್ ಕುಮಾರ್ ಕುರಿತು ಆಡಿದ್ದ ಮಾತುಗಳು ಅಣ್ಣಾವ್ರನ್ನು ಅವರು ಎಷ್ಟು ಗೌರವಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ.
ಚಿತ್ರರಂಗದ ಬಗ್ಗೆ ಆ ಕಾಲದಲ್ಲಿಯೇ ಬೇಸರ ವ್ಯಕ್ತಪಡಿಸಿದ್ದರು ಡಾ. ರಾಜ್ ಕುಮಾರ್
ರಾಜ್ ಕುಮಾರ್ ಯೋಗಪುರುಷ
ರಾಜ್ ಕುಮಾರ್ ಅವರು ಇರುವಂತಹ ಜಾಗದಲ್ಲಿ ಬೇರೆ ಯಾರೇ ಇದ್ದರೂ ಇಷ್ಟ ದಿನ ಅಲ್ಲಿ ಕಳೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಇದಕ್ಕೆ ಕಾರಣ ಅವರು ತಮ್ಮ ಬದುಕಿನಲ್ಲಿ ಮಾಡಿದ್ದ ಸಾಧನೆ. ಅವರೊಬ್ಬ ಕರ್ಮಯೋಗಿ. ಯೋಗಪುರುಷ. ಸ್ಥಿತಪ್ರಜ್ಞ. ಈ ಘಟನೆಯಲ್ಲಿಯೂ ಅವರು ಅದನ್ನು ಸಾಬೀತುಪಡಿಸಿದ್ದಾರೆ ಎಂದು ಸಂದರ್ಶನವೊಂದರಲ್ಲಿ ವಿಷ್ಣುವರ್ಧನ್ ಹೇಳಿದ್ದರು.
ಇದು ದೈವದತ್ತವೂ ಹೌದು
ರಾಜ್ ಕುಮಾರ್ ಅವರು ಅಳವಡಿಸಿಕೊಂಡಿದ್ದ ಜೀವನ ಶೈಲಿ, ಅವರು ನಡೆದು ಬಂದ ಹಾದಿ, ಅನುಭವ ಇದೆಲ್ಲವೂ ಉಪಯೋಗಕ್ಕೆ ಬಂದಿದೆ. ಇದು ದೈವದತ್ತವೂ ಆಗಿರಬಹುದು. ಅವರು ತಾಳ್ಮೆಯ ಶಿಖರ ಎಂದು ವರನಟನ ಗುಣಗಳನ್ನು ಸಾಹಸಸಿಂಹ ಕೊಂಡಾಡಿದ್ದರು.
ಅಂಬರೀಶ್ ನಟಿಸಬೇಕಿದ್ದ 'ಬಂಧನ' ಚಿತ್ರ ವಿಷ್ಣುವರ್ಧನ್ ಪಾಲಾಗಿದ್ದು ಹೇಗೆ?
ರಾಜಣ್ಣ ಬರುವವರೆಗೂ ನಟಿಸೊಲ್ಲ...
ರಾಜ್ ಕುಮಾರ್ ಅಪಹರಣದ ಸಮಯದಲ್ಲಿ ಚಿತ್ರೋದ್ಯಮದ ಸ್ಥಗಿತಗೊಂಡಿತ್ತು. ರಾಜ್ ಕುಮಾರ್ ಬರುವವರೆಗೂ ನಾವೂ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಎಲ್ಲ ಪ್ರಮುಖ ಕಲಾವಿದರೂ ತೀರ್ಮಾನಿಸಿದ್ದರು. ಆದರೆ ನನಗೋಸ್ಕರ ಚಿತ್ರೋದ್ಯಮದ ಚಟುವಟಿಕೆಗಳನ್ನು ನಿಲ್ಲಿಸುವುದು ಬೇಡ ಎಂದು ರಾಜ್ ಕುಮಾರ್ ಕಾಡಿನಿಂದ ಸಂದೇಶ ರವಾನಿಸಿದ್ದರು. ಆ ವೇಳೆಯೂ ಅವರು ನಿರ್ಮಾಪಕರು, ಸಾಮಾನ್ಯ ಕಾರ್ಮಿಕರು, ಕಲಾವಿದರ ಸಂಕಷ್ಟವನ್ನು ನೆನೆದು ಈ ರೀತಿ ಹೇಳಿದ್ದರು.
ವೈಯಕ್ತಿಕವಾಗಿ ನೋವಾಗಿದೆ...
ಇಡೀ ಕುಟುಂಬಕ್ಕೆ ಆಧಾರವಾಗಿರುವ ಕಾರ್ಮಿಕ, ಕಲಾವಿದನ ಸಂಭಾವನೆಗೆ ಕುತ್ತು ಬಂದಿದ್ದ ಸಂದರ್ಭ ವಿಷ್ಣುವರ್ಧನ್ ಅವರಿಗೂ ಉಭಯ ಸಂಕಟ ಉಂಟುಮಾಡಿತ್ತು. ಡಾ. ರಾಜ್ ನಂತರದ ಸ್ಥಾನದಲ್ಲಿದ್ದ ವಿಷ್ಣುದಾದಾ ತೆಗೆದುಕೊಳ್ಳುತ್ತಿದ್ದ ನಿರ್ಧಾರ ಮುಖ್ಯವಾಗುತ್ತಿತ್ತು. ಏಳು ವರ್ಷದ ಬಾಲಕನಾಗಿದ್ದಾಗಿನಿಂದಲೂ ರಾಜ್ ಕುಮಾರ್ ಅವರನ್ನು ನೋಡುತ್ತಾ ಬಂದಿದ್ದೇನೆ. ಹಾಗಾಗಿ ಈಗಿನ ಸಂದರ್ಭ ವೈಯಕ್ತಿಕವಾಗಿ ಮನಸಿಗೆ ನೋವುಂಟು ಮಾಡುತ್ತಿದೆ ಎಂದು ಹೇಳಿದ್ದರು.
ವಿಷ್ಣುದಾದಾ ಅಭಿನಯಕ್ಕೆ ಬೆಕ್ಕಸ ಬೆರಗಾಗಿದ್ದರು ಹಿಂದಿಯ ದಿಗ್ಗಜ ನಟರು
ನಾನು ಪ್ರಾರ್ಥನೆ ಮಾಡುತ್ತಿದ್ದೇನೆ
'ಭಾವನೆ ಎನ್ನುವುದಕ್ಕೆ ಗಾತ್ರ, ಪ್ರಮಾಣ ಇಲ್ಲ. ಒಳ್ಳೆಯದಾಗಬೇಕು ಎನ್ನುವುದಷ್ಟೇ ಇರುತ್ತದೆ. ರಾಜ್ ಕುಮಾರ್ ವಿಚಾರದಲ್ಲಿ ಪ್ರತಿಯೊಬ್ಬರೂ ತಮಗೆ ತೋಚಿದಂತೆ ಪ್ರಯತ್ನ ಮಾಡುತ್ತಿದ್ದಾರೆ. ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ. ಕಾಲಕ್ಕಿಂತಲೂ ಮನಸ್ಸು ವೇಗವಾಗಿ ಚಲಿಸುವುದರಿಂದ ಆತಂಕಗಳು ಇನ್ನಷ್ಟು ಜಾಸ್ತಿಯಾಗುತ್ತವೆ. ಎಲ್ಲವೂ ಬೇಗ ಆಗಬೇಕು ಎಂದು ಮನಸು ಬಯಸುತ್ತದೆ. ಇಷ್ಟಪಡುವ ವ್ಯಕ್ತಿಗೆ ತೊಂದರೆಯಾದರೆ ಅದು ಬೇಗ ಉಪಶಮನ ಆಗಬೇಕು ಎಂದು ಪುರಾಣಗಳು ಹೇಳುತ್ತವೆ' ಎಂದು ಆಗ ವಿಷ್ಣುದಾದ ಭಾವುಕರಾಗಿ ಮಾತನಾಡಿದ್ದರು.
ಕಾರ್ಮಿಕರ ಸಂಕಷ್ಟಗಳು ಹೇಗಿತ್ತು ಗೊತ್ತೇ?
ರಾಜ್ ಅಪಹರಣದ ಸಂದರ್ಭದಲ್ಲಿ ಚಿತ್ರೋದ್ಯಮದ ಚಟುವಟಿಕೆಗಳು ನಿಂತಾಗ ಅನುಭವಿಸಿದ ಸಂಕಟಗಳು ಹೇಗಿತ್ತು ಎನ್ನುವುದನ್ನು ಕೂಡ ವಿಷ್ಣುವರ್ಧನ್ ವಿವರಿಸಿದ್ದರು. ನಾನು ಉದ್ಯಮದ ಚೌಕಟ್ಟಿನೊಳಗೇ ಇರಬೇಕು. ನನಗೆ ಮತ್ತು ಅಂಬರೀಶ್ಗೆ ಈ ಸಂದರ್ಭದಲ್ಲಿ ನಟಿಸುವುದು ಕೊಂಚವೂ ಇಷ್ಟವಿಲ್ಲ. ಆದರೆ ಹಾಗೆ ನಿರ್ಧರಿಸಿಬಿಟ್ಟರೆ ಬೇರೆಯವರಿಗೆ ತೊಂದರೆಯಾಗುತ್ತದೆ. 'ನೀವೆಲ್ಲರೂ ಕೆಲಸ ಬಿಟ್ಟು ನನ್ನ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿದ್ದಿರಿ. ಈಗ ನಾನು ಬದುಕಿಗೆ ಏನು ಮಾಡಲಿ ಎಂದು ನೀವೇ ಹೇಳಿ. ನನ್ನ ಮಗಳನ್ನು ವೇಶ್ಯಾವೃತ್ತಿಗೆ ಇಳಿಸಬೇಕೇ? ಇಲ್ಲದಿದ್ದರೆ ಸ್ವಲ್ಪ ವಿಷ ಕೊಡಿ' ಎಂದು ಚಿತ್ರರಂಗದ ಕಾರ್ಮಿಕ ಅಂಬರೀಶ್ ಮನೆಗೆ ಬಂದು ನೋವಿನಲ್ಲಿ ಹೇಳಿದ್ದರಂತೆ. ಈ ಸಂದರ್ಭದಲ್ಲಿ ನಾವೇನು ಮಾಡಲು ಸಾಧ್ಯ? ಎಂದು ಬೇಸರದಿಂದ ನುಡಿದಿದ್ದರು ವಿಷ್ಣುವರ್ಧನ್.
ದೇವರ ಪ್ರಾರ್ಥನೆ ರಾಜಣ್ಣನಿಗೆ ಮೀಸಲು
'ದಿನವೂ ದೇವರನ್ನು ಪ್ರಾರ್ಥಿಸುತ್ತಿದ್ದೇನೆ. ಅದು ಸಂಪೂರ್ಣವಾಗಿ ರಾಜಣ್ಣನಿಗೇ ಮೀಸಲು. ದೇವರು ಮುಂದೆ ಕೈಮುಗಿದು ಯಾಕಪ್ಪಾ ಹೀಗೆ ಕಷ್ಟ ಕೊಡುತ್ತೀಯಾ ಎಂದು ಕೇಳಿದ್ದಿದೆ' ಎಂದು ರಾಜ್ ಕುಮಾರ್ ಅವರಿಗಾಗಿ ಮಿಡಿಯುತ್ತಿದ್ದದ್ದನ್ನು ವಿಷ್ಣುವರ್ಧನ್ ವಿವರಿಸಿದ್ದರು.
ಘಟನೆ ದೊಡ್ಡದೆನಿಸಿದ್ದು ಏಕೆ?
ರಾಜ್ ಕುಮಾರ್ ಅವರ ಜನಪ್ರಿಯತೆ, ಅವರನ್ನು ನಾವು ಭಾವನಾತ್ಮಕವಾಗಿ ನಮ್ಮವರು ಎಂದು ಪ್ರೀತಿಸಿರುವಾಗ ಅವರ ಅಪಹರಣದ ಸಂಗತಿ ಎಲ್ಲಕ್ಕಿಂತಲೂ ದೊಡ್ಡದು ಎನಿಸುವುದು ಸಹಜ ಎಂದು ವಿಷ್ಣುವರ್ಧನ್ ಹೇಳಿದ್ದರು. ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ನಡುವೆ ಬಹಳ ಉತ್ತಮ ಬಾಂಧವ್ಯವಿತ್ತು. ಅದನ್ನು ವಿಷ್ಣುವರ್ಧನ್ ಅವರ ಮಾತುಗಳು ಸಾಬೀತುಪಡಿಸುತ್ತವೆ.