"ಮನುಷ್ಯ ಕನಸು ಕಂಡರೆ ಮುಂದೆ ಬರೋದು"; ಯಶ್ ಹಳೇ ಧಾರಾವಾಹಿ ಡೈಲಾಗ್ ವೈರಲ್
ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಮುಂದೆ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದ್ದಾರೆ. 'ಟಾಕ್ಸಿಕ್' ಮೂಲಕ ಮತ್ತೊಂದು 1000 ಕೋಟಿ ರೂ. ಕ್ಲಬ್ ಸಿನಿಮಾ ಕೊಡೋಕೆ ಮುಂದಾಗಿದ್ದಾರೆ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದು ಗೆದ್ದವರು ನಟ ಯಶ್. ಸರ್ಕಾರಿ ಬಸ್ ಡ್ರೈವರ್ ಮಗನಾದ ಯಶ್ ಇವತ್ತು ನೂರಾರು ಕೋಟಿ ಬಂಡವಾಳ ಹೂಡಿ ಸಿನಿಮಾ ನಿರ್ಮಾಣ ಮಾಡುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಇನ್ನು ಹೀರೋ ಆಗಿ ಸೂಪರ್ ಸಕ್ಸಸ್ ಕಂಡಿದ್ದಾರೆ. ಕನಸು ಕಾಣಬೇಕು, ಕಂಡ ಕನಸು ನನಸು ಮಾಡಿಕೊಳ್ಳಲು ಶ್ರಮಿಸಬೇಕು ಎಂದು ಯಶ್ ಸದಾ ಹೇಳುತ್ತಿರುತ್ತಾರೆ.

ಈಗಾಗಲೇ ನ್ಯಾಷನಲ್ ಸ್ಟಾರ್ ಆಗಿ ಕೋಟಿ ಕೋಟಿ ಸಂಭಾವನೆ ಪಡೆಯುವ ಮಟ್ಟಕ್ಕೆ ಬೆಳೆದರೂ ಯಶ್ ಹೊಸ ಪ್ರಯತ್ನಕ್ಕೆ ಕೈ ಹಾಕುವುದು ಬಿಟ್ಟಿಲ್ಲ. ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕಲ್ಲ. ಇದಕ್ಕಿಂತಲೂ ದೊಡ್ಡಮಟ್ಟಕ್ಕೆ ಬೆಳೆಯಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಅದಕ್ಕೆ ಬೇಕಾದ ಕಸರತ್ತು ಮುಂದುವರೆಸಿದ್ದಾರೆ. ಈಗಾಗಲೇ ಬಾಲಿವುಡ್ನಲ್ಲಿ ಸಿನಿಮಾ ನಿರ್ಮಾಣ ಆರಂಭಿಸಿದ್ದಾರೆ.
'ಟಾಕ್ಸಿಕ್' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಅಂದಾಜು 180 ಕೋಟಿ ರೂ. ಬಜೆಟ್ನಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಮತ್ತೊಂದು ಕಡೆ ಅತ್ತ ಬಾಲಿವುಡ್ನಲ್ಲಿ ರಾಮಾಯಣ ಚಿತ್ರಕ್ಕೆ ಕೈ ಹಾಕಿದ್ದಾರೆ. ನಿಮಿತ್ ಮಲ್ಹೋತ್ರಾ ಜೊತೆ ಸೇರಿ ಈ ಪೌರಾಣಿಕ ಕಥಾಹಂದರದ ಸಿನಿಮಾ ನಿರ್ಮಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೀರೊ ಆಗಿ ಗೆದ್ದರೆ ಸಾಕು ಎಂದುಕೊಂಡಿದ್ದ ಯಶ್ ಈಗ ಬಾಲಿವುಡ್ ಸಿನಿಮಾ ನಿರ್ಮಿಸುವ ಮಟ್ಟಕ್ಕೆ ಬೆಳೆದಿದ್ದಾರೆ.
ಯಶ್ ಮೊದಲಿನಿಂದಲೂ ಕನಸು ಕಾಣಬೇಕು ಎಂದು ಹೇಳುತ್ತಲೇ ಬರುತ್ತಿದ್ದಾರೆ. ಅವರು ಕೂಡ ಕಂಡ ಕನಸ್ಸನ್ನು ನನಸು ಮಾಡಿಕೊಂಡಿದ್ದಾರೆ. ಯಶ್ ಸದಾ ಪಾಸಿಟಿವ್ ಆಗಿಯೇ ಮಾತನಾಡುತ್ತಾರೆ. ಯಾಕೆ ಆಗಲ್ಲ, ಯಾಕೆ ಮಾಡಬಾರದು? ಎಂದು ಪ್ರಶ್ನೆ ಹಾಕುತ್ತಾರೆ. ಯಾವತ್ತೂ ನೆಗೆಟಿವ್ ಆಗಿ ಮಾತನಾಡುವವರಲ್ಲ. ಬಹಳ ಹಿಂದೆ ಒಂದು ಕಿರುತೆರೆ ಧಾರಾವಾಹಿಯಲ್ಲಿ ಯಶ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅಲ್ಲೂ ಇದೇ ಮಾತು ಹೇಳಿದ್ದರು.
2010ರಲ್ಲಿ ಬಂದ 'ಬೆಂಕಿಯಲ್ಲಿ ಅರಳಿದ ಹೂವು' ಧಾರಾವಾಹಿಯಲ್ಲಿ ಯಶ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ನಟಿ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಆ ಧಾರಾವಾಹಿಯ ಲೀಡ್ ರೋಲ್ನಲ್ಲಿ ನಟಿಸಿದ್ದರು. ಯಶ್ ಮದುವೆ ಹುಡುಗನಾಗಿ ಸಣ್ಣ ಪಾತ್ರದಲ್ಲಿ ಮಿಂಚಿದ್ದರು. ನಿಶ್ಚಿತಾರ್ಥದ ಸನ್ನಿವೇಶ ಅದು. ಮಲ್ಲಿ ಎನ್ನುವ ಬಡ ಹುಡುಗಿ ಪಾತ್ರದಲ್ಲಿ ನಿತ್ಯಾ ರಾಮ್ ಬಣ್ಣ ಹಚ್ಚಿದ್ದರು.
ಊಟದ ಮನೆಯಲ್ಲಿ ಎಲೆ ಎತ್ತಲು ಬಂದ ಮಲ್ಲಿ ನಿಶ್ಚಿತಾರ್ಥ ನೋಡುತ್ತಾ ಕನಸು ಕಾಣುತ್ತಾ ತನ್ನದೇ ಲೋಕಕ್ಕೆ ಜಾರಿಬಿಡುತ್ತಾಳೆ. ಅದನ್ನು ನೋಡಿದ ಮನೆ ಯಜಮಾನಿ ಬೈಯ್ಯಲು ಶುರು ಮಾಡುತ್ತಾಳೆ. ಆಗ ಬರುವ ಯಶ್ ಆಕೆಯನ್ನು ಸಮಾಧಾನ ಮಾಡುತ್ತಾರೆ. ಮಲ್ಲಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ.
"ಕನಸು ಕಾಣಬೇಕು, ಮನುಷ್ಯ ಕನಸು ಕಂಡರೆ ಮುಂದೆ ಬರೋದು, ನಿನಗೊಂದು ಸೀಕ್ರೆಟ್ ಹೇಳ್ಲಾ ನಾವು ಕನಸು ಕಂಡೇ ಈ ಲೆವೆಲ್ಗೆ ಬಂದಿರೋದು. ಅತ್ತಿಗೆ ಕಡೆ ನೋಡಿ ಯಾರ ಭವಿಷ್ಯ ಯಾರು ಕಂಡಿದ್ದಾರೆ? ಮುಂದೆ ಈ ಹುಡುಗಿ ಏನಾಗ್ತಾಳೆ ಯಾರಿಗೆ ಗೊತ್ತು? ಮಲ್ಲಿ, ಯಾವುದೇ ಕಾರಣಕ್ಕೂ ಕನಸು ಕಾಣುವುದನ್ನು ಬಿಡಬೇಡ. ಅದೇ ರೀತಿ ಕಂಡ ಕನಸು ನನಸಾಗುವ ತನಕ ಬಿಡಬೇಡ" ಎಂದು ಯಶ್ ಹೇಳಿ ಹೋಗುತ್ತಾರೆ.
ಯಶ್ ಅದಾಗಲೇ ಹೀರೊ ಆಗಿ ಗೆದ್ದಿದ್ದರು. ಹಾಗಾಗಿ ತಮ್ಮದೇ ಜೀವನದ ಮಾತುಗಳನ್ನು ಧಾರಾವಾಹಿಯ ಪಾತ್ರಕ್ಕೆ ಹೇಳಿದಂತೆ ಆ ಸನ್ನಿವೇಶ ಕಾಣುತ್ತದೆ. ಅದೇ ಕಾರಣಕ್ಕೆ ಅಭಿಮಾನಿಗಳು ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ಯಶ್ ಎಷ್ಟು ಭರವಸೆಯಿಂದ ಮಾತನಾಡುತ್ತಿದ್ದರೋ ಅದೇ ರೀತಿ ಸಾಧಿಸಿ ತೋರಿಸಿದ್ದಾರೆ ಎನ್ನುತ್ತಿದ್ದಾರೆ. ಹಿಂದೆ ಸೈಮಾ ವೇದಿಕೆಯಲ್ಲಿ ಕೂಡ ಇದೇ ರೀತಿ ಮಾತನಾಡಿದ್ದರು. ಇದು ಕೇವಲ ಆರಂಭ ಅಷ್ಟೆ ಕನ್ನಡ ಚಿತ್ರರಂಗ ಬೇರೆ ಹಂತಕ್ಕೆ ಹೋಗುತ್ತದೆ ಎಂದಿದ್ದರು. 'KGF' ಸರಣಿಯಿಂದ ಅದನ್ನು ಸಾಧಿಸಿದ್ದರು.


Click it and Unblock the Notifications











