ನನ್ನ ಸಿನ್ಮಾ ನೋಡಿ ಅಭಿಮಾನಿಯೊಬ್ಬ ಪಬ್ಲಿಕೇಷನ್ ಆರಂಭಿಸಿ, 250 ಜನಕ್ಕೆ ಕೆಲಸ ಕೊಟ್ಟಿದ್ದ- ಉಪೇಂದ್ರ
ಸಿನಿಮಾ ಪವರ್ಫುಲ್ ಮಾಧ್ಯಮ. ಸಾಕಷ್ಟು ಜನ ಸಿನಿಮಾಗಳನ್ನು ನೋಡಿ ಸ್ಫೂರ್ತಿ ಪಡೆದು ಜೀವನದಲ್ಲಿ ಸಾಧನೆ ಮಾಡಿರುವ ಉದಾಹರಣೆಗಳಿವೆ. ತಮ್ಮ ಸಿನಿಮಾ ನೋಡಿ ಅಭಿಮಾನಿಯೊಬ್ಬ ಪಬ್ಲಿಕೇಷನ್ ಹುಟ್ಟಾಕಿ 250 ಜನಕ್ಕೆ ಕೆಲಸ ಕೊಟ್ಟ ವಿಚಾರವನ್ನು ನಟ ಉಪೇಂದ್ರ ಮೆಲುಕು ಹಾಕಿದ್ದಾರೆ.
ಉಪೇಂದ್ರ ನಟನೆಯ ತೆಲುಗಿನ 'ಆಂಧ್ರಕಿಂಗ್ ತಾಲೂಕ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹಾಗಾಗಿ ಉಪೇಂದ್ರ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಇದೇ ರೀತಿ ಮಾತನಾಡುತ್ತಾ ತಮ್ಮ ಅಪರೂಪದ ಅಭಿಮಾನಿ ಬಗ್ಗೆ ರಿಯಲ್ ಸ್ಟಾರ್ ನೆನಪು ಮಾಡಿಕೊಂಡಿದ್ದಾರೆ. ನನ್ನ ಸಿನಿಮಾ ನೋಡಿ ಆತ ಜೀವನ ಬದಲಾಯಿಸಿಕೊಂಡಿದ್ದು ನಿಜಕ್ಕೂ ಮರೆಯಲಾಗದ್ದು ಎಂದಿದ್ದಾರೆ.

ಉಪೇಂದ್ರ ಮಾತನಾಡಿ "ನಾನಾ ರೀತಿಯ ಅಭಿಮಾನಿಗಳು ಇರ್ತಾರೆ. ಟ್ಯಾಟು ಹಾಕಿಸಿಕೊಳ್ಳುವವರು, ಕೈ ಕೊಯ್ದುಕೊಳ್ಳುವವರು. ಆದರೆ ಒಬ್ಬ ಅಭಿಮಾನಿ ನನ್ನ 'ಉಪೇಂದ್ರ' ಸಿನಿಮಾ ನೋಡಿ ಜೀವನ ಬದಲಿಸಿಕೊಂಡಿದ್ದ. ಒಮ್ಮೆ ಮೂವರು ಸ್ನೇಹಿತರು ಹೋಗುತ್ತಿದ್ದರಂತೆ. ಇಬ್ಬರಿಗೆ ಆ ಸಿನಿಮಾ ನೋಡುವ ಆಸೆ. ಆದರೆ ಆತನಿಗೆ ಇಷ್ಟವಿರಲಿಲ್ಲ. ಸ್ನೇಹಿತರ ಒತ್ತಾಯಕ್ಕೆ ಮಣಿದು ಸಿನಿಮಾ ನೋಡಲು ಹೋಗಿದ್ದಾನೆ. ಸಿನಿಮಾ ನೋಡಿ ಅವರಿಬ್ಬರಿಗೂ ಅರ್ಥವಾಗಲಿಲ್ಲ. ಈತನಿಗೆ ಅರ್ಥವಾಗಿತ್ತು" ಎಂದು ಉಪೇಂದ್ರ ಹೇಳಿದ್ದಾರೆ.
ಸ್ನೇಹಿತರು ಮತ್ತೆ ಸಿನಿಮಾ ನೋಡೋನ ಬಾ ಅಂದಾಗ ಇಲ್ಲ ನನಗೆ ಅರ್ಥ ಆಯ್ತು ನಾನು ಬರಲ್ಲ ಎಂದು ಹೋದವನು ಬಂದು 10 ವರ್ಷಗಳ ಬಳಿಕ ನನ್ನ ಭೇಟಿ ಆಗಿದ್ದ ಎಂದು ಉಪೇಂದ್ರ ವಿವರಿಸಿದ್ದಾರೆ. "ಆ ಸಿನಿಮಾ ನೋಡಿ 10 ವರ್ಷಗಳ ಬಳಿ ದೊಡ್ಡ ಪಬ್ಲಿಕೇಷನ್ ಆರಂಭಿಸಿ ನನ್ನ ಕುರಿತು ಒಂದು ಪುಸ್ತಕ ಬರೆದು ತಂದು ಕೊಟ್ಟು ಈ ಕಥೆ ಹೇಳಿದ್ದ. ಆ ಪುಸ್ತಕದ ಹೆಸರು "ಉಪ್ಪಿಗಿಂತ ರುಚಿ ಬೇರೆ ಇಲ್ಲ" ಅಂತ. ಈಗ ನನ್ನ ಬಳಿ 250 ಜನ ಕೆಲಸ ಮಾಡ್ತಿದ್ದಾರೆ. ಇದನ್ನು ನಿಮ್ಮ ಬಳಿ ಹೇಳಬೇಕು ಅಂತ ಬಂದೆ ಎಂದ. ಅದು ನನ್ನ ಜೀವನದಲ್ಲಿ ಮರೆಯೋಕ್ಕಾಗದು. ಒಂದು ಸಿನಿಮಾದಿಂದ ಇದೆಲ್ಲಾ ಆಗುತ್ತೆ ಎನ್ನುವ ತೃಪ್ತಿ ಎಲ್ಲಕ್ಕಿಂತ ಮಿಗಿಲು" ಎಂದು ತಿಳಿಸಿದ್ದಾರೆ. ಈ ವೀಡಿಯೋ ವೈರಲ್ ಆಗ್ತಿದೆ.
ಕನ್ನಡ ನಟ ಉಪೇಂದ್ರ ತೆಲುಗಿನಲ್ಲಿ ಕೂಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ದಶಕಗಳ ಹಿಂದೆಯೇ ಉಪ್ಪಿ ನಟನೆಯ 'ಎ' ಹಾಗೂ 'ಉಪೇಂದ್ರ' ಸಿನಿಮಾಗಳು ತೆಲುಗಿಗೆ ಡಬ್ ಆಗಿದ್ದವು. 'ಓಂ' ಚಿತ್ರವನ್ನು ತೆಲುಗಿಗೆ ರೀಮೆಕ್ ಮಾಡಿದ್ದರು. ಬಳಿಕ ಒಂದೆರಡು ತೆಲುಗು ಸಿನಿಮಾಗಳಲ್ಲಿ ಹೀರೊ ಆಗಿ ಮಿಂಚಿದ್ದರು. ಇದೀಗ 'ಆಂಧ್ರಕಿಂಗ್ ತಾಲೂಕ' ಚಿತ್ರದ ಟೈಟಲ್ ರೋಲ್ನಲ್ಲಿ ರಿಯಲ್ ಸ್ಟಾರ್ ನಟಿಸಿದ್ದಾರೆ. ಮಹೇಶ್ ಬಾಬು ಪಂಚಿಗೊಲ್ಲ ಎಂಬುವವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಸಿನಿಮಾ ನಟರನ್ನು ಆರಾಧಿಸುವ ಅಭಿಮಾನಿಗಳ ಕಥೆ ಈ ಚಿತ್ರದಲ್ಲಿದೆ. ಆಂಧ್ರಕಿಂಗ್ ಬಿರುದು ಪಡೆದ ನಟ ಸೂರ್ಯಕುಮಾರ್(ಉಪೇಂದ್ರ) ಅಭಿಮಾನಿ ಸಾಗರ್(ರಾಮ್) ಕಥೆ ಈ ಚಿತ್ರದಲ್ಲಿದೆ. ಈ ವಾರ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಸಿನಿಮಾ ಹೀರೋ ಅಭಿಮಾನದಲ್ಲಿ ಮುಳುಗಿದ ಯುವಕನ ಜೀವನ ಮುಂದೆ ಹೇಗೆಲ್ಲಾ ಬದಲಾಗುತ್ತದೆ ಎನ್ನುವ ಕಥೆಯನ್ನು ಕಟ್ಟಿಕೊಡಲಿದ್ದಾರೆ. ಅಭಿಮಾನ ಎನ್ನುವುದು ಏನು ಬೇಕಾದರೂ ಮಾಡಿಸುತ್ತದೆ ಎನ್ನುವ ಸಂಗತಿಯನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.
ಕ್ರಿಸ್ಮಸ್ ಸಂಭ್ರಮದಲ್ಲಿ ಉಪೇಂದ್ರ ನಟನೆಯ '45' ಸಿನಿಮಾ ಕೂಡ ಬಿಡುಗಡೆ ಆಗ್ತಿದೆ. ಶಿವಣ್ಣ ಹಾಗೂ ರಾಜ್. ಬಿ ಶೆಟ್ಟಿ ಈ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. 'ಭಾರ್ಗವ' ಎಂಬ ಮತ್ತೊಂದು ಚಿತ್ರದಲ್ಲಿ ರಿಯಲ್ ಸ್ಟಾರ್ ಬಣ್ಣ ಹಚ್ಚಿದ್ದಾರೆ. ನಾಗಣ್ಣ ಈ ಚಿತ್ರದ ಸಾರಥ್ಯ ವಹಿಸಿದ್ದಾರೆ.


Click it and Unblock the Notifications











