'ಬೊಂಬೆ ಹೇಳುತೈತೆ' ಹಾಡಿಗೆ ಸಾಹಿತ್ಯ ನಾನು ಬರಿದೇ ಇದ್ದಿದ್ದೇ ಒಳ್ಳೆದಾಯ್ತು- ವಿ. ನಾಗೇಂದ್ರ ಪ್ರಸಾದ್
ಪುನೀತ್ ರಾಜ್ಕುಮಾರ್ ಸಿನಿಮಾಗಳಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹಳ ಜನಪ್ರಿಯವಾಗಿದ್ದು ಅವರು ಅಗಲಿಕೆ ಬಳಿಕ ಕಾಡಿದ್ದು 'ಬೊಂಬೆ ಹೇಳುತೈತೆ'. ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಜಕುಮಾರ' ಚಿತ್ರದ ಹಾಡಿದು.
ವಿ. ಹರಿಕೃಷ್ಣ ಸಂಗೀತ ಹಾಡಿಗೆ ಸ್ವತಃ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯ ಬರೆದಿದ್ದರು. ವಿಜಯ ಪ್ರಕಾಶ್ ಗಾಯನದಲ್ಲಿ ಹಿಟ್ ಆಗಿತ್ತು. ಅಂದಹಾಗೆ ವಿ. ನಾಗೇಂದ್ರ ಪ್ರಸಾದ್ ಈ ಗೀತೆಗೆ ಸಾಹಿತ್ಯ ಪೋಣಿಸಬೇಕಿತ್ತು. 2 ತಿಂಗಳ ಕಾಲ ಅದ್ಯಾಕೋ ಸಾಧ್ಯವಾಗಲಿಲ್ಲ. ಕೊನೆಗೆ ನೀವೇ ಬರೆದುಬಿಡಿ ಎಂದು ನಿರ್ದೇಶಕರಿಗೆ ಹೇಳಿಬಿಟ್ಟರಂತೆ. ಆ ಹಾಡು ಬರೆಯದೇ ಇದ್ದಿದ್ದೇ ಒಳ್ಳೆದಾಯ್ತು ಅನ್ನಿಸುತ್ತೆ ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಗೀತಸಾಹಿತಿಯಾಗಿ ನಿರ್ದೇಶಕರಾಗಿ ನಾಗೇಂದ್ರ ಪ್ರಸಾದ್ ಹೆಸರು ಮಾಡಿದ್ದಾರೆ. ನೂರಾರು ಗೀತೆಗಳಿಗೆ ಸಾಹಿತ್ಯ ಬರೆದಿದ್ದಾರೆ. ತಮ್ಮ ಪದಗಳಿಂದ ಹಾಡುಗಳನ್ನು ಹಿಟ್ ಮಾಡಿ ಸಿನಿಮಾಗಳಿಗೆ ಬಲ ತುಂಬಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಸಿನಿಮಾಗಳಿಗೂ ಸಾಹಿತ್ಯ ಬರೆದು ಸೈ ಎನಿಸಿಕೊಂಡಿದ್ದಾರೆ. ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಅಪ್ಪು ಜೊತೆಗಿನ ಒಡನಾಟ ಹಂಚಿಕೊಂಡಿದ್ದಾರೆ.
"ಬೊಂಬೆ ಹೇಳುತೈತೆ ಸಾಂಗ್ ಟ್ಯೂನ್ 2 ತಿಂಗಳು ನನ್ನ ಬಳಿ ಇತ್ತು. ಆದರೆ ಯಾಕೋ ಸಾಹಿತ್ಯ ಬರೆಯೋಕೆ ಸಾಧ್ಯವಾಗಲೇ ಇಲ್ಲ. ನಾನು ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದೆ. ಆಗ ಒಂದು ಸಿನಿಮಾ ನಿರ್ದೇಶನ ಮಾಡ್ತಿದ್ದೆ. ವಿ. ಹರಿಕೃಷ್ಣ, ಸಂತೋಷ್ ಆನಂದರ್ ರಾಮ್ ಪದೇ ಪದೇ ಕೇಳ್ತಿದ್ರು. ಸಾಧ್ಯವಾಗಲೇ ಇಲ್ಲ. ಕೊನೆಗೆ ನಿರ್ದೇಶಕರಿಗೆ ಬರೆಯೋಕೆ ಹೇಳಿಬಿಟ್ಟೆ" ಎಂದು ವಿ. ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

ಮಾತು ಮುಂದುವರೆಸಿರುವ ನಾಗೇಂದ್ರ ಪ್ರಸಾದ್ "ನನಗೆ ಬಳಿಕ ಅನ್ನಿಸಿದ್ದು ಏನಂದ್ರೆ, ಆ ಹಾಡು ನಾನು ಬರೆಯದೇ ಇದ್ದಿದ್ದೇ ಒಳ್ಳೆದಾಯ್ತ ಅನ್ನಿಸ್ತಿತ್ತು. ಪದೇ ಪದೆ ಕಾಡುತ್ತಿತ್ತೋ ಏನೋ. ಅವರ ಅಗಲಿಕೆ ಬಳಿಕೆ ಎಲ್ಲೇ ಹೋದ್ರು, ಬಂದ್ರೂ ಅದೇ ಹಾಡು, ಆಗ ನಮ್ಮ ಮನಸ್ಸಿಗೆ ಹೇಗಾಗುತ್ತಿತ್ತು. ಸಕ್ಸಸ್ ಆಯ್ತು ಅಂತ ಸಂತೋಷ ಪಡಬೇಕಾ? ಹಿಂಗಾಯ್ತು ಅಂತ ದುಃಖ ಪಡಬೇಕಾ? ಅದಕ್ಕೆ ದೇವರು ಆ ಹಾಡು ನನ್ನ ಕೈಲಿ ಬರೆಸಲಿಲ್ಲ ಅನ್ನಿಸುತ್ತೆ" ಅಂದಿದ್ದಾರೆ.
'ಟಗರು ಬಂತು ಟಗರು' ಸಾಂಗ್ ಸೂಪರ್ ಹಿಟ್ ಆಗಿತ್ತು. ಆ ಹಾಡಿನ ಸಾಹಿತ್ಯ ಇಷ್ಟವಾಗಿ ಅಪ್ಪು ಸರ್ ಒಂದು ಬ್ಲೂತುತ್ ಸ್ಪೀಕರ್ ಗಿಫ್ಟ್ ಆಗಿ ಕಳುಹಿಸಿದ್ದರು. ಅವರದ್ದೇ ಪಿಆರ್ಕೆ ಆಡಿಯೋದಲ್ಲಿ ಸಾಂಗ್ ರಿಲೀಸ್ ಆಗಿತ್ತು. ಅದು ನನಗೆ ಅವರಿಂದ ಸಿಕ್ಕ ಕೊನೆ ಪ್ರಶಂಸೆ. ಅವರ ಸಿನಿಮಾಗಳಲ್ಲಿ 40ರಿಂದ 50 ಹಾಡುಗಳಿಗೆ ನಾನು ಸಾಹಿತ್ಯ ಬರೆದಿದ್ದೇನೆ.
'ಅಭಿ' ಚಿತ್ರಕ್ಕೆ ಕೆಲಸ ಮಾಡಲು ಆರಂಭಿಸಿದೆ. ನನಗೂ ಅವರಿಗೂ ವಯಸ್ಸಿನಲ್ಲಿ 6 ತಿಂಗಳ ವ್ಯತ್ಯಾಸ. ವಜ್ರೇಶ್ವರಿ ಕಂಬೈನ್ಸ್ ಆಫೀಸ್ನಲ್ಲಿ ಒಮ್ಮೆ ಭೇಟಿಯಾಗಿ ನನ್ನ ಹುಟ್ಟುಹಬ್ಬ ಅಂತ ಗೊತ್ತಾಗಿ ಅಣ್ಣಾವ್ರಿಗೂ ಹೇಳಿದ್ರು. ಸಿಹಿ ತಂದು ಕೊಟ್ಟಿದ್ದರು. 'ಚಕ್ರವ್ಯೂಹ' ಚಿತ್ರದ ಸಮಯದಲ್ಲಿ ಒಂದು ಪುಸ್ತಕ ಕೇಳಿದ್ರು. ಸರಳವಾಗಿ ಓದಬಹುದಾದ ಕನ್ನಡ ಪುಸ್ತಕ ಕೊಡಿ ಅಂತ ಅಂದಿದ್ರು. ಯಾಕೋ ಕೊಡಲು ಸಾಧ್ಯವಾಗಲಿಲ್ಲ ಎಂದು ನಾಗೇಂದ್ರ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











