ವೈಷ್ಣವಿ ಗೌಡಗೆ ಈ ಮೊದಲು ಬಂದಿತ್ತು 300 ಮದುವೆ ಪ್ರಪೋಸಲ್,ಕನಸಿನ ಹುಡುಗನ ಬಗ್ಗೆ ಕಿಚ್ಚನ ಎದುರು ಹೇಳಿದ್ದೇನು ಸೀತಾ?
ತಮ್ಮ ಒರಿಜಿನಲ್ ಹೆಸರನ್ನೇ ಮರೆಯಾಗಿಸುವಂತೆ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಎಂದೇ ಖ್ಯಾತಿಯನ್ನ ಗಳಿಸಿದವರು ವೈಷ್ಣವಿ ಗೌಡ. ತಮ್ಮ ಅಭಿನಯದಿಂದ ಕನ್ನಡಿಗರ ಮನೆ ಮತ್ತು ಮನವನ್ನ ತಲುಪಿದ ವೈಷ್ಣವಿ ಗೌಡ ಭರ್ಜರಿ ಕಾಮಿಡಿ ಎಂಬ ಕಾರ್ಯಕ್ರಮದ ನಿರೂಪಕಿಯೂ ಹೌದು. ಬಿಗ್ ಬಾಸ್ ನ ಮಾಜಿ ಸ್ಫರ್ಧಿಯೂ ಹೌದು. ಕಿರುತೆರೆಯಿಂದ ಹಿರಿತೆರೆಗೆ ತೆರಳಿ ಆ ನಂತರ ಮತ್ತೆ ಮರಳಿ ಕಿರುತೆರೆಗೆ ಬಂದ ವೈಷ್ಣವಿ ಗೌಡ ಸದ್ಯಕ್ಕೆ ಸೀತಾ ಎಂದೇ ಜನಪ್ರಿಯರಾಗಿದ್ದಾರೆ.
ಸೀತಾ ರಾಮ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಪಾಲಿಗಿವರು ಮನೆಮಗಳೇ ಆಗಿ ಹೋಗಿದ್ದಾರೆ. ಇಂಥಾ ವೈಷ್ಣವಿ ಗೌಡ ಸದ್ಯ ಹೊಸ ಬದುಕಿಗೆ ಮುನ್ನುಡಿ ಬರೆಯಲು ಅಣಿಯಾಗಿದ್ದಾರೆ. ಅನುಕೂಲ್ ಮಿಶ್ರಾ ಅವರ ಜೊತೆ ನಿನ್ನೆ ಅದ್ಧೂರಿಯಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಸದ್ದು ಗದ್ದಲ ಇಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡು ತಮ್ಮ ಅಭಿಮಾನಿಗಳನ್ನು ಅಚ್ಚರಿಗೆ ಕೂಡ ದೂಡಿದ್ದಾರೆ.

ಇನ್ನೂ ವೈಷ್ಣವಿಗೆ ಅವರ ಭಾವಿ ಪತಿ ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಉಂಗುರ ತೊಡಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಕೂಡ. ಆದರೆ, ನಿಮಗೆ ಗೊತ್ತಾ ವೈಷ್ಣವಿ ಗೌಡ ಅವರನ್ನು ಮದುವೆಯಾಗಲು ಅನೇಕರು ಬಯಸಿದ್ದರು. ತಮ್ಮ ಕುಲ-ಗೋತ್ರ-ಜಾತಕವನ್ನು ಕಳುಹಸಿದ್ದರು. ಖುದ್ದು ವೈಷ್ಣವಿ ಗೌಡ ಅವರೇ ಈ ಹಿಂದೆ ಹೇಳಿಕೊಂಡಂತೆ ಈ ಮಾತು ಹೇಳಿಕೊಂಡಿದ್ದು ಇದೆ. 200-300 ಪ್ರಪೋಸಲ್ಗಳು ಬಂದಿವೆ ಎಂದು ಹೇಳಿದ್ದ ವಿಡಿಯೋ ಇವತ್ತು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹೌದು, ಕೊರೊನಾ ಎರಡನೇ ಅಲೆ ಎದ್ದಾಗ ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 8ರಲ್ಲಿ ಭಾಗವಹಿಸಿದ್ದರು. ಕೊರೊನಾ ಹಿನ್ನೆಲೆ ಈ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. 42 ದಿನಗಳ ನಂತರ ಮರುಚಾಲನೆಯನ್ನು ನೀಡಲಾಗಿತ್ತು. ಈ 42 ದಿನಗಳ ಅಂತರದಲ್ಲಿ ವೈಷ್ಣವಿ ಗೌಡ ಅವರಿಗೆ ಭರ್ಜರಿ ಮದುವೆ ಪ್ರಪೋಸಲ್ಗಳು ಕೂಡ ಬಂದಿದ್ದವು.
ಈ ಕುರಿತು ವೇದಿಕೆಯ ಮೇಲೆ ಕಿಚ್ಚ ಸುದೀಪ್ ಅವರ ಜೊತೆ ಅಂದು ಮಾತನಾಡಿದ್ದ ವೈಷ್ಣವಿ ಗೌಡ ಬಿಗ್ ಬಾಸ್ನಲ್ಲಿನ ಈ ಸೆಕೆಂಡ್ ಇನಿಂಗ್ಸ್ ನನಗೆ ಸಿಕ್ಕ ಮತ್ತೊಂದು ಅವಕಾಶ ಈ ಬಾರಿ ಎಷ್ಟು ಸಾಧ್ಯವೋ ಅಷ್ಟು ಖುಷಿ ಖುಷಿಯಾಗಿ ಆಡುವ ಪ್ರಯತ್ನ ಮಾಡುವುದಾಗಿ ಹೇಳಿದ್ದರು. ಎಲ್ಲ ಸಂದರ್ಭಗಳನ್ನು ನಾನು ಎದುರಿಸುತ್ತೇನೆ, ನಗು ನಗುತ್ತಾ ಇರುತ್ತೇನೆ ಎಂದು ಹೇಳಿದ್ದ ವೈಷ್ಣವಿ ನನ್ನ ತಾಯಿಗೆ ನಾನು ಚಪಾತಿಯನ್ನು ಕದ್ದು ಮುಚ್ಚಿ ತಿಂದಿದ್ದು ಮತ್ತು ಪದೇ ಪದೇ ಮದುವೆಯ ಬಗ್ಗೆ ಮಾತನಾಡಿದ್ದು ಇಷ್ಟವಾಗಲಿಲ್ಲ ಎಂದು ಹೇಳಿದ್ದರು.
ಇದೇ ಸಂದರ್ಭದಲ್ಲಿ ಸುದೀಪ್ ಹೋಗಲಿ ಮದುವೆ ಪ್ರಪೋಸಲ್ ಬಂತಾ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ವೈಷ್ಣವಿ ಗೌಡ ಅಯ್ಯೋ ಸಿಕ್ಕಾಪಟ್ಟೆ ಬಂತು ಸಾರ್ ಎಂದು ಹೇಳಿದ್ದರು. ಆ ನಂತರ ಸುದೀಪ್ ಅದರಲ್ಲಿ ಬೆಸ್ಟ್ ಅಂತ ಯಾವುದಾದರೂ ಎಂದು ಕೇಳಿದ್ದರು. ಇದಕ್ಕೆ ವೈಷ್ಣವಿ ಆ ಥರಹದ್ದು ಯಾವುದು ಇಲ್ಲ ಸರ್ ಎಂದು ಹೇಳಿದ್ದರು. ಆಗ ನಿಮ್ಮ ಪ್ರಕಾರ ಬೆಸ್ಟ್ ಪ್ರಪೋಸಲ್ ಅಂದರೆ ಯಾವುದು ಎಂದು ಸುದೀಪ್ ಕೇಳಿದಾಗ ಮೀಸೆ ದಾಡಿ ಇರಬೇಕು, ಆಡಂಬರವಿಲ್ಲದೇ ಸರಳವಾಗಿ ಇರಬೇಕು ಎಂದು ಹೇಳಿದ್ದರು ವೈಷ್ಣವಿ ಗೌಡ.
ಮುಂದುವರೆದು ನಿಮ್ಮ ಪ್ರಕಾರ ಸಿಂಪಲ್ ಅಂದರೇನು ಎಂದು ಸುದೀಪ್ ಪ್ರಶ್ನೆ ಮಾಡಿದಾಗ, ಈಡೀ ಜಗತ್ತು ಹೇಗೆ ನಡೆಯುತ್ತೆ ಅಂದರೆ ಜನರು ತುಂಬಾ ಗೊಂದಲ ಮಾಡ್ಕೊಂಡು, ಯೋಚನೆ ಮಾಡ್ಕೊಂಡು ಬದುಕುತ್ತಾರೆ, ನನ್ನ ಪ್ರಕಾರ ಎಲ್ಲ ವಿಚಾರವನ್ನು ಹಗುರವಾಗಿ ಪರಿಗಣಿಸಬೇಕು, ಬದುಕನ್ನು ಖುಷಿ ಖುಷಿಯಾಗಿ ಎಂಜಾಯ್ ಮಾಡಬೇಕು ಎಂದಿದ್ದ ವೈಷ್ಣವಿ ಗೌಡ ಜೀವನ ಅಂದರೆ ಕಷ್ಟ ಸುಖ ಎಲ್ಲ ಇರುತ್ತೆ, ಅದನ್ನು ಸರಳವಾಗಿ ಸ್ವೀಕರಿಸಬೇಕು ನಗು ನಗುತ್ತಾ ಇರಬೇಕು, ಅವರ ಪಾಡಿಗೆ ಅವರು ಆರಾಮಾಗಿದ್ದರೆ ಸಾಕು ಮಿಕ್ಕಿದ್ದೆಲ್ಲ ನಾನು ನೋಡ್ಕೋತಿನಿ ಎಂದು ಹೇಳಿದ್ದರು.
ವೈಷ್ಣವಿ ಗೌಡ ಅವರ ಈ ಮಾತುಗಳಿಗೆ ನೀವು ಮದುವೆ ಆದಂಗೆ ಎಂದು ಕಾಲೆಳೆದಿದ್ದ ಸುದೀಪ್, 43 ದಿನ ಹೊರಗಡೆ ಇದ್ರೀ,ಅಂದಾಜು ಎಷ್ಟು ಪ್ರಪೋಸಲ್ ಬಂದಿರಬಹುದು ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಆಗಿರಬಹುದು ಸರ್, 200-300 ಬಂದಿರಬಹುದು ಎಂದು ವೈಷ್ಣವಿ ಗೌಡ ಹೇಳಿದಾಗ ಅದರಲ್ಲಿ ಯಾವುದು ಇಷ್ಟವಾಗಿಲ್ವಾ ಎಂದು ಸುದೀಪ್ ಪ್ರಶ್ನೆ ಮಾಡಿದ್ದರು. ಆಗ ಒಂದು ನೋಡಬೇಕು ಅಂತಲೇ ಅನ್ನಿಸಲಿಲ್ಲ ಸರ್, ಯಾಕೆಂದರೆ ನಾನು ಯಾವಾಗಲೂ ನನ್ನ ಮನಸಿನ ಮಾತು ಕೇಳುತ್ತೇನೆ, ಹೀಗಾಗಿ ಯಾವುದು ನನಗೆ ಕನೆಕ್ಟ್ ಆಗಲೇ ಇಲ್ಲ ಎಂದು ವೈಷ್ಣವಿ ಗೌಡ ಹೇಳಿದ್ದರು. ನೋಡದೇ ಇದ್ದರೆ ಹೇಗೆ ಕನೆಕ್ಟ್ ಆಗುತ್ತೆ ಎಂಬ ಸುದೀಪ್ ಪ್ರಶ್ನೆಗೆ ಪ್ರೀತಿ ಮೂಡಬೇಕು ಅಂದರೆ ಮುಖನೇ ನೋಡಬೇಕು ಅಂತಿಲ್ಲ ಎಂದು ಹೇಳಿದ್ದರು.
ಇಂಥಾ ವೈಷ್ಣವಿ ಗೌಡ ಸದ್ಯ ಕನ್ನಡ ಬಾರದ ಅನುಕೂಲ್ ಮಿಶ್ರಾ ಅವರನ್ನು ಇಷ್ಟಪಟ್ಟಿದ್ದಾರೆ. 200-300 ಪ್ರಪೋಸಲ್ಗಳು ಬಂದರೂ ಕೂಡ ಯಾರನ್ನು ನೋಡದ ವೈಷ್ಣವಿ ಗೌಡ, ಅನುಕೂಲ್ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಹಿಂದಿಯಲ್ಲಿಅನುಕೂಲ್ ಮಿಶ್ರಾ, ವೈಷ್ಣವಿ ಗೌಡ ಅವರಿಗೆ ಪ್ರಪೋಸ್ ಮಾಡಿದ ವಿಡಿಯೋ ಕೂಡ ವೈರಲ್ ಆಗಿದೆ.
ಇನ್ನು ವೈಷ್ಣವಿ ಗೌಡ ಬೇರೆ ರಾಜ್ಯದ ಸೊಸೆಯಾಗುತ್ತಿರುವ ಹಿನ್ನೆಲೆ ಇವರ ಅಭಿಮಾನಿಗಳಲ್ಲಿ ನೂರಾರು ಪ್ರಶ್ನೆಗಳೂ ಕೂಡ ಹುಟ್ಟಿಕೊಂಡಿವೆ. ಅಗ್ನಿಸಾಕ್ಷಿಯ ಸನ್ನಿಧಿ, ಸೀತಾರಾಮ ಧಾರಾವಾಹಿಯ ಸೀತಾ ಕನ್ನಡದ ಕಿರುತೆರೆಯಲ್ಲಿ ಇನ್ಮುಂದೆ ಕಾಣಿಸಿಲ್ವಾ ಎನ್ನುವ ಪ್ರಶ್ನಾರ್ಥಕ ಚಿಹ್ನೆ ಕೂಡ ಮೂಡಿದೆ. ವೈಷ್ಣವಿ ನಿಜಕ್ಕೂ ಕನ್ನಡದ ಕಿರುತೆರೆಯಿಂದ ದೂರವಾಗಿ ಮನೆ-ಗಂಡ-ಸಂಸಾರ ಅಂತ ಬ್ಯುಸಿಯಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನುಳಿದಂತೆ ಅಗ್ನಿ ಸಾಕ್ಷಿ ಮತ್ತು ಸೀತಾರಾಮ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಕನ್ನಡಿಗರ ಮನೆ ಮತ್ತು ಮನ ತಲುಪಿದ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ಸಮಾರಂಭಕ್ಕೆ ಕಿರುತೆರೆ ಮತ್ತು ಬೆಳ್ಳಿತೆರೆಯ ಅನೇಕ ಗಣ್ಯರು ಆಗಮಿಸಿದ್ದರು.ಅಮೂಲ್ಯ ತಮ್ಮ ಮಕ್ಕಳ ಜೊತೆ ಸಮಾರಂಭದಲ್ಲಿ ಭಾಗವಹಿಸಿದ್ದು ವಿಶೇಷ. ಮಿಕ್ಕಂತೆ ನಿರೂಪಕಿ ಚೈತ್ರಾ ವಾಸುದೇವನ್, ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಚಿತ್ಕಳಾ ಬಿರಾದಾರ್, ಇಶಿತಾ ವರ್ಷ - ಮುರುಗಾನಂದ ದಂಪತಿ, ಹೀಗೆ ಹಲವರು ಬಂದು ನವ ಜೋಡಿಗೆ ಶುಭ ಕೋರಿದ್ದರು. ಇನ್ನು ನಿಶ್ಚಿತಾರ್ಥ ಸಮಾರಂಭ ನಡೆದ ನಂತರ ಮಾತನಾಡಿದ್ದ ವೈಷ್ಣವಿ ಗೌಡ ಅವರ ತಾಯಿ ನಮಗೆ ಒಳ್ಳೆಯ ಅಳಿಯ ಸಿಕ್ಕಿದ್ದಾನೆ. ನಮಗಂತೂ ತುಂಬಾ ಖುಷಿಯಾಗಿದೆ ಎಂದು ವೈಷ್ಣವಿ ಗೌಡ ಅವರ ತಾಯಿ ಕೂಡ ಹೇಳಿದ್ದರು.
ಸದ್ಯ ಅನುಕೂಲ್ ಮಿಶ್ರಾ ಅವರ ಜೊತೆ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮದುವೆಯ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿವೆ. ಇನ್ನು ಮದುವೆಯ ನಂತರ ವೈಷ್ಣವಿ ಅಭಿನಯಿಸುತ್ತಾರಾ ಇಲ್ಲವಾ ಎಂಬ ಪ್ರಶ್ನೆಗೆ ಕೂಡ ಉತ್ತರ ಇನ್ನು ಸಿಗಬೇಕಿದೆ. ಒಟ್ನಲ್ಲಿ ಸದ್ಯ ವೈಷ್ಣವಿ ಗೌಡ ಮತ್ತು ಅನುಕೂಲ್ ಮಿಶ್ರಾ ಅವರ ನಿಶ್ಚಿತಾರ್ಥ ಸಮಾರಂಭದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ವರ್ಷದ ಅಂತ್ಯದಲ್ಲಿ ಇಬ್ಬರು ಮದುವೆಯ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ.


Click it and Unblock the Notifications











