'ಪ್ರೇಮ ಕುರುಡಲ್ಲ'..'ಮನಿ'ಸ್ಥಿತಿಗಿಂತ ಮನಸ್ಥಿತಿ ಅತ್ಯವಶ್ಯಕ
ಪ್ರೀತಿ ಪ್ರೇಮದ ಬಗ್ಗೆ ಇರುವ ಮಾತುಗಳಲ್ಲಿ ಶಾಸನದಂತೆ ಹೆಚ್ಚು ಪ್ರಚಲಿತದಲ್ಲಿರುವುದು 'ಪ್ರೇಮ ಕುರುಡು' ಎಂಬ ಮಾತು. ನನ್ನ ಪ್ರಕಾರ ಒಂದು ರೀತಿಯಲ್ಲಿ ಇದು ಪ್ರೀತಿಯಲ್ಲಿ ನಡೆಯುವ ಬಹಳಷ್ಟು ತಪ್ಪು ನಿರ್ಧಾರಗಳಿಗೆ ನಿರೀಕ್ಷಣಾ ಜಾಮೀನಿನ ರೀತಿಯಲ್ಲಿ ಬಳಕೆ ಆಗುತ್ತಿರುವುದೇ ಹೆಚ್ಚು. ಪ್ರೀತಿ ನಿಜಕ್ಕೂ ಕುರುಡಾಗಬಾರದು. ಬದುಕನ್ನು ಸುಂದರವಾದ ಹಾದಿಯಲ್ಲಿ ನಡೆಸುವ 'ದಿವ್ಯ ದೃಷ್ಟಿ' ಆಗಬೇಕು.
ಪ್ರೇಮ ಅಕಾರಣವಾಗಿರುವುದಕ್ಕಿಂತ ಸಕಾರಣ ಆಗಿದ್ದರೇ ಹೆಚ್ಚು ಕಾಲ ಬಾಳುತ್ತದೆ. ಯಾರನ್ನೋ ಕಂಡಕೂಡಲೇ ಪೂರ್ವಾಪರ ಅರಿವಿಲ್ಲದೇ ಅವರೆಡೆಗೆ ಮೂಡುವ ಭಾವನೆಯನ್ನೇ ಪ್ರೀತಿ ಎಂದು ತಪ್ಪು ತಿಳಿಯಲಾಗುತ್ತಿದೆ. ಅದೊಂದು ಮೋಹ, ಆಕರ್ಷಣೆ ಅಷ್ಟೇ. ಮೋಹ , ಆಕರ್ಷಣೆಯಿಂದ ಆರಂಭವಾಗಿ ಆ ಭಾವನೆ ಪರಸ್ಪರ ಒಡನಾಟ, ಅರಿವಿನಿಂದ ಸಾಂದ್ರಗೊಂಡು ಗಟ್ಟಿಯಾದರೆ ಮಾತ್ರ ಅದು ಪ್ರೀತಿ.

ಯಾರದೋ ಬಾಹ್ಯ ಸೌಂದರ್ಯವೋ, ದೇಹದಾರ್ಡ್ಯವೋ, ಅವರ ಶೈಲಿಯೋ, ಸಿರಿವಂತಿಕೆಯೋ ಪ್ರೀತಿ ಹುಟ್ಟಿಸಿಬಿಡಬಾರದು. ಯಾಕೆಂದರೆ ಇವ್ಯಾವು ಶಾಶ್ವತವಲ್ಲ. ಇವೆಲ್ಲಾ ಇದ್ದು ನೀವು ಪ್ರೀತಿಗೆ ಬೀಳಲಿರುವ ವ್ಯಕ್ತಿ ಸಹೃದಯಿ ಅಲ್ಲವಾದರೆ ನಿಮ್ಮ ಅವರೊಂದಿಗಿನ ನಿಮ್ಮ ಬದುಕು ಚಂದವಾಗಿರಲು ಸಾಧ್ಯವೇ ಇಲ್ಲ. ಒಬ್ಬ ವ್ಯಕ್ತಿಯೊಂದಿಗೆ ಬದುಕು ಹಂಚಿಕೊಂಡು ಖುಷಿ ಆಗಿರಬೇಕೆಂದರೆ ಅವರ ಬಹಿರಂಗಕ್ಕಿಂತಾ ಅಂತರಂಗ ಚೆನ್ನಾಗಿರಬೇಕು.
'ಮನಿ' ಸ್ಥಿತಿಗಿಂತ ಮನಸ್ಥಿತಿಗಳು ಹೊಂದಬೇಕಾಗಿರುವುದು ಅತ್ಯವಶ್ಯಕ. ಇಲ್ಲವಾದರೆ ಎಲ್ಲಾ ಇದ್ದೂ ಏನೂ ಇರದ ಪರಿಸ್ಥಿತಿ ಬರುತ್ತದೆ.

ಪ್ರೀತಿ ಮೂಡಬೇಕಿರುವುದು ಆ ವ್ಯಕ್ತಿಯ ಅಂತರ್ಯದ ಗುಣಗಳಿಗೆ ಮಾರು ಹೋಗಿ. ಅಂತರಂಗ ಕೇವಲ ಒಂದು ನೋಟದಲ್ಲಿ ಅರಿವಾಗಿ ಬಿಡುವಂತದಲ್ಲ. ಪರಸ್ಪರ ಅರಿತುಕೊಳ್ಳಲು ಒಂದಷ್ಟು ಸಮಯ ತೆಗೆದುಕೊಳ್ಳಲೇಬೇಕು. ನಿಮ್ಮ ಸಂಗಾತಿಯನ್ನು ಆಯ್ದುಕೊಳ್ಳಬೇಕಾದ ಹಾದಿಯಲ್ಲಿ, ದುಡುಕದೇ ಒಂದಷ್ಟು ವಿವೇಚನೆಯಿಂದ ನಿರ್ಧಾರ ಕೈಗೊಳ್ಳಿ ಎಂಬುದೇ ಪ್ರೇಮಿಗಳ ದಿನದಂದು ಭವಿಷ್ಯದ ಪ್ರೇಮಿಗಳಲ್ಲಿ ನನ್ನ ಮನವಿ.


Click it and Unblock the Notifications











