ರೇ*ಪ್ ಸೀನ್ ಬೇಡ ಅಂದ್ರು ಡ್ಯೂಪ್ ಹಾಕಿ ಶೂಟ್ ಮಾಡಿದ್ರು, ಬಳಿಕ ಭಯವಾಗಿತ್ತು; ಮಗಳ ಜೊತೆ ವಾಣಿಶ್ರೀ ಮಾತು
ಸಿನಿಮಾ ಕಥೆ ಬಯಸುತ್ತೆ ಎನ್ನುವ ಕಾರಣಕ್ಕೆ ತಮಗೆ ಇಷ್ಟವಿಲ್ಲದ ಸನ್ನಿವೇಶಗಳಲ್ಲಿ ಕೂಡ ಕೆಲವೊಮ್ಮೆ ನಟ, ನಟಿಯರು ನಟಿಸಬೇಕಾಗುತ್ತದೆ. ಹಸಿಬಿಸಿ ದೃಶ್ಯ, ಲಿಪ್ಲಾಕ್, ರೇ*ಪ್ ಸೀನ್ಗಳಲ್ಲಿ ನಟಿಸೋಕೆ ಕೆಲವರು ಹಿಂದೇಟು ಹಾಕುತ್ತಾರೆ. ಇದೇ ಕಾರಣಕ್ಕೆ ಅವಕಾಶಗಳನ್ನು ಕಳೆದುಕೊಂಡಿರುವ ಉದಾಹರಣೆಗಳಿವೆ. ನಟಿ ವಾಣಿಶ್ರೀ ತಮಗಾಗಿದ್ದ ಕಹಿ ಅನುಭವವನ್ನು ನೆನಪಿಸಿಕೊಂಡಿದ್ದಾರೆ.
90ರ ದಶಕದಲ್ಲಿ ಪೋಷಕ ಪಾತ್ರಗಳಲ್ಲಿ ವಾಣಿಶ್ರೀ ಹೆಚ್ಚು ನಟಿಸುತ್ತಿದ್ದರು. 'ಓಂ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ಬಳಿಕ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದರು. ನಾಯಕ ಅಥವಾ ನಾಯಕಿಯ ತಂಗಿ, ಅಕ್ಕ ತರಹದ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. The New Indian Times ಯೂಟ್ಯೂಬ್ ಚಾನಲ್ ಪಾಡ್ಕಾಸ್ಟ್ನಲ್ಲಿ ನಟಿ ವಾಣಿಶ್ರೀ ಮಾತನಾಡಿದ್ದಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಾಣಿಶ್ರೀ ಅವರ ಪುತ್ರಿ ಖುಷಿ ಈ ಸಂದರ್ಶನ ನಿರೂಪಣೆ ಮಾಡಿರುವುದು ವಿಶೇಷ. 'ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ' ಚಿತ್ರದಲ್ಲಿ ನಟಿಸಿದ ಬಗ್ಗೆ ಅವರು ನೆನಪಿಸಿಕೊಂಡಿದ್ದಾರೆ.

ಆಗ ತಂಗಿ ರೇ*ಪ್ ಆದಾಗ ಹೀರೊ ಆವೇಶದಿಂದ ಸೇಡು ತೀರಿಸಿಕೊಳ್ಳುವಂತಹ ಸಿನಿಮಾಗಳು ಆಗ ಜಾಸ್ತಿ ಬರ್ತಿತ್ತು. ಒಟ್ಟಾರೆ ಕುಟುಂಬಕ್ಕೆ ಪೆಟ್ಟಾದಾಗ ಹೀರೊ ಸಿಡಿದೇಳುವಂತಹ ಕಥೆಗಳು. ಅಂತಹ ಟ್ರೆಂಡ್ ಇದ್ದಾಗಲೇ ನಾನು ಒಂದೆರಡು ಸಿನಿಮಾಗಳನ್ನು ನಿರಾಕರಿಸಿದ್ದೆ. 'ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ' ಸಿನಿಮಾ ಅವಕಾಶ ಬಂದಾಗಲೂ ಇಂತಹ ಸನ್ನಿವೇಶ ಇದ್ದರೆ ನಾನು ನಟಿಸಲ್ಲ ಎಂದಿದ್ದೆ. ಇಲ್ಲ ಅಂತಹ ದೃಶ್ಯ ಇಲ್ಲ ಎಂದಿದ್ದರು. 5 ಸಾವಿರ ರೂ. ಅಡ್ವಾನ್ಸ್ ಕೊಟ್ಟಿದ್ರು. ನಡುವೆ ಅನುಮಾನ ಬಂದು ಕೇಳಿದಾಗಲೂ ಇಲ್ಲ, ಅಂತಹ ಯಾವುದೇ ಸನ್ನಿವೇಶ ಇಲ್ಲ ಎಂದು ಹೇಳಿದ್ರು. 10 ದಿನಗಳ ಬಳಿಕ ರೇ*ಪ್ ಸೀನ್ ಅಂದ್ರು.. ಯಾರದ್ದು ಅಂದಾಗ ನಂದೇ ಅಂದ್ರು ಎಂದು ಆ ಘಟನೆ ಬಗ್ಗೆ ವಾಣಿಶ್ರೀ ಹೇಳಿದ್ದಾರೆ.
ನಾನು ಅಂತಹ ಸನ್ನಿವೇಶದಲ್ಲಿ ನಟಿಸಲ್ಲ ಎಂದು ಉಪವಾಸ ಮಾಡ್ದೆ. ಹಠ ಹಿಡಿದೆ. ಆಗ ಮಾಲಾಶ್ರೀ ಅವರಿಗೆ ಒಬ್ಬರು ಡ್ಯೂಪ್ ಹಾಕ್ತಿದ್ರು. ಆಕೆಯನ್ನು ಕರೆಸಿ ಚಿತ್ರೀಕರಣ ಮಾಡಿದ್ರು.. ಅದರಲ್ಲಿ ನನ್ನದು ಕುರುಡಿ ಪಾತ್ರ.. ಅವ್ನು ಎಳ್ಕೊಂಡು ಹೋಗ್ತಾನೆ, ಬಳಿಕ ಅಳುತ್ತಾ ವಾಪಸ್ ಬರ್ತೀನಿ.. ಎಂತಹ ಪೆದ್ದಿ ನಾನು ಅಂದ್ರೆ.. ರೇ*ಪ್ ಸೀನ್ ಅಲ್ಲಿ ಯಾರೇ ನಟಿಸಿದ್ರು, ಮುಖ ನನ್ನದೇ ತೋರಿಸ್ತಾರಲ್ಲ ಎನ್ನುವುದು ಗೊತ್ತಾಗಲಿಲ್ಲ. ಅಷ್ಟು ಬುದ್ದಿ ಇರಲಿಲ್ಲ. ಯಾರೋ ಮಾಡ್ತಾರೆ, ನಾನು ಇರಲ್ವಲ್ಲ ಎಂದು ಖುಷಿಯಾಗಿದ್ದೆ. ಬೇರೆಯವ್ರು ನಟಿಸಿದ್ರು ನನ್ನದೇ ಮುಖ ತೋರಿಸ್ತಾರಲ್ಲ ಅಂತ ಸಿನಿಮಾ ಬಿಡುಗಡೆಗೆ ಒಂದು ದಿನ ಮುನ್ನ ಭಯ ಶುರುವಾಗಿತ್ತು, ಎಂದಿದ್ದಾರೆ.
ಸಿನಿಮಾ ಬಿಡುಗಡೆ ದಿನ ನಾವು ನೋಡಲು ಹೋಗಲಿಲ್ಲ. ಅಮ್ಮ ಪಕ್ಕದ ಮನೆಯವರಿಗೆ ಹೇಳಿ ಏನಾದರೂ ಅಂತಹ ಸನ್ನಿವೇಶ ಇದ್ಯಾ ನೋಡ್ಕೊಂಡು ಬನ್ನಿ ಎಂದಿದ್ರು. ಬಳಿಕ ಜಗ್ಗೇಶ್ ಸರ್ಗೆ ಫೋನ್ ಮಾಡಿದಾಗ ಸೆನ್ಸಾರ್ನಲ್ಲಿ ಎಲ್ಲಾ ಕಟ್ ಮಾಡಿದ್ದಾರೆ ಅಂದ್ರು. ಆಗ ರಿಲೀಫ್ ಎನಿಸಿತು. ಬರೀ ನಾನು ಹೋಗೋದು, ಬರೋದು ಸೀನ್ ಮಾತ್ರ ಇತ್ತು ಎಂದು ವಾಣಿಶ್ರೀ ವಿವರಿಸಿದ್ದಾರೆ. ಅಂತಹ ಘಟನೆಗಳು ನಡೆದಾಗ ನಾನು ಬಹಳ ದಿನ ಚಿತ್ರರಂಗದಲ್ಲಿ ಉಳಿಯಲ್ಲ ಎಂದು ಜಗ್ಗೇಶ್ ಸರ್ ಭಾವಿಸಿದ್ದರಂತೆ. ಬಳಿಕ ಕೆಲ ಸಿನಿಮಾಗಳಲ್ಲಿ ಅವರೊಟ್ಟಿಗೆ ನಟಿಸಿದ್ದೆ. ಪರವಾಗಿಲ್ಲ, ಇಲ್ಲೇ ಉಳಿದುಕೊಂಡಿದ್ದೀನಿ ಎಂದು ನವರಸ ನಾಯಕ ಮೆಚ್ಚಿಕೊಂಡಿದ್ದಾಗಿ ವಾಣಿಶ್ರೀ ತಿಳಿಸಿದ್ದಾರೆ.


Click it and Unblock the Notifications