ಆ ಚಿತ್ರದಲ್ಲಿ ರಾಮ್ಕುಮಾರ್ ಬದಲು ದರ್ಶನ್ ಹೀರೊ ಆಗಿ ನಟಿಸಬೇಕಿತ್ತು!
ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಪುತ್ರ ದರ್ಶನ್ ಕನ್ನಡ ಚಿತ್ರರಂಗದಲ್ಲಿ ಬಾಕ್ಸಾಫೀಸ್ ಸುಲ್ತಾನ್ ಎನಿಸಿಕೊಂಡಿದ್ದು ಗೊತ್ತೆಯಿದೆ. ಆದರೆ ಈ ಹಾದಿಯಲ್ಲಿ ಸಾಕಷ್ಟು ಏಳುಬೀಳು ಕಂಡು ದರ್ಶನ್ ಸ್ಟಾರ್ ನಟನ ಪಟ್ಟಕ್ಕೇರಿದ್ದರು. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಸಾಕಷ್ಟು ಅವಮಾನ, ಅಪಮಾನ ಎದುರಿಸಿದ್ದು ಇದೆ. ಕೆಲ ಅವಕಾಶಗಳು ಕೈತಪ್ಪಿದ್ದವು.
ತಂದೆ ಅಗಲಿಕೆ ಬಳಿಕ ಚಿತ್ರರಂಗಕ್ಕೆ ಬಂದು ಗೆಲ್ಲುವ ದರ್ಶನ್ ಕನಸು ಅಷ್ಟು ಸುಲಭವಾಗಿರಲಿಲ್ಲ. ನೀನಾಸಂನಲ್ಲಿ ಕಲಿಯುತ್ತಿದ್ದಾಗಲೇ ತಂದೆ ಅಗಲಿದ್ದರು. ಬಳಿಕ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುವಂತಾಯಿತು. ಅವಕಾಶಗಳು ಸಿಗದಿದ್ದಾಗ ಲೈಟ್ ಬಾಯ್ ಆಗಿ ಅಸಿಸ್ಟೆಂಟ್ ಕ್ಯಾಮರಾಮನ್ ಆಗಿ ಕೆಲಸ ಮಾಡಿದ್ದರು. ಬಳಿಕ ನೆಗೆಟಿವ್ ರೋಲ್ಗಳಲ್ಲಿ ಮಿಂಚಿದ್ದರು. ಅಂತಿಮವಾಗಿ 'ಮೆಜೆಸ್ಟಿಕ್' ಚಿತ್ರದ ಮೂಲಕ ಹೀರೊ ಆಗಿದ್ದರು.

'ಮೆಜೆಸ್ಟಿಕ್' ಸಿನಿಮಾ ಸಮಯದಲ್ಲೇ ಮತ್ತೊಂದು ಚಿತ್ರದಲ್ಲಿ ದರ್ಶನ್ ಹೀರೊ ಆಗಿ ನಟಿಸುವ ಬಗ್ಗೆ ಚರ್ಚೆಯಾಗಿತ್ತು. ನಿರ್ದೇಶಕರು ಆಸೆ ಪಟ್ಟರೂ ನಿರ್ಮಾಪಕರು ಒಪ್ಪಲಿಲ್ಲ. ಕೊನೆಗೆ ಆ ಪಾತ್ರ ರಾಮ್ಕುಮಾರ್ ಮಾಡುವಂತಾಗಿತ್ತು. ಅದೇ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ದರ್ಶನ್ ಬೇಕಿದ್ದರೆ ನಟಿಸಲಿ ಎಂದು ನಿರ್ಮಾಪಕರು ಹೇಳಿದ್ದರಂತೆ. ಆದರೆ ನಿರ್ದೇಶಕರು ಒಪ್ಪಲಿಲ್ಲ. ಅಂದಹಾಗೆ ಆ ಸಿನಿಮಾ ಹೆಸರು 'ಸಾಗರಿ'.
2004ರಲ್ಲಿ 'ಸಾಗರಿ' ಸಿನಿಮಾ ತೆರೆಗೆ ಬಂದಿತ್ತು. ಭಾವನಾ ರಾಮಣ್ಣ, ಅನಂತ್ ನಾಗ್, ಶರಣ್ ಈ ಚಿತ್ರದ ತಾರಾಗಣದಲ್ಲಿದ್ದರು. ವಿಕ್ಟರಿ ವಾಸು ಈ ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ವಿಷ್ಣುವರ್ಧನ್ ನಟಿಸಿದ ಆಪ್ತಮಿತ್ರ ಹಾಗೂ ಸಾಗರಿ ಸಿನಿಮಾಗಳ ಕತೆ ಒಂದೇ ಆಗಿತ್ತು. ಮಲಯಾಳಂನ 'ಮಣಿಚಿತ್ರತ್ತಾಳ್' ನೋಡಿ ಪ್ರೇರಣೆಗೊಂಡು ವಿಕ್ಟರಿ ವಾಸು ಈ ಸಿನಿಮಾ ಮಾಡಿದ್ದರು.

ಫಸ್ಟ್ ಹಾಫ್ ಸಂಪೂರ್ಣ ಬೇರೆಯದ್ದೆ ಕಥೆಯಿದೆ. ಆದರೆ ಸೆಕೆಂಡ್ ಹಾಫ್ ಸೇಮ್ 'ಆಪ್ತಮಿತ್ರ' ಚಿತ್ರದ ಕಥೆ 'ಸಾಗರಿ' ಚಿತ್ರದಲ್ಲೂ ಇದೆ. ಎರಡೂ ಸಿನಿಮಾಗಳು 3 ತಿಂಗಳ ಅಂತರದಲ್ಲಿ ತೆರೆಗೆ ಬಂದಿತ್ತು. 'ಸಾಗರಿ' ಸಿನಿಮಾ ಕ್ಲೈಮ್ಯಾಕ್ಸ್ ನೋಡಿ 'ಆಪ್ತಮಿತ್ರ' ಚಿತ್ರದ ಕ್ಲೈಮ್ಯಾಕ್ಸ್ ಬದಲಿಸಿದ್ದರು. ಅಂದಹಾಗೆ 'ಸಾಗರಿ' ಚಿತ್ರದಲ್ಲಿ ದರ್ಶನ್ ನಟಿಸಬೇಕಿತ್ತು ಎಂದು ವಿಕ್ಟರಿ ವಾಸು ನೆನಪಿಸಿಕೊಂಡಿದ್ದಾರೆ. ಡೈಲಿ ಮಾಧ್ಯಮ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
"ನಾನು ಮಾಡಿದ 'ಸಾಗರಿ' ಚಿತ್ರದಲ್ಲಿ ದರ್ಶನ್ ಹೀರೊ ಆಗಿ ನಟಿಸಬೇಕಿತ್ತು. ನನಗೆ ಬಹಳ ಆಸೆ ಇತ್ತು. ಆದರೆ ನಮ್ಮ ನಿರ್ಮಾಪಕರು ಅದಾಗಲೇ ರಾಮ್ಕುಮಾರ್ ಅವರಿಗೆ ಅಡ್ವಾನ್ಸ್ ಕೊಟ್ಟುಬಿಟ್ಟಿದ್ದರು. ಶರಣ್, ಮೈಕೆಲ್ ಸೇರಿದಂತೆ ಮತ್ತಷ್ಟು ಜನ ಅದರಲ್ಲಿ ನಟಿಸಿದ್ದರು. ಅದರಲ್ಲಿ ಯಾವುದಾದರೂ ಒಂದು ಪಾತ್ರಕ್ಕೆ ದರ್ಶನ್ ಅವರನ್ನು ಆಯ್ಕೆ ಮಾಡಿಕೊಳ್ಳಿ ಎಂದು ನಿರ್ಮಾಪಕರು ಸಲಹೆ ಕೊಟ್ಟಿದ್ದರು. ಮಾಡಿದ್ರೆ ದರ್ಶನ್ ಹೀರೊ ಆಗಿ ಮಾಡ್ಲಿ, ಬೇರೆ ಪಾತ್ರ ಆದ್ರೆ ಬೇಡ ಎಂದುಬಿಟ್ಟೆ" ಎಂದು ವಿಕ್ಟರಿ ವಾಸು ಮೆಲುಕು ಹಾಕಿದ್ದಾರೆ.
ಮಾತು ಮುಂದುವರೆಸಿರುವ ವಾಸು "ತೂಗುದೀಪ ಶ್ರೀನಿವಾಸ್ ರೀತಿಯ ಖ್ಯಾತ ನಟನ ಮಗನಿಗೆ ಸಣ್ಣ ಪಾತ್ರ ಕೊಟ್ಟು ಸುಮ್ಮನೆ ಕೂರಿಸುವುದು ಸರಿಯಲ್ಲ. ಅಂತಹ ದೊಡ್ಡ ಪರ್ಸನಾಲಿಟಿ ಇರುವ ಅವ್ರನ್ನು ಪೋಷಕ ಪಾತ್ರಕ್ಕೆ ಬಳಸಿಕೊಳ್ಳುವುದು ಬೇಡ ಎಂದೆ. ಆಗಿನ್ನು 'ಮೆಜೆಸ್ಟಿಕ್' ಸಿನಿಮಾ ಬಂದಿರಲಿಲ್ಲ, ಬೇರೆ ಸಿನಿಮಾಗಳಲ್ಲಿ ನಟಿಸಿದ್ದರು. ನಮ್ಮ ಚಿತ್ರದಲ್ಲಿ ಗುಂಪಲ್ಲಿ ಗೋವಿಂದ ಎನ್ನುವಂತಹ ಪಾತ್ರ ಬೇಡ ಎಂದೆ. ಆ ಸಿನಿಮಾ ಮಿಸ್ಸಾದ್ದಕ್ಕೆ 'ಮೆಜೆಸ್ಟಿಕ್' ಸಿನಿಮಾ ಸಿಕ್ತಾ ಏನೋ ಗೊತ್ತಿಲ್ಲ" ಎಂದು ವಾಸು ನಕ್ಕಿದ್ದಾರೆ.


Click it and Unblock the Notifications











