ಬ್ರದರ್ ಫ್ರಮ್ ಅನದರ್ ಮದರ್.. ರಜನಿಕಾಂತ್- ವಿಷ್ಣುವರ್ಧನ್ ಸ್ನೇಹದ ಸವಿ ನೆನಪಿನ ವಿಡಿಯೋ ವೈರಲ್
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಆತ್ಮೀಯ ಸ್ನೇಹಿತರಾಗಿದ್ದರು ಎನ್ನುವುದು ಗೊತ್ತೇಯಿದೆ. ಇಬ್ಬರು 1977ರಲ್ಲಿ 'ಸಹೋದದರ ಸವಾಲ್' ಇಬ್ಬರು ಒಟ್ಟಿಗೆ ನಟಿಸಿದ್ದರು. ವಿಷ್ಣುದಾದಾ ಸಾಕಷ್ಟು ಸೂಪರ್ ಸ್ಟಾರ್ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಅದರಲ್ಲೂ ಅಂಬಿ, ರಜನಿಕಾಂತ್ ಜೊತೆ ತುಸು ಹೆಚ್ಚೇ ಬಾಂಧವ್ಯ ಇತ್ತು. ಇಬ್ಬರು ಒಟ್ಟೊಟ್ಟಿಗೆ ಚಿತ್ರರಂಗಕ್ಕೆ ಬಂದವರು.
ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಇಬ್ಬರು ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದವರೇ. ಹಾಗಾಗಿ ಸಹಜವಾಗಿಯೇ ಒಡನಾಟ ಇತ್ತು. ಆದರೆ 'ಕಥಾಸಂಗಮ' ನಂತರ ರಜನಿಕಾಂತ್ ತಮಿಳು ಚಿತ್ರರಂಗದಲ್ಲಿ ಹೆಚ್ಚು ಬ್ಯುಸಿಯಾಗಿದ್ದರು. ಆ ಕಾಲಕ್ಕೆ ಕನ್ನಡ ಚಿತ್ರರಂಗ ಇನ್ನು ಮದ್ರಾಸ್ನಲ್ಲಿ ಇದ್ದಿದ್ದರಿಂದ ಒಟ್ಟೊಟ್ಟಿಗೆ ಎಲ್ಲಾ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿತ್ತು. ದಾದಾ ಕೂಡ ಮದ್ರಾಸ್ನಲ್ಲಿ ಇರುತ್ತಿದ್ದರಯ. ಹಾಗಾಗಿ ಕನ್ನಡಿಗರ ನಡುವೆ ಹೆಚ್ಚಿನ ಒಡನಾಟ, ಬಾಂಧವ್ಯ ಗಟ್ಟಿಯಾಗಿತ್ತು.

ರಜನಿಕಾಂತ್ ಹಿಂದೆ ಬಹಳ ಸ್ಮೋಕ್ ಮಾಡುತ್ತಿದ್ದರು ಎನ್ನುವುದು ಗೊತ್ತೇಯಿದೆ. ತಲೈವಾ ಸಿಗರೇಟ್ ಸೇದುವ ಸ್ಟೈಲ್ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಬಿಟಿಎಸ್ ಬಸ್ ಕಂಡಕ್ಟರ್ ಆಗಿದ್ದಾಗಲೇ ತಮ್ಮ ಸಿಗರೇಟ್ ಸೇದುವ ಸ್ಟೈಲ್ನಿಂದ ಎಲ್ಲರ ಗಮನ ಸೆಳೆದಿದ್ದರು. ಇದೇ ಸ್ಟೈಲ್ ಆರಂಭದ ದಿನಗಳಲ್ಲಿ ಅವರಿಗೆ ಹೆಚ್ಚು ಹೆಚ್ಚು ಅವಕಾಶ ತಂದು ಕೊಟ್ಟಿತ್ತು. ರಜನಿಕಾಂತ್ ಹಾಗೂ ವಿಷ್ಣುವರ್ಧನ್ ಒಟ್ಟಿಗೆ ಸ್ಮೋಕ್ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಅಂದಹಾಗೆ ಇದು ತಮಿಳಿನ 'ವಿಡುತಲೈ ಚಿತ್ರದ ದೃಶ್ಯ. ಸನ್ನಿವೇಶವೊಂದರಲ್ಲಿ ಸಿಗರೇಟ್ ಹಚ್ಚಿ ರಾಜ (ರಜನಿಕಾಂತ್) ಸ್ನೇಹಿತ ಅಮರ್ಗೆ(ವಿಷ್ಣುವರ್ಧನ್) ಕೊಡುತ್ತಾನೆ. ಅಮರ್ ಸಿಗರೇಟ್ ಸೇದಿ ನಗು ಚೆಲ್ಲುವ ದೃಶ್ಯ ಇದು. ಸದ್ಯ ಈ ಸಣ್ಣ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅಭಿಮಾನಿಗಳಂತೂ ಪದೇ ಪದೇ ಪ್ಲೇ ಮಾಡಿ ವಿಡಿಯೋ ನೋಡ್ತಿದ್ದಾರೆ. ರೀಲ್ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ನಲ್ಲೂ ಇಬ್ಬರ ಅನುಬಂಧ ಹೀಗೆ ಇತ್ತು. ಈ ವಿಡಿಯೋದಲ್ಲಿ ಸೂಪರ್ ಸ್ಟಾರ್ಗಳಿಬ್ಬರನ್ನು ಸ್ಟೈಲಿಶ್ ಲುಕ್ನಲ್ಲಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

'ಗಲಾಟೆ ಸಂಸಾರ' ಹಾಗೂ 'ಕಿಲಾಡಿ ಕಿಟ್ಟು' ಚಿತ್ರಗಳಲ್ಲೂ ಕೂಡ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ವಿಷ್ಣುವರ್ಧನ್ ನಿಧನನ ನಂತರ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ತಲೈವಾ ಸಾಂತ್ವನ ಹೇಳಿದ್ದರು. ಈ ವೇಳೆ ವಿಷ್ಣು ಸ್ನೇಹದ ಬಗ್ಗೆ ಮಾತನಾಡಿದ್ದರು. "ನಾವು ಸಹೋದರರ ಸಲಾವ್ ಹಾಗೂ ಗಲಾಟೆ ಸಂಸಾರ ಸಿನಿಮಾಗಳಲ್ಲಿ ನಟಿಸಿದ್ದೆವು. ನನಗೆ 30 ವರ್ಷಗಳಿಂದ ಅವರ ಪರಿಚಯ. ಆಗಲೇ ಅವರು ಸ್ಟಾರ್ ಆಗಿದ್ದರು. ಆದರೂ ಎರಡು ಸಿನಿಮಾಗಳಲ್ಲಿ ನನಗೆ ನೀಡಿದ ಪ್ರೋತ್ಸಾಹ ಮರೆಯಲು ಸಾಧ್ಯವಿಲ್ಲ, ಅವರ ಜೊತೆ ಮಾತನಾಡಿದರೆ ಅವರ ಸ್ನೇಹ ಮಾಡಿದರೆ ಅವ್ರು ಏನು ಅನ್ನೋದು ಗೊತ್ತಾಗುತ್ತೆ" ಎಂದಿದ್ದರು.
ಇನ್ನು ರಜನಿಕಾಂತ್ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನೆಲ್ಸನ್ ನಿರ್ದೇಶನದ 'ಜೈಲರ್' ಸಿನಿಮಾ ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ. ಈ ಚಿತ್ರದಲ್ಲಿ ಮೋಹನ್ ಲಾಲ್, ಶಿವರಾಜ್ಕುಮಾರ್, ರಮ್ಯಾಕೃಷ್ಣ, ಜಾಕಿಶ್ರಾಫ್ರಂತಹ ಘಟಾನುಗಟಿ ಕಲಾವಿದರು ನಟಿಸ್ತಿದ್ದಾರೆ. ಪುತ್ರಿ ಐಶ್ವರ್ಯ ನಿರ್ದೇಶನದ ಲಾಲ್ 'ಸಲಾಂ' ಚಿತ್ರದಲ್ಲಿ ಮೊಹಿದ್ದೀನ್ ಭಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ ಸದ್ಯ ಈ ಸಿನಿಮಾ ಚಿತ್ರೀಕರಣ ನಡೀತಿದೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ತಮ್ಮ 170ನೇ ಸಿನಿಮಾ ಕನ್ಫರ್ಮ್ ಆಗಿದೆ. ಜ್ಞಾನವೇಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.


Click it and Unblock the Notifications











