Vishnuvardhan Birthday: ವಿಷ್ಣುವರ್ಧನ್ ಅಭಿನಯದ ನೋಡಲೇಬೇಕಾದ ಸಿನಿಮಾಗಳ ಪಟ್ಟಿ
ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ಆಗಿ ಮೆರೆದ ವಿಷ್ಣುವರ್ಧನ್ ಕನ್ನಡಿಗರ ಮನದಲ್ಲಿ ವಿಷ್ಣುದಾದಾ ಆಗಿ ಮೆರೆದವರು. ಸೆಪ್ಟೆಂಬರ್ 18 ರಂದು ಅವರ ಹುಟ್ಟುಹಬ್ಬ. ವಿಷ್ಣು ಅಭಿಮಾನಿಗಳು ತಮ್ಮ ನಟನ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ತಯಾರಾಗಿದ್ದಾರೆ. ಕನ್ನಡ ಸಿನಿರಂಗಕ್ಕೆ ಸಾಟಿಯಿಲ್ಲದ ಕೊಡುಗೆ ನೀಡಿರುವ ಸಾಹಸಸಿಂಹ ತಮ್ಮ ಸಿನಿಮಾಗಳ ಮೂಲಕ ಕನ್ನಡಿಗರ ಮನದಲ್ಲಿ ಜೀವಂತವಿದ್ದಾರೆ.
'ನಾಗರಹಾವು' ಸಿನಿಮಾ ಸಂಪತ್ ಕುಮಾರ್ ಅವರನ್ನು ವಿಷ್ಣುವರ್ಧನ್ ಎಂದು ಕನ್ನಡಿಗರ ಮನದಲ್ಲಿ ಹಚ್ಚೆ ಹಾಕಿಸಿದ ಚಿತ್ರ. ಇದಾದ ನಂತರ ಸಾಲು ಸಾಲು ಇನ್ನೂರು ಚಿತ್ರಗಳ ಮೂಲಕ ಕನ್ನಡದ ಸೇವೆ ಮಾಡಿದವರು. ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಜನರನ್ನು ತಮ್ಮತ್ತ ಸೆಳೆದಿದ್ದ ಅವರ ಕೆಲವು ನೋಡಲೇಬೇಕಾದ ಸಿನಿಮಾಗಳ ಪಟ್ಟಿ ಇಲ್ಲಿದೆ.

ನಾಗರಹಾವು
1972ರಲ್ಲಿ ಬಿಡುಗಡೆಯಾದ ನಾಗರಹಾವು ಸಿನಿಮಾ ವಿಷ್ಣುವರ್ಧನ್ ಅವರನ್ನು ನಾಯಕನಾಗಿ ಕನ್ನಡಕ್ಕೆ ಪರಿಚಯಿಸಿತು. ಮುಂಗೋಪಿ ಯುವಕ ಮತ್ತು ಅವನನ್ನು ಮಗನಂತೇ ಪ್ರೀತಿಸುವ ಮಾಸ್ಟರ್, ಪ್ರೇಮ ಪ್ರಕರಣಗಳು ಸೇರಿದ್ದ ಈ ಚಿತ್ರ ಚಿತ್ರದುರ್ಗದ ಕೋಟೆಯನ್ನು ಇನ್ನಷ್ಟು ಸುಂದರವಾಗಿ ತೋರಿಸಿತ್ತು. ಈ ಸಿನಿಮಾ ಮೂಲಕ ವಿಷ್ಣುವರ್ಧನ್, ಅಂಬರಿಷ್, ಆರತಿ ಹೆಚ್ಚು ಜನಪ್ರಿಯರಾದರು.
ಬಂಧನ
24 ಆಗಸ್ಟ್ 1984ರಲ್ಲಿ ಬಿಡುಗಡೆಯಾದ ಬಂಧನ ಒಂದು ದುರಂತ ಪ್ರೇಮ ಕಥನ. ತನ್ನ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯೆಯನ್ನು ಪ್ರೀತಿಸುವ ಹರೀಶ್, ಆಕೆಗೆ ಹೇಳುವ ಮುನ್ನವೆ ಆತನ ಸ್ನೇಹಿತನ ಜೊತೆಗೆ ಮದುವೆಯಾಗುವುದು. ಅಲ್ಲಿಂದ ಈ ಮೂವರ ಜೀವನದಲ್ಲಾಗುವ ಘಟನೆಗಳು, ಆರೋಗ್ಯ ಸಮಸ್ಯೆಗಳು ಹೀಗೆ ದುರಂತ ಕಥೆಯೊಂದರ ಅದ್ಭುತ ಸಿನಿಮಾ.
ಮುತ್ತಿನಹಾರ
1990 ರಲ್ಲಿ ಬಂದ ವಿಷ್ಣುವರ್ಧನ್ ಮತ್ತು ಸುಹಾಸಿನಿ ಅಭಿನಯದ ಕೊಡಗಿನ ವೀರ ಸೈನಿಕ ಅಚ್ಚಪ್ಪನ ಕತೆಯಿದು. ಸೈನಿಕನ ಶೌರ್ಯ ಮತ್ತು ಅವನ ಸುಂದರ ದಾಂಪತ್ಯವನ್ನು ಯುದ್ಧ ಹೇಗೆ ನಾಶ ಮಾಡುತ್ತದೆ ಎಂದು ಚಿತ್ರದಲ್ಲಿ ತೋರಿಸಲಾಗಿದೆ. ಯುದ್ಧದ ಕರಾಳ ಮುಖವನ್ನು ತೆರೆದಿಟ್ಟ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದಕ್ಕಿತ್ತು.

ನೀ ಬರೆದ ಕಾದಂಬರಿ
ಬಂಧನದಂತೆಯೇ ಕಾಡುವ ಮತ್ತೊಂದು ಸಿನಿಮಾ 1985ರಲ್ಲಿ ಬಿಡುಗಡೆಯಾದ ನೀ ಬರೆದ ಕಾದಂಬರಿ. ವಿಷ್ಣುವರ್ಧನ್ ಮತ್ತು ಭವ್ಯ ಅಭಿನಯದ ರೋಮ್ಯಾಂಟಿಕ್ ಚಿತ್ರವಿದು. ತಂದೆಯ ವಿರುದ್ಧವಾಗಿ ಛಾಯಾಗ್ರಾಹಕನನ್ನು ಮದುವೆಯಾಗುವ ಶ್ರೀಮಂತನ ಮಗಳು ಭಿನ್ನಾಭಿಪ್ರಾಯಗಳಿಂದ ಪತಿಯಿಂದ ದೂರವಾಗುತ್ತಾಳೆ. ನಂತರ ಅವರ ದಾಂಪತ್ಯ ಮತ್ತೆ ಹೇಗೆ ದಾರಿಗೆ ಬರುತ್ತದೆ ಎನ್ನುವುದು ಚಿತ್ರದ ಕತೆ.
ವೀರಪ್ಪನಾಯ್ಕ
1999ರಲ್ಲಿ ಬಿಡುಗಡೆಯಾದ ವಿಷ್ಣುವರ್ಧನ್ ಮತ್ತು ಶೃತಿ ಅಭಿನಯದ ವೀರಪ್ಪನಾಯ್ಕ ಸಿನಿಮಾ ಇಂದಿಗೂ ದೇಶಭಕ್ತಿಯನ್ನು ಸಾರುವ ಪ್ರಮುಖ ಕನ್ನಡ ಸಿನಿಮಾಗಳಲ್ಲಿ ಒಂದು. ಬೆಳಗಾವಿ ಹತ್ತಿರದ ಹಳ್ಳಿಯಲ್ಲಿ ವಾಸಿಸುವ ಒಬ್ಬ ದೇಶಪ್ರೇಮಿ ಗಾಂಧಿವಾದಿ ನಾಯಕನ ಜೀವನವನ್ನು ಚಿತ್ರ ಹೇಳುತ್ತದೆ. ದೇಶಕ್ಕಾಗಿ ಭಯೋತ್ಪಾದಕನಾದ ತನ್ನ ಮಗನನ್ನೇ ಕೊಲ್ಲುವ ಅಪ್ಟಟ ದೇಶಪ್ರೇಮಿಯ ಕಥೆ.
ಯಜಮಾನ
ಕನ್ನಡದ ಅತ್ಯುತ್ತಮ ಕೌಟುಂಬಿಕ ಚಿತ್ರಗಳಲ್ಲೊಂದು ಯಜಮಾನ. ಅಣ್ಣ ತಮ್ಮಂದಿರ ಸಂಬಂಧ, ತುಂಬು ಕುಟುಂಬದ ಕಾನ್ಸೆಪ್ಟ್ ಅನ್ನು ಒತ್ತಿ ಹೇಳಿದ ಸಿನಿಮಾವಿದು. 01 ಡಿಸೆಂಬರ್ 2000ರಲ್ಲಿ ಬಿಡುಗಡೆಯಾದ ಬಹುತಾರಾಂಗಣದ ಈ ಸಿನಿಮಾ ಥಿಯೇಟರ್ಗಳಲ್ಲಿ ಕಮಾಲ್ ಮಾಡಿತ್ತು. ಹಳ್ಳಿ ಭಾಗಗಳಲ್ಲಿ ಹೆಚ್ಚು ಓಡಿದ ಸಿನಿಮಾವಿದು.
ದಿಗ್ಗಜರು
ವಿಷ್ಣುವರ್ಧನ್ ಮತ್ತು ಅಂಬರೀಶ್ ಕುಚಿಕು ಗೆಳೆಯರು. ಇವರಿಬ್ಬರ ಗೆಳೆತನವನ್ನು ತೆರೆಯ ಮೇಲೆ ದಿಗ್ಗಜರು ಸಿನಿಮಾ ಮೂಲಕ ಕಟ್ಟಿಕೊಡಲಾಗಿದೆ. 26 ಜನವರಿ 2001 ಬಿಡುಗಡೆಯಾದ ದಿಗ್ಗಜರು, ಇಬ್ಬರು ಬಾಲ್ಯ ಸ್ನೇಹಿತರು ಹೇಗೆ ಜೀವನದುದ್ದಕ್ಕೂ ತಮ್ಮ ಸ್ನೇಹವನ್ನು ಕಾಪಾಡಿಕೊಳ್ಳುತ್ತಾರೆ ಎಂಬುದನ್ನು ಚಿತ್ರಿಸಿದೆ.
ಆಪ್ತಮಿತ್ರ
ವಿಷ್ಣುವರ್ಧನ್, ಸೌಂದರ್ಯ, ರಮೇಶ್ ಮತ್ತು ಪ್ರೇಮಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಆಪ್ತಮಿತ್ರ 27 ಆಗಸ್ಟ್ 2004 ರಂದು ಬಿಡುಗಡೆಯಾಗಿತ್ತು. ಕನ್ನಡದ ಅತ್ಯುತ್ತಮ ಹಾರರ್ ಚಿತ್ರಗಳಲ್ಲಿ ಒಂದಾದ ಇದು ಹಲವು ಮೈಲಿಗಲ್ಲನ್ನು ದಾಟಿದೆ. ಮನೋವೈದ್ಯನ ಪಾತ್ರದಲ್ಲಿ ವಿಷ್ಣುವರ್ಧನ್ ಅವರ ಅಭಿನಯ ಮತ್ತು ಸೌಂದರ್ಯರ ರೌದ್ರಾಭಿನಯ ಪ್ರೇಕಕರನ್ನು ಸೆರೆಹಿಡಿದಿತ್ತು.
ಈ ಬಂಧನ
ವಯಸ್ಸಯ ಮಾಗಿದಂತೆ ಅಂತಹದ್ದೇ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ವಿಷ್ಣುವರ್ಧನ್ ವೃದ್ಯಾಪ್ಯದಲ್ಲಿ ಮಕ್ಕಳ ತಾತ್ಸಾರಕ್ಕೆ ಒಳಗಾಗುವ ದಂಪತಿಯ ಕತೆಯನ್ನು ಈ ಬಂಧನದ ಮೂಲಕ ಬೆಳ್ಳಿಪೆದೆಯ ಮೇಲೆ ತಂದರು. 21 ಡಿಸೆಂಬರ್ 2007 ರಲ್ಲಿ ಬಿಡುಗಡೆಯಾದ ಈ ಸಿನಿಮಾ ವೃದ್ಯಾಪ್ಯದಲ್ಲಿ ಮಕ್ಕಳ ತಾತ್ಸಾರಕ್ಕೆ ಒಳಗಾಗುವ ದಂಪತಿ ಮಕ್ಕಳಿಂದ ದೂರಾಗಿ ಕೊನೆಗೆ ತಮ್ಮದೇ ಸ್ವಂತ ಜೀವನ ಕಟ್ಟುವ ಕಥೆಯನ್ನು ಅದ್ಭುತವಾಗಿ ಕನ್ನಡಿಗರ ಮುಂದೆ ಇರಿಸಿತ್ತು.
ಆಪ್ತರಕ್ಷಕ
ವಿಷ್ಣುವರ್ಧನ್ ರವರ ಕೊನೆಯ ಮತ್ತು 200 ನೇ ಚಿತ್ರ ಆಪ್ತರಕ್ಷಕ 19 ಫೆಬ್ರವರಿ 2010ರಲ್ಲಿ ಬಿಡುಗಡೆಯಾಗಿತ್ತು. ಮೂರು ವಿಭಿನ್ನ ಅವತಾರಗಳಲ್ಲಿ ವಿಷ್ಣುವರ್ಧನ್ ರವರ ನಟನೆಯನ್ನು ನೋಡಬಹುದು. ಇದು ಸೂಪರ್ ಹಿಟ್ ಆಪ್ತರಕ್ಷಕ ಸಿನಿಮಾದ ಸೀಕ್ವೆಲ್ ಎಂದು ಹೇಳಬಹುದು.


Click it and Unblock the Notifications











