ಕೋಮಲ್ ಮೇಲೆ ಕೋಪಗೊಂಡು ವಿಷ್ಣುವರ್ಧನ್ ಮಾತು ಬಿಟ್ಟಿದ್ದಿದ್ದೇಕೆ? ಬಳಿಕ ಏನಾಗಿಯ್ತು?
ಸಾಹಸಸಿಂಹ ವಿಷ್ಣುವರ್ಧನ್ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ ಸರಳ ಸಜ್ಜನ ವ್ಯಕ್ತಿತ್ವದಿಂದಲೂ ಎಲ್ಲರಿಗೂ ಆದರ್ಶಪ್ರಾಯ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ದಾದಾ ನಟಿಸಿದ್ದಾರೆ. ತರಹೇವಾರಿ ಪಾತ್ರಗಳಲ್ಲಿ ಮಿಂಚಿದ್ದಾರೆ. ಸಹನಟರು, ತಂತ್ರಜ್ಞರ ಜೊತೆ ಆತ್ಮೀಯ ಒಡನಾಡ ಹೊಂದಿದ್ದರು. ಆದರೆ ಅದೊಂದು ಕಾರಣಕ್ಕೆ ನಟ ಕೋಮಲ್ ಮೇಲೆ ವಿಷ್ಣು ಮುನಿಸಿಕೊಂಡಿದ್ದರು.
ಜಗ್ಗೇಶ್ ಸಹೋದರ ಕೋಮಲ್ ಅಣ್ಣನ ಹಾದಿಯಲ್ಲಿ ಚಿತ್ರರಂಗಕ್ಕೆ ಬಂದವರು. ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಬಳಿಕ ಹೀರೊ ಆಗಿ ಕೂಡ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ಸದ್ಯ ಕೋಮಲ್ ನಟನೆಯ 'ಕೋಣ' ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದೂರದರ್ಶನ ಚಂದನ ವಾಹಿನಿ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ಕೋಮಲ್ ಹಂಚಿಕೊಂಡಿದ್ದಾರೆ. ಸಂಭಾವನೆ ಇಲ್ಲದೇ ಸಿನಿಮಾಗಳಲ್ಲಿ ನಟಿಸಿರುವುದು, ಚಿತ್ರರಂಗದಲ್ಲಿ ಕಂಡ ಏಳುಬೀಳುಗಳ ಬಗ್ಗೆ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ವಿಷ್ಣುವರ್ಧನ್ ತಮ್ಮ ಮೇಲೆ ಕೋಪದಿಂದ ಮಾತುಬಿಟ್ಟಿದ್ದು ಬಳಿಕ ಸತ್ಯ ಗೊತ್ತಾಗಿ ಸಮಾಧಾನಗೊಂಡು ಹತ್ತಿರವಾಗಿದ್ದು ಎಲ್ಲವನ್ನು ವಿವರಿಸಿದ್ದಾರೆ.
'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆ ಕೋಮಲ್ ನಟಿಸಿಬೇಕಿತ್ತು. ಆದರೆ ನಟಿಸಲ್ಲ ಎಂದುಬಿಟ್ಟಿದ್ದರು. ಈ ವಿಚಾರ ವಿಷ್ಣುದಾದಾಗೆ ಗೊತ್ತಾಗಿ ಬಳಿಕ 'ಆಪ್ತರಕ್ಷಕ' ಚಿತ್ರದಲ್ಲಿ ನಟಿಸುವ ವೇಳೆ ಮುನಿಸಿಕೊಂಡಿದ್ದರು ಎಂದು ಕೋಮಲ್ ನೆನಪಿಸಿಕೊಂಡಿದ್ದಾರೆ. ಬಳಿಕ ಈ ಭಿನ್ನಾಭಿಪ್ರಾಯ ಬಗೆಹರಿದಿದ್ದು ಹೇಗೆ ಎಂದು ತಿಳಿಸಿದ್ದಾರೆ.

"ವಿಷ್ಣು ಸರ್ ಬಹಳ ಸೆನ್ಸಿಟಿವ್. 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದಲ್ಲಿ ಕೆ. ಮಂಜು ನನಗೆ ಅವಕಾಶ ಕೊಟ್ಟಿದ್ರು. ನಾನು ಮೊದ್ಲೆ ಹೇಳಿದ್ದ ಪಾತ್ರ ಚೆನ್ನಾಗಿಲ್ಲ ಅಂದ್ರೆ ಬಿಟ್ಟುಬಿಡ್ತೀನಿ ಅಂತ. ಅಲ್ಲಿ ಹೋಗಿ ನೋಡಿದ್ರೆ 40 ಮಂದಿ ಕಲಾವಿದರಿದ್ದರು. ಅದರಲ್ಲಿ ನಾನು ಒಬ್ಬ ಅಂತ ಗೊತ್ತಾಗಿ ಬೇಡ ಎಂದು ಬಂದುಬಿಟ್ಟೆ. ಆದರೆ ಯಾರೋ ಹೋಗಿ ವಿಷ್ಣು ಸರ್ ಬಳಿ ಕೋಮಲ್ ನಿಮ್ಮ ಸಿನಿಮಾ ಬಿಟ್ಟು ಹೋಗಿದ್ದಾನೆ ಅಂತ ಕಿವಿ ಚುಚ್ಚಿದ್ರು" ಎಂದು ಕೋಮಲ್ ಆ ಘಟನೆ ಮೆಲುಕು ಹಾಕಿದ್ದಾರೆ.
'ಆಪ್ತರಕ್ಷಕ' ಚಿತ್ರದಲ್ಲಿ ವಿಷ್ಣು-ಕೋಮಲ್ ಕಾಮಿಡಿ ವರ್ಕ್ ಆಗಿದ್ದು ಗೊತ್ತೇಯಿದೆ. ಮುನಿಸು ಮರೆಯು ದಾದಾ ಹೇಗೆ ಒಟ್ಟಿಗೆ ನಟಿಸಿದ್ರು ಎಂದು ಕೋಮಲ್ ಹೇಳಿದ್ದಾರೆ. "ವಿಷ್ಣು ಸರ್ ನನ್ನ ಮೇಲೆ ಕೋಪಗೊಂಡಿದ್ದರು. ಪಿ. ವಾಸು ಸರ್ 'ಆಪ್ತರಕ್ಷಕ' ಚಿತ್ರಕ್ಕೆ ನಾನೇ ಬೇಕು ಎಂದು ಆಯ್ಕೆ ಮಾಡಿಕೊಂಡಿದ್ರು. ವಿಷ್ಣು ಸರ್ ಬೇಡ ಅಂದ್ರು ವಾಸು ಸರ್ ಅವನೇ ಬೇಕು ಅಂದ್ರು. ಸೆಟ್ಗೆ ಹೋದ್ರೆ ಒಂದೆರಡು ದಿನ ವಿಷ್ಣು ಸರ್ ಮಾತನಾಡಿಸಲೇ ಇಲ್ಲ" ಎಂದು ಕೋಮಲ್ ನೆನಪು ಮಾಡಿಕೊಂಡಿದ್ದಾರೆ.
"ಒಂದೆರಡು ದಿನಗಳ ಬಳಿಕ ಒಂದು ಸನ್ನಿವೇಶದಲ್ಲಿ ಕಾಮಿಡಿ ಸಾಲಲ್ಲ. ಮತ್ತಷ್ಟು ಬೇಕು ಎಂದು ಹೇಳಿ ನಾನು ಒಂದಷ್ಟು ಸೇರಿಸಿ ಹೇಳಿದಾಗ ಅವ್ರು ಕೇಳಿ ನಕ್ಕರು. ಬಳಿಕ ಹೋಗಿ ವಿಷ್ಣು ಸರ್ಗೆ ಹೇಳಿದ್ದರು. ಅವ್ರು ಕೂಗಾಡಿ ಫೈಲ್ ಎತ್ತಿಬಿಸಾಕಿದ್ರು, ಇವ್ನು ಬಂದು ಹೇಳ್ದ ಅಂತ ಬರಿತ್ತಿದ್ದೀರಾ ಅಂದ್ರು. ಬಳಿಕ ಸರ್ ಒಮ್ಮೆ ನಾನು ಹೇಳೋದು ಕೇಳಿ. ಆಮೇಲೆ ಬೇಡ ಅಂದ್ರೆ ಬೇಡ ಅಂದೆ. ನಾನು ವಿವರಿಸಿ ಹೇಳಿದ ಬಳಿಕ ಕೋಪ ಹೋಗಿ ನಗಲು ಶುರು ಮಾಡಿದ್ರು. ನಂತರ ಚಿತ್ರೀಕರಣ ಮಾಡ್ತಾ ಮಾಡ್ತಾ ನನ್ನೊಟ್ಟಿಗೆ ಆತ್ಮೀಯ ಒಡನಾಟ ಶುರುವಾಯಿತು" ಎಂದು ಕೋಮಲ್ ವಿವರಿಸಿದ್ದಾರೆ.
ಒಮ್ಮೆ ಚಿತ್ರೀಕರಣದಲ್ಲಿ ಯಾಕೆ 'ಮಾತಾಡ್ ಮಾತಾಡ್ ಮಲ್ಲಿಗರ' ಚಿತ್ರ ಬಿಟ್ಟು ಹೋಗಿದ್ದು ಅಂತ ಕೇಳಿದ್ರು, ನಾನು ಎಲ್ಲಾ ವಿವರಿಸಿದ ಮೇಲೆ ಸಮಾಧಾನಗೊಂಡರು. ನಾನೇ ತಪ್ಪು ತಿಳಿದುಕೊಂಡಿದ್ದೆ ಎಂದು ಬೇಸರಗೊಂಡರು. ಆ ಬಳಿಕ ನಮ್ಮಿಬ್ಬರ ಬಾಂಧವ್ಯ ಹೆಚ್ಚಾಯಿತು ಎಂದು ಕೋಮಲ್ ಹೇಳಿದ್ದಾರೆ.


Click it and Unblock the Notifications











