ವಿಷ್ಣು- ಭಾರತಿ ಜೋಡಿ ನಟಿಸಿದ್ದ ಆ 'ಕ್ರೇಜಿ' ಜಾಹೀರಾತು ಈಗ ಫುಲ್ ವೈರಲ್
ಸಾಹಸಸಿಂಹ ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ದಿಗ್ಗಜ ನಟ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ದಾದಾ ಮೋಡಿ ಮಾಡಿದ್ದರು. ಕನ್ನಡ ಮಾತ್ರವಲ್ಲದೇ ಪರಭಾಷಾ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಶಂಕರ್ ನಾಗ್ ನಿರ್ದೇಶನದ 'ಮಾಲ್ಗುಡಿ ಡೇಸ್' ಧಾರಾವಾಹಿಯಲ್ಲಿ ಕೂಡ ಮಿಂಚಿದ್ದರು.
ನಟ ವಿಷ್ಣುವರ್ಧನ್ ಕೆಲ ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ವಿಷ್ಣು ಹಾಗೂ ಭಾರತಿ ದಂಪತಿ ಒಂದು ವಿಶೇಷವಾದ ಜಾಹೀರಾತಿನಲ್ಲಿ ಮಿಂಚಿದ್ದರು. ತಾವು ತಾವಾಗಿಯೇ ಅದರಲ್ಲಿ ನಟಿಸಿದ್ದು ವಿಶೇಷ. ಸದ್ಯ ಆ ಜಾಹೀರಾತು ವೀಡಿಯೋ ಈಗ ವೈರಲ್ ಆಗುತ್ತಿದೆ. ದೂರದರ್ಶನ ಚಂದನ ವಾಹಿನಿಯ ಹೊಸ ಧಾರಾವಾಹಿಯ ಬಗ್ಗೆ ಮಾಡಿದ್ದ ಜಾಹೀರಾತು ಅದಾಗಿತ್ತು.

ವಿಷ್ಣು- ಭಾರತಿ ಅವರದ್ದು ಅಪರೂಪದ ಜೋಡಿ. ಒಟ್ಟಿಗೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆ ಆಗಿದ್ದರು. 'ಮನೆ ಬೆಳಗಿದ ಸೊಸೆ' ಚಿತ್ರದಲ್ಲಿ ಮೊದಲ ಬಾರಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಅದಕ್ಕೂ ಮುನ್ನ 'ನಾಗರಹಾವು' ಸಿನಿಮಾ ಶತದಿನೋತ್ಸವ ಸಮಾರಂಭಕ್ಕೆ ಭಾರತಿ ಅವರನ್ನು ಆಹ್ವಾನಿಸಲು ವಿಷ್ಣು ಹೋಗಿದ್ದರು. ಅದೇ ಮೊದಲ ಭೇಟಿ ಆಗಿತ್ತು. ಬಳಿಕ ಫೆಬ್ರವರಿ 27, 1975ರಲ್ಲಿ ಇಬ್ಬರ ಮದುವೆ ನಡೆದಿತ್ತು.
ಅಂದಹಾಗೆ ವಿಷ್ಣುವರ್ಧನ್ ಆಪ್ತ ಬಳಗದಲ್ಲಿ ನಟ ರಮೇಶ್ ಭಟ್ ಗುರ್ತಿಸಿಕೊಂಡಿದ್ದರು. ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ಕ್ರೇಜಿ ಕರ್ನಲ್' ಎಂಬ ಧಾರಾವಾಹಿ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಈಗಿನಂತೆ ಆಗ ಸೋಶಿಯಲ್ ಮೀಡಿಯಾ ಇರಲಿಲ್ಲ. ವಾಹಿನಿಯಲ್ಲೇ ಪ್ರೋಮೊ ಪ್ರಸಾರ ಮಾಡಬೇಕಿತ್ತು. ಕೆಲವೊಮ್ಮೆ ಜನಪ್ರಿಯ ಕಲಾವಿದರಿಂದ ಪ್ರಚಾರ ಮಾಡಿಸಲಾಗುತ್ತಿತ್ತು.
ಸ್ನೇಹಿತನ ಹೊಸ ಧಾರಾವಾಹಿ ಶೀಘ್ರದಲ್ಲೇ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತದೆ ತಪ್ಪದೇ ನೋಡಿ ಎಂದು ಹೇಳಲು ವಿಷ್ಣುವರ್ಧನ್ ಹಾಗೂ ಭಾರತಿ ಪ್ರೋಮೊ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಬಹಳ ಕ್ರಿಯೇಟಿವ್ ಆಗಿ ಅದನ್ನು ಡಿಸೈನ್ ಮಾಡಲಾಗಿತ್ತು. ಬೇಸರದಲ್ಲಿ ಕುಳಿತ ಪತ್ನಿ ಭಾರತಿ ಅವರಿಗೆ ಸ್ನೇಹಿತ 'ಕ್ರೇಜಿ ಕರ್ನಲ್' ರಾಜಾರಾಯನ ಬಗ್ಗೆ ದಾದ ಪರಿಚಯಿಸುತ್ತಾರೆ.
ರಾಜಾರಾಯನ ಮನೆಯಲ್ಲಿ ವಾರಕ್ಕೆ ಒಮ್ಮೆ ಜಗಳ, ನಮ್ಮ ಮನೆಯಲ್ಲಿ ದಿನಾ ಜಗಳ ಎಂದು ವಿಷ್ಣು ಹೇಳುವಂತೆ ಬಹಳ ತಮಾಷೆಯಾಗಿ ಜಾಹೀರಾತು ಮೂಡಿ ಬಂದಿತ್ತು. 80ರ ದಶಕದಲ್ಲಿ 'ಕ್ರೇಜಿ ಕರ್ನಲ್' ಧಾರಾವಾಹಿ ಮೂಡಿ ಬಂದಿತ್ತು. ಪ್ರತಿ ಶನಿವಾರ ಹಾಗೂ ಭಾನುವಾರ ವಾರಕ್ಕೆ ಎರಡು ಎಪಿಸೋಡ್ನಂತೆ ಅಂದು ವೀಕ್ಷಕರನ್ನು ರಂಜಿಸಿತ್ತು. ರಮೇಶ್ ಭಟ್ ಜೊತೆ ಗಿರಿಜಾ ಲೋಕೇಶ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.
ಪ್ರೇಮಕಲಾ ವಿಷನ್ಸ್ ಬ್ಯಾನರ್ ಅಡಿಯಲ್ಲಿ ಎಸ್. ಎಸ್ ರಾಜೇಶ್ 'ಕ್ರೇಜಿ ಕರ್ನಲ್' ಧಾರಾವಾಹಿ ನಿರ್ಮಾಣ ಮಾಡಿದ್ದರು. ಆರ್. ಸಿ ಮಾಪಾಕ್ಷಿ ಛಾಯಾಗ್ರಹಣ, ರವಿಶೆಣೈ ಸಂಗೀತ ಧಾರಾವಾಹಿಗಿತ್ತು. ಲಿಂಗರಾಜ್ ನಿರ್ದೇಶನ ಧಾರಾವಾಹಿ ಮುಂಬೈ ದೂರದರ್ಶನದಲ್ಲಿ ಕೂಡ ಪ್ರಸಾರವಾಗಿದ್ದು ವಿಶೇಷ. 5 ವರ್ಷಗಳ ಹಿಂದೆ ಕೊರೊನಾ ಲಾಕ್ಡೌನ್ ಸಮಯದಲ್ಲಿ ಈ ಧಾರಾವಾಹಿಯನ್ನು ಮರುಪ್ರಸಾರ ಮಾಡಲಾಗಿತ್ತು.
'ಕ್ರೇಜಿ ಕರ್ನಲ್' ರಾಜಾರಾಯನ ಪಾತ್ರದಲ್ಲಿ ಲೋಕೇಶ್ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಅವಕಾಶ ರಮೇಶ್ ಭಟ್ ಅವರಿಗೆ ಲಭಿಸಿತ್ತು. ತಮ್ಮ ನಿಜವಾದ ವಯಸ್ಸಿಗಿಂತ ಬಹಳ ಹಿರಿಯ ವ್ಯಕ್ತಿ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ರಮೇಶ್ ಭಟ್ ಅವರಿಗೆ ಅದು ಕಷ್ಟವಾಗಲಿಲ್ಲ. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಅವರು ಧಾರಾವಾಹಿಯಲ್ಲಿ ನಟಿಸಿದ್ದರು. ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು. 7 ಬಾರಿ ಧಾರಾವಾಹಿ ಮರು ಪ್ರಸಾರವಾಗಿದ್ದು ದಾಖಲೆ.


Click it and Unblock the Notifications











