ಡಾ.ರಾಜ್ಕುಮಾರ್ ಅಪಹರಣದ ಬಗ್ಗೆ ಅಂದಿನ ಸಿಎಂ ಎಸ್.ಎಂ.ಕೃಷ್ಣ ತಮ್ಮ 'ಆತ್ಮಕಥೆ'ಯಲ್ಲಿ ಹೇಳಿದ ಸತ್ಯವೇನು..?
ಕರುನಾಡಿನ ರಾಜಕೀಯ ಮುತ್ಸದ್ದಿ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಇಂದು ಇಹಲೋಕ ತ್ಯಜಿಸಿದ್ದಾರೆ. 1999ರಿಂದ 2004ರವರೆಗೆ ನಾಡಿನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಎಸ್.ಎಂ.ಕೃಷ್ಣ2004ರಿಂದ 2008ರವರೆಗೆ ಮಹಾರಾಷ್ಟ್ರದ ಹತ್ತೊಂಬತ್ತನೇ ರಾಜ್ಯಪಾಲರಾಗಿ ಕೂಡ ಸೇವೆ ಸಲ್ಲಿಸಿದ್ದರು.
ಆ ನಂತರ 2009ರಿಂದ 2012ರವರೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದ ಎಸ್.ಎಂ.ಕೃಷ್ಣ 2017ರ ಮಾರ್ಚ್ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.ಬೆಂಗಳೂರು ಇಂದು ಐಟಿ ಬಿಟಿ ಸಿಟಿಯಾಗಿ ಬೆಳೆಯುವಲ್ಲಿ ಹೆಸರು ಗಳಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದ ಎಸ್.ಎಂ.ಕೃಷ್ಣ ಕನ್ನಡ ಚಿತ್ರರಂಗದ ವರನಟ ಡಾ.ರಾಜ್ ಕುಮಾರ್ ಅವರ ಅಪಹರಣವಾದಾಗ ನಿದ್ದೆ ಮಾಡುವುದನ್ನೇ ಮರೆತಿದ್ದರು. 108 ದಿನಗಳ ಕಾಲ ಒದ್ದಾಡಿದ್ದರು.

ಹೌದು , 2000ನೇ ಇಸವಿ ಜುಲೈ 30 ರಂದು ರಾತ್ರಿ ಗಾಜನೂರಿನ ಫಾರ್ಮ್ ಹೌಸ್ದಿಂದ ಅಣ್ಣಾವ್ರನ್ನು ಕಿಡ್ನಾಪ್ ಮಾಡಿದ್ದ ವೀರಪ್ಪನ್ ಆ ನಂತರ 108 ದಿನಗಳ ಬಳಿಕ ಬಿಡುಗಡೆ ಮಾಡಿದ್ದರು. ಈ ನಡುವೆ ರಾಜ್ಯದಲ್ಲಿ ಆತಂಕದ ಸನ್ನಿವೇಶಗಳು ಸೃಷ್ಟಿಯಾಗಿದ್ದವು. ರಾಜ್ಯಾದಂತ್ಯ ಪ್ರತಿಭಟನೆ, ಗಲಾಟೆ ಆರಂಭವಾಗಿದ್ದವು. ಸರ್ಕಾರಕ್ಕೆ ಇದು ಭಾರಿ ತಲೆನೋವು ತಂದಿತ್ತು.ರಾಜ್ ಕುಮಾರ್ ಅವರನ್ನು ವೀರಪ್ಪನ್ ನಿಂದ ಬಿಡಿಸಲು ಅಂದಿನ ಕರ್ನಾಟಕದ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಸರ್ಕಾರ ಹರಸಾಹಸ ಪಟ್ಟಿತ್ತು. ಈ ಕುರಿತು ತಮ್ಮ ಆತ್ಮಕಥೆ 'ಸ್ಮೃತಿವಾಹಿನಿ'ಯಲ್ಲಿ ವಿವರವಾಗಿ ಬರೆದುಕೊಂಡಿದ್ದ ಎಸ್.ಎಂ.ಕೃಷ್ಣ ಅಣ್ಣಾವ್ರು ಕಿಡ್ನಾಪ್ ಆದ ಬಳಿಕ ಏನೆಲ್ಲಾ ಆಯ್ತು, ರಾಜ್ ಅವರನ್ನು ಬಿಡಿಸಲು ತಮ್ಮ ಸರ್ಕಾರ ಮಾಡಿದ್ದೇನು ಎನ್ನುವುದನ್ನು ಉಲ್ಲೇಖಿಸಿದ್ದರು. ಅದರ ಒಂದು ಭಾಗ ಅವರದ್ದೇ ಆದ ಸಾಲುಗಳಲ್ಲಿ ಇಲ್ಲಿದೆ.
ಆಕಾಶ ಕಳಚಿ ಬಿದ್ದಂತ ಅನುಭವ
ದಿನನಿತ್ಯದಂತೆ ವಿಧಾನಸೌಧದಿಂದ ಅನುಗ್ರಹ ಮನೆಗೆ ಸಂಜೆ ಏಳು ಮೂವತ್ತು ಸಮಯ. ಕಾಫಿ ಕುಡಿಯುತ್ತಿದ್ದೆ, ಅಷ್ಟರಲ್ಲಿ ನಮ್ಮ ಆಪ್ತ ಸಹಾಯಕ ಪಾರ್ವತಮ್ಮ ರಾಜ್ ಕುಮಾರ್ ಮಾತನಾಡುತ್ತಾರೆ ಎನ್ನುತ್ತಾ ಫೋನ್ ಕೊಟ್ಟ. ಪಾರ್ವತಮ್ಮ ರಾಜ್ ಕುಮಾರ್ ಅವರು ಲೈನ್ ಗೆ ಬಂದರು. 'ಅಣ್ಣಾ, ರಾಜ್ ಕುಮಾರ್ ಅವರನ್ನು ವೀರಪ್ಪನ್ ಎತ್ತಿಕೊಂಡು ಹೋದ' ಎಂದರು. ಗಾಬರಿಯಾಗಿ 'ಏನ್ ಹೇಳ್ತಿದ್ದಿಯಾಮ್ಮಾ' ಅಂದೆ. ಈಗತಾನೆ ನಾನು ಮೈಸೂರಿಗೆ ಬಂದಿದ್ದೇನೆ. ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದೇನೆ. ಇನ್ನು ಎರಡೂವರೆ ಗಂಟೆ ಆಗಬಹುದು ಎಂದರು. ನನಗೆ ಒಮ್ಮೆಲೆ ಆಕಾಶ ಕಳಚಿ ಬಿದ್ದಂತಾಗಿ ಆತಂಕ ಶುರುವಾಯಿತು.

ಸೇನಾನಿ ಹಾಗೂ ಕೃಪಾಕರ ಘಟನೆ ನೆನಪಾಯಿತು
ಪರಿಸ್ಥಿತಿ ಏನೇನು ಆಗುತ್ತದೋ ಅಂತ ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕಿದೆ. ಇದು ಯಾವ ರೀತಿ ಪರ್ಯಾವಸನಗೊಳ್ಳುತ್ತದೋ ಗೊತ್ತಿಲ್ಲ. ಪ್ರೇಮಾ ಜೊತೆಗೆ ಚರ್ಚಿಸಿದೆ. ನನ್ನ ಅಳಿಯ ಸಿದ್ಧಾರ್ಥನನ್ನು ಕರೆಸಿದೆ. ಅವನ ಸೋದರಿ ಸಂಬಂಧಿ ಸೇನಾನಿ ಹಾಗೂ ಕೃಪಾಕರ ಅವರಿಬ್ಬರು ಒಂದಿಷ್ಟು ದಿವಸ ಅಂದ್ರೆ ಜೆ ಎಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ವೀರಪ್ಪನ್ ಸೆರೆಯಲ್ಲಿದ್ದರು. ಅವರನ್ನು ವೀರಪ್ಪನ್ ಎತ್ತಿಕೊಂಡೆ ಹೋಗಿದ್ದ. ಇಬ್ಬರು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರು. ಸೇನಾನಿಯೋ ಅಥವಾ ಕೃಪಾಕರನೋ ವೀರಪ್ಪನ್ ಗೆ ಮಾತನಾಡುವಷ್ಟು ಸಂಪರ್ಕವಿದೆಯೇ ಎನ್ನುವುದು ನನ್ನ ವಿಚಾರವಾಗಿತ್ತು. ಅಷ್ಟೊತ್ತಿಗೆ ಇಂಟೆಲಿಜೆನ್ಸ್ ನ ಮುಖ್ಯಸ್ಥರು ಡಿಜೆ ಗೃಹಮಂತ್ರಿ ಹಾಗೂ ಗೃಹಕಾರ್ಯದರ್ಶಿ, ಮುಖ್ಯಕಾರ್ಯದರ್ಶಿ ಎಲ್ಲಾ ಬಂದರು. ಪಾರ್ವತಮ್ಮ ರಾಜ್ ಕುಮಾರ್ ಬಂದರು.
ಘಟನೆ ವಿವರಿಸಿದ ಪಾರ್ವತಮ್ಮ
ಅಂದು ಸಂಜೆ ಪಾರ್ವತಮ್ಮ ಮತ್ತು ರಾಜ್ ಕುಮಾರ್ ಇಬ್ಬರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಗಾಜನೂರಿನ ತಮ್ಮ ಮನೆಯಲ್ಲಿ ಮಲಗಿದ್ದರು. ಅದು ರಾಜ್ ಕುಮಾರ್ ಅವರ ಹುಟ್ಟೂರು. ಯಾರೋ ಬಾಗಿಲು ತಟ್ಟಿದರು. ಬಾಗಿಲು ತೆಗೆದರೆ ವೀರಪ್ಪನ್ ಮತ್ತು ಆತನ ಸಹಚರರು, ಹೆಗಲ ಮೇಲೆ ಬಂದೂಕು ನಾಲ್ಕು ಜನರ ಜೊತೆ ಒಳಗೆ ಬಂದ ವೀರಪ್ಪನ್ ನನ್ನ ಜೊತೆ ರಾಜ್ ಕುಮಾರ್ ಬರಬೇಕು ಇಲ್ಲವಾದಲ್ಲಿ ಸುಟ್ಟು ಬಿಡುತ್ತೇನೆ ಎಂದು ಹೇಳಿದ್ದಾನೆ. ರಾಜ್ ಕುಮಾರ್ 'ಅಗತ್ಯವಾಗಿ ಆಗಲಿ ಎಲ್ಲಿಗೆ ಬೇಕಾದರೂ ಬರುತ್ತೇನೆ' ಎಂದು ಹೇಳಿದ್ದಾರೆ.
ಕರುಣಾನಿಧಿಗೆ ಫೋನ್ ಮಾಡಿದೆ
ರಾಜ್ ಕುಮಾರ್, ಪಾರ್ವತಮ್ಮ ಅವರ ತಮ್ಮ ಗೋವಿಂದರಾಜು, ಸಹಾಯಕ ನಿರ್ದೇಶಕ ನಾಗಪ್ಪ ಮರಡಗಿ ಅವರುಗಳನ್ನು ಕರೆದುಕೊಂಡ ಹೋದನು. ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಆ ಹಳ್ಳಿಯಲ್ಲಿ ದೂರವಾಣಿ ಸಂಪರ್ಕ ಇಲ್ಲ. ತಕ್ಷಣ ಮೈಸೂರಿಗೆ ಬಂದು ಅಲ್ಲಿಂದ ನಮಗೆ ದೂರವಾಣಿಯನ್ನು ಮಾಡಿದ್ದಾರೆ. ಅವರು ರಾತ್ರಿ ಒಂದು ಗಂಟೆಗೆ ಬಂದು ಇದೆಲ್ಲಾ ಹೇಳಿದರು. ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರಿಗೆ ದೂರವಾಣಿ ಮಾಡಿದೆ. ಅವರು 'ನಾ ಎನ್ನಂಗು ಪಣ್ರುದು' ಅಂತ ಕೇಳಿದರು. 'ನೀವೇನಾದರೂ ಮಾಡಲೇಬೇಕು ನಾಳೇ ಬರುತ್ತಿದ್ದೇನೆ' ಎಂದು ಹೇಳಿದೆ.
ಮದ್ರಾಸ್ ಗೆ ಹೋಗಿ ಸಿಎಂ ಭೇಟಿ
ಮಾರನೇ ದಿನ ನಾನು ಮದ್ರಾಸ್ ಗೆ ಹೋಗಿ ಕರುಣಾನಿಧಿ ಅವರನ್ನು ಭೇಟಿ ಮಾಡಿದೆ. ನಾನು ಹೋಗುವಷ್ಟೊತ್ತಿಗೆ ತಮಿಳುನಾಡಿನ ಮುಖ್ಯಕಾರ್ಯದರ್ಶಿ, ಗೃಹಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಇಂಟೆಲಿಜೆನ್ಸ್ ಮುಖ್ಯಸ್ಥರು, ಅರಣ್ಯ ಅಧಿಕಾರಿಗಳು ಎಲ್ಲರನ್ನು ಕೂಡಿಸಿಕೊಂಡಿದ್ದರು ಕರುಣಾನಿಧಿಯವರು. ನೀವು ಏನಾದರೂ ಮಾಡಬೇಕು ಎಂದು ಮತ್ತೆ ಕೇಳಿದೆ.
ನಕ್ಕೀರನ್ ಗೋಪಾಲ್ ಸಂಪರ್ಕ
ಆಗ ಅವರು ಯೋಚನೆ ಮಾಡಿದರು. ಯಾರನ್ನಾದರೂ ಒಬ್ಬರನ್ನು ಅವರ ಹತ್ತಿರ ಕಳುಹಿಸಬೇಕು. ನಕ್ಕೀರನ್ ಗೋಪಾಲ್ ಅಂತ ಒಬ್ಬ ಪತ್ರಕರ್ತ ಇದ್ದ. ಅವನು ಆಗಾಗ್ಗೆ ವೀರಪ್ಪನ್ ಭೇಟಿ ಮಾಡಿ ಸಂಬಂಧಪಟ್ಟಂತೆ ಸುದ್ದಿಯನ್ನ ಕೂಡ ಪ್ರಕಟಿಸುತ್ತಿದ್ದ. ಅದು ತಮಿಳು ಓದುಗರಿಗೆ ತುಂಬಾ ಆಕರ್ಷಣೀಯವಾಗಿತ್ತು ಎಂದರು. ನಕ್ಕೀರನ್ ಗೋಪಾಲ್ ಅವರನ್ನ ಕರೆಸಿದೆವು. ಪ್ರಾರಂಭದಲ್ಲಿ ಆತ ಕಾಡಿಗೆ ಹೋಗಿ ವೀರಪ್ಪನ್ ಅವರನ್ನು ನೋಡಲಿಕ್ಕೆ ಅಂತ ಅಂಥ ಉತ್ಸಾಹವೇನು ತೋರಿಸಲಿಲ್ಲ. ನಾವೇ ಅವನಿಗೆ ಪ್ರಾರ್ಥಿಸಿ ಏನಾದರೂ ಮಾಡಿ ವೀರಪ್ಪನ್ ಸಂಪರ್ಕ ಮಾಡಿ ಅಂತ ಹೇಳಿ, ಸಂಜೆ ಬೆಂಗಳೂರಿಗೆ ಬಂದೆ.
ಹೀಗೆ ಎಸ್.ಎಂ.ಕೃಷ್ಣ ಡಾ.ರಾಜ್ ಕುಮಾರ್ ಅವರ ಅಪಹರಣದ ಸುತ್ತ ಮುತ್ತ ನಡೆದ ವಿದ್ಯಮಾನಗಳಿಗೆ ಅಕ್ಷರದ ರೂಪವನ್ನು ನೀಡಿದ್ದರು. ತಮ್ಮ ಆತ್ಮಕಥೆ 'ಸ್ಮ್ರತಿ ವಾಹಿನಿ'ಯಲ್ಲಿ ಹಂಚಿಕೊಂಡಿದ್ದರು. ಗೊಂದಲ ಮತ್ತು ಸವಾಲುಗಳಿಂದ ಕೂಡಿದ್ದ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು ಎಸ್.ಎಂ.ಕೃಷ್ಣ.


Click it and Unblock the Notifications











